ಪ್ರಧಾನಿಯ ವಿವಾದಾತ್ಮಕ ಭಾಷಣಕ್ಕೊಂದು ಕ್ರಿಕೆಟ್ ಹೋಲಿಕೆ ನೀಡಿದ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್
ನರೇಂದ್ರ ಮೋದಿ , ವೆಂಕಟೇಶ್ ಪ್ರಸಾದ್ | PC : PTI
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಕಳೆದ ರವಿವಾರ ರಾಜಸ್ಥಾನದಲ್ಲಿ ಚುನಾವಣಾ ರ್ಯಾಲಿಯೊಂದರಲ್ಲಿ ನೀಡಿದ ವಿವಾದಾತ್ಮಕ ಭಾಷಣಕ್ಕೂ ಕ್ರಿಕೆಟ್ಗೂ ಹೋಲಿಕೆ ಕಲ್ಪಿಸಿ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ತಮ್ಮ ಭಾಷಣದಲ್ಲಿ ಮುಸ್ಲಿಂ ಸಮುದಾಯವನ್ನು ಉಲ್ಲೇಖಿಸಿದ್ದೇ ಅಲ್ಲದೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ನುಸುಳುಕೋರರಿಗೆ ಸಂಪತ್ತನ್ನು ಹಂಚಲಿದೆ ಎಂದು ಹೇಳಿದ್ದರು.
ಇದೇ ವಿಚಾರ ಮುಂದಿಟ್ಟುಕೊಂಡು ವೆಂಕಟೇಶ್ ಪ್ರಸಾದ್ ಟ್ವೀಟ್ ಮಾಡಿದ್ದರು. “ಶ್ರೀಮಂತರ ಸಂಪತ್ತನ್ನು ಬಡವರಿಗೆ ಮರುಹಂಚಿಕೆ ಮಾಡುವ ಕುರಿತು ಒಂದು ರಾಜಕೀಯ ಪಕ್ಷದ ಪ್ರಣಾಳಿಕೆ ತಿಳಿಸುತ್ತದೆ. ಬಡವರನ್ನು ಮೇಲಕ್ಕೆತ್ತುವ ಅಗತ್ಯವಿದೆ ಆದರೆ ಈ ಚಿಂತನೆ ಚಿಂತಾಜನಕವಗಿದೆ,” ಎಂದು ವೆಂಕಟೇಶ್ ಬರೆದಿದ್ದಾರೆ.
“ನಾವು ರಾಜಸ್ಥಾನ ರಾಯಲ್ಸ್, ಕೊಲ್ಕತ್ತಾ ನೈಟ್ ರೈಡರ್ಸ್, ಸನ್ರೈಸರ್ಸ್ ಹೈದರಾಬಾದ್ನಿಂದ 4 ಅಂಕಗಳನ್ನು ತೆಗೆದು ಅದನ್ನು ಕೆಳಗಿನ ಹಂತದಲ್ಲಿರುವ 3 ತಂಡಗಳಿಗೆ ಮರುಹಂಚಿಕೆ ಮಾಡಿ ಅವರು ಪ್ಲೇ-ಆಫ್ಗೆ ಬರುವಂತೆ ಮಾಡಬೇಕೆಂದು ಹೇಳಿದಂತಾಗುತ್ತದೆ,” ಎಂದು ವೆಂಕಟೇಶ್ ಟ್ವೀಟ್ ಮಾಡಿದ್ದಾರೆ.
ವೆಂಕಟೇಶ್ ಪ್ರಸಾಧ್ ಈ ಹಿಂದೆ ಕೂಡ ಕಾಂಗ್ರೆಸ್ಗೆ ವಿರುದ್ಧವಾಗಿ ಟ್ವೀಟ್ ಮಾಡಿ ಬಿಜೆಪಿ ಬೆಂಬಲಿಸಿದ್ದರು. ಡಿಸೆಂಬರಿನಲ್ಲಿ ಮಧ್ಯ ಪ್ರದೇಶ, ಛತ್ತೀಸಗಢ, ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲುತ್ತಿರುವಾಗ ಟ್ವೀಟ್ ಮಾಡಿದ್ದ ಅವರು “ಸನಾತನ ಧರ್ಮವನ್ನು ನಿಂದಿಸುವುದು ಅದರದ್ದೇ ಆದ ಪರಿಣಾಮ ಬೀರಲಿದೆ,” ಎಂದು ಪೋಸ್ಟ್ ಮಾಡಿದ್ದರು.