ಹಸಿವಿನ ನಿರ್ಮೂಲನೆ: ಯೋಜನೆ ಇದ್ದರೂ ಇಚ್ಛಾಶಕ್ತಿಯದ್ದೇ ಕೊರತೆ
ಭಾರತದಲ್ಲಿ ಬಡವರು ಹಾಗೂ ಹಸಿದವರಿಗೆ ಹೊಟ್ಟೆ ತುಂಬಿ ಸುವ ಹಲವು ಸರಕಾರಿ ಯೋಜನೆಗಳು ಸಾಧಿಸಿದ್ದು ಅಷ್ಟರಲ್ಲೇ ಇದೆ. ವಾಷಿಂಗ್ಟನ್ನಲ್ಲಿರುವ ಅಂತಾರಾಷ್ಟ್ರೀಯ ಆಹಾರ ನೀತಿ ಸಂಶೋಧನಾ ಸಂಸ್ಥೆ ಬಿಡುಗಡೆ ಮಾಡಿದ ವಿಶ್ವ ಹಸಿವಿನ ಸೂಚ್ಯಂಕದಲ್ಲಿ ಭಾರತದ ಸ್ಥಾನ 118 ದೇಶಗಳ ಪೈಕಿ 97. ಭಾರತ ತನ್ನ ನೆರೆಯ ದೇಶಗಳಾದ ಚೀನಾ, ಮ್ಯಾನ್ಮಾರ್, ಶ್ರೀಲಂಕಾಗಿಂತಲೂ ಕೆಳಗಿನ ಸ್ಥಾನದಲ್ಲಿದೆ. ನೆರೆ ರಾಷ್ಟ್ರಗಳಲ್ಲಿ ಭಾರತಕ್ಕಿಂತ ಕೆಳಗಿನ ಸ್ಥಾನದಲ್ಲಿರುವ ಏಕೈಕ ದೇಶವೆಂದರೆ ಪಾಕಿಸ್ತಾನ.
2020ರೊಳಗೆ ಹಸಿವಿನ ಸಮಸ್ಯೆ ಕೊನೆಗೊಳಿಸುವ ಸುಸ್ಥಿರ ಅಭಿವೃದ್ಧಿ ಗುರಿಯನ್ನು ತಲುಪುವಲ್ಲಿ ಕೂಡಾ ಭಾರತ ವಿಫಲವಾಗುವ ಸಾಧ್ಯತೆ ಇದೆ ಎಂದು ಈ ವರದಿ ಅಂದಾಜು ಮಾಡಿದೆ. ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ, ಅಂಗನವಾಡಿ ವ್ಯವಸ್ಥೆಯಡಿ ಮಕ್ಕಳಿಗೆ, ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರಿಗೆ ಪೌಷ್ಟಿಕ ಆಹಾರ, ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಲ್ಲಿ ಪ್ರತಿ ವ್ಯಕ್ತಿಗೆ ತಿಂಗಳಿಗೆ ಐದು ಕೆ.ಜಿಯಂತೆ ಸಬ್ಸಿಡಿ ದರದಲ್ಲಿ ಆಹಾರಧಾನ್ಯ ವಿತರಣೆಯಂಥ ವ್ಯವಸ್ಥೆ ಇದ್ದರೂ ಭಾರತದಲ್ಲಿ ಆಫ್ರಿಕಾದ ಸಹಾರ ಉಪಖಂಡದ ದೇಶಗಳಿಗಿಂತ ಕಡಿಮೆ ಪ್ರಮಾಣದ ಮೊತ್ತವನ್ನು ಆರೋಗ್ಯ ಹಾಗೂ ಶಿಕ್ಷಣದಂಥ ಕ್ಷೇತ್ರಕ್ಕೆ ವಿನಿಯೋಗಿಸುತ್ತಿರುವ ಸದ್ಯದ ಪರಿಸ್ಥಿತಿಯಲ್ಲಿ ಇದಕ್ಕಿಂತ ಹೆಚ್ಚಿನ ಸುಧಾರಣೆಯನ್ನು ನಿರೀಕ್ಷಿಸುವುದು ಹೇಗೆ ಸಾಧ್ಯ?
ಆಹಾರ ಭದ್ರತೆ, ಆರೋಗ್ಯ ಹಾಗೂ ಪೌಷ್ಟಿಕ ನೀತಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಅರ್ಥಶಾಸ್ತ್ರಜ್ಞೆ ಋತಿಕಾ ಖೇರಾ ಅವರ ಪ್ರಕಾರ, ಹಸಿವಿನ ಸಮಸ್ಯೆ ಬಗ್ಗೆ ಸರಕಾರದ ದೃಷ್ಟಿಕೋನವೇ ದೋಷಪೂರ್ಣ. 2013ರಲ್ಲಿ ಜಾರಿಗೆ ಬಂದ ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆಯು ದೇಶದಲ್ಲಿ ಪೌಷ್ಟಿಕತೆಯನ್ನು ಸುಧಾರಿಸಲು ಪ್ರಮುಖವಾಗಿ ಮೂರು ಯೋಜನೆಗಳನ್ನು ಒಳಗೊಂಡಿದೆ. ಈ ಯೋಜನೆಗಳನ್ನು ಸರಕಾರದ ವಿವಿಧ ಇಲಾಖೆಗಳು, ಪರಸ್ಪರ ಸಂಬಂಧವೇ ಇಲ್ಲ ಎಂಬ ರೀತಿಯಲ್ಲಿ ತಮ್ಮ ಪಾಡಿಗೆ ಅನುಷ್ಠಾನಕ್ಕೆ ತರುತ್ತಿವೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಯಾವ ಸರಕಾರವೂ ಸಾಕಷ್ಟು ಕೆಲಸ ಮಾಡುತ್ತಿಲ್ಲ ಎನ್ನುವುದೇ ಪ್ರಮುಖ ಸಮಸ್ಯೆ ಎನ್ನುವುದು ಅವರ ಅಭಿಮತ.
ಸಾಲದು ಸಾಧನೆ
ಜಾಗತಿಕ ಹಸಿವಿನ ಸೂಚ್ಯಂಕದ ಅಂಕಪಟ್ಟಿಯ ಅನ್ವಯ 1992, 2000 ಹಾಗೂ 2008ನೇ ಇಸವಿಯಲ್ಲಿ ಭಾರತದ ಸ್ಥಿತಿ ಚಿಂತಾಜನಕ ವರ್ಗದಲ್ಲಿ ಇತ್ತು. ಆದರೆ 2016ನೆ ಸಾಲಿನಲ್ಲಿ ಇದು ‘ಗಂಭೀರ’ ಪರಿಸ್ಥಿತಿಯ ಹಂತಕ್ಕೆ ಮೇಲೆ ಬಂದಿದೆ. ಈ ಸೂಚ್ಯಂಕ ವರದಿಯ ಲೇಖಕರಲ್ಲೊಬ್ಬರಾದ ಜಿಲ್ ಬೆರ್ನ್ಸ್ಟೀನ್ ಅವರ ಪ್ರಕಾರ ಒಂದಷ್ಟು ಸುಧಾರಣೆಗಳಾಗುತ್ತಿವೆ.
‘‘1992ರಲ್ಲಿ ಆರಂಭಿಕ ಸ್ಥಿತಿ ಉನ್ನತಮಟ್ಟದಲ್ಲಿತ್ತು. ಆದರೆ ನಂತರ ಆಗಿರುವ ಪ್ರಗತಿ ಮಾತ್ರ ಸಾಲದು. ಭಾರತ ತೀವ್ರ ಚಿಂತಾಜನಕ ಸ್ಥಿತಿಯಿಂದ ಗಂಭೀರ ಸ್ಥಿತಿ ಹಾಗೂ ಕೆಲ ವರ್ಗದಲ್ಲಿ ಸಮಾಧಾನಕರ ಹಂತಕ್ಕೆ ಬಂದಿದೆ’’ ಎನ್ನುವುದು ಅವರ ವಿವರಣೆ.
2008ರ ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತದ ಅಂಕ 46.4 ಯೂನಿಟ್ ಆಗಿತ್ತು. ಇದು 2016ರಲ್ಲಿ 28.5ಕ್ಕೆ ಕುಸಿದಿದ್ದು, 17.9 ಯೂನಿಟ್ ಸುಧಾರಣೆ ಕಂಡುಬಂದಿದೆ. 2016ರ ವರದಿಯ ಪ್ರಕಾರ, ಭಾರತದ ನೆರೆ ದೇಶವಾದ ನೇಪಾಳ ಕೂಡಾ ಭಾರತದ ವರ್ಗದಲ್ಲೇ ಇದೆ. 2008ರಲ್ಲಿ 43.1 ಅಂಕ ಹೊಂದಿದ್ದ ನೇಪಾಳ 2016ರಲ್ಲಿ 21.9 ಯೂನಿಟ್ ಹೊಂದಿದ್ದು, ಕಳೆದ ಎಂಟು ವರ್ಷಗಳಲ್ಲಿ 21.2 ಯೂನಿಟ್ ಸುಧಾರಣೆ ಸಾಧಿಸಿದೆ.
ಈ ವರದಿಯ ಅನ್ವಯ ಭಾರತ, ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ ಸೇರಿದಂತೆ 45ಕ್ಕೂ ಹೆಚ್ಚು ದೇಶಗಳು ಸಮಾಧಾನಕರ ಅಥವಾ ಗಂಭೀರ ಪ್ರಮಾಣದ ಹಸಿವಿನ ಅಂಕವನ್ನು 2030ರ ವೇಳೆಗೂ ಹೊಂದುವ ಸಾಧ್ಯತೆ ಇದೆ. 1992ರಿಂದ ಸಾಧಿಸಿರುವ ದರದಲ್ಲೇ ಈ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿದರೂ ಈ ಪರಿಸ್ಥಿತಿ ಅನಿವಾರ್ಯವಾಗಲಿದೆ. ಭಾರತದ ಪ್ರಗತಿಯಲ್ಲಿ ನಿರಂತರತೆ ಕೊರತೆಯನ್ನೂ ಅವರು ಪತ್ತೆ ಮಾಡಿದ್ದಾರೆ.
‘‘ಭಾರತದಲ್ಲಿ ಪ್ರಮುಖವಾಗಿ ಮಕ್ಕಳ ಪೌಷ್ಟಿಕಾಂಶ ಕ್ಷೇತ್ರದಲ್ಲಿ ಸುಧಾರಣೆ ಅಗತ್ಯ’’ ಎನ್ನುವುದು ಅವರ ಅಭಿಪ್ರಾಯ. ಮಕ್ಕಳ ಮೆದುಳು ಹಾಗೂ ದೇಹ ಕ್ಷಿಪ್ರವಾಗಿ ಬೆಳೆಯುವ ಹಿನ್ನೆಲೆಯಲ್ಲಿ, ಪೌಷ್ಟಿಕಾಂಶದ ಪ್ರಮಾಣ ಕೊರತೆಯಾದಲ್ಲಿ ಅದು ದುಷ್ಪರಿಣಾಮ ಬೀರಲಿದೆ.
ಸಮನ್ವಯತೆ ಕೊರತೆ
‘‘ಸಮಗ್ರ ದೃಷ್ಟಿಕೋನ ಇಂದಿನ ಅಗತ್ಯ’’ ಎನ್ನು ವುದು ನಗರ ಅಪೌಷ್ಟಿಕ ಮಕ್ಕಳ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಸ್ನೇಹಾ ಎಂಬ ಸ್ವಯಂಸೇವಾ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವನೆಸ್ಸಾ ಡಿಸೋಜಾ ಅವರ ಸಲಹೆ. ‘‘ಗ್ರಾಮೀಣ ಪ್ರದೇಶ ಹಸಿವಿನ ಪರಿಸ್ಥಿತಿ ನಿವಾರಣೆಯ ದೃಷ್ಟಿ ಕೋನವೇ ಭಿನ್ನ. ನಗರದ ಹಸಿವು ನಿವಾರಣೆ ದೃಷ್ಟಿಕೋನವೇ ಭಿನ್ನ. ಎರಡರಲ್ಲೂ ಭಿನ್ನ ಸವಾಲುಗಳಿವೆ’’ ಎಂದು ಸ್ಪಷ್ಟವಾಗಿ ಹೇಳುತ್ತಾರೆ.
ಉದಾಹರಣೆಗೆ ನಗರ ಪ್ರದೇಶದಲ್ಲಿ ಅಂಗನವಾಡಿಗಳು ಸಮಗ್ರ ಮಕ್ಕಳ ಅಭಿವೃದ್ಧಿ ಯೋಜನೆಯಡಿ ಕಾರ್ಯನಿರ್ವಹಿಸುತ್ತಿದ್ದು, ಪೌಷ್ಟಿಕ ಆಹಾರ ನೀಡುವುದು ಇವುಗಳ ಹೊಣೆ. ಆದರೆ ಮಕ್ಕಳು ಹಾಗೂ ಮಹಿಳೆಯರ ಆರೋಗ್ಯ ಕಾಳಜಿ ಸ್ಥಳೀಯ ಸಂಸ್ಥೆಯ ಜವಾಬ್ದಾರಿ. ಎರಡೂ ಇಲಾಖೆಗಳೂ ಪ್ರತ್ಯೇಕವಾಗಿಯೇ ಕಾರ್ಯ ನಿರ್ವಹಿಸುತ್ತಿರುವುದನ್ನು ಜನರು ಸಾಮಾನ್ಯವಾಗಿ ಹೇಳುತ್ತಾರೆ.
‘‘ವಾಸ್ತವವಾಗಿ ಆರೋಗ್ಯ ಸೌಲಭ್ಯದ ವಿಚಾರ ಬಂದಾಗ ಅಂಗನವಾಡಿ ಕಾರ್ಯಕರ್ತೆಯರು ಮಗುವಿನ ಮಾಹಿತಿಯನ್ನು ಆರೋಗ್ಯ ಕಾರ್ಯ ಕರ್ತರಿಗೆ ರವಾನಿಸಬೇಕು ಹಾಗೂ ಅಪೌಷ್ಟಿಕತೆಯ ಮಕ್ಕಳ ವಿಚಾರವನ್ನು ಸ್ಥಳೀಯ ಸಂಸ್ಥೆಗಳು ಸಮಗ್ರ ಶಿಶು ಕಲ್ಯಾಣ ಅಭಿವೃದ್ಧಿ ಇಲಾಖೆಯ ಅಂದರೆ ಅಂಗನವಾಡಿ ಗಮನಕ್ಕೆ ತರಬೇಕು. ಆದರೆ ಅದು ಸಾಧ್ಯವಾಗುತ್ತಿಲ್ಲ’’ ಎನ್ನುವುದು ಮುಂಬೈನ ಸಮಾಜಸೇವಕರೊಬ್ಬರ ಅಭಿಪ್ರಾಯ.
‘‘ಆಹಾರ ಭದ್ರತಾ ಕ್ಷೇತ್ರದಲ್ಲಿ ಕೆಲಸ ಮಾಡುವ ಕಾರ್ಯಕರ್ತರ ಅಭಿಪ್ರಾಯದಂತೆ, ಬಹುತೇಕ ಹಸಿವು ನಿರ್ಮೂಲನೆ ಯೋಜನೆಗಳು ಗ್ರಾಮಕೇಂದ್ರಿತ. ನಗರ ಪ್ರದೇಶಗಳಲ್ಲಿ, ಜಾಗೃತಿ ಪ್ರಮುಖ ಸಮಸ್ಯೆ. ಮಗುವಿಗೆ ಏನು ತಿನ್ನಿಸಬೇಕು ಎನ್ನುವುದು ತಾಯಿಗೆ ತಿಳಿದಿರುವುದಿಲ್ಲ. ಸಾಮಾನ್ಯವಾಗಿ ಮಕ್ಕಳ ಅಪೌಷ್ಟಿಕತೆಗೆ ಜಂಕ್ ಫುಡ್ ಮುಖ್ಯ ಕಾರಣವಾಗುತ್ತದೆ’’ ಎಂದು ಡಿಸೋಜಾ ಹೇಳುತ್ತಾರೆ.
‘‘ಆರೋಗ್ಯಕರ ಹಾಗೂ ವೈವಿಧ್ಯಮಯ ಆಹಾರ ತಾಯಿ- ಮಕ್ಕಳಿಗೆ ಲಭ್ಯವಾಗುವಂತೆ ಸರಕಾರ ಮಾಡಬಹುದು. ಮಕ್ಕಳಿಗೆ ಯಾವುದು ಆರೋಗ್ಯಕರ ಆಹಾರಪದ್ಧತಿ ಎನ್ನುವುದನ್ನು ಪೋಷಕರು ಮೊದಲು ಅರ್ಥ ಮಾಡಿಕೊಳ್ಳಬೇಕು. ಇದರ ವಿಸ್ತೃತ ರೂಪುರೇಷೆಯಲ್ಲಿ ಮಹಿಳಾ ಸಬಲೀಕರಣ ಹಾಗೂ ಶಿಕ್ಷಣ ಕೂಡಾ ಮಹತ್ವದ ಅಂಶಗಳಾಗಿ, ಕುಟುಂಬದ ಪೌಷ್ಟಿಕತೆಗೆ ಗಣನೀಯ ಕೊಡುಗೆ ನೀಡುತ್ತವೆ. ಮಹಿಳೆಯರಿಗೆ ಗರ್ಭಿಣಿಯಾಗಿರುವ ಅವಧಿಯಲ್ಲಿ ಪೌಷ್ಟಿಕ ಆಹಾರ ಲಭ್ಯವಾಗುವುದು ಹಾಗೂ ಮಕ್ಕಳಿಗೆ ಮೊದಲ ಎರಡು ವರ್ಷ ಸೂಕ್ತ ಪೌಷ್ಟಿಕ ಆಹಾರ ಸಿಗುವಂತೆ ನೋಡಿಕೊಳ್ಳಬೇಕಾದ್ದು ಕೂಡಾ ಅಗತ್ಯ. ಏಕೆಂದರೆ ಇದು ದೀರ್ಘಕಾಲಿಕ ಪರಿಣಾಮ ಬೀರುತ್ತದೆ’’ ಎಂದು ಅವರು ವಿವರಿಸುತ್ತಾರೆ.
‘‘ದೇಹದ ಪೌಷ್ಟಿಕಾಂಶವನ್ನು ಕೊಳ್ಳೆ ಹೊಡೆಯುವ ಅತಿಸಾರದಂಥ ಸಮಸ್ಯೆಗಳನ್ನು ನಿಭಾಯಿಸಲು ನೈರ್ಮಲ್ಯ ಮತ್ತು ಸ್ವಚ್ಛತೆ ಬಗ್ಗೆ ಒತ್ತು ನೀಡುವುದು ಕೂಡಾ ಅಗತ್ಯ’’ ಎನ್ನುವುದು ಬೆರ್ನ್ಸ್ಟೀನ್ ಅವರ ಸ್ಪಷ್ಟ ಸಲಹೆ.
ಸ್ಪಷ್ಟ ಚಿತ್ರಣ
ಜಾಗತಿಕ ಹಸಿವಿನ ಸೂಚ್ಯಂಕ ವರದಿಯ ಪ್ರಕಾರ, ಭಾರತದ ಜನಸಂಖ್ಯೆಯಲ್ಲಿ ಶೇ. 15.2ರಷ್ಟು ಮಂದಿ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಸದ್ಯಕ್ಕೆ ವಯಸ್ಕರ ಅಪೌಷ್ಟಿಕತೆ ದೂರ ಮಾಡುವ ಯಾವುದೇ ಯೋಜನೆಗಳಿಲ್ಲ. ಗರ್ಭಿಣಿಯರ ಅಪೌಷ್ಟಿಕತೆ ಶಿಶುಸಾವಿಗೆ ಅಥವಾ ಸಣಕಲು ಹಾಗೂ ರೋಗಯುಕ್ತ ಮಕ್ಕಳ ಜನನಕ್ಕೆ ಕಾರಣವಾಗುತ್ತದೆ’’ ಎಂದು ದಿಲ್ಲಿಯ ಇಂಡಿಯನ್ ಸ್ಟೆಟಿಸ್ಟಿಕಲ್ ಇನ್ಸ್ಟಿಟ್ಯೂಟ್ನ ಸಂಶೋಧಕಿ ಡಯಾನ್ ಕಾಫೆ ಹೇಳುತ್ತಾರೆ.
ಜಾಗತಿಕ ಹಸಿವಿನ ಸೂಚ್ಯಂಕ ಎನ್ನುವುದು ಬಹುಮುಖಿ ಮಾನದಂಡಗಳನ್ನು ಹೊಂದಿದ್ದು, ದೇಶದ ಅಪೌಷ್ಟಿಕ ಜನರ ಆಧಾರದಲ್ಲಿ ಇದನ್ನು ನಿರ್ಧರಿಸಲಾಗುತ್ತದೆ. ಇದರ ಜತೆಗೆ ಮಕ್ಕಳಲ್ಲಿ ಕುಬ್ಜತೆ ಮತ್ತು ಕಡಿಮೆ ತೂಕ, ಐದು ವರ್ಷಕ್ಕಿಂತ ಕೆಳಗಿನ ಮಕ್ಕಳ ಸಾವಿನ ಪ್ರಮಾಣ ಮತ್ತಿತರ ಅಂಶಗಳನ್ನು ಇದು ಪರಿಗಣಿಸುತ್ತದೆ. ಈ ಮಾನದಂಡದಲ್ಲಿ ಜಾಗತಿಕ ಹಸಿವು ಸೂಚ್ಯಂಕದ ಅಂಕಗಳನ್ನು ಲೆಕ್ಕ ಹಾಕಲಾಗುತ್ತದೆ. ಜತೆಗೆ ದೇಶದಲ್ಲಿ ಲಭ್ಯವಿರುವ ಅಂಕಿ ಅಂಶಗಳ ಮಾಹಿತಿಯನ್ನೂ ಅಧ್ಯಯನ ಮಾಡಲಾಗುತ್ತದೆ. ಈ ಬಾರಿಯ ವರದಿಯಲ್ಲಿ ಭಾರತದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಅಂಕಿ ಅಂಶಗಳನ್ನು ಆಧರಿಸಿ, ದೇಶದ ಹಸಿವಿನ ಸಮಸ್ಯೆಯನ್ನು ಅಳೆಯಲಾಗಿದೆ.
‘‘ಆದರೆ ಈ ಅಂಕಿ ಅಂಶಗಳನ್ನು ಸರಕಾರ ಇದುವರೆಗೆ ಬಿಡುಗಡೆ ಮಾಡಿಲ್ಲ. ಇದರಿಂದಾಗಿ ವಿವಿಧ ನಿರ್ಧಾರಕ ಅಂಶಗಳ ನಡುವಿನ ಸಂಬಂಧವನ್ನು ಅಧ್ಯಯನ ಮಾಡಲು ಸಂಶೋಧಕರಿಗೆ ಸಾಧ್ಯವಾಗಿಲ್ಲ. ವೈಯಕ್ತಿಕ ಮಟ್ಟದ ಮಾಹಿತಿಗಳು, ಪೌಷ್ಟಿಕತೆಯ ಸಮಸ್ಯೆಯನ್ನು ಹೆಚ್ಚಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ’’ ಎನ್ನುವುದು ಕಾಫೆ ಅವರ ಅಭಿಪ್ರಾಯ.
ಬೇಕು ಆರೋಗ್ಯ, ಉದ್ಯೋಗ
‘‘ಸ್ಥಿರ ಉದ್ಯೋಗವು ಅಪೌಷ್ಟಿಕ ತಾಯಿ ಹಾಗೂ ಮಗುವಿನ ಸಮಗ್ರ ಕಲ್ಯಾಣಕ್ಕೆ ಪೂರಕವಾಗುತ್ತದೆ’’ ಎನ್ನುವುದು ನಗರ ಪ್ರದೇಶದ ಅಪೌಷ್ಟಿಕತೆ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಡಿಸೋಜಾ ಅವರ ಅಭಿಪ್ರಾಯ. ಗ್ರಾಮೀಣ ಪ್ರದೇಶಗಳಲ್ಲಿ ಕೂಡಾ, ಉದ್ಯೋಗದ ಕೊರತೆಯಿಂದಾಗಿ ವಲಸೆ ಅನಿವಾರ್ಯವಾಗುತ್ತಿದ್ದು, ಇದು ಮಕ್ಕಳು ಸೇರಿದಂತೆ ಇಡೀ ಕುಟುಂಬದ ಹಸಿವಿನ ಸಮಸ್ಯೆ ಉಲ್ಬಣಕ್ಕೆ ಕಾರಣವಾಗುತ್ತಿದೆ.
ಮಹಾರಾಷ್ಟ್ರ ಸರಕಾರಕ್ಕೆ ಇತ್ತೀಚೆಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ನೋಟಿಸ್ ನೀಡಿದ್ದು, ಇಲ್ಲಿನ ಆರೋಗ್ಯಾಧಿಕಾರಿಯೊಬ್ಬರ ಪ್ರಕಾರ, ‘‘ಪಾಲ್ಗಾರ್ ಜಿಲ್ಲೆಯಲ್ಲಿ ಅಪೌಷ್ಟಿಕತೆಗೆ ವಲಸೆ ಮುಖ್ಯಕಾರಣ. ಇಲ್ಲಿ ದಂಪತಿ ತಮ್ಮ ಮಕ್ಕಳನ್ನು ಪಕ್ಕದ ರಾಜ್ಯಗಳಿಗೆ ಕರೆದೊಯ್ಯುವ ಕಾರಣದಿಂದ ಅವರು ಸರಕಾರಿ ವ್ಯವಸ್ಥೆಯಲ್ಲಿ ದಾಖಲಾಗುವುದಿಲ್ಲ. ಇವರಿಗೆ ಅಗತ್ಯ ಆರೋಗ್ಯ ಸೌಲಭ್ಯವೂ ಸಿಗುವುದಿಲ್ಲ. ಅವರು ವಾಪಸು ಬಂದಾಗ, ಮಗುವಿನ ಆರೋಗ್ಯ ಹದಗೆಟ್ಟಿರುತ್ತದೆ. ಅದು ಸುಧಾರಿಸಲು ಆರಂಭವಾದಾಗ ಮತ್ತೆ ಅವರು ಕಣ್ಮರೆಯಾಗುತ್ತಾರೆ.’’
ಇನ್ನೊಂದು ಪ್ರಮುಖ ಸಮಸ್ಯೆ, ಉತ್ತಮ ಆರೋಗ್ಯ ಸೌಲಭ್ಯ ಸಿಗದಿರುವುದು. ಬಹುತೇಕ ಹಳ್ಳಿಗಳಲ್ಲಿ ಮಕ್ಕಳ ಅಪೌಷ್ಟಿಕತೆಗೆ ಚಿಕಿತ್ಸೆ ನೀಡುವ ಮಕ್ಕಳ ತಜ್ಞರು ಇಲ್ಲ. ಮೆಲ್ಗಾಟ್ ಜಿಲ್ಲೆಯ ಬಹುತೇಕ ಆರೋಗ್ಯ ಕೇಂದ್ರಗಳಲ್ಲಿ ಮೂಲಭೂತ ಔಷಧಗಳು ಕೂಡಾ ಇಲ್ಲ. ಪ್ಯಾರಾಸಿಟಮೋಲ್ನಂಥ ಗುಳಿಗೆಗಳಿಗೂ ತತ್ವಾರ. ‘‘ಮಾಧ್ಯಮಗಳಲ್ಲಿ ಈ ಕುರಿತು ವರದಿಯಾದಾಗ ನ್ಯಾಯಾಲಯ ಆದೇಶ ನೀಡಿ, ಸರಕಾರ ಕಾರ್ಯ ನಿರ್ವಹಿಸುತ್ತದೆ. ಇಲ್ಲದಿದ್ದರೆ ಇಡೀ ವ್ಯವಸ್ಥೆಯೇ ಶಿಥಿಲವಾಗುತ್ತದೆ’’ ಎನ್ನುವುದು ಖೋಜ್ ಸ್ವಯಂಸೇವಾ ಸಂಸ್ಥೆಯ ಕಾರ್ಯಕರ್ತೆ ಪೂರ್ಣಿಮಾ ಉಪಾಧ್ಯಾಯ ಅವರ ವಿವರಣೆ.
ಸರಕಾರದ ಹಲವು ಯೋಜನೆಗಳ ಧನಸಹಾಯ ಪಡೆಯಲು ಕೂಡಾ ಬಹುತೇಕ ಮಹಿಳೆಯರಿಗೆ ಸಾಧ್ಯವಾಗುತ್ತಿಲ್ಲ. ಪ್ರತಿ ಹೆರಿಗೆಯಾದ ಬಳಿಕ ಮಹಿಳೆಯರು ಧನಸಹಾಯ ಸೌಲಭ್ಯ ಹೊಂದುತ್ತಾರೆ. ಬ್ಯಾಂಕ್ಗಳು ದೂರ ಎಂಬ ಕಾರಣಕ್ಕೆ ಹಲವರು ಇದನ್ನು ಬಳಸಿಕೊಳ್ಳುತ್ತಿಲ್ಲ. ಈ ಹಣ ವಾಸ್ತವವಾಗಿ ಅವರಿಗೆ ಮಕ್ಕಳ ಆರೈಕೆಗೆ ಪೂರಕವಾಗುತ್ತದೆ
ಸಾರ್ವತ್ರಿಕ ಹೆರಿಗೆ ಸೌಲಭ್ಯ ಯೋಜನೆಯಡಿ, ಪ್ರತಿ ಮಗುವಿನ ತಾಯಿಗೆ 6,000 ರೂಪಾಯಿ ನೀಡಲಾಗುತ್ತದೆ. ಇದನ್ನು ಪ್ರಚುರಪಡಿಸಲು ಮತ್ತು ಸಮಗ್ರ ಶಿಶು ಕಲ್ಯಾಣ ಅಭಿವೃದ್ಧಿ ಯೋಜನೆ, ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಲು ಸರಕಾರ ಏನೂ ಮಾಡುತ್ತಿಲ್ಲ ಎನ್ನುವುದು ಖೇರಾ ಅವರ ಆಕ್ಷೇಪ. ಮೊಟ್ಟೆಯಂಥ ಪೌಷ್ಟಿಕ ಆಹಾರವನ್ನು ಊಟದ ಜತೆ ಸೇರಿಸುವ ಬದಲಾಗಿ ಹಲವು ಸರಕಾರಗಳು ಅದನ್ನು ತಡೆಯುತ್ತಿವೆ ಎಂದು ಹೇಳುತ್ತಾರೆ.
ವಿಶ್ವಸಂಸ್ಥೆ ನಿಗದಿಪಡಿಸಿದಂತೆ ಹಸಿವಿನ ಮಟ್ಟವನ್ನು ಶೂನ್ಯ ಪ್ರಮಾಣಕ್ಕೆ ಇಳಿಸಬೇಕಾದರೆ, ಭಾರತ ಹೊಸ ಯೋಜನೆಗಳನ್ನು ರೂಪಿಸುವ ಬದಲು, ಹಾಲಿ ಇರುವ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವುದು ಅಗತ್ಯ.
ಕೃಪೆ: scroll.in
ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ, ಅಂಗನವಾಡಿ ವ್ಯವಸ್ಥೆಯಡಿ ಮಕ್ಕಳಿಗೆ, ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರಿಗೆ ಪೌಷ್ಟಿಕ ಆಹಾರ, ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಲ್ಲಿ ಪ್ರತಿ ವ್ಯಕ್ತಿಗೆ ತಿಂಗಳಿಗೆ ಐದು ಕೆ.ಜಿಯಂತೆ ಸಬ್ಸಿಡಿ ದರದಲ್ಲಿ ಆಹಾರಧಾನ್ಯ ವಿತರಣೆಯಂಥ ವ್ಯವಸ್ಥೆ ಇದ್ದರೂ ಭಾರತದಲ್ಲಿ ಆಫ್ರಿಕಾದ ಸಹಾರ ಉಪಖಂಡದ ದೇಶಗಳಿಗಿಂತ ಕಡಿಮೆ ಪ್ರಮಾಣದ ಮೊತ್ತವನ್ನು ಆರೋಗ್ಯ ಹಾಗೂ ಶಿಕ್ಷಣದಂಥ ಕ್ಷೇತ್ರಕ್ಕೆ ವಿನಿಯೋಗಿಸುತ್ತಿರುವ ಸದ್ಯದ ಪರಿಸ್ಥಿತಿಯಲ್ಲಿ ಇದಕ್ಕಿಂತ ಹೆಚ್ಚಿನ ಸುಧಾರಣೆಯನ್ನು ನಿರೀಕ್ಷಿಸುವುದು ಹೇಗೆ ಸಾಧ್ಯ?