ರಸ್ತೆ ಅಪಘಾತ: ಪಾದಚಾರಿಗಳಿಗೇ ಹೆಚ್ಚು ಆಘಾತ
ರಸ್ತೆ ಅಪಘಾತಗಳಲ್ಲಿ ಸಾವಿಗೀಡಾಗುವವರ ಪೈಕಿ ಬೈಕ್ ಸವಾರರು ಹಾಗೂ ಪಾದಚಾರಿಗಳ ಸಂಖ್ಯೆಯನ್ನು ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೊ ವಾಸ್ತವಕ್ಕಿಂತ ಕಡಿಮೆ ಬಿಂಬಿಸಿದೆ ಎಂಬ ವರದಿಗಳು ಕಳೆದ ವಾರ ಪ್ರಕಟವಾದವು. ‘ಇಂಜುರಿ ಪ್ರಿವೆನ್ಷನ್’ ಎಂಬ ಆನ್ಲೈನ್ ನಿಯತಕಾಲಿಕದಲ್ಲಿ ಪ್ರಕಟವಾದ ಅಧ್ಯಯನ ವರದಿಯೊಂದನ್ನು ಆಧರಿಸಿ ಈ ವರದಿ ಮಾಡಲಾಗಿತ್ತು. ಇದರ ಪ್ರಕಾರ, ದ್ವಿಚಕ್ರವಾಹನ ಸವಾರರು ಹಾಗೂ ಪಾದಚಾರಿಗಳ ಸಾವಿನ ವಾಸ್ತವ ಅಂಕಿ ಅಂಶಗಳು ಒಟ್ಟು ಅಪಘಾತ ಸಾವಿನ ಸಂಖ್ಯೆಯ ಶೇ. 35ರಿಂದ 40ರಷ್ಟಿದೆ.
ಸರಕಾರಿ ದಾಖಲೆಗಳ ಅಂಕಿ ಅಂಶಗಳಲ್ಲಿ ಉಲ್ಲೇಖಿಸಿದ ಮಾಹಿತಿಗಳು ಚಕಿತಗೊಳಿಸುವಷ್ಟರ ಮಟ್ಟಿಗೆ ತಪ್ಪಾಗಿದ್ದರೂ, ಇಂಥ ತಪ್ಪು ಲೆಕ್ಕಾಚಾರದ ಪರಿಣಾಮ ಮತ್ತಷ್ಟು ಭೀಕರ. ಏಕೆಂದರೆ ರಸ್ತೆ ಸುರಕ್ಷತಾ ಯೋಜನೆಗಳನ್ನು ಹಾಗೂ ನೀತಿಗಳನ್ನು ಇಂಥ ಅಂಕಿ ಅಂಶಗಳ ಆಧಾರದಲ್ಲಿ ರೂಪಿಸಲಾಗುತ್ತದೆ. 2013 ಮತ್ತು 2014ನೆ ಸಾಲಿನ ರಾಷ್ಟ್ರೀಯ ಅಪರಾಧ ದಾಖಲಾತಿ ಬ್ಯೂರೊದ ಅಂಕಿ ಅಂಶಗಳು, ಭಾರತ ಪಾದಚಾರಿ ಸ್ನೇಹಿ ರಾಷ್ಟ್ರ ಎಂಬ ಭ್ರಮೆಯನ್ನು ಹುಟ್ಟಿಸುತ್ತವೆ. ಇದು ಸತ್ಯಕ್ಕೆ ದೂರವಾದ ಮಾತು ಎನ್ನುವುದು ಎಲ್ಲ ನಾಗರಿಕರಿಗೆ ತಿಳಿದಿದೆ.
ಹೀಗೆ ಪಾದಚಾರಿ ಸಾವುನೋವಿನ ಮಾಹಿತಿಗಳನ್ನು ಕೀಳಂದಾಜು ಮಾಡುತ್ತಾ ಬಂದ ಕಾರಣದಿಂದಲೇ ಸರಕಾರ ಎಕ್ಸ್ಪ್ರೆಸ್ ಹೈವೆ, ಹೆದ್ದಾರಿ ಹಾಗೂ ಕ್ಷಿಪ್ರ ಸಂಚಾರ ವಲಯ ನಿರ್ಮಿಸುವತ್ತ ಗಮನ ಹರಿಸುತ್ತಿದೆ ಎಂದು ತಜ್ಞರು ಆಕ್ಷೇಪಿಸುತ್ತಾರೆ.
ಅಧ್ಯಯನದಲ್ಲಿ ವ್ಯಕ್ತವಾದದ್ದು ಏನು?
ಅಮೆರಿಕದ ಜಾನ್ ಹಾಕಿನ್ಸ್ ಬ್ಲೂಮ್ಬರ್ಗ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ಸಂಸ್ಥೆಯ ಸಂಶೋಧಕರ ನೇತೃತ್ವದಲ್ಲಿ ನಡೆದ ಈ ಅಧ್ಯಯನ ವರದಿಯನ್ನು ಜುಲೈ 25ರಂದು ಪ್ರಕಟಿಸಲಾಯಿತು. ಆಗ್ನೇಯ ಏಷ್ಯಾ ದೇಶಗಳು ಇಂಥ ಪಾದಚಾರಿ ಸಾವಿನ ಪ್ರಮಾಣವನ್ನು ಅಧಿಕವಾಗಿ ನೀಡಿದ್ದರೂ, ಭಾರತದ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ ನೀಡಿರುವ ಅಂಕಿ ಅಂಶ ತೀರಾ ಕಡಿಮೆ ಎಂದು ಸಂಶೋಧಕರು ಅಭಿಪ್ರಾಯಕ್ಕೆ ಬಂದರು. ಎನ್ಸಿಆರ್ ದಾಖಲೆಗಳ ಪ್ರಕಾರ, ಒಟ್ಟು ಅಪಘಾತಗಳಲ್ಲಿ ಸಾಯುವ ಜನರ ಸಂಖ್ಯೆಯ ಶೇ. 5ರಷ್ಟು ಮಾತ್ರ ಪಾದಚಾರಿಗಳು!
‘‘ರಸ್ತೆ ಅಪಘಾತಗಳಲ್ಲಿ ಸಾಯುವವರು ಯಾವ ಬಗೆಯ ರಸ್ತೆ ಬಳಕೆದಾರರು ಎನ್ನುವುದನ್ನು ವಿವರಿಸುವ ಎಎನ್ಸಿಆರ್ ಕೋಷ್ಟಕಗಳು ಬಹುಶಃ ತಪ್ಪಾಗಿರಬೇಕು ಎನ್ನುವುದು ನಮ್ಮ ಅಂದಾಜು’’ ಎಂದು ಜಾನ್ ಹಾಕಿನ್ಸ್ನ ಅಂತಾರಾಷ್ಟ್ರೀಯ ಆರೋಗ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಕವಿ ಭಲ್ಲಾ ಹೇಳುತ್ತಾರೆ. ಅಧ್ಯಯನಕಾರರು ಬೆಳಗಾವಿ ಜಿಲ್ಲೆಯ ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಪ್ರಥಮ ಮಾಹಿತಿ ವರದಿಯನ್ನು ಪಡೆದು ಅದರ ಮೂಲಕ ಮಾಹಿತಿ ವ್ಯತ್ಯಾಸವನ್ನು ಅಳೆಯುವ ಪ್ರಯತ್ನ ಮಾಡಿದರು. ಸ್ಥಳೀಯ ಠಾಣೆಗಳಿಂದ ನಾವು ಪಡೆದ ಎಫ್ಐಆರ್ ಮಾಹಿತಿ ಹಾಗೂ ಜಿಲ್ಲಾಮಟ್ಟದಲ್ಲಿ ತಯಾರಿಸಿದ ಕೋಷ್ಟಕದ ಅಂಕಿ ಅಂಶಗಳಲ್ಲಿ ಭಾರಿ ವ್ಯತ್ಯಾಸ ಕಂಡುಬಂದಿದೆ ಎಂದು ಭಲ್ಲಾ ವಿವರಿಸುತ್ತಾರೆ.
‘‘ಅಧಿಕೃತ ಕೋಷ್ಟಕದಲ್ಲಿ ಪಾದಚಾರಿಗಳು, ಸೈಕಲ್ ಸವಾರರು ಹಾಗೂ ಇತರ ದ್ವಿಚಕ್ರವಾಹನ ಸವಾರರ ಸಂಖ್ಯೆ ತೀರಾ ಕಡಿಮೆ ಇದೆ. ಬಹುತೇಕ ಪಾದಚಾರಿ ಸಾವುಗಳನ್ನು ಅಧಿಕೃತ ಕೋಷ್ಟಕಗಳಲ್ಲಿ ವಾಹನ ಅಪಘಾತದಿಂದ ಆದ ಸಾವು ಎಂದು ವರ್ಗೀಕರಿಸುವುದಿಲ್ಲ’’ ಎನ್ನುವುದು ಅವರ ಅನಿಸಿಕೆ.
ತಾಳೆಯಾಗದ ಮಾಹಿತಿ
ಎಎನ್ಸಿಆರ್ ಮಾಹಿತಿ ಅನ್ವಯ ಬೆಳಗಾವಿ ಜಿಲ್ಲೆಯಲ್ಲಿ ಅಪಘಾತಗಳಲ್ಲಿ ಸಂಭವಿಸಿದ ಒಟ್ಟು ಸಾವಿನ ಪೈಕಿ ಶೇ. 9ರಷ್ಟು ಪಾದಚಾರಿಗಳು. ಆದರೆ ಪೊಲೀಸ್ ದಾಖಲೆಗಳ ಪ್ರಕಾರ ಈ ಸಂಖ್ಯೆ ಇದರ ದುಪ್ಪಟ್ಟಿಗಿಂತಲೂ ಅಧಿಕ. ಆ ವರ್ಷ ಒಟ್ಟು ಅಪಘಾತಗಳಲ್ಲಿ ಮಡಿದವರ ಪೈಕಿ ಶೇ. 21ರಷ್ಟು ಮಂದಿ ಪಾದಚಾರಿಗಳು. ಅಧ್ಯಯನಕಾರರು ಕೇವಲ ಒಂದು ಜಿಲ್ಲೆಯನ್ನಷ್ಟೇ ಅಧ್ಯಯನ ಮಾಡಿದ್ದರೂ, ಎಲ್ಲ ಜಿಲ್ಲೆಗಳಲ್ಲಿ ಮಾಹಿತಿ ಸಂಗ್ರಹಿಸುವ ವಿಧಾನ ಒಂದೇ ಆಗಿರುವುದರಿಂದ ಇಂಥ ವ್ಯತ್ಯಾಸ ದೇಶಾದ್ಯಂತ ಇರುವ ಸಾಧ್ಯತೆ ಇದೆ ಎಂದು ಶಂಕಿಸಿದ್ದಾರೆ.
‘‘ಇಡೀ ವ್ಯವಸ್ಥೆಯಲ್ಲೇ ದೋಷವಿದೆ. ಇಲ್ಲದಿದ್ದರೆ ಪಾದಚಾರಿ ಸಾವಿನ ಸಂಖ್ಯೆ ಅಷ್ಟು ಕಡಿಮೆಯಾಗಲು ಹೇಗೆ ಸಾಧ್ಯ’’ ಎಂದು ಐಐಟಿ ದಿಲ್ಲಿಯ ಸಹಾಯಕ ಪ್ರಾಧ್ಯಾಪಕ ಕೆ.ರಾಮಚಂದ್ರ ರಾವ್ ಪ್ರಶ್ನಿಸುತ್ತಾರೆ. ಇವರು ಐಐಟಿಯ ಸಾರಿಗೆ ಸಂಶೋಧನೆ ಮತ್ತು ಗಾಯ ತಡೆ ಯೋಜನೆಯ ಬೋಧಕ ಸದಸ್ಯರೂ ಆಗಿದ್ದಾರೆ. ಅಪಘಾತ ಹಾಗೂ ಮಾಲಿನ್ಯ ಸೇರಿದಂತೆ ಸಾರಿಗೆ ವ್ಯವಸ್ಥೆಯ ಋಣಾತ್ಮಕ ಆರೋಗ್ಯ ಪರಿಣಾಮಗಳನ್ನು ಹೇಗೆ ಕಡಿಮೆ ಮಾಡಬಹುದು ಎಂಬ ಅಂತರ ಶಿಸ್ತೀಯ ಅಧ್ಯಯನವನ್ನು ಈ ವಿಭಾಗ ಕೈಗೊಳ್ಳುತ್ತದೆ.
‘‘ಪಾದಚಾರಿಗಳು ಅಪಘಾತಕ್ಕೆ ಒಳಗಾಗುವ ಸಾಧ್ಯತೆ ಅತ್ಯಧಿಕ. ಕಾರಿನಲ್ಲಿ ಹೋಗುವ ವೇಳೆ, ಪ್ರಯಾಣಿಕರು ಒಂದು ಚೌಕಟ್ಟಿನಲ್ಲಿ ಇರುವುದರಿಂದ ಸುರಕ್ಷೆ ಹೊಂದಿರುತ್ತಾರೆ. ಆದರೆ ದ್ವಿಚಕ್ರ ವಾಹನ ಸವಾರರು ಹಾಗೂ ಪಾದಚಾರಿಗಳು ಅಪಾಯಕ್ಕೆ ಒಳಗಾಗುವ ಸಾಧ್ಯತೆ ಅಧಿಕ’’ ಎನ್ನುವುದು ರಾವ್ ಅಭಿಮತ.
ನೀತಿಯ ಮೇಲೆ ಪರಿಣಾಮ
ಇಂತಹ ತಪ್ಪುಲೆಕ್ಕಾಚಾರದ ಪರಿಣಾಮ ಮತ್ತಷ್ಟು ಭೀಕರ. ಏಕೆಂದರೆ ರಸ್ತೆ ಸುರಕ್ಷತಾ ಯೋಜನೆಗಳನ್ನು ಹಾಗೂ ನೀತಿಗಳನ್ನು ಇಂಥ ಅಂಕಿ ಅಂಶಗಳ ಆಧಾರದಲ್ಲಿ ರೂಪಿಸಲಾಗುತ್ತದೆ. ಈ ಕಾರಣದಿಂದ ಅಗತ್ಯ ನೀತಿ ರೂಪಿಸಲು ಸಾಧ್ಯವಾಗುವುದಿಲ್ಲ. ಎನ್ಸಿಆರ್ ಬ್ಯೂರೊ ಅಂಕಿ ಅಂಶಗಳು ದ್ವಿಚಕ್ರವಾಹನ ಸವಾರರು ಹಾಗೂ ಪಾದಚಾರಿ ಸಂಖ್ಯೆಯನ್ನು ಕಡಿಮೆ ತೋರಿಸಿ, ವಾಹನಗಳ ಪ್ರಯಾಣಿಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ತೋರಿಸುತ್ತವೆ.
‘‘ಈ ಅಂಕಿ ಅಂಶಗಳ ಆಧಾರದಲ್ಲಿ ಸುರಕ್ಷಾ ನೀತಿ ಹಾಗೂ ಯೋಜನೆಗಳಿಗೆ ಸಂಪನ್ಮೂಲ ಹಂಚಿಕೆ ಮಾಡಲಾಗುತ್ತದೆ. ಇದಕ್ಕೆ ಅನುಗುಣವಾಗಿ ಪ್ರತೀ ಗುಂಪಿಗೆ ನೀತಿ ರೂಪಿಸಲಾಗುತ್ತದೆ’’ ಎಂದು ಮುಖ್ಯ ಅಧ್ಯಯನಕಾರರಾದ ಭಲ್ಲಾ ಹೇಳುತ್ತಾರೆ. ಇದರಿಂದಾಗಿ ಪಾದಚಾರಿ, ಸೈಕಲ್ ಸವಾರರು ಹಾಗೂ ಬೈಕ್ ಸವಾರರ ಸುರಕ್ಷತೆಯನ್ನು ನಿರ್ಲಕ್ಷಿಸಿ, ವಾಹನಗಳ ಮಾಲಕರ ಹಿತಾಸಕ್ತಿ ಹೆಚ್ಚಿನ ಆದ್ಯತೆ ಪಡೆಯುತ್ತದೆ.
ಇದರ ಆಧಾರದಲ್ಲಿ ಭಾರತದಲ್ಲಿ ಹೆದ್ದಾರಿಗಳ ಸುಧಾರಣೆ ಹಾಗೂ ರಸ್ತೆ ಅಗಲೀಕರಣಕ್ಕೆ ಒತ್ತು ನೀಡಲಾಗುತ್ತಿದೆ. ಹೆದ್ದಾರಿಗಳಲ್ಲಿ ಹೆಚ್ಚು ಸರಾಗವಾಗಿ ಹಾಗೂ ವೇಗವಾಗಿ ಚಲಿಸಲು ಅನುಕೂಲ ಕಲ್ಪಿಸಲಾಗುತ್ತದೆ. ಇದು ಪಾದಚಾರಿ ಹಾಗೂ ದ್ವಿಚಕ್ರ ವಾಹನ ಸವಾರರಿಗೆ ಮತ್ತಷ್ಟು ಅಪಾಯಕಾರಿ ಎನ್ನುವುದು ಅವರ ಅಭಿಮತ.
ಮಹಾರಾಷ್ಟ್ರದ ರಸ್ತೆ ಅಪಘಾತ ತಡೆ ರಾಜ್ಯ ಸಮಿತಿಯ ಸದಸ್ಯ ಸುಧೀರ್ ಬದಾಮಿ ಕೂಡಾ ಇದೇ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ‘‘ಪಾದಚಾರಿ ಅಗತ್ಯಗಳನ್ನು ಗಂಭೀರವಾಗಿ ಪರಿಗಣಿಸುವುದೇ ಇಲ್ಲ. ದೊಡ್ಡ ವಾಹನಗಳನ್ನು ದೃಷ್ಟಿಯಲ್ಲಿಟ್ಟುಕೊಂಡೇ ಯೋಜನೆಗಳನ್ನು ರೂಪಿಸಲಾಗುತ್ತದೆ’’ ಎಂದು ಅವರು ಹೇಳುತ್ತಾರೆ.
ಬದಾಮಿಯವರ ಪ್ರಕಾರ, ‘‘ಹೆಚ್ಚಿನ ಪಾದಚಾರಿ ಸಾವುಗಳು, ಮೋಟಾರ್ ವಾಹನಗಳ ವೇಗ ಹೆಚ್ಚಾಗಿರುವ ಗ್ರಾಮೀಣ ಪ್ರದೇಶಗಳಿಂದ ವರದಿಯಾಗುತ್ತವೆ. ಯೋಜನೆ ರೂಪಿಸುವವರು ಕಾರಿನಲ್ಲಿ ಓಡಾಡುತ್ತಾರೆ. ಜತೆಗೆ ತಮ್ಮ ವಾಹನವನ್ನು ತಾವೇ ಚಲಾಯಿಸುವುದಿಲ್ಲ. ಆದ್ದರಿಂದ ಸಮಸ್ಯೆಯ ಅನುಭವ ಅವರಿಗೆ ಇರುವುದಿಲ್ಲ’’.
‘‘ಆದಾಗ್ಯೂ, ಪಾದಚಾರಿಗಳ ಸಾವಿನ ಸಂಖ್ಯೆಯನ್ನು ನಿಖರವಾಗಿ ನೀಡಿದರೆ ಸಮಸ್ಯೆ ಕೊನೆಯಾಗುತ್ತದೆ ಎಂಬ ಅರ್ಥವಲ್ಲ’’ ಎಂದು ಮುಂಬೈ ಸಾರಿಗೆ ವೇದಿಕೆಯ ಸಂಸ್ಥಾಪಕ ರಿಶಿ ಅಗರ್ವಾಲ್ ಅಭಿಪ್ರಾಯಪಡುತ್ತಾರೆ. ಈ ಸಂಸ್ಥೆ ನಗರಕ್ಕೆ ಸುಸ್ಥಿರ ಸಾರಿಗೆ ಪರಿಹಾರ ಕಂಡುಹಿಡಿಯುವ ನಿಟ್ಟಿನಲ್ಲಿ ಇದು ಶ್ರಮಿಸುತ್ತಿದೆ. ಹಲವು ಅಪಘಾತ ಪ್ರಕರಣಗಳಲ್ಲಿ ವ್ಯಕ್ತಿಗಳು ಸಾಯದಿರಬಹುದು. ಆದರೆ ಈ ಪ್ರಕರಣಗಳು ವರದಿಯಾಗುವುದೇ ಇಲ್ಲ. ಆದರೆ ಮೋಟಾರ್ವಾಹನಗಳ ಮಾಲಕರು ಮಾತ್ರ ವಿಮೆ ಪ್ರಯೋಜನ ಪಡೆಯುವ ಸಲುವಾಗಿ ಸಣ್ಣ ಅಪಘಾತಗಳನ್ನೂ ವರದಿ ಮಾಡುತ್ತಾರೆ.