ಜೀವ ಪಣಕ್ಕಿಟ್ಟ ಕರಾವಳಿಯ ಯುವಕರು :ಮುಳುಗುವವರಿಗೆ ಬದುಕು ಕೊಟ್ಟ ಕಡಲ ವೀರರ ಬದುಕನ್ನು ಕೇಳೋರಿಲ್ಲ..!
2007 ರಲ್ಲಿ ಮಂಗಳೂರಿನ ಸಮುದ್ರದಲ್ಲಿ ಡೆನ್ ಡೆನ್ ಹಡಗು ಮುಳುಗಡೆ; ಕಡಲ ಅಲೆಗಳಿಗೆ ಸವಾಲೆಸೆದು 21 ಜನರ ಪ್ರಾಣ ರಕ್ಷಿಸಿದ ಧೀರ ಯುವಕರು. 1993 ರಲ್ಲಿ ತನ್ನೀರುಬಾವಿಯಲ್ಲಿ ವಿದೇಶಿ ಹಡಗು ಮುಳುಗಡೆ; ಆಳದಿಂದ ಶವಗಳನ್ನು ಮೇಲೆತ್ತಿದ ಕಡಲ ಶೂರರು. ಇತ್ತೀಚೆಗೆ ಬೆಂಗಳೂರು ತಿಪ್ಪಗುಂಡನಹಳ್ಳಿ ಕೆರೆಯಿಂದ ಮಾರಿಗುಡಿ ಚಿತ್ರದ ಖಳನಟನ ಮೃತದೇಹ ಪತ್ತೆ ಮಾಡಿದ ವೀರರು. ದಿನನಿತ್ಯ ಕಡಲಕಿನಾರೆಯಲ್ಲಿ, ಜಿಲ್ಲೆಯ ಮೂಲೆಮೂಲೆಗಳಲ್ಲಿ, ರಾಜ್ಯದ ವಿವಿಧೆಡೆ ಜಲದುರಂತವಾದಾಗ ಅಲ್ಲಿಗೆ ಸ್ವಯಂಪ್ರೇರಿತವಾಗಿ ತೆರಳಿ ಸಮಸ್ಯೆಗೆ ಪರಿಹಾರ ಸೂಚಿಸಿ ಮಾನವೀಯತೆ ಮೆರೆದವರು.
ಇಂತಹ ಹತ್ತುಹಲವು ದುರ್ಘಟನೆಗಳು ರಾಜ್ಯ ರಾಷ್ಟ್ರಮಟ್ಟದಲ್ಲಿ ಸುದ್ದಿಯಾದಂತಹ ವಿಚಾರಗಳು. ಆದರೆ ಇದರ ತೆರೆಯ ಮರೆಯಲ್ಲಿ ಕಾರ್ಯಾಚರಿಸಿದ ಆ ಧೀರರು, ಶೂರರು, ವೀರರು, ಮಾನವೀಯತೆಯ ಹರಿಕಾರರ ಬಗ್ಗೆ ಸುದ್ದಿಯಾಗಲೇ ಇಲ್ಲ. ಯಾಕೆಂದರೆ ಅವರು ಮಾನವೀಯ ಮೌಲ್ಯಗಳನ್ನು ಮೇಲೈಸಿದ ಆಪತ್ಬಾಂಧವರೇ ಹೊರತು ಪ್ರಚಾರ ನಿರೀಕ್ಷೆ ಮಾಡಿದವರಲ್ಲ. ಅದನ್ನು ಬಯಸಿದವರೂ ಅಲ್ಲ. ಕಳೆದ 10-15 ವರ್ಷಗಳಿಂದ ನೀರಿನಲ್ಲಿ ಮುಳುಗಿದ ಸುಮಾರು 150 ಶವಗಳನ್ನು ಪತ್ತೆಹಚ್ಚಿ ಮೇಲಕ್ಕೆತ್ತಿದ್ದು ಮಾತ್ರವಲ್ಲ 50 ಕ್ಕೂ ಹೆಚ್ಚಿನ ಜನರ ಜೀವರಕ್ಷಣೆ ಮಾಡಿದ ಐವರು ಕಡಲತಡಿಯ ಯುವಕರ ಸಾಹಸಗಾಥೆ ಅದ್ಭುತವಾದುದು. ಆ ಯುವಕರು ಯಾರು?
ಮಂಗಳೂರಿನ ತನ್ನೀರುಬಾವಿ ಸಮುದ್ರ ತೀರದ ಸುಂದರ ತಾಣ. ದಿನನಿತ್ಯ ಸಹಸ್ರಾರು ಪ್ರವಾಸಿಗರು ಕಡಲ ಸವಿಯನ್ನು ಆಸ್ವಾದಿಸಲು ಬರುವ ಪ್ರಸಿದ್ದ ಪ್ರವಾಸಿ ಕೇಂದ್ರ. ಈ ತನ್ನೀರುಬಾವಿ ಪ್ರದೇಶದಲ್ಲಿ ಯೂತ್ ಸ್ಪೋರ್ಟ್ಸ್ ಕ್ಲಬ್ ಅನ್ನುವ ಸಂಘಟನೆಯಿದೆ. ಅದಕ್ಕೆ ಸ್ವಂತ ಕಟ್ಟಡ ಕೂಡಾ ಇದೆ. 1993 ರಲ್ಲಿ ಕ್ಲಬ್ ಪ್ರಾರಂಭವಾಗಿದೆ. ಈ ಸ್ಪೋರ್ಟ್ಸ್ ಕ್ಲಬ್ ನ ಜೀವಾಳವೇ ನಾನು ಮೇಲೆ ಉಲ್ಲೇಖಿಸಿರುವ ಐವರು ಸಾಹಸೀ ಯುವಕರು. ಅಸಹಾಯಕರ ಪಾಲಿನ ಆಶಾಕಿರಣ. ಮುಳುಗಿ ಇನ್ನೇನು ಪ್ರಾಣ ಕಳಕೊಳ್ಳುವೆವು ಎನ್ನುವವರಿಗೆ ಜೀವರಕ್ಷಕರು. ನೀರಿನ ಭಯವಿಲ್ಲದ ಮಹಾನ್ ವ್ಯಕ್ತಿ-ಶಕ್ತಿಗಳು. ಮಾನವೀಯತೆಯ ಹರಿಕಾರರಾದ ತನ್ನೀರುಬಾವಿ ನಿವಾಸಿಗಳಾದ ಮುಹಮ್ಮದ್ ವಾಸಿಂ, ಸಾದಿಕ್, ಜಾವಿದ್, ಝಾಕಿರ್ ಹುಸೈನ್ ಹಾಗೂ ಹಸನ್ ಪಿ.ಟಿ.
ಇತ್ತೀಚೆಗೆ ಬೆಂಗಳೂರಿನ ತಿಪ್ಪಗುಂಡನಹಳ್ಳಿ ಕೆರೆಯಲ್ಲಿ ಮಾರಿಗುಡಿ ಕನ್ನಡ ಚಿತ್ರೀಕರಣ ನಡೆಯುವಾಗ ಇಬ್ಬರು ಖಳನಟರಾದ ರಾಘವ್ ಉದಯ್ ಮತ್ತು ಅನಿಲ್ ಕೆರೆಯ ನೀರುಪಾಲಾದರು. ಆ ಘಟನೆ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿ ಹಲವು ಮಂದಿ ಕಂಬನಿ ಮಿಡಿದರು. ಅಗ್ನಿಶಾಮಕದಳ, ಪೊಲೀಸರು, ಎನ್.ಟಿ.ಆರ್.ಎಫ್. ಪಡೆ ಎರಡು ದಿನ ಹಗಲು-ರಾತ್ರಿ ಹುಡುಕಾಡಿದರೂ ಶವ ಸಿಕ್ಕಿಲ್ಲ. ಘಟನೆಯನ್ನು ಪತ್ರಿಕೆಯಲ್ಲಿ ಕಂಡ ತನ್ನೀರುಬಾವಿಯ ಈ ಐವರು ಯುವಕರು ಪಣಂಬೂರು ಪೊಲೀಸ್ ಇನ್ಸ್ ಪೆಕ್ಟರ್ ಹಾಗೂ ಎಸಿಪಿ ಗೆ ಮಾಹಿತಿ ನೀಡಿ ಯಾರೂ ಆಹ್ವಾನಿಸದೆ ಸ್ವಯಂಪ್ರೇರಿತರಾಗಿ ಘಟನೆ ಸ್ಥಳಕ್ಕೆ ತಲುಪಿದರು. ಇವರಲ್ಲಿ ಆಕ್ಸಿಜನ್ ಬಿಟ್ಟು ನೀರಿಗಿಳಿವ ಯಾವುದೇ ಶಸ್ತ್ರ, ಆಯುಧ, ಲೈಫ್ ಜಾಕೆಟ್ ಗಳಿರಲಿಲ್ಲ. ಇವರು ಶವ ಮೇಲಕ್ಕೆತ್ತುವುದು ಅಸಾಧ್ಯ ಎಂದೇ ಅಲ್ಲಿದ್ದ ಎಲ್ಲರೂ ಭಾವಿಸಿದ್ದರು. ನೋಡನೋಡುತ್ತಿದ್ದಂತೆಯೇ ತನ್ನೀರುಬಾವಿಯ ಈ ಐವರು ಸಾಹಸಿ ಯುವಕರು ನಟ ರಾಘವ್ ಉದಯ್ ಶವವನ್ನು 70 ಅಡಿ ಆಳದಿಂದ ಮೇಲೆತ್ತಿ ಎಲ್ಲರ ಪ್ರಶಂಸೆಗೆ ಪಾತ್ರರಾದರು. ಆ ಕೆರೆಯಲ್ಲಿ 30 ಅಡಿಯ ಕೆಳಗೆ ಕಗ್ಗತ್ತಲು ಆವರಿಸಿದ್ದರೂ ಕೇವಲ ಆಕ್ಸಿಜನ್ ಬಳಸಿ 70 ಅಡಿ ಆಳದಲ್ಲಿದ್ದ ಶವ ತೆಗೆದಿದ್ದರು. ಅನಿಲ್ ಶವ ಹುಡುಕಾಡಿದರೂ ಸಿಗದಿದ್ದಾಗ ಇಂತಹ ಸ್ಥಳದಲ್ಲೇ ಅದು ಮೇಲೆ ಬರಬಹುದೆಂದು ಭವಿಷ್ಯ ನುಡಿದಿದ್ದ ಈ ಯುವಕರು ಹೇಳಿದ ಹಾಗೆಯೇ ನಡೆದಿತ್ತು. ನಟ ದುನಿಯಾ ವಿಜಯ್ ಸೇರಿದಂತೆ ಅಲ್ಲಿ ಸೇರಿದ್ದ ಸಹಸ್ರಾರು ಮಂದಿ ಕರಾವಳಿ ಯುವಕರ ಸಾಹಸಕ್ಕೆ ಭೇಷ್ ಅಂದರು.
1993 ರಲ್ಲಿ ವಿದೇಶೀ ಹಡಗೊಂದು ತನ್ನೀರುಬಾವಿಯಲ್ಲಿ ಮುಳುಗಿತು. ಅದರಲ್ಲಿದ್ದವರ ಎಲ್ಲಾ ಮೃತದೇಹವನ್ನು ಹೊರತೆಗೆದ ತಂಡ ಅಂದು ಹುಟ್ಟುಹಾಕಿದ ಸಂಸ್ಥೆಯೇ ಯೂತ್ ಸ್ಪೋರ್ಟ್ಸ್ ಕ್ಲಬ್. ಅಂದು ಈ ಯುವಕರು ಇಲ್ಲದೇ ಇದ್ದಿದ್ದರೂ ಆ ಕ್ಲಬ್ ನ ಪ್ರಸ್ತುತ ಜೀವಾಳವೇ ಈ ಐವರು ಧೀರ ಯುವಕರು.
2007 ರಲ್ಲಿ ಆಫ್ರಿಕಾದ ಡೆನ್ ಡೆನ್ ಹಡಗು ಮಂಗಳೂರ ಕಡಲ ಕಿನಾರೆಯಲ್ಲಿ ಮುಳುಗುತ್ತಿತ್ತು. ಅದರಲ್ಲಿ ನಾವಿಕ ಸೇರಿ 23 ವಿದೇಶಿಗರಿದ್ದರು. ಅವರನ್ನು ರಕ್ಷಿಸಲು ಪೊಲೀಸರು, ಅಗ್ನಿಶಾಮಕದಳದವರು ಅಸಹಾಯಕರಾಗಿದ್ದರು. ಈ ಸಂದರ್ಭ ಲೈಫ್ ಜಾಕೆಟ್ ಕೂಡಾ ಇಲ್ಲದೆ ನೀರಿಗೆ ಧುಮುಕಿ ಹಡಗಿನಲ್ಲಿದ್ದ 21 ಆಫ್ರಿಕನ್ನರನ್ನು ರಕ್ಷಿಸಿ ಸಾಹಸ ಮೆರೆದವರು ಇದೇ ಐವರು ಯುವಕರ ತಂಡ. ಅಂದು ಇವರಿಗೆ ಕೋಸ್ಟ್ ಗಾರ್ಡ್ ಕನಿಷ್ಠ ಲೈಫ್ ಜಾಕೆಟ್ ನೀಡುವ ಸೌಜನ್ಯವನ್ನೂ ತೋರಿಲ್ಲ. ಆದರೆ ಅಂದಿನ ರಾಜ್ಯಪಾಲ ಟಿ.ಎನ್.ಚತುರ್ವೇದಿ ಅವರು ಸ್ವಾತಂತ್ರ್ಯ ದಿನ ರಾಜಭವನಕ್ಕೆ ಆಹ್ವಾನಿಸಿ ಸಾಹಸ ತೋರಿದ ಯುವಕರನ್ನು ಸನ್ಮಾನಿಸಿದ್ದರು. ಕಡಲ ಕಿನಾರೆಯಲ್ಲಿ ವಾರಕ್ಕೆ ಮೂರ್ನಾಲ್ಕು ಪ್ರವಾಸಿಗರ ದುರ್ಘಟನೆಗಳು ನಡೆಯುತ್ತಲೇ ಇರುತ್ತವೆ. ಅವರ ಪಾಲಿಗೆ ಆಪತ್ಬಾಂಧವರಾಗುವುದು ಇದೇ ಧೀರರು. ಬಹುಶಃ ಇವರಿಂದಾಗಿ ಅದೆಷ್ಟೋ ಜನ ಪುನರ್ಜನ್ಮ ಪಡೆದಿದ್ದಾರೆ. ಈ ಹಿಂದೆ ಪುತ್ತೂರು, ಉಪ್ಪಿನಂಗಡಿ, ಬಂಟ್ವಾಳ ನದಿ ದುರಂತದಲ್ಲಿ ಸಿಲುಕಿದವರನ್ನು ಹುಡುಕಿಕೊಟ್ಟ ಕೀರ್ತಿ ಈ ಐವರಿಗಿದೆ. ದ.ಕ. ಜಿಲ್ಲೆಯ ಮೂಲೆಮೂಲೆಗಳಲ್ಲದೆ ಹಾಸನ, ಶಿವಮೊಗ್ಗ, ಉಡುಪಿ, ಕುದುರೆಮುಖ, ಕುಮಟಾ ಮೊದಲಾದೆಡೆ ಹಲವು ಬಾರಿ ನೀರಿನ ದುರಂತ ನಡೆದಾಗ ಆಸರೆಯಾದವರು ಇದೇ ಸ್ಪೋರ್ಟ್ಸ್ ಕ್ಲಬ್ ಯುವಕರು. ಈ ಯುವಕರ ತಂಡವನ್ನು ಎಂ.ಫ್ರೆಂಡ್ಸ್ ಮಂಗಳೂರು ಸಂಸ್ಥೆಯು ತನ್ನೀರುಬಾವಿ ಯೂತ್ ಸ್ಪೋರ್ಟ್ಸ್ ಕ್ಲಬ್ ಗೆ ತೆರಳಿ ಊರವರ, ಕ್ಲಬ್ ಅಧ್ಯಕ್ಷರ, ಸ್ಥಳೀಯ ಮಸೀದಿ ಅಧ್ಯಕ್ಷರ ಸಮಕ್ಷಮ ಸನ್ಮಾನಿಸಿ ಹುರಿದುಂಬಿಸಿದೆ.
ಕಡಲ ಸಾಹಸಿಗರಾದ ಮುಹಮ್ಮದ್ ವಾಸಿಂ, ಸಾದಿಕ್, ಜಾವಿದ್, ಝಾಕಿರ್ ಹುಸೈನ್, ಹಸನ್ ಪಿ.ಟಿ. ಅವರು ನೀರಿನ ಹರಿವು, ಅದರ ಪ್ರತಿಕೂಲ, ಆಳದ ಬಗ್ಗೆ ಅನುಭವದಿಂದಲೇ ತಿಳಿದುಕೊಂಡವರು. ಈ ಬಗ್ಗೆ ಅವರೇನೂ ತರಬೇತಿ ಪಡೆದಿಲ್ಲ. ಈ ಯುವಕರೇನೂ ಆರ್ಥಿಕವಾಗಿ ಬಲಾಢ್ಯರಲ್ಲ. ಕಡಲ ತಡಿಯಲ್ಲಿ ತಾತ್ಕಾಲಿಕ ಗುಡಿಸಲು ಕಟ್ಟಿ ದಿನನಿತ್ಯದ ಕೆಲಸದಿಂದ ಬದುಕು ಸವೆಸುವವರು. ಕಡಲ ಚಿಪ್ಪಿ (ಪಚಿಲೆ) ಮೀನು ಹೆಕ್ಕಿ ಅದನ್ನು ಮಾರಿ ಜೀವನ ಕಟ್ಟಿಕೊಂಡವರು. ಇವರ ಆರ್ಥಿಕ ಅಡಚಣೆ ಅಷ್ಟಿಷ್ಟಲ್ಲ. ಹಲವು ಜೀವಗಳಿಗೆ ಮರುಜೀವ ನೀಡಿದ ಈ ವಿವಾಹಿತ, ಸಂಸಾರಸ್ಥ ಯುವಕರ ಜೀವನದ ಬವಣೆ ಕೇಳುವವರಿಲ್ಲ. ಅದು ಬಿಡಿ ಇವರ ಸಾಧನೆಯನ್ನು ಸರಿಯಾಗಿ ಪ್ರೋತ್ಸಾಹಿಸುವವರೂ ಇಲ್ಲ. ಸರಕಾರ, ಪೊಲೀಸರು, ಕರಾವಳಿ ರಕ್ಷಣಾ ಪಡೆಯಾಗಲಿ ಯಾರೂ ಬೆಂಬಲಕ್ಕೆ ನಿಂತಿಲ್ಲ. ಅಕ್ಷರಶಃ ನಿರ್ಲಕ್ಷ್ಯ ತೋರಿದೆ ಎನ್ನಬಹುದು. ಕೆಲವೊಮ್ಮೆ ಒಪ್ಪೊತ್ತಿನ ಊಟಕ್ಕಾಗಿ ತತ್ವಾರ ಪಡುವಂತಹ ದಯನೀಯ ಪರಿಸ್ಥಿತಿ. ಇವರ ಮನೆಯ ಸದಸ್ಯರು ಮಕ್ಕಳನ್ನು ಕಷ್ಟದಲ್ಲಿ ಸಲಹುತ್ತಿದ್ದಾರೆ. ಒಬ್ಬ ಸದಸ್ಯನ ಮನೆಯಲ್ಲಿ ಆತನ ವಿಧವೆ ಸಹೋದರಿ ಹಾಗೂ ಮೂವರು ಮಕ್ಕಳು ಬೇರೆ. ಅದರಲ್ಲಿ ಒಂದು ಮಗುವಿಗೆ ಬಾಯಿ ಬರದ ದುಸ್ಥಿತಿ. ಈ ಐವರು ಯುವಕರ ಅನಿವಾರ್ಯತೆ ಸಮಾಜಕ್ಕಿದೆ. ನೀರಿನ ದುರಂತಗಳು ಸಂಭವಿಸಿದಾಗ ನಮಗೆ ಇವರೇ ಬೇಕು. ಇವರ ಕುಟುಂಬದ ಪೋಷಣೆ, ಮಕ್ಕಳ ವಿದ್ಯಾಭ್ಯಾಸದ ಹೊಣೆಯನ್ನು ನಮ್ಮ ಸಮಾಜ ಹೊರಬೇಕಾಗಿದೆ. ಜಾತಿ ಮತ ಬೇಧ ಮರೆತು ಜೀವವನ್ನು ಪಣಕ್ಕಿಟ್ಟು ಹಲವಾರು ಜೀವಗಳಿಗೆ ಮರುಜನ್ಮ ನೀಡಿದ ಈ ಐವರು ಯುವಕರಿಗೆ ನಾವೂ ಪ್ರೋತ್ಸಾಹ, ಸಹಕಾರ ನೀಡೋಣ. ಅವರಿಗೆ ಸಹಾಯಹಸ್ತ ಚಾಚುವವರು ಅಥವಾ ಬೆಂಬಲ ನೀಡುವವರು ತಂಡದ ಸದಸ್ಯರಾದ ಮುಹಮ್ಮದ್ ವಾಸಿಂ +91 9845152078 ಅಥವಾ ಎಂ.ಫ್ರೆಂಡ್ಸ್ ಮಂಗಳೂರು ಇದರ ಅಧ್ಯಕ್ಷರಾದ ಮುಹಮ್ಮದ್ ಹನೀಫ್ ಹಾಜಿ +91 9980880860 ಅವರನ್ನು ಸಂಪರ್ಕಿಸಬಹುದು. ನಿಮ್ಮ ಕಿಂಚಿತ್ ಸಹಕಾರ ಕಡಲ ವೀರ ಯುವಕರ ಕುಟುಂಬಕ್ಕೆ ದೊಡ್ಡ ವರದಾನವಾಗಬಹುದು.