ಮಾನಸಿಕ ಸಂಘರ್ಷ ಮತ್ತು ವೇಮುಲಾ ಆತ್ಮಹತ್ಯೆ
ವ್ಯಕ್ತಿಗಳ ನಡುವೆ ಅನೇಕ ವ್ಯತ್ಯಾಸಗಳಿದ್ದಂತೆ ಅವರ ಮೆದುಳಿನ ರಾಸಾಯನಿಕ ರಚನೆ ಮತ್ತು ಮನಸ್ಸಿನ ಭಾವನೆಗಳ ನಡುವೆ ಬಹಳ ಹತ್ತಿರದ ಸಂಬಂಧ ಇದೆ. ಪ್ರಜ್ಞೆ ಮತ್ತು ಸುಪ್ತ ಪ್ರಜ್ಞೆ ಎಂಬುದೂ ಇದೆ. ಪರಿಸ್ಥಿತಿಯ ವ್ಯತ್ಯಾಸಗಳು ವಿವಿಧ ವ್ಯಕ್ತಿಗಳ ಮೇಲೆ ಕೇವಲ ಸುಪ್ತ ಪ್ರಜ್ಞೆಯ ಮಟ್ಟದಲ್ಲಿ ಹಾಗೂ ರಾಸಾಯನಿಕಗಳ ಉತ್ಪಾದನೆಯ ಮಟ್ಟದಲ್ಲಿ ಮಾನವ ಪ್ರಜ್ಞೆಗೆ ಅರಿವೇ ಇಲ್ಲದಂತೆ ಪರಿಣಾಮಗಳನ್ನು ಉಂಟು ಮಾಡುತ್ತಿರುತ್ತವೆ. ಅದು ಅವನ ವಂಶವಾಹಿಗಳ ಮೇಲೆ, ಬಾಲ್ಯದ ಅನುಭವ ಮತ್ತು ಬೆಳವಣಿಗೆ ಮೇಲೆ ಅವಲಂಬಿಸಿರುತ್ತದೆ. ಒಬ್ಬ ವ್ಯಕ್ತಿ ಪ್ರೌಢನಾದ ಮೇಲೆ ಪಡೆಯುವ ಬೌದ್ಧಿಕ ಬೆಳವಣಿಗೆ ಇದನ್ನು ಪೂರ್ಣವಾಗಿ ನಿವಾರಿಸಿಬಿಡುವುದಿಲ್ಲ.
ಪರಿಸ್ಥಿತಿಯಲ್ಲಿ ಉಂಟಾಗುವ ಪೂರ್ತಿಯಾದ ನೆಗಟಿವ್ ಆದ ಬೆಳವಣಿಗೆ ಅಂತಹ ವ್ಯಕ್ತಿಗಳಲ್ಲಿ ಮಾನಸಿಕ ಭಾವನೆಗಳನ್ನು ಏರು ಪೇರು ಮಾಡುವಂತಹ ರಾಸಾಯನಿಕಗಳ ಉತ್ಪಾದನೆಯನ್ನು ಟ್ರಿಗ್ಗರ್ ಮಾಡುತ್ತದೆ. ಪ್ರತಿಕೂಲ ಪರಿಸ್ಥಿತಿ ಮುಂದುವರಿದಂತೆ ಆ ವ್ಯಕ್ತಿಗೆ ಅರಿವೇ ಇಲ್ಲದಂತೆ ಈ ರಾಸಾಯನಿಕಗಳ ಪ್ರಮಾಣ ಹೆಚ್ಚುತ್ತಾ ಹೋಗುತ್ತದೆ. ಅವು ಆ ವ್ಯಕ್ತಿಯ ವರ್ತನೆಯ ಮೂಲಕ ಕೆಲವು ಸಂಜ್ಞೆಗಳನ್ನು ನೀಡುತ್ತವೆ. ಇದು ಆ ವ್ಯಕ್ತಿಗೆ ಅರಿವಿರುವುದಿಲ್ಲ. ಬದಲಾಗಿ ಸುತ್ತ ಮುತ್ತಲಿನವರು ಸೂಕ್ಷ್ಮವಾಗಿದ್ದರೆ ಮಾತ್ರ ಅರಿವಿಗೆ ಬರುತ್ತದೆ.
ರೋಹಿತ್ನ ವಿಚಾರದಲ್ಲಿ ಇಂತಹ ಹಲವು ಪ್ರತಿಕೂಲ ಬೆಳವಣಿಗೆಗಳಾಗಿವೆ. ಹಲವು ತಿಂಗಳುಗಳಿಂದ ವಿದ್ಯಾರ್ಥಿ ವೇತನ ಬಾರದೆ ಅವನು ಮತ್ತು ಇತರ ಗೆಳೆಯರಿಗೂ ತೊಂದರೆಯಾಗುತ್ತದೆ. ನಂತರ ನೊಂದು ಡಾಕ್ಯುಮೆಂಟರಿ ತೋರಿಸಲಾಗದ ಅಸಹಾಯಕತೆ, ಅದರಿಂದ ಎಬಿವಿಪಿ ನಾಯಕರ ಮೇಲೆ ಹುಟ್ಟಿದ ಕೋಪ, ಅವರ ಟೀಕಾ ದಾಳಿಯಿಂದ ಮತ್ತಷ್ಟು ಬೆಳೆದು ಸಂಘರ್ಷಕ್ಕೆ ಈಡು ಮಾಡಿದ್ದು. ವಿವಿ ಉಪಕುಲಪತಿಯಿಂದ ರಸ್ಟಿಕೇಷನ್ ಮತ್ತು ನಾಲ್ಕಾರು ತಿಂಗಳ ನಂತರ ಹಾಸ್ಟೆಲಿನಿಂದ ಹೊರದಬ್ಬಿದ್ದು.. ಇಂತಹ ಪರಿಸ್ಥಿತಿಯಲ್ಲಿ ಮನೆಯಿಂದ, ಗೆಳೆಯರಿಂದ ಕೂಡ ಯಾವುದೇ ನೆರವು ಸಿಗದ ಸ್ಥಿತಿ. ಅವರ ಪ್ರತಿಭಟನೆಗೆ ಸ್ಪಂದನೆ ಸಿಗದೇ ಹೋದದ್ದು.
ಈ ಎಲ್ಲ ಸೇರಿ ಅವನು ''ವಿಷ ಕೊಡಿ ಅಥವಾ ನೇಣು ಹಗ್ಗ ಕೊಡಿ'' ಎಂದು ವಿಸಿಗೆ ಪತ್ರ ಬರೆದದ್ದು ಅವನಲ್ಲೆ ಬೆಳೆಯುತ್ತಿದ್ದ ಹತಾಶೆಯ ಮೊದಲ ಸೂಚನೆ. ಅದನ್ನು ನಿರ್ಲಕ್ಷಿಸಿದಾಗ ಅವನ ಮೆದುಳಿನಲ್ಲಿ ಪ್ರತಿಕೂಲ ರಾಸಾಯನಿಕಗಳ ತಯಾರಿಕೆ ತೀವ್ರಗೊಂಡು ಅದರ ಪ್ರಮಾಣ-ಕಾನ್ಸಂಟ್ರೇಷನ್ ಅವನ ವಿಚಾರಶೀಲತೆಯನ್ನು ಮಂಕುಗೊಳಿಸುವಂತಹ ಪ್ರಮಾಣಕ್ಕೆ ಬೆಳೆಸಿರುತ್ತದೆ. ಅವನ ಜೊತೆ ಯಾರಾದರೂ ಹಿಂದಿನ ದಿನ ಕೂಡ ನಿರಾಶಾ ಭಾವನೆಯ ಮಾತುಗಳನ್ನಾಡಿದ್ದರೆ ಅವನೇ ಅವರಿಗೆ ಧೈರ್ಯ ಹೇಳುವ ಸಂಭವವೇ ಇರುತ್ತಿತ್ತೇನೋ.
ಇದೇ ಸಮಯದಲ್ಲಿ ಅವನ ಜೊತೆ ಹೊರದೂಡಲ್ಪಟ್ಟ ಇತರರಲ್ಲಿ ಈ ಪರಿಸ್ಥಿತಿ ಕೆಚ್ಚು ಮೂಡಿಸಿ ಮತ್ತಷ್ಟು ಗಟ್ಟಿಯಾಗಿಸಬಹುದು. ಇದು ಆಯಾ ವ್ಯಕ್ತಿಗಳ ಮೆದುಳಿನ ರಚನೆಗೆ ಸಂಬಂಧಿಸಿದ್ದು. ದೊಡ್ಡ ಪ್ರಮಾಣದ ಮತ್ತು ಬಹಳ ಜನರ ಮೇಲೆ ಪರಿಣಾಮ ಬೀರುವ ಪ್ರತಿಕೂಲ ಪರಿಸ್ಥಿತಿಯ ಸಂದರ್ಭದಲ್ಲಿ ರೈತ ಆತ್ಮಹತ್ಯೆಗಳು, ವಿದ್ಯಾರ್ಥಿ ಆತ್ಮ ಹತ್ಯೆಗಳು ಇಂತಹವು ಜರಗುತ್ತವೆ. ಏಕೆಂದರೆ ಇವು ವಿವಿಧ ರೀತಿಯ ಮೆದುಳಿನ ರಾಸಾಯನಿಕ ರಚನೆಯ ವ್ಯಕ್ತಿಗಳ ಮೇಲೆ ಪ್ರಭಾವ ಬೀರುತ್ತ ಅವರಲ್ಲಿ ಕೆಲವರ ಮೇಲೆ ಆತ್ಮಹತ್ಯೆಯಂತಹ ವರ್ತನೆಯನ್ನು ಟ್ರಿಗ್ಗರ್ ಮಾಡುವಂತಹ ಪರಿಣಾಮ ಮಾಡುತ್ತದೆ.
ಇಂತಹ ಸಂದರ್ಭಗಳಲ್ಲಿ ಮಾತ್ರವಲ್ಲ ಎಂತಹುದೇ ಆತ್ಮಹತ್ಯೆಗಳ ಸಂದರ್ಭದಲ್ಲಿಯೂ ಜರಿಯುವುದಕ್ಕಿಂತ ಅರಿಯುವ ಪ್ರಯತ್ನವೇ ವೈಜ್ಞಾನಿಕ ಮತ್ತು ಮಾನವೀಯ. ಪ್ರತಿಯೊಂದನ್ನೂ ತಮ್ಮ ಅನುಭವ ಮಾತ್ರದಿಂದಲೆ ಅರ್ಥಮಾಡಿಕೊಳ್ಳಲಾಗುವುದಿಲ್ಲ. ಅಳೆಯಲಾಗುವುದಿಲ್ಲ. ಇಂತಹ ವರ್ತನೆಗೆ ಕಾರಣವಾದ ಪರಿಸ್ಥಿತಿಯನ್ನು ದೂಷಿಸುವ, ಬದಲಾಯಿಸುವ ಬದಲು ರೈತರನ್ನು, ವಿದ್ಯಾರ್ಥಿಗಳನ್ನು, ಪ್ರೇಮಿಗಳನ್ನು, ರೋಹಿತ್ನನ್ನು ದೂರುವುದರಿಂದ ಮುಂದಿನ ಆತ್ಮಹತ್ಯೆಗಳನ್ನೂ ನಿಲ್ಲಿಸಲಾಗುವುದಿಲ್ಲ.
ಜಾತಿ ವ್ಯವಸ್ಥೆ ಎಂಬ ಬಂಡೆಗಲ್ಲು ಒಂದು ಕಡೆ ಪ್ರೇಮ ವೈಫಲ್ಯ ಮತ್ತು ಆತ್ಮಹತ್ಯೆಗಳಿಗೆ ಕಾರಣವಾಗುತ್ತಿರುವಂತೆಯೇ ಮೀಸಲಾತಿಯ ಬಗ್ಗೆ ದ್ವೇಷ ಮತ್ತು ಅದರ ಪ್ರಯೋಜನ ಪಡೆದ ವಿದ್ಯಾರ್ಥಿಗಳಿಗೆ ನರಕವನ್ನೂ ಸೃಷ್ಟಿಸಿದೆ. ಅದರಲ್ಲಿಯೂ ಮೇಲ್ಜಾತಿ ಹಿಡಿತ ಪ್ರಬಲವಾಗಿರುವ ಉನ್ನತ ಐಐಟಿ, ಐಐಎಂ ಗಳಂತಹ ಸಂಸ್ಥೆಗಳಲ್ಲಿ ಇಂತಹ ಘಟನೆಗಳನ್ನು ಆಗಾಗ್ಗೆ ಕಾಣುತ್ತೇವೆ. ಮತ್ತು ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಇವರ ರೆಕ್ಕೆಗೆ ನೀರು ತಟ್ಟಿದಂತಾಗಿ ಮತ್ತು ಉನ್ನತ ಹುದ್ದೆಗಳಿಗೆ ಇಂತಹವರ ನೇಮಕಗಳಿಂದ ಈ ಪರಿಸ್ಥಿತಿ ಬಿಗಡಾಯಿಸಿದೆ. ಈ ಮೂಲಭೂತ ಸಂಗತಿಯನ್ನು ಕಡೆಗಿಟ್ಟು ರೋಹಿತನಂತಹ ವ್ಯಕ್ತಿಯನ್ನು ಜರೆಯುವುದು ಸರಿಯಲ್ಲ. ಅವನು ಆತ್ಮಹತ್ಯೆ ಮಾಡಿಕೊಳ್ಳಬಾರದಿತ್ತು ಎಂಬವರ ಭಾವನೆಯನ್ನು ಗೌರವಿಸುತ್ತಲೇ ಈ ವಿವರಣೆ ಕೊಡಬಯಸುತ್ತೇನೆ. ನಮ್ಮ ಗುರಿ ಇಂತಹ ಆತ್ಮಹತ್ಯೆಗಳಿಗೆ ಕಾರಣವಾದ ಪರಿಸ್ಥಿತಿಗಳ ವಿರುದ್ಧವೇ ಇರಬೇಕಾಗುತ್ತದೆ.