ಉಡುಪಿ ಚಲೋ : ದಲಿತರ, ಅಲ್ಪಸಂಖ್ಯಾತರ ಹಿತಕ್ಕಲ್ಲ; ನೆಮ್ಮದಿಯ ಸಮಾಜವನ್ನು ಬಯಸುವ ಎಲ್ಲರಿಗಾಗಿ
ಗ್ರಾಮೀಣ ಪ್ರದೇಶದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ತರಗತಿಯೊಂದಕ್ಕೆ ಭೇಟಿ ನೀಡಿದ್ದೆ. ‘ನಿಮ್ಮಲ್ಲಿ ಎಷ್ಟು ಜನ ಮೀಸಲಾತಿಯ ಪರವಿದ್ದೀರಿ’ ಎಂಬ ಪ್ರಶ್ನೆಯನ್ನು ವಿದ್ಯಾರ್ಥಿಗಳಿಗೆ ಕೇಳಿದೆ. ಆ ತರಗತಿಯಲ್ಲಿ ಸುಮಾರು ನೂರರಷ್ಟು ವಿದ್ಯಾರ್ಥಿಗಳಿದ್ದರು. ಒಬ್ಬರೂ ಕೈ ಎತ್ತಲಿಲ್ಲ. ಅಪ್ರತಿಭನಾದೆ. ಸಾವರಿಸಿಕೊಂಡು ಮತ್ತೊಂದು ಪ್ರಶ್ನೆ ಕೇಳಿದೆ.. ಮೀಸಲಾತಿಯ ಅನುಕೂಲವನ್ನು ಪಡೆದವರು ಯಾರ್ಯಾರಿದ್ದೀರಿ? ಆಗ ಒಂದಷ್ಟು ಕೈಗಳು ಮೇಲೆ ಬಂದವು. ಈ ವಿದ್ಯಾರ್ಥಿಗಳ ತಲೆಯಲ್ಲಿ ಮೀಸಲಾತಿ ಎಂದರೆ ಅವಮಾನದ ಸಂಗತಿ ಎಂದು ಯಾರು, ಯಾವಾಗ ತುಂಬಿದರು ಎಂಬ ಪ್ರಶ್ನೆ ಕಾಡತೊಡಗಿತು.
ಪರಿಸ್ಥಿತಿ ತುಂಬ ಸಂಕೀರ್ಣವಾಗಿದೆ. ಮೀಸಲಾತಿ ಯಾಕೆ ಅನಿವಾರ್ಯ ಎಂದು ಮುಂದುವರೆದ ವರ್ಗಗಳ ವಿದ್ಯಾರ್ಥಿಗಳ ಮುಂದೆ ಚರ್ಚೆ ಮಾಡಬಹುದು. ಆದರೆ ಜಾತಿಪ್ರಜ್ಞೆ ದಿನದಿನಕ್ಕೂ ವಿಷಗಾಳಿಯಂತೆ ಎಲ್ಲ ವಲಯದಲ್ಲೂ ಹರಡುತ್ತಿರುವಾಗ, ಮೀಸಲಾತಿ ಹಿಂದಿಗಿಂತ ಹೆಚ್ಚು ಅನಿವಾರ್ಯವಾಗಿರುವಾಗ ಯಾರು ಅದು ತಮ್ಮ ಹಕ್ಕು ಎಂದು ಭಾವಿಸಬೇಕೋ ಅವರೇ ಅದನ್ನು ಅವಮಾನದ ಸಂಗತಿ ಎಂದು ಭಾವಿಸತೊಡಗಿದ ಪರಿಸ್ಥಿತಿ ವರ್ತಮಾನದ ಸಂಕೀರ್ಣತೆ.
ಮಾಂಸಹಾರದ ಬಗ್ಗೆಯೂ ಕೀಳರಿಮೆ ಹೆಚ್ಚುತ್ತಿದೆ. ಹಿಂದುಳಿದ ವರ್ಗಗಳಿಂದ ಬಂದ ಉನ್ನತ ಸ್ಥಾನಗಳಲ್ಲಿರುವವರೇ ತಿಂಗಳೊಂದು ಕಾಲ ಯಾವುದೋ ವ್ರತವೆಂದು ಮಾಂಸಾಹಾರ ತ್ಯಜಿಸಿರುವುದರ ಬಗ್ಗೆ ಹೇಳಿಕೊಂಡು ಉಳಿದವರಲ್ಲಿ ‘ಗೌರವ’ಕ್ಕೆ ಪಾತ್ರವಾಗುವುದನ್ನು ನೋಡಿದರೆ ಮರುಕ ಹುಟ್ಟುತ್ತದೆ.
ದಿನನಿತ್ಯ ಬಸ್ಸುಗಳಲ್ಲಿ, ಹರಟೆಗಳಲ್ಲಿ ಒಂದು ಸಾಮಾನ್ಯವಾದ ಮಾತಿನ ವಿಷಯವಿರುತ್ತದೆ. ಅದು ಸಿದ್ದರಾಮಯ್ಯನವರು ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗಕ್ಕೆ ಜಾರಿ ಮಾಡಿದ ಯೋಜನೆಗಳನ್ನು ಕುರಿತ ಲೇವಡಿ, ಟೀಕೆ. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರ ಕೆಲವು ನಡೆಗಳ ಬಗ್ಗೆ ನನಗೂ ಪ್ರಶ್ನೆಗಳಿವೆ. ಆದರೆ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಅಗತ್ಯವಾಗಿ ಸಿಗಲೇಬೇಕಾದದ್ದನ್ನು ತಡವಾಗಿಯಾದರೂ ನೀಡಲು ಮಾಡುವ ಪ್ರಯತ್ನವನ್ನು ಟೀಕಿಸುವ ಜಾತಿವಂತ ಮನಸ್ಸುಗಳ ಉದ್ದೇಶವೇನು ಎಂದು ಚಿಂತಿಸತೊಡಗಿದಾಗ ದುಗುಡವಾಗುತ್ತದೆ.
ನಮ್ಮೂರಿನ ಜಸ್ಟಿಸ್ ಎನ್.ಡಿ ವೆಂಕಟೇಶ್ ಅವರನ್ನು ಕಾಲೇಜು ದಿನಗಳಲ್ಲಿ ಭೇಟಿಯಾಗುತ್ತಿದ್ದಾಗ ಅವರು ಹೇಳುತ್ತಿದ್ದ ಒಂದು ಮಾತು ನನಗೆ ಯಾವಾಗಲೂ ನೆನಪಾಗುತ್ತದೆ. ‘‘ಭಾರತದಲ್ಲಿನ ಜಾತಿವ್ಯವಸ್ಥೆಯ ಕ್ರೌರ್ಯ ಬೇರೆ ದೇಶದಲ್ಲಿರುತ್ತಿದ್ದರೆ ಅಲ್ಲಿ ರಕ್ತಪಾತವೇ ಆಗುತ್ತಿತ್ತು, ಇಲ್ಲಿನ ದಲಿತ ಜನರ ಸಹನೆಯಿಂದ ಆ ಅನಾಹುತ ಆಗಲಿಲ್ಲ’’ ಎಂದು. ಆದರೆ ಈಗ ನೊಂದವರನ್ನೇ ಹಿಂಸಿಸುವ ಹೀನಾತಿಹೀನ ವರ್ತನೆ ಭಾರತದಾದ್ಯಂತ ಸಾರ್ವತ್ರಿಕವಾಗುತ್ತಿದೆ. ದನದ ಚರ್ಮ ಸುಲಿದರು ಎಂದು ನೆಪವೊಡ್ಡಿ ದಲಿತರ ಚರ್ಮ ಸುಲಿಯುವ ಉನಾ ಘಟನೆ, ಹಿಟ್ಟಿನ ಗಿರಣಿ ಪ್ರವೇಶಿಸಿದ್ದಕ್ಕಾಗಿ ದಲಿತನ ಹತ್ಯೆ ಮಾಡಿದ ಉತ್ತರಾಖಂಡದ ಕರದಿಯಾ ಗ್ರಾಮದ ಘಟನೆ, ದನದ ನೆಪದಲ್ಲೇ ನಮ್ಮ ಜಯಪುರದಲ್ಲಿ ದಲಿತರನ್ನು ಥಳಿಸಿದ ಘಟನೆ, ಅಖ್ಲಾಕ್ರ ಹತ್ಯೆ ಮೇಲೆ ಪ್ರಸ್ತಾಪಿಸಿದ ವಿಷಗಾಳಿಯ ಪರಿಣಾಮಗಳು.
ಮತೀಯವಾದಿಗಳು ಮುಸ್ಲಿಮರು, ಕ್ರಿಶ್ಚಿಯನ್ನರು ಮತ್ತು ದಲಿತರ ಮೇಲೆ ಜೀವಕ್ಕೆ ಎರವಾಗುವಷ್ಟು ಹಲ್ಲೆ ಮಾಡುತ್ತಿರುವುದು ಹಿಂದೂ ಧರ್ಮದ ರಕ್ಷಣೆಗೆ ಎಂಬ ಭ್ರಮೆಯಲ್ಲಿ ಸಮಾಜ ಇರುವಂತಿದೆ. ದಶಕಗಳ ಹಿಂದೆ ಮತೀಯವಾದಿಗಳು ಮುಸ್ಲಿಮರು, ಕ್ರಿಶ್ಚಿಯನ್ನರ ಮೇಲೆ ದಾಳಿ ಮಾಡುತ್ತಿದ್ದಾಗ ಅನೇಕ ಚಿಂತಕರು ಈ ಮತೀಯವಾದಿಗಳ ಮುಂದಿನ ಗುರಿ ದಲಿತರು ಎಂದು ಎಚ್ಚರಿಸಿದ್ದರು. ಅದು ಈಗ ನಿಜವಾಗಿದೆ. ಮುಂದಿನ ದಿನಗಳಲ್ಲಿ ಮೇಲ್ಜಾತಿಗಳಲ್ಲಿರುವ ಸ್ವತಂತ್ರವಾಗಿ ಚಿಂತಿಸುವವರು, ಮನುಷ್ಯನ ಘನತೆಯನ್ನು ಪ್ರತಿಪಾದಿಸುವವರ ಮೇಲೆಲ್ಲ ದಾಳಿ ಆರಂಭವಾಗಲಿದೆ.
ತಮ್ಮ ಎಲ್ಲ ಮಿತಿಗಳ ನಡುವೆಯೂ ಗಾಂಧಿಯಂತಹ ‘ಶ್ರೇಷ್ಠ ಹಿಂದೂ’ ಇನ್ನೊಬ್ಬ ಇರಲು ಸಾಧ್ಯವಿಲ್ಲ. ಇದು ಸತ್ಯವೂ ಹೌದು, ಐರನಿಯೂ ಹೌದು. ಗಾಂಧಿ ತಮ್ಮ ಆತ್ಮ ಚರಿತ್ರೆಯಲ್ಲಿ ಒಂದು ಘಟನೆಯನ್ನು ಪ್ರಸ್ತಾಪಿಸುತ್ತಾರೆ. ಅವರು ದಕ್ಷಿಣ ಆಫ್ರಿಕಾದ ಡರ್ಬನಿನಲ್ಲಿ ಇರುವಾಗ ಮಡದಿ ಕಸ್ತೂರ್ಬಾ ಅವರಿಗೆ ವಿಪರೀತ ಅನಾರೋಗ್ಯ ಕಾಡುತ್ತದೆ. ಈ ರೋಗ ತಹಬದಿಗೆ ಬರಬೇಕಾದರೆ ನೀವು ಗೋಮಾಂಸದ ಟೀ ಕುಡಿಯಬೇಕು ಎಂದು ಡಾಕ್ಟರ್ ಸೂಚಿಸುತ್ತಾರೆ. ಆಗ ಕೆಲಸನಿಮಿತ್ತ ದೂರದ ಜೋಹಾನ್ಸ್ಬರ್ಗ್ನಲ್ಲಿದ್ದ ಗಾಂಧಿಯವರಿಗೆ ಟೆಲಿಫೋನಿನ ಮೂಲಕ ಈ ಸುದ್ದಿಯನ್ನು ಮುಟ್ಟಿಸಲಾಗುತ್ತದೆ. ಗಾಂಧಿ ಕೂಡಲೇ ಡರ್ಬನಿಗೆ ಹೊರಡುತ್ತಾರೆ. ಗಾಂಧಿ ಬರುವ ವೇಳೆಗಾಗಲೇ ಕಸ್ತೂರ್ಬಾ ಅವರ ಕಾಯಿಲೆ ಉಲ್ಬಣಿಸಿದ್ದರಿಂದ ಡಾಕ್ಟರ್ ಅವರಿಗೆ ಒಂದು ಬಾರಿ ಗೋಮಾಂಸದ ಟೀಯನ್ನು ಕೊಟ್ಟಿರುತ್ತಾರೆ. ಆಸ್ಪತ್ರೆಗೆ ಬಂದು ಈ ವಿಷಯ ತಿಳಿದ ಗಾಂಧಿ ಡಾಕ್ಟರನ್ನು ಕಟುವಾಗಿ ತರಾಟೆಗೆ ತೆಗೆದುಕೊಳ್ಳುತ್ತಾರೆ. ಹೆಂಡತಿ ಜೀವನ್ಮರಣದ ಅಪಾಯಕಾರಿ ಸ್ಥಿತಿಯಲ್ಲಿದ್ದರೂ ಅವರಿಗೆ ಇನ್ನೊಮ್ಮೆ ಗೋಮಾಂಸದ ಟೀಯನ್ನು ಔಷಧವಾಗಿ ಕೊಡುವುದನ್ನು ವಿರೋಧಿಸುತ್ತಾರೆ. ‘‘ನಿನಗೆ ಒಪ್ಪಿತವಾದರೆ ಸೇವಿಸು, ಆದರೆ ನನಗೆ ಸಹಮತವಿಲ್ಲ’’ ಎಂದು ಗಾಂಧಿ ಹೇಳುತ್ತಾರೆ. ಕಸ್ತೂರ್ಬಾ ಗೋಮಾಂಸದ ಟೀಯನ್ನು ಸೇವಿಸುವುದಿಲ್ಲ. ಕಸ್ತೂರ್ಬಾ ನಂತರ ಗಾಂಧಿಯ ಔಷಧೋಪಚಾರದಿಂದ ಹೇಗೋ ಗುಣವಾಗುತ್ತಾರೆ. (ಆತ್ಮಕಥೆ ಅಥವಾ ನನ್ನ ಸತ್ಯಾನ್ವೇಷಣೆ, ಲೇ: ಮೋ.ಕ. ಗಾಂಧಿ, ಕನ್ನಡಕ್ಕೆ: ಗೋರೂರು ರಾಮಸ್ವಾಮಿ ಅಯ್ಯಂಗಾರ್, ಪ್ರಕಾಶಕರು : ನವಜೀವನ ಪ್ರಕಾಶನ ಮಂದಿರ ಅಹ್ಮದಾಬಾದ್, ಪುಟ: 336-338)
ತನ್ನ ಹೆಂಡತಿಯ ಜೀವವನ್ನು ಪಣಕ್ಕಿಟ್ಟು ತನ್ನ ಹಿಂದೂಧರ್ಮದ ನಂಬಿಕೆಯಂತೆ ಗೋಮಾಂಸ ಸೇವನೆಯನ್ನು ತಡೆದ ‘ಶ್ರೇಷ್ಠ ಹಿಂದೂ’ ಗಾಂಧಿಯನ್ನು ‘ಈತ ಹಿಂದೂಧರ್ಮಕ್ಕೆ ಕಂಟಕ’ ಎಂದು ಕೊಂದವರು ಯಾರು? ನಿಜಕ್ಕೂ ಹಿಂದೂ ಮತೀಯವಾದಿಗಳಿಗೆ ತನ್ನ ಹೆಂಡತಿಯ ಪ್ರಾಣವನ್ನು ಪಣಕ್ಕಿಟ್ಟು ಗೋವನ್ನು ‘ರಕ್ಷಿಸಿದ’ ಗಾಂಧಿ ಐಕಾನ್ ಆಗಬೇಕಿತ್ತು. ಆದರೆ ಅವರೀಗ ‘ಹಿಂದೂರಕ್ಷಕ’ ಗಾಂಧಿಯನ್ನು ಅಮಾನುಷವಾಗಿ ಕೊಂದ ಗೋಡ್ಸೆಗೆ ದೇವಾಲಯ ಕಟ್ಟುತ್ತಿದ್ದಾರೆ!
ಜಾತಿವ್ಯವಸ್ಥೆಯನ್ನು ಚಾಲ್ತಿಯಲ್ಲಿಡಲು, ಸಮಾಜವನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು ಬುದ್ಧಿವಂತರು ಹಣೆಯುತ್ತಿರುವ ನಾಟಕದ ಪಾತ್ರವಷ್ಟೇ ಈ ‘ಗೋರಕ್ಷಣೆ’. ನಾವು ದನ ತಿನ್ನದಿದ್ದರೂ, ದಿನಕ್ಕೆ ನೂರು ಬಾರಿ ‘ವಂದೇ ಮಾತರಂ’ ಎಂದು ಹೇಳಿದರೂ ನಾವು ಎಂದೆಂದಿಗೂ ಈ ಬುದ್ಧಿವಂತರ ಪ್ರಕಾರ ‘ಹಿಂದೂ’ಗಳಾಗಲೀ, ‘ದೇಶಭಕ್ತ’ರಾಗಲೀ ಆಗಲು ಸಾಧ್ಯವಿಲ್ಲ.
ದಲಿತರಿಗೆ ಭೂಮಿ ಕೊಡಿ ಎಂದು ಆಗ್ರಹಿಸಿದ ಸಂದರ್ಭದಲ್ಲೇ ‘ಪಂಕ್ತಿಭೇದ ನಿಲ್ಲದಿದ್ದರೆ ಮಠಕ್ಕೆ ಮುತ್ತಿಗೆ ಹಾಕುವುದಾಗಿ’ ಉಡುಪಿ ಚಲೋ ಸಮಾವೇಶದಲ್ಲಿ ಜಿಗ್ನೇಶ್ ಮೇವಾನಿ ಎಚ್ಚರಿಕೆ ನೀಡಿದ್ದಾರೆ. ಈಗಲೂ ಪಂಕ್ತಿಭೇದ ನಡೆಯುತ್ತಿರುವುದು ನಾಗರಿಕ ಸಮಾಜ ತಲೆತಗ್ಗಿಸುವ ಸಂಗತಿ. ಯಾವ ಸಬೂಬುಗಳನ್ನು ಹೇಳದೆ ಮಠಾಧೀಶರು ಎಲ್ಲ ಭಕ್ತಾದಿಗಳಿಗೂ ಸಮಾನಪಂಕ್ತಿಯ ವ್ಯವಸ್ಥೆಯನ್ನು ಜಾರಿಗೆ ತರಬೇಕಾಗಿದೆ.
ಮುಖ್ಯ ವಿಚಾರವೆಂದರೆ ನಮ್ಮ ಮಠಗಳ ಬಳಿ ಲಕ್ಷಾಂತರ ಎಕರೆ ಭೂಮಿಯಿದೆ. ಇದನ್ನೂ ದಲಿತರಿಗೆ ಹಂಚುವ ಆಂದೋಲನವಾಗಬೇಕಾಗಿದೆ. ದೇವರಾಜ ಅರಸರು ‘ಉಳುವವನೇ ಹೊಲದೊಡೆಯ’ ಕಾನೂನು ಜಾರಿಗೆ ತಂದಾಗ ಮಲೆನಾಡಿನ ಕೆಲವು ಹೃದಯವಂತ ಬ್ರಾಹ್ಮಣರು ಮತ್ತು ಒಕ್ಕಲಿಗರು ಯಾವುದೇ ಸಂಘರ್ಷಕ್ಕಿಳಿಯದೇ ಸ್ವಯಂಪ್ರೇರಿತರಾಗಿ ಗೇಣಿರೈತರಿಗೆ ತಮ್ಮ ಜಮೀನುಗಳನ್ನು ಕಾನೂನುಪ್ರಕಾರ ವರ್ಗಾಯಿಸಿದರು. ಬಹುಶಃ ಮಠಗಳ ಬಳಿಯಿರುವ ಜಮೀನುಗಳನ್ನು ದಲಿತರಿಗೆ ನೀಡುವ ಆಂದೋಲನ ಆರಂಭವಾದರೆ ನಮ್ಮ ಕೆಲವು ಪ್ರಗತಿಪರ ಚಿಂತನೆಯ ಸ್ವಾಮೀಜಿಗಳಾದರೂ ತಮ್ಮ ಮಠಗಳಲ್ಲಿನ ಜಮೀನುಗಳನ್ನು ದಲಿತರಿಗೆ ನೀಡಲು ಮುಂದಾಗಿ ಆಂದೋಲನದ ವಿಸ್ತರಣೆಗೆ ಸಹಕರಿಸಬಹುದು.
ಭಾರತ ಮಾನವಂತ ಎನ್ನಿಸಿಕೊಳ್ಳಬೇಕಾದರೆ ಜಾತಿಧರ್ಮದ ನೆಪದಲ್ಲಿ ನಡೆಯತ್ತಿರುವ ಅಮಾನುಷ ಕ್ರೌರ್ಯಗಳನ್ನು ಪ್ರತಿಭಟಿಸಬೇಕು. ಪ್ರತಿಭಟಿಸಬೇಕಾದವರು ದಲಿತರಲ್ಲ, ದಲಿತರು ಇಂದಿಗೂ ಈ ಸ್ಥಿತಿಯಲ್ಲಿ ಇರಲು ಕಾರಣವಾದ ಎಲ್ಲ ಜನವರ್ಗಗಳು. ಚರಿತ್ರೆಯಲ್ಲಿ ಆದ ಗಾಯಗಳಿಗೆ ಮುಲಾಮು ಸವರುವ ಕೆಲಸ ಮಾಡುವುದನ್ನು ಬಿಟ್ಟು ಆ ಗಾಯಗಳಿಗೆ ಉಪ್ಪು ಸವರುವ ಕೆಲಸ ಮಾಡಬೇಡಿ ಎಂದು ಪ್ರಜ್ಞಾವಂತ ಬ್ರಾಹ್ಮಣರು, ಲಿಂಗಾಯಿತರು, ಒಕ್ಕಲಿಗರನ್ನೊಳಗೊಂಡಂತೆ ಸಾಮಾಜಿಕವಾಗಿ ಮೇಲಿರುವ ಎಲ್ಲರೂ ತಮ್ಮ ಸಮುದಾಯದ ಜನರಿಗೆ ಹೇಳಬೇಕಾಗಿದೆ.
‘ಉಡುಪಿ ಚಲೋ’ ದಲಿತರ, ಅಲ್ಪಸಂಖ್ಯಾತರ ಹಿತಕ್ಕಲ್ಲ. ಸಮಾನ, ಜಾತ್ಯತೀತ, ನೆಮ್ಮದಿಯ ಸಮಾಜವನ್ನು ಕನಸುವ ಎಲ್ಲ ಜಾತಿಧರ್ಮದ ಎಲ್ಲರ ಭವಿಷ್ಯಕ್ಕಾಗಿ.
‘ಉಡುಪಿ ಚಲೋ’ವನ್ನು ಪ್ರಜ್ಞಾಪೂರ್ವಕವಾಗಿ ಮುಂದುವರೆಸೋಣ.
ಸರ್ಜಾಶಂಕರ ಹರಳಿಮಠ