ಮೋದಿ ಸರಕಾರದ ಭವಿಷ್ಯದ ಸವಾಲುಗಳು
ಹಿಂದುತ್ವಕ್ಕೆ ವಾಪಸು
ಇಂದಿಗೂ ಬಡತನ, ಹಸಿವು, ಅಪೌಷ್ಟಿಕತೆ, ಪಾಠ ಮಾಡದ ಶಾಲೆ, ಚಿಕಿತ್ಸೆ ನೀಡದ ಆರೋಗ್ಯ ಕೇಂದ್ರಗಳು, ಉದ್ಯೋಗಾವಕಾಶ ಇಲ್ಲದಿರುವುದು ಹೀಗೆ ಪ್ರತಿಕೂಲಗಳ ವಿರುದ್ಧ ಲಕ್ಷಾಂತರ ಮಂದಿ ಹೋರಾಡುತ್ತಿದ್ದರೆ ಸರಕಾರ ತನ್ನ ಸೈದ್ಧಾಂತಿಕ ಬೇರುಗಳಾದ ಕಠಿಣ ಹಿಂದುತ್ವದ ಹಳಿಗೆ ಮರಳಿದೆ. ಈ ಎರಡು ವರ್ಷಗಳಲ್ಲಿ ಅಧಿಕಾರ ಅಥವಾ ಶ್ರಮದ ಹಂಚಿಕೆ ಮೋದಿ, ಅಮಿತ್ ಶಾ, ಬೆರಳೆಣಿಕೆಯ ಸಚಿವರು, ಸುಬ್ರಹ್ಮಣ್ಯನ್ಸ್ವಾಮಿಯಂಥವರಿಗೆ ಸೀಮಿತವಾಗಿದೆ. ವಿಭಜನಾ ಕಾರ್ಯಸೂಚಿ ವಿಚಾರ ಬಂದಾಗ, ಮೋದಿ ಬಹುತೇಕ ವೌನಕ್ಕೆ ಮೊರೆಹೋಗುತ್ತಾರೆ. ಗುಜರಾತ್ನಲ್ಲಿ ಹಲವು ವರ್ಷಗಳ ಕಾಲ ಮುಸ್ಲಿಂ ವಿರೋಧಿ ನೀತಿ ಅನುಸರಿಸುತ್ತಾ ಬಂದ ಮೋದಿ ಇದೀಗ ವೌನಕ್ಕೆ ಶರಣಾಗಿದ್ದಾರೆ. ಆದರೆ ವಿದೇಶಿ ನೆಲದಲ್ಲಿ ಮಾತ್ರ ಅಪರೂಪಕ್ಕೊಮ್ಮೆ ವೈವಿಧ್ಯತೆ ಹಾಗೂ ಬಹುತ್ವದ ಬಗ್ಗೆ ಬಾಯಿ ಬಿಡುತ್ತಾರೆ. ಇದಕ್ಕೆ ವಿರುದ್ಧವಾಗಿ ಅವರ ಸಹವರ್ತಿ ಪಡೆ ಮಾತ್ರ ಕೋಮು ಪ್ರಚೋದಕ ಕೃತ್ಯಗಳನ್ನು ರಾಜಾರೋಷವಾಗಿ ಮಾಡುತ್ತಲೇ ಬರುತ್ತಿವೆ. ಮುಸ್ಲಿಮರು ಹಾಗೂ ಕ್ರೈಸ್ತರು ಹಿಂದೂಗಳಿಗಿಂತ ಕಡಿಮೆ ದೇಶಪ್ರೇಮ ಹೊಂದಿರುವವರು ಎಂದು ಬಿಂಬಿಸುವ ಸರಣಿ ಪ್ರಚಾರಾಂದೋಲನ ಅವ್ಯಾಹತವಾಗಿ ನಡೆಯುತ್ತಲೇ ಇದೆ.
ಇತಿಹಾಸವನ್ನು ತಿರುಚಲಾಗುತ್ತಿದೆ. ಸರ್ದಾರ್ ವಲ್ಲಭಭಾಯಿ ಪಟೇಲ್ ಹಾಗೂ ಸುಭಾಶ್ಚಂದ್ರ ಬೋಸ್ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಬಹಿರಂಗವಾಗಿ ವಿರೋಧಿಸಿದ್ದರೂ, ಅವರಿಗೆ ಹಿಂದುತ್ವದ ಮುಖವಾಡ ತೊಡಿಸಲಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಕ್ರಾಂತಿಕಾರಿ ಭಗತ್ ಸಿಂಗ್, ಅಂಬೇಡ್ಕರ್ ಹಿಂದುತ್ವದ ಕಾರಣಕ್ಕೆ ಅವರನ್ನೂ ತನ್ನ ತೆಕ್ಕೆಗೆ ಸೆಳೆದುಕೊಂಡಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಆರೆಸ್ಸೆಸ್ ಮುಖಂಡರ ಪಾತ್ರ ಸೀಮಿತವಾಗಿದ್ದು, ಗಾಂಧೀಜಿಯನ್ನು ಕೇವಲ ನೈರ್ಮಲ್ಯ ಮೇಲ್ವಿಚಾರಕರಾಗಿ ಬಳಸಿಕೊಂಡಿದೆ.
ಪಠ್ಯಗಳ ಮರು ಬರವಣಿಗೆ ಮೂಲಕ ವೇದ ಇತಿಹಾಸವನ್ನು ವೈಜ್ಞಾನಿಕ ಎಂದು ಬಿಂಬಿಸಲಾಗಿದೆ. ಸಾಂಸ್ಕೃತಿಕವಾಗಿಯೂ ವೇದ ಕಾಲದಲ್ಲಿ ಭಾರತ ವಿಶ್ವಕ್ಕೇ ಅಗ್ರವಾಗಿತ್ತು, ಮಧ್ಯಕಾಲೀನ ಯುಗದಲ್ಲಿ ಮುಸ್ಲಿಂ ಆಡಳಿತಗಾರರ ಕ್ರೌರ್ಯ, ಸ್ವಾತಂತ್ರ್ಯ ಹೋರಾಟದಲ್ಲಿ ಹಿಂದೂ ಐಕಾನ್ಗಳಷ್ಟೇ ಪ್ರಮುಖ ಪಾತ್ರ ವಹಿಸಿದ್ದರು ಎಂಬ ಭ್ರಮೆಯನ್ನು ಹುಟ್ಟಿಸಲಾಗಿದೆ. ರಾಜಧಾನಿಯ ರಸ್ತೆಗಳ ಹೆಸರುಗಳನ್ನು ಕೂಡಾ ಮುಸ್ಲಿಂ ಆಡಳಿತಗಾರರ ನೆನಪಿಗಾಗಿ ಇಡಲಾಗಿದೆ ಎಂಬ ಆರೋಪ ಮಾಡಿ, ಅವುಗಳನ್ನು ಕೂಡಾ ಬದಲಿಸುವ ಪ್ರಕ್ರಿಯೆ ಜಾರಿಯಲ್ಲಿದೆ. ಗೋಮಾಂಸ ಭಕ್ಷಣೆ, ಲವ್ ಜಿಹಾದ್ ಆರೋಪ ಅಥವಾ ಹಿಂದೂಗಳಿಗೆ ಸೀಮಿತವಾದ ಭಾರತಮಾತಾ ಕಲ್ಪನೆಯನ್ನು ಸೃಷ್ಟಿಸುವುದು ಕೂಡಾ ಧಾರ್ಮಿಕ ಅಲ್ಪಸಂಖ್ಯಾತರನ್ನು ಅನ್ಯರೆಂದು ಬಿಂಬಿಸುವ ಪ್ರಯತ್ನಗಳಾಗಿವೆ.
ದೇಶದಲ್ಲಿ ಶೇಕಡ 14 ಮುಸ್ಲಿಂ ಜನಸಂಖ್ಯೆ ಇದ್ದರೂ, ಲೋಕಸಭೆಯಲ್ಲಿ ಮುಸ್ಲಿಂ ಸಂಸದರೇ ಇಲ್ಲದ ಮೊದಲ ಸರಕಾರ ಇದು. ಇಡೀ ಮುಸ್ಲಿಂ ಸಮುದಾಯವೇ ರಾಜಕೀಯವಾಗಿ ಅಪ್ರಸ್ತುತ ಎಂಬ ಸಂದೇಶ ರವಾನಿಸುವುದು ಹಾಗೂ ಹಿಂದುತ್ವದ ಕ್ರೋಡೀಕರಣದ ಸ್ಪಷ್ಟ ಸಂದೇಶ. ಇದರ ಜತೆಗೆ ಮುಸ್ಲಿಂ ಸಮುದಾಯವನ್ನೇ ಭಯೋತ್ಪಾದಕರೆಂದು ಬಿಂಬಿಸುವ ಪ್ರಯತ್ನಗಳೂ ನಡೆಯುತ್ತಿವೆ. ಜತೆಗೆ ಅಲ್ಪಸಂಖ್ಯಾತರ ಮೇಲಿನ ದಾಳಿಗೆ ಹಲವು ನಿದರ್ಶನಗಳು ಸಿಗುತ್ತವೆ. ಗೋಮಾಂಸ ಭಕ್ಷಣೆಯ ವದಂತಿಗಾಗಿ ನಡೆದ ದಾದ್ರಿ ಹತ್ಯೆ, ಜಾನುವಾರು ಮಾರಾಟಗಾರರ ಕಗ್ಗೊಲೆ, ಕ್ರೈಸ್ತ ಆಚರಣೆಗಳನ್ನು ನಿಷೇಧಿಸುವ ಬಗ್ಗೆ ಹಲವು ಪಂಚಾಯತ್ಗಳು ನಿರ್ಣಯ ಕೈಗೊಂಡಿರುವುದು ಇದಕ್ಕೆ ಸ್ಪಷ್ಟ ನಿದರ್ಶನಗಳು.
ಜೆಎನ್ಯು ಹಾಗೂ ಹೈದರಾಬಾದ್ ಕೇಂದ್ರೀಯ ವಿವಿ ಘಟನೆಗಳನ್ನು ನೋಡಿ. ಪ್ರಗತಿಪರ ವಿದ್ಯಾರ್ಥಿ ಮುಖಂಡರನ್ನು ದೇಶದ್ರೋಹಿಗಳು ಎಂದು ಬಿಂಬಿಸಿ ಅವರು ಜೀವನವಿಡೀ ಜೈಲಿನಲ್ಲಿ ಕೊಳೆಯುವಂತೆ ಮಾಡುವ ಹುನ್ನಾರವೂ ನಡೆದಿದೆ. ಸರಕಾರವನ್ನು ಟೀಕಿಸುವ ಅಥವಾ ಸರಕಾರದ ವಿರುದ್ಧ ಸೆಟೆದು ನಿಲ್ಲುವ ಸ್ವಯಂಸೇವಾ ಸಂಸ್ಥೆಗಳು ಹಾಗೂ ಇತರ ಗಣ್ಯರ ವಿರುದ್ಧ ದ್ವೇಷಸಾಧನೆಗೂ ಸರಕಾರ ಮುಂದಾಗಿದೆ. ಮೋದಿಯವರನ್ನು ಟೀಕಿಸುವುದು ಎಂದರೆ ರಾಷ್ಟ್ರವನ್ನು ಟೀಕಿಸುವುದು ಎಂಬ ವಾತಾವರಣ ಸೃಷ್ಟಿಯಾಗಿದೆ.
ಭದ್ರತಾ ಪಡೆಗಳ ಕೋಮುವಾದೀಕರಣ
ಈ ಎಲ್ಲ ಅಂಶಗಳಿಗಿಂತಲೂ ಆತಂಕಕಾರಿ ಎಂದರೆ, ದೇಶದ ಭದ್ರತಾ ಏಜೆನ್ಸಿಗಳ ಕೋಮುವಾದೀಕರಣ. ಸೊಹ್ರಾಬುದ್ದೀನ್ ಎನ್ಕೌಂಟರ್ ಪ್ರಕರಣದಲ್ಲಿ ಅವರ ಪತ್ನಿ ಕೌಸರ್ ಹಾಗೂ ಪ್ರಜಾಪತಿ ಅವರು ಮಾಡಿದ ಆರೋಪವನ್ನು ತಳ್ಳಿಹಾಕಿ, ಸರಕಾರ ಬದಲಾದ ತಕ್ಷಣ, ಅಂದಿನ ಗುಜರಾತ್ ಗೃಹಸಚಿವರಾಗಿದ್ದ ಅಮಿತ್ ಶಾ ವಿರುದ್ಧದ ತನಿಖೆಗೆ ಯಾವ ಪುರಾವೆಗಳೂ ಇಲ್ಲ ಎಂದು ಸಿಬಿಐ ಘೋಷಿಸಿರುವುದು ಇದಕ್ಕೆ ಸ್ಪಷ್ಟ ನಿದರ್ಶನ. ಅಮಿತ್ ಶಾ, ಪೊಲೀಸ್ ಅಧಿಕಾರಿಗಳ ಜತೆ ಈ ಸಂಬಂಧ ಮಾತನಾಡಿದ್ದಕ್ಕೆ ದೂರವಾಣಿ ದಾಖಲೆಗಳು ಇದ್ದರೂ ಆರೋಪ ಮುಂದುವರಿಸಲು ನಿರಾಕರಿಸಲಾಗಿದೆ. ಅಮಿತ್ ಶಾ ವಿರುದ್ಧದ ಪ್ರಕರಣ ವಾಪಸು ಪಡೆಯುವುದನ್ನು ಪ್ರಶ್ನಿಸಿದ್ದ ಸೊಹ್ರಾಬುದ್ದೀನ್ ಅವರ ಸಹೋದರ, ಅಚ್ಚರಿದಾಯಕವಾಗಿ ಪ್ರಕರಣ ವಾಪಾಸು ಪಡೆದಿರುವುದು ಏನನ್ನು ಹೇಳುತ್ತದೆ?
19 ವರ್ಷದ ಇಶ್ರತ್ ಜಹಾನ್ ಅವರನ್ನು ಎನ್ಕೌಂಟರ್ನಲ್ಲಿ ಹತ್ಯೆ ಮಾಡಿದ ಪ್ರಕರಣದಲ್ಲಿ ಆಕೆಯನ್ನು ಉಗ್ರಗಾಮಿ ಎಂದು ಬಿಂಬಿಸುವ ಪ್ರಯತ್ನದ ಮೂಲಕ ಹತ್ಯೆ ಮಾಡಿದ ಪೊಲೀಸರನ್ನು ರಕ್ಷಿಸುವ ಹುನ್ನಾರ, ಮಾಲೇಗಾಂವ್ ಸ್ಫೋಟ ಪ್ರಕರಣದಲ್ಲಿ ಎನ್ಐಎ ನಿಲುವು ಸರಕಾರದ ಉದ್ದೇಶವನ್ನು ಸ್ಪಷ್ಟಪಡಿಸುತ್ತವೆ. ರಾಷ್ಟ್ರದ ಅತ್ಯುನ್ನತ ತನಿಖಾ ಸಂಸ್ಥೆಯ ಮುಖ್ಯಸ್ಥ ಹುದ್ದೆಗೆ ನಿವೃತ್ತ ಅಧಿಕಾರಿಯನ್ನು ನೇಮಕ ಮಾಡಿದ್ದರಿಂದ ಸಹಜವಾಗಿಯೇ ಸರಕಾರದ ಕೃಪಾಕಟಾಕ್ಷದಲ್ಲಿ ಆ ಅಧಿಕಾರಿ ಕಾರ್ಯನಿರ್ವಹಿಸುವಂತಾಗಿದೆ. ಸಾಧ್ವಿ ಪ್ರಜ್ಞಾ ಠಾಕೂರ್ ವಿರುದ್ಧದ ಆರೋಪ ಕೈಬಿಡುವ ವಿವಾದಾತ್ಮಕ ನಿರ್ಧಾರ, ಲೆಫ್ಟಿನೆಂಟ್ ಕರ್ನಲ್ ಪುರೋಹಿತ್ ವಿರುದ್ಧದ ಆರೋಪ ದುರ್ಬಲಗೊಳಿಸಿರುವುದು ಎಲ್ಲವೂ ಈ ಸಂಚಿನ ಭಾಗ.
ಇನ್ನೊಂದೆಡೆ ಭೀಕರ ಕೋಮುದಳ್ಳುರಿಯ ಆರೋಪಿ ನರೋಡಾ ಪಾಟಿಯಾ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಹತ್ಯಾಕಾಂಡದ ಆರೋಪಿ ಮಾಯಾ ಕೊಂಡಾನಿ ಯೋಗ ಶಿಬಿರದಲ್ಲಿ ಸೆಲ್ಫಿ ತೆಗೆಸಿಕೊಂಡಿರುವುದನ್ನು ಪತ್ರಕರ್ತರು ಪತ್ತೆ ಮಾಡಿದ್ದಾರೆ. ಬಾಬಾ ಬಜರಂಗಿ, ಸುಳ್ಳು ಎನ್ಕೌಂಟರ್ ಆರೋಪದಲ್ಲಿ ಜೈಲುಪಾಲಾಗಿದ್ದ ಪೊಲೀಸ್ ಅಧಿಕಾರಿಗಳು ಜಾಮೀನಿನ ಮೇಲೆ ಹೊರಬಂದಿದ್ದಾರೆ. ಅವರನ್ನು ಸೇವೆಗೆ ಸೇರಿಸಿಕೊಂಡು ಭಡ್ತಿ ನೀಡಲಾಗಿದೆ. ಪಿ.ಪಿ.ಪಾಂಡೆಯಂಥ ಅಧಿಕಾರಿಗಳು ಗುಜರಾತ್ ಪೊಲೀಸ್ ಮಹಾನಿರ್ದೇಶಕರಾಗಿದ್ದಾರೆ. ಹತ್ಯೆಯ ಆರೋಪದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾದ ಅಧಿಕಾರಿ, ರಾಜ್ಯ ಪೊಲೀಸ್ ಮುಖ್ಯಸ್ಥರಾಗಿದ್ದಾರೆ!
ಕೋಮು ಧ್ರುವೀಕರಣ
ಸಾರ್ವಜನಿಕ ಹಾಗೂ ರಾಜಕೀಯ ಕೋಮುವಾದೀಕರಣ, ಸರಕಾರಿ ಸಂಘ ಸಂಸ್ಥೆಗಳ ಕೋಮುವಾದೀಕರಣದ ಬಳಿಕ ಹಿಂದೂ ಮತಗಳನ್ನು ಕ್ರೋಡೀಕರಿಸಿ, ಮುಸ್ಲಿಂ ಅಲ್ಪಸಂಖ್ಯಾತರ ವಿರುದ್ಧ ಎತ್ತಿಕಟ್ಟುವ ಹುನ್ನಾರ ಆತಂಕಕಾರಿ ಬೆಳವಣಿಗೆ. ಈ ತಂತ್ರಕ್ಕೆ ಬಿಹಾರದ ಜನ ಪ್ರತಿರೋಧ ಒಡ್ಡಿದರು. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮುಟ್ಟಿನೋಡಿಕೊಳ್ಳುವಂಥ ಪೆಟ್ಟು ನೀಡಿದರು. ಆದರೆ ಅದೇ ತಂತ್ರ ಅಸ್ಸಾಂನಲ್ಲಿ ಫಲಿಸಿತು. ಇಲ್ಲಿ ಮತಗಳು ಕೋಮು ಆಧಾರದಲ್ಲಿ ವಿಭಜನೆಯಾದ್ದನ್ನು ವಿಶ್ಲೇಷಕರು ಸ್ಪಷ್ಟವಾಗಿ ಗುರುತಿಸಿದ್ದಾರೆ. ಜಮ್ಮು- ಕಾಶ್ಮೀರ ಹೊರತುಪಡಿಸಿ ಅತ್ಯಧಿಕ ಮುಸ್ಲಿಂ ಜನಸಂಖ್ಯೆ ಹೊಂದಿರುವ ಈ ರಾಜ್ಯದಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ಎಲ್ಲ ಜಾತಿ ಹಾಗೂ ಧರ್ಮಗಳು ಒಗ್ಗೂಡಿ ಬಿಜೆಪಿ ಪರ ನಿಂತಿದ್ದವು.
ಮುಂದಿನ ವರ್ಷ ಚುನಾವಣೆ ನಡೆಯುವ ಉತ್ತರ ಪ್ರದೇಶ ಹಾಗೂ ಇನ್ನೂ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿರುವ ಕರ್ನಾಟಕದಲ್ಲೂ ಇದೇ ತಂತ್ರಗಾರಿಕೆ ಅನುಸರಿಸುವುದು ಖಚಿತ. ಬಿಹಾರದ ಜನತೆ ತೋರಿದ ಪ್ರಬುದ್ಧತೆಯನ್ನು ಈ ರಾಜ್ಯದ ಜನರೂ ಮೆರೆಯುತ್ತಾರೆಯೇ ಎಂಬ ಪ್ರಶ್ನೆಗೆ ಕಾಲವೇ ಉತ್ತರಿಸಬೇಕು. ಬಿಜೆಪಿಯ ಮುಂದಿನ ಮೂರು ವರ್ಷಗಳು ಖಂಡಿತವಾಗಿಯೂ ಆತಂಕಕಾರಿ. ಜನಸಮಸ್ಯೆಗಳಿಗೆ ಸ್ಪಂದಿಸದ, ಅಭಿವೃದ್ಧಿಯ ಪ್ರತಿಫಲವನ್ನು ಬಡಜನತೆಗೆ ತಲುಪಿಸದ ಸರಕಾರ ಕ್ರಮೇಣ ಅಧಿಕಾರ ಕಳೆದುಕೊಳ್ಳುತ್ತದೆ ಎನ್ನುವುದು ನನ್ನ ಖಚಿತ ನಂಬಿಕೆ. ಆದರೆ ಅಧಿಕಾರದಿಂದ ಕೆಳಗಿಳಿಯುವ ಮುನ್ನ ಹೇಗೆ ನಮ್ಮ ಶಾಂತಿಯುತ ಸಹಬಾಳ್ವೆಯ ಸಂಸ್ಕೃತಿಯನ್ನು ಶಾಶ್ವತವಾಗಿ ಹಾಳು ಮಾಡುತ್ತದೆ ಎನ್ನುವುದು ನಿಜವಾದ ಆತಂಕ.
ಕೃಪೆ:scroll.in