ದುಃಸ್ವಪ್ನವಾಗಿ ಕಾಡಿದ ಮಾಲೆಗಾಂವ್ ಭೂತ
ಮಾಲೆಗಾಂವ್ ಸ್ಫೋಟ ಪ್ರಕರಣ ಆರೋಪಿಗಳನ್ನು ಮುಂಬೈ ಸೆಷನ್ಸ್ ನ್ಯಾಯಾಧೀಶರು ಎಪ್ರಿಲ್ 25ರಂದು ನಿರ್ದೋಷಿಗಳೆಂದು ಘೋಷಿಸಿದಾಗ ಎಂಟು ಮಂದಿ ನ್ಯಾಯಾಲಯದ ಕೊಠಡಿಯಲ್ಲಿ ಅತ್ತರು. ಅವರ ಹತ್ತು ವರ್ಷದಿಂದ ಕಾಡುತ್ತಿದ್ದ ದುಃಸ್ವಪ್ನಕ್ಕೆ ಕೊನೆಗೂ ಅಂತ್ಯ ದೊರಕಿತು. ಈ ಅವಧಿಯಲ್ಲಿ ಅವರನ್ನು ಬಂಧಿಸಿ, ಚಿತ್ರಹಿಂಸೆ ನೀಡಿ, ಬಂಧನದಲ್ಲಿಟ್ಟು, ಅವರು ಮಾಡದ ಅಪರಾಧಕ್ಕಾಗಿ ಆರೋಪ ಹೊರಿಸಲಾಗಿತ್ತು. ಈ ಹತ್ತು ವರ್ಷಗಳ ಪೈಕಿ ಅರ್ಧಕ್ಕಿಂತ ಹೆಚ್ಚು ಅವಧಿಯನ್ನು ಜೈಲಲ್ಲಿ ಕಳೆದಿದ್ದರು. ತಾವು ನಿರ್ದೋಷಿಗಳೆಂದು ಸಾಬೀತು ಮಾಡಲು ನ್ಯಾಯಾಲ ಯದಲ್ಲಿ ಸುದೀರ್ಘ ಹೋರಾಟ ಮಾಡಬೇಕಾಯಿತು.
ಒಬ್ಬ ಆರೋಪಿ, ಅಮಾಯಕ ಎಂದು ಸಾಬೀತಾಗುವ ಮುನ್ನವೇ ಮೃತಪಟ್ಟಿದ್ದರು. ಪ್ರಕರಣದ ಸಂಬಂಧ ಮೊದಲು ಬಂಧಿತರಾಗಿದ್ದ ನೇಕಾರಿಕೆ ಕಾರ್ಮಿಕ ನೂರುಲ್ ಹುದಾ ಅವರನ್ನು ನಾನು ಮಾತನಾಡಿಸಿದೆ. ‘‘ಈ ಹತ್ತು ವರ್ಷಗಳಲ್ಲಿ ತಮ್ಮ ಆರೋಗ್ಯ, ಗೌರವ, ಘನತೆ ಹಾಗೂ ಕುಟುಂಬ ಎಲ್ಲವೂ ಹಾಳಾಯಿತು. ಇದನ್ನು ಯಾರು ಮರಳಿಸುತ್ತಾರೆ?’’ ಎಂದು ಮುಗ್ಧರಾಗಿ ಪ್ರಶ್ನಿಸಿದರು.
2006ರ ಸೆಪ್ಟಂಬರ್ 6ರಂದು ಬೈಸಿಕಲ್ನಲ್ಲಿ ಹುದುಗಿಸಿ ಇಡಲಾಗಿದ್ದ ಎರಡು ಬಾಂಬ್ಗಳು, ಕೋಮು ಸಂಘರ್ಷದ ತಾಣವಾಗಿದ್ದ ನಗರದಲ್ಲಿ ಮಸೀದಿ ಸಮೀಪ ಸ್ಫೋಟಿಸಿದವು. ಶಬೇಬರಾಅತ್ ಹಬ್ಬದ ಅಂಗವಾಗಿ ಪವಿತ್ರ ಪ್ರಾರ್ಥನೆಗೆ ಮುಸ್ಲಿಮರು ಸೇರಿದ್ದ ಅವಧಿಯಲ್ಲೇ ಈ ಬಾಂಬ್ ಸ್ಫೋಟವಾಯಿತು. ದುರ್ಘಟನೆಯಲ್ಲಿ 37 ಮಂದಿ ಮೃತಪಟ್ಟು, 100ಕ್ಕೂ ಅಧಿಕ ಮಂದಿ ಗಾಯಗೊಂಡರು.
ಇಸ್ಲಾಮಿಕ್ ಉಗ್ರ ಸಂಘಟನೆಯಾದ ಲಷ್ಕರೆ ತಯ್ಯಬಾ ಮತ್ತು ಹರ್ಕತುಲ್ ಜಿಹಾದ್ ಅಲ್ ಇಸ್ಲಾಮಿ ಸಂಘಟನೆ ಈ ಕೃತ್ಯ ಎಸಗಿದೆ ಎಂದು ಕೆಲ ದಿನಗಳ ಬಳಿಕ ಪೊಲೀಸರು ಘೋಷಿಸಿದರು. ಇದಕ್ಕೆ ಭಾರತದಲ್ಲಿ ನಿಷೇಧಿತ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂಮೆಂಟ್ ಆಫ್ ಇಂಡಿಯಾ ಸಹಕರಿಸಿದೆ ಎಂದು ದೂರಿದರು. ಈ ಎಲ್ಲ ಆರೋಪಿಗಳು ಕೂಡಾ ಧರ್ಮನಿಷ್ಠ ಮುಸ್ಲಿಮರು. ಇವರು 2006ರಲ್ಲಿ ಬಂಧಿತರಾದ ಬಳಿಕ ಕಳೆದ ಭಯಾನಕ, ಕ್ರೌರ್ಯ ಹಾಗೂ ಹಿಂಸೆಯ ರಾತ್ರಿಗಳನ್ನು ಎಂದಿಗೂ ಜೀವನದಲ್ಲಿ ಮರೆಯಲು ಸಾಧ್ಯವೇ ಇಲ್ಲ. ಎರಡು ವರ್ಷಗಳ ಬಳಿಕ ಮತ್ತೆ ಸೆಪ್ಟಂಬರ್ನಲ್ಲಿ ಮಾಲೆಗಾಂವ್ನ ಸಾರಿಗೆ ಕಂಪೆನಿಯೊಂದರ ಬಳಿ ನಿಲ್ಲಿಸಿದ್ದ ಮೋಟರ್ಬೈಕ್ನಲ್ಲಿದ್ದ ಬಾಂಬ್ ಸ್ಫೋಟಿಸಿತು. ಈ ದುರ್ಘಟನೆಯಲ್ಲಿ ಎಂಟು ಮಂದಿ ಮೃತಪಟ್ಟು 80ಕ್ಕೂ ಹೆಚ್ಚು ಮಂದಿ ಗಾಯಗೊಂಡರು. ಮತ್ತೆ ಈ ಸಂಬಂಧ ಐದು ಮಂದಿ ಮುಸ್ಲಿಮರನ್ನು ಆರೋಪಿಗಳನ್ನಾಗಿ ಮಾಡಲಾಯಿತು. ಇವರು ಲಷ್ಕರೆ ತಯ್ಯಬಾ ಹಾಗೂ ಸಿಮಿಗೆ ಸೇರಿದವರು ಎಂದು ಬಿಂಬಿಸಲಾಯಿತು.
ಇಷ್ಟಾಗಿಯೂ ಪ್ರಕರಣದ ತನಿಖೆಯನ್ನು ಅತ್ಯಂತ ಧೈರ್ಯಶಾಲಿ ಹಾಗೂ ನಿಷ್ಪಕ್ಷಪಾತಕ್ಕೆ ಹೆಸರಾಗಿದ್ದ ಹೇಮಂತ್ ಕರ್ಕರೆ ಕೈಗೊಂಡರು. ಈ ಪ್ರಕರಣದಲ್ಲಿ ಉಗ್ರದಾಳಿಗಳು ನಡೆದದ್ದು ಕೇಸರಿ ಉಗ್ರರಿಂದಲೇ ವಿನಃ ಇಸ್ಲಾಮಿಕ್ ಸಿದ್ಧಾಂತದವರಿಂದಲ್ಲ ಎಂಬ ನಿರ್ಧಾರಕ್ಕೆ ಅವರು ಬಂದರು. ಈ ಮೋಟರ್ಬೈಕ್, ಮಾಜಿ ಎಬಿವಿಪಿ ಕಾರ್ಯಕರ್ತೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರಿಗೆ ಸೇರಿದ್ದು ಎನ್ನುವ ಅಂಶ ತನಿಖೆಗೆ ಮಹತ್ವದ ಸುಳಿವನ್ನು ನೀಡಿತು. ಇದಕ್ಕಿಂತಲೂ ದೊಡ್ಡ ಸಂಗತಿ ಎಂದರೆ, ಹಾಲಿ ಸೇನಾ ಅಧಿಕಾರಿಯಾಗಿದ್ದ ಲೆಫ್ಟಿನೆಂಟ್ ಕರ್ನಲ್ ಶ್ರೀಕಾಂತ್ ಪುರೋಹಿತ್ ಹಾಗೂ ನಿವೃತ್ತ ಮೇಜರ್ ರಮೇಶ್ ಉಪಾಧ್ಯಾಯ ಕೂಡಾ ಈ ಸಂಚಿನಲ್ಲಿ ಭಾಗಿಯಾಗಿದ್ದರು ಎಂಬ ಆರೋಪ. ಇದರಲ್ಲಿ ಹಲವು ಸಾಧುಗಳು ಹಾಗೂ ಮಹಾಂತರು ಮಾತ್ರವಲ್ಲದೆ ಸಂಘ ಪರಿವಾರದ ಪಾತ್ರವೂ ಇದೆ ಎನ್ನುವ ಅಂಶ ಬೆಳಕಿಗೆ ಬಂತು. ಬಜರಂಗ ದಳ ಹಾಗೂ 1904ರಲ್ಲಿ ವಿ.ಡಿ.ಸಾವರ್ಕರ್ ಆರಂಭಿಸಿದ ‘ಅಭಿನವ ಭಾರತ’ ಎಂಬ ಉಗ್ರ ಸಂಘಟನೆ ಶಾಮೀಲಾಗಿರುವ ಬಗ್ಗೆ ಕೂಡಾ ಸುಳಿವು ದೊರಕಿತು.
ಈ ಸಂಬಂಧದ ಬಂಧನಗಳು ಹಾಗೂ ತನಿಖೆಗಳು, ಅಭಿನವ ಭಾರತ ಹಾಗೂ ಇತರ ಕೇಸರಿ ಸಂಘಟನೆಗಳು ವಿವಿಧ ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಿರುವ ಅಂಶವನ್ನು ಬೆಳಕಿಗೆ ತಂದಿತು. ಇದರಲ್ಲಿ 2006 ಮತ್ತು 2008ರ ಮಾಲೆಗಾಂವ್ ಸ್ಫೋಟ, ಸಂಜೋತಾ ಎಕ್ಸ್ ಪ್ರೆಸ್ ರೈಲಿನಲ್ಲಿ ಸಂಭವಿಸಿದ ಸ್ಫೋಟ, ಹೈದರಾಬಾದ್ನ ಮಕ್ಕಾ ಮಸೀದಿ ಹಾಗೂ ಅಜ್ಮೀರ್ ಷರೀಫ್ ದರ್ಗಾದಲ್ಲಿ ಸಂಭವಿಸಿದ ಸ್ಫೋಟ ಪ್ರಕರಣಗಳು ಸೇರಿದ್ದವು. ಇದರ ಜೊತೆಗೆ ಬಜರಂಗ ದಳ ಕಾರ್ಯಕರ್ತರು ನಾಂದೇಡ್, ಕಾನ್ಪುರ, ಭೋಪಾಲ್ ಹಾಗೂ ಗೋವಾದಲ್ಲಿ ಬಾಂಬ್ಗಳನ್ನು ಉತ್ಪಾದಿಸಿ ಸರಬರಾಜು ಮಾಡುತ್ತಿದ್ದುದು ಕೂಡಾ ತನಿಖೆ ವೇಳೆ ಬಹಿರಂಗಗೊಂಡಿತ್ತು.
ಈ ರಹಸ್ಯ ಸ್ಫೋಟವಾದದ್ದು, ಭಾರತೀಯ ಪೊಲೀಸರು ಹಾಗೂ ಭದ್ರತಾ ಪಡೆಗಳಲ್ಲಿನ ಕೋಮು ಮನೋಭಾವದ ಬಗ್ಗೆ ತೀರಾ ಕಳವಳಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಗಡಿಯಾಚೆಗಿನ ಇಸ್ಲಾಮಿಕ್ ಸಂಘಟನೆಗಳ ಮೇಲೆ ಗೂಬೆ ಕೂರಿಸಿ, ಭಾರತೀಯ ಮುಸ್ಲಿಮರನ್ನು ಭಯೋತ್ಪಾದಕ ತಡೆ ಕಾಯ್ದೆಯಡಿ ಬಂಧಿಸಿ, ಚಿತ್ರಹಿಂಸೆ ನೀಡಿ ತಪ್ಪೊಪ್ಪಿಗೆ ಪತ್ರಕ್ಕೆ ಸಹಿ ಮಾಡಿಸಿಕೊಳ್ಳಲಾಗುತ್ತಿತ್ತು.
ಹೇಮಂತ್ ಕರ್ಕರೆ 2008ರಲ್ಲಿ ಉಗ್ರರ ದಾಳಿಯಲ್ಲಿ ಮೃತಪಟ್ಟ ಬಳಿಕ, ಅಭಿನವ ಭಾರತ ಹಾಗೂ ಇತರ ಕೇಸರಿ ಸಂಘಟನೆಗಳ ವಿರುದ್ಧದ ಯಾವ ಸಾಕ್ಷ್ಯಗಳನ್ನೂ ತನಿಖಾ ಸಂಸ್ಥೆಗಳು ಸಂಗ್ರಹಿಸಲಿಲ್ಲ. ಈ ಪಕ್ಷಪಾತ ನೀತಿಗೆ, ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ನೇತೃತ್ವದ ಸರಕಾರ ಮತ್ತಷ್ಟು ಪೂರಕವಾಯಿತು. 2015ರಲ್ಲಿ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಸರಕಾರಿ ಅಭಿಯೋಜಕಿಯಾಗಿದ್ದ ರೋಹಿಣಿ ಸಾಲ್ಯಾನ್, ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಗೆ ಸಂದರ್ಶನ ನೀಡಿ, ‘‘ರಾಷ್ಟ್ರೀಯವಾದಿ ಕೇಸರಿ ಸಂಘಟನೆಗಳ ಕಾರ್ಯಕರ್ತರ ವಿರುದ್ಧದ ಪ್ರಕರಣಗಳಲ್ಲಿ ನಿಧಾನ ಪ್ರವೃತ್ತಿ ಅನುಸರಿಸುವಂತೆ ಎನ್ಐಎ ಅಧಿಕಾರಿಗಳು ಒತ್ತಡ ತರುತ್ತಿದ್ದಾರೆ’’ ಎಂದು ಸ್ಫೋಟಕ ಮಾಹಿತಿ ಬಹಿರಂಗಪಡಿಸಿದರು.
ಕಾಲಕ್ರಮೇಣ ಸಾಕ್ಷಿಗಳು ಒಬ್ಬೊಬ್ಬರಾಗಿ ಪ್ರತಿಕೂಲ ಹೇಳಿಕೆ ನೀಡಲಾರಂಭಿಸಿದರು. ಇದೀಗ ಹೇಮಂತ ಕರ್ಕರೆಯವರ ತನಿಖೆ ದುರುದ್ದೇಶದಿಂದ ಕೂಡಿದ್ದು ಹಾಗೂ ನಕಲಿ ಸಾಕ್ಷ್ಯಗಳನ್ನು ಇವರು ಸೃಷ್ಟಿಸಿದ್ದರು ಎಂದು ಎನ್ಐಎ ಹೇಳಿಕೊಂಡಿದೆ. ಮಾಲೆಗಾಂವ್ ಸ್ಫೋಟಕ್ಕೆ ಬಳಸಲಾದ ಮೋಟರ್ಸೈಕಲ್ ಸಾಧ್ವಿ ಪ್ರಜ್ಞಾಸಿಂಗ್ ಠಾಕೂರ್ ಅವರಿಗೆ ಸೇರಿದ್ದಾದರೂ, ಅವರಿಗೂ ಸ್ಫೋಟಕ್ಕೂ ಯಾವ ಸಂಬಂಧವೂ ಇಲ್ಲ ಎಂದು ಎನ್ಐಎ ಅಭಿಪ್ರಾಯಪಟ್ಟಿದೆ. ಇಡೀ ಸಂಚಿನ ಕೇಂದ್ರಬಿಂದುವೇ ಆಕೆಯಾಗಿರುವುದರಿಂದ ಇದೀಗ ಪ್ರಕರಣ ಮುಳುಗುವ ಹಂತಕ್ಕೆ ಬಂದಿದೆ. ಪ್ರಕರಣದ ಇತರ ಆರೋಪಿಗಳೂ ಮುಕ್ತರಾಗಿ ಜೈಲಿನಿಂದ ಹೊರಬರುವ ದಿನ ದೂರವಿಲ್ಲ. ಇದಕ್ಕೆ ವಿರುದ್ಧವಾಗಿ ಆಡಳಿತ ಮತ್ತು ನ್ಯಾಯಾಂಗ ವ್ಯವಸ್ಥೆಯ ಅತ್ಯುನ್ನತ ಮಟ್ಟದಲ್ಲಿರುವವರು, ಮುಸ್ಲಿಂ ಆರೋಪಿಗಳನ್ನು ಆರೋಪದ ಸಣ್ಣ ಎಳೆ ಸಿಕ್ಕಿದರೂ ನೇಣುಗಂಬಕ್ಕೆ ಏರಿಸಲು ಮುಂದಾಗುತ್ತಾರೆ.
ಕ್ಷಮೆಯಾಚನೆ ಮಾಡಿದವರ ಪ್ರಕಾರ, ಹಿಂದುತ್ವ ಭಯೋತ್ಪಾದನೆ ಎನ್ನುವುದು ತೀರಾ ಇತ್ತೀಚೆಗಿನ ಬೆಳವಣಿಗೆ. ಇದು ಇಸ್ಲಾಮೀ ಭಯೋತ್ಪಾದನೆಗೆ ಪ್ರತೀಕಾರದ ಕ್ರಮ. ಇದು ಕೇಸರಿ ಭಯೋತ್ಪಾದನೆ ಹಾಗೂ ಹಿಂಸೆಗಳು ಮಹಾತ್ಮಾಗಾಂಧೀಜಿಯವರ ಜೀವವನ್ನು ಬಲಿ ತೆಗೆದುಕೊಂಡಿದ್ದನ್ನು, ಬಾಬರಿ ಮಸೀದಿ ಧ್ವಂಸಗೊಳಿಸಿ, ಕೋಮು ದಳ್ಳುರಿ ಹಾಗೂ ರಕ್ತಪಾತಕ್ಕೆ ಕಾರಣವಾದ ಘಟನೆಯನ್ನು, ಸ್ವಾತಂತ್ರ್ಯೋತ್ತರ ಭಾರತದಲ್ಲಿ ಕೋಮು ಹಿಂಸೆ ನಡೆಸಿದ ಕೃತ್ಯವನ್ನು, ಹಲವು ಅಲ್ಪಸಂಖ್ಯಾತರ ಮಾರಣಹೋಮ ಮಾಡಿದ ಕೃತ್ಯಗಳನ್ನು ಅಸ್ಪಷ್ಟವಾಗಿಸುವ ಹುನ್ನಾರ.
ಕೇಸರಿ ಭಯೋತ್ಪಾದನೆಗೆ, ಅಪರಾಧ ನ್ಯಾಯ ವ್ಯವಸ್ಥೆಯಲ್ಲಿನ ಪಕ್ಷಪಾತ ನೀತಿ, ಸಾರ್ವಜನಿಕ ಅಭಿಪ್ರಾಯ ಕೂಡಾ ಕಾರಣವಾಗಿದೆ. ಈ ಕಾರಣದಿಂದಲೇ ಮುಸ್ಲಿಂ ಸಮುದಾಯದವರನ್ನೇ ಗುರಿ ಮಾಡಿ ಮುಸ್ಲಿಂ ಉಗ್ರರು ದಾಳಿ ಮಾಡಿದ್ದಾರೆ ಎಂದು ಬಿಂಬಿಸುವ ಪ್ರಯತ್ನ ನಡೆದಿದೆ.
ಸಾಕಷ್ಟು ಸಾಕ್ಷ್ಯಗಳು ಕೇಸರಿ ಭಯೋತ್ಪಾದನೆ ಬಗ್ಗೆ ಇದ್ದರೂ, ಸಾಂಸ್ಥಿಕ ಪಕ್ಷಪಾತ ಧೋರಣೆಗಳು ಇಂಥ ಕೃತ್ಯಗಳ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸುವ ಬದಲು ಅವುಗಳನ್ನು ಸಂರಕ್ಷಿಸಲು ಕಾರಣವಾಗಿದೆ. ಖಂಡಿತವಾಗಿಯೂ ಯಾವುದೇ ಭಯೋತ್ಪಾದನೆ ಭಾರತದ ಜನರಿಗೆ ದೊಡ್ಡ ಅಪಾಯ. ಅಂತೆಯೇ ಕೇಸರಿ ಭಯೋತ್ಪಾದನೆ ಮತ್ತು ಕೋಮು ಮನೋಭಾವ ಕೂಡಾ. ಯಾವುದೇ ಭಯೋತ್ಪಾದನೆಯ ಬಗ್ಗೆಯೂ ನಿಷ್ಪಕ್ಷಪಾತ ತನಿಖೆ ಹಾಗೂ ನ್ಯಾಯಬದ್ಧ ವಿಚಾರಣೆ ನಡೆಯಲೇಬೇಕು.
ಕೃಪೆ: ದ ಇಂಡಿಯನ್ ಎಕ್ಸ್ಪ್ರೆಸ್