ಎಚ್ಚೆತ್ತ ಗ್ರಾಹಕನೇ ನಿಜವಾದ ನಾಗರಿಕ
ಇಂದು ರಾಷ್ಟ್ರೀಯ ಗ್ರಾಹಕ ದಿನ
ಮಂಗಳೂರು ಗ್ರಾಹಕ ಜಾಗೃತಿ ವೇದಿಕೆ. ಗ್ರಾಹಕ ಸಂರಕ್ಷಣಾ ಕಾಯ್ದೆ ಜಾರಿಗೆ ಬಂದು 30 ವರ್ಷಗಳಾಗಿವೆ. ಪ್ರತಿ ವರ್ಷವೂ ಡಿಸೆಂಬರ್ 24ನ್ನು ಗ್ರಾಹಕ ದಿನವನ್ನಾಗಿ ಆಚರಿಸುವುದು, ಜಿಲ್ಲಾಡಳಿತ ಗ್ರಾಹಕರಿಗೆ ನೀಡುವ ಒಂದು ಉಪಕ್ರಮವಾಗಿ ಉಳಿದಿದೆ ಹೊರತು ಗ್ರಾಹಕ ಸಂರಕ್ಷಣಾ ಕಾಯ್ದೆ ಗ್ರಾಹಕರನ್ನು ರಕ್ಷಿಸುತ್ತದೆ ಎಂಬ ಅರಿವು ಇನ್ನೂ ಜನರಿಗೆ ತಲುಪಿಲ್ಲ. ಜನಸಾಮಾನ್ಯರಿಗೆ ಕಾಯ್ದೆಯ ಪ್ರಯೋಜನಗಳನ್ನು ತಿಳಿಸುವ ಪ್ರಯತ್ನವನ್ನು ಜನಪ್ರತಿನಿಧಿಗಳಾಗಲಿ ಮಾಡುತ್ತಿಲ್ಲ. ಇತ್ತೀಚೆಗಷ್ಟೇ ಭಾರತದ ಸರ್ವೋಚ್ಚ ನ್ಯಾಯಾಲಯ ಗ್ರಾಹಕ ಕಾಯ್ದೆ ಪರಿಣಾಮವಾಗಿ ಅನುಷ್ಠಾನಗೊಳ್ಳುತ್ತಿಲ್ಲ ಎಂಬ ಎಚ್ಚರಿಕೆಯನ್ನು ನೀಡಿದ್ದಿದೆ.
ಗ್ರಾಹಕನೆಂದರೆ ಪ್ರತಿಯೋರ್ವ ಜನಸಾಮಾನ್ಯನೂ ಆಗಿದ್ದಾನೆ ಎಂಬ ವಿಶ್ವಾಸವೇ ಮೂಡಿಲ್ಲ. ಮೋಸ ಮಾಡುವವರು, ವಂಚಿಸುವವರು, ಭ್ರಷ್ಟಾಚಾರಿಗಳು ಏನು ಮಾಡಿದರೂ ಜನರು ಎಚ್ಚರಗೊಳ್ಳುವುದಿಲ್ಲ. ತೀವ್ರ ಹಾನಿಯಾದಾಗ, ಪೊಲೀಸರಲ್ಲಿ ದೂರಿಕೊಳ್ಳುವುದು ಬಿಟ್ಟರೆ, ಗ್ರಾಹಕ ಸಂರಕ್ಷಣಾ ವ್ಯವಸ್ಥೆಯೊಂದಿದೆ ಎಂಬ ಜ್ಞಾನವೇ ಇದ್ದಂತಿಲ್ಲ. ಪ್ರತಿ ಜಿಲ್ಲೆಯಲ್ಲೂ ಜಿಲ್ಲಾ ಗ್ರಾಹಕ ಪರಿಷತ್ಗಳಿವೆ. ಗ್ರಾಹಕ ಮಾಹಿತಿ ಕೇಂದ್ರಗಳಿವೆ. ಸರಕಾರ ನಿಗದಿತ ಮೊತ್ತವನ್ನು ಕೂಡಾ ವ್ಯಯಿಸುತ್ತದೆ. ಆದರೆ ಇವುಗಳಾವುವೂ ಗ್ರಾಹಕರನ್ನು ಪ್ರಜ್ಞಾವಂತರಾಗಿರಲು ಪ್ರಯತ್ನಿಸುವುದಿಲ್ಲ. ಬಹುಪಾಲು ಜನಸಾಮಾನ್ಯರಿಗೆ ನಮ್ಮ ಜಿಲ್ಲೆಯಲ್ಲೂ ಇಂತಹ ವ್ಯವಸ್ಥೆ ಇದೆಯೆಂದೇ ಗೊತ್ತಿರುವುದಿಲ್ಲ. ಇವುಗಳು ಜನಸಾಮಾನ್ಯರಲ್ಲಿ ತಿಳುವಳಿಕೆ ಮೂಡಿಸುವ ಪ್ರಯತ್ನವನ್ನೇ ಮಾಡುತ್ತಿಲ್ಲ. ಪ್ರತಿ ಶಾಲೆಗಳಲ್ಲೂ, ಕಾಲೇಜುಗಳಲ್ಲೂ ಗ್ರಾಹಕ ಕ್ಲಬ್ಗಳಿವೆ. ಆದರೆ ಅವು ವಿದ್ಯಾರ್ಥಿಗಳ ಇತರ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಒಂದಾಗಿದೆ ಎಂದಷ್ಟೇ ತಿಳಿದುಕೊಂಡಂತಿದೆ. ಗ್ರಾಹಕ ಹಕ್ಕುಗಳಿಗಾಗಿ ಹೋರಾಡುವ ಸ್ಫೂರ್ತಿ ಅವರಲ್ಲೂ ಮೂಡಿಸುತ್ತಿಲ್ಲ. ಜಡವಾಗಿರುವ ಈ ಸರಕಾರಿ ವ್ಯವಸ್ಥೆಗಳು ಕ್ರಿಯಾಶೀಲವಾಗಬೇಕು. ಕ್ರಿಯಾಶೀಲವಾಗಿಸಲು ಜಿಲ್ಲಾಡಳಿತ, ಜನಪ್ರತಿನಿಧಿಗಳು ಪ್ರಯತ್ನಿಸಬೇಕಾಗಿದೆ.
ಇಂದು ನಾವು ಪರಿವರ್ತನೆಯ ಹಾದಿಯಲ್ಲಿದ್ದೇವೆ. ಪ್ರಧಾನಿಯವರ ದಿಟ್ಟ ಹೆಜ್ಜೆಗಳಿಂದಾಗಿ ಜನಸಾಮಾನ್ಯರಲ್ಲಿ ಹೊಸ ಸ್ಫೂರ್ತಿ ಮೂಡಬಹುದು. ‘ಸ್ವಚ್ಛ ಭಾರತ ಆಂದೋಲನ’ ದೇಶದ ಜನರಲ್ಲಿ ಸಂಚಲನ ಮೂಡಿಸಿದೆ. 2005ರಲ್ಲಿ ಸ್ವಚ್ಛತಾ ಆಂದೋಲನ ಎಂಬ ಹೆಸರಲ್ಲಿ ಮೂಡುಬಿದಿರೆಯಲ್ಲಿ ನಾಗರಿಕ ಸಮನ್ವಯ ಸಮಿತಿಯೂ, ಶಾಲಾ ಕಾಲೇಜುಗಳ ವಠಾರ, ಬಸದಿ, ದೇವ ಮಂದಿರಗಳ ವಠಾರಗಳನ್ನು ಸ್ವಚ್ಛಗೊಳಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಅಷ್ಟೇ ಅಲ್ಲ ವೈದ್ಯರ ಅಸೋಸಿಯೇಶನ್ ಸಹಕಾರದಿಂದ ಪ್ರತಿ ಮನೆಗೆ ತೆರಳಿ ಸೊಳ್ಳೆ ನಿವಾರಣೆಗಾಗಿ ಪರಿಸರ ಸ್ವಚ್ಛಗೊಳಿಸುವ ಮಾಹಿತಿ ನೀಡಿದ್ದೆವು. ಈ ಸ್ವಚ್ಛತಾ ಆಂದೋಲನದ ಕುರಿತಾಗಿ ಸ್ಥಳೀಯ ಪತ್ರಿಕೆಗಳಲ್ಲಿ ಲೇಖನಗಳೂ, ಸುದ್ದಿಗಳೂ ಪ್ರಕಟವಾಗಿತ್ತು. ಆದರೆ ಜನಸಾಮಾನ್ಯರು ಬೆಂಬಲಿಸಲಿಲ್ಲ. ಅದೀಗ ರಾಷ್ಟ್ರೀಯ ಆಂದೋಲನವಾಗಿ ಜಾರಿಯಾಗಿದೆ. ಪ್ರಧಾನಿಯವರ ಅಭಿನಂದನಾರ್ಹ ಕಾರ್ಯವಿದೆನ್ನಬಹುದು. ಆದರೆ ಜನರು ಇನ್ನೂ ಎಚ್ಚರಗೊಂಡಿಲ್ಲ. ಮಂಗಳೂರು ನಗರದಲ್ಲೇ ಸ್ವಚ್ಛ ನಗರ, ಗ್ರೀನ್ ಸಿಟಿ ಜಾಹಿರಾತುಗಳಿದ್ದರೂ, ಕಸ ಸಂಗ್ರಹಕ್ಕೆ ವ್ಯವಸ್ಥೆ ಇದ್ದರೂ ಖಾಲಿ ಜಾಗಗಳಲ್ಲಿ ಕಸ ಎಸೆಯುವುದು ನಿಲ್ಲಲಿಲ್ಲ. ಕಾರ್ಪೊರೇಟರ್ಗಳಾಗಲಿ, ಕೌನ್ಸಿಲರ್ಗಳಾಗಲಿ ಈ ಆಂದೋಲನ ಜನರ ಸುರಕ್ಷಾ ವಿಧಾನವೆಂಬ ನಿಲುವನ್ನು ತಳೆದಂತಿಲ್ಲ. ತಮ್ಮ ಕಣ್ಣ ಮುಂದೆಯೇ ಹೊಲಸು ತುಂಬುವುದು ಕಂಡರೂ ಅವರು ಪ್ರತಿರೋಧಿಸುವುದಿಲ್ಲ. ಅಂತಹವರ ವಿರುದ್ಧ ಕ್ರಮ ಜರಗಿಸುವುದಿಲ್ಲ. ಶಾಸಕ ಪ್ರತಿನಿಧಿಗಳು ಯಾವ ರಸ್ತೆಗಳಿಗೂ ಕಣ್ಣೆತ್ತಿ ನೋಡುವುದಿಲ್ಲ. ರಾಜಕಾರಣ ಕ್ರಿಯಾಶೀಲತೆಯತ್ತ ಬಂದಾಗ ಮಾತ್ರ ಗ್ರಾಹಕ ಸುರಕ್ಷೆ ಸಾಧ್ಯ.
ಭ್ರಷ್ಟಾಚಾರ ಮತ್ತು ಕಪ್ಪುಹಣ ದಂಧೆ ನಿಲ್ಲಿಸಲು ನೋಟು ಅಪವೌಲ್ಯೀಕರಣದಂತಹ ದಿಟ್ಟ ಹೆಜ್ಜೆಯನ್ನು ಕೇಂದ್ರ ಸರಕಾರ ತಂದಿರುವುದು ಗಮನಾರ್ಹವೇ. ಕಪ್ಪು ಕುಳಗಳು ಸಿಕ್ಕಿಬೀಳಬಹುದು. ಆದರೆ ಜನಸಾಮಾನ್ಯರು ತಮ್ಮದೇ ಹಣವಾದರೂ ತಾವು ಇದುವರೆಗೆ ಅನುಭವಿಸದಂತಹ ಪರಿಣಾಮವನ್ನು ಎದುರಿಸಬೇಕಾಗಿರುವುದು ಕೂಡಾ ನಿಜ. ಹೊಸ ನೋಟುಗಳೇ ಖದೀಮರ ಕೈಗೆ ಸಿಗುತ್ತಿರುವುದು ಮತ್ತೆ ಭ್ರಷ್ಟಾಚಾರಕ್ಕೆ ಎಡೆಮಾಡಿದಂತಾಗಿದೆ. ಭ್ರಷ್ಟಾಚಾರ ಮುಕ್ತ ಎಂದು ಪರಿಗಣಿಸಲಾದ ಬ್ಯಾಂಕ್ಗಳೂ, ತೆರಿಗೆ ಇಲಾಖೆಗಳೂ ಸಿಕ್ಕಿಬಿದ್ದಿರುವುದು ವರದಿಯಾಗುತ್ತಿದೆ. ಗ್ರಾಹಕ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ನೀಡಿದ ಯಾವ ವ್ಯವಹಾರ ಹಕ್ಕುಗಳೂ ಈಗ ನಡೆಯುವುದಿಲ್ಲ. ಬ್ಯಾಂಕ್ಗಳ ವೈಫಲ್ಯ, ಸೇವಾ ನ್ಯೂನತೆಗೆ ಬ್ಯಾಂಕ್ಗಳೇ ಕಾರಣವಾಗಿರುವುದಿಲ್ಲ. ಗ್ರಾಹಕರಿಗೊಂದು ತುರ್ತು ಪರಿಸ್ಥಿತಿಯ ಪರಿಣಾಮವಿದೆ. ಚೆಕ್ ಬೌನ್ಸ್ ಆಗುವುದು, ನಗದೀಕರಣ ಆಗದಿರುವುದು ಈಗ ಸಾಮಾನ್ಯ. ಗ್ರಾಹಕ ಸಂರಕ್ಷಣೆ ಇಲ್ಲಿ ಅಸಾಧ್ಯ ಎನ್ನುವಂತಾಗಿದೆ. ದೇಶದ ಹಿತಕ್ಕಾಗಿ ಸರಕಾರದ ಜೊತೆ ಕೈಜೋಡಿಸುವ ಗ್ರಾಹಕ ಹಿತವನ್ನು ನಿರ್ಲಕ್ಷಿಸುವುದು ಅನಿವಾರ್ಯವಾದಂತಾಗಿದೆ.
ಗ್ರಾಹಕ ನಿಯಮಗಳು ಆಸ್ಪತ್ರೆಗಳಿಗೂ, ಸೇವೆ ನೀಡುವ ಯಾವುದೇ ಸಂಸ್ಥೆ ಯಾ ಕ್ಲಬ್ಗಳಿಗೂ ಅನ್ವಯಯಿಸುತ್ತದೆ. ಹಣ ಪಡೆದು ಸರಿಯಾದ ಚಿಕಿತ್ಸೆ ನೀಡದ ಆಸ್ಪತ್ರೆಗಳು, ವೈದ್ಯರು ಮಾಡುವ ಸೇವಾ ನ್ಯೂನತೆಯನ್ನು ಅವಗಣಿಸುವಂತಿಲ್ಲ. ವೈದ್ಯರ ಸೇವಾ ಶುಲ್ಕ ನಿಗದಿಯಾಗಿಲ್ಲ. ಆಸ್ಪತ್ರೆಗಳ ಸನದು ಬರೇ ಕನಸಾಗಿದೆ. ಯಾವ ಆಸ್ಪತ್ರೆಗಳೂ ಸೇವಾ ದರ ಪ್ರಕಟಿಸುವುದಿಲ್ಲ. ಸರಕಾರ ಜನಸಾಮಾನ್ಯರ ಮೇಲಾಗುವ ಶೋಷಣೆಯತ್ತ ಗಮನ ಹರಿಸಿಲ್ಲ. ಆಸ್ಪತ್ರೆಗಳ ನೋಂದಣಿ ಜೊತೆಗೆ ದರ ನಿಗದಿ ಫಲಕ ಪ್ರದರ್ಶನ ಕಡ್ಡಾಯಗೊಳಿಸಬೇಕು.
ಕೆಲವೊಂದು ಸಂಸ್ಥೆಗಳು ನಿಗದಿತ ಶುಲ್ಕ ಪಡೆದು ನೀಡುವ ಸೇವೆ, ನೀಡದಿರುವ ಸೇವಾ ನ್ಯೂನತೆ ತಿಳಿದಂತಿಲ್ಲ. ಪ್ರೆಸ್ ಕ್ಲಬ್ನಂತಹ ಕ್ಲಬ್ಗಳು ನಿರ್ದಿಷ್ಟ ಸಂಖ್ಯೆಯ ಮಾಧ್ಯಮ ಪ್ರತಿನಿಧಿಗಳನ್ನು ಹೊಂದಿದ್ದು, ಶುಲ್ಕ ಪಡೆದು ನಡೆಸುವ ಪತ್ರಿಕಾಗೋಷ್ಠಿಗಳು ಗ್ರಾಹಕ ಕಾಯ್ದೆಗೊಳಪಡುತ್ತದೆ. ಗೋಷ್ಠಿಯ ಸದಸ್ಯರು ಪ್ರತಿನಿಧಿಸುವ ಮಾಧ್ಯಮಗಳಲ್ಲಿ ಪ್ರಕಟವಾಗಬೇಕು. ಈ ಹೊಣೆಗಾರಿಕೆ ಕ್ಲಬ್ಗೆ ಇದೆ. ಅಲ್ಲದೆ ಪ್ರತಿಯೋರ್ವ ಸದಸ್ಯ ಪ್ರತಿನಿಧಿಯೂ ಪ್ರತ್ಯೇಕ ಹೊಣೆಗಾರನಾಗುತ್ತಾನೆ. ಆಸ್ಪತ್ರೆಗಳು ರೋಗಿಯ ಸೇವಾ ನೂನ್ಯತೆಗೆ ಹೊಣೆಗಾರರಾಗುವಂತೆಯೇ ಇಂತಹ ಸಂಸ್ಥೆಗಳೂ ಹೊಣೆಗಾರರಾಗುತ್ತಾರೆ. ಯಾಕೆಂದರೆ ಅದು ಹಣ ಪಡೆದು ಕೊಡುವ ಸೇವೆ. ಇಂತಹ ನೂರಾರು ವಿಚಾರಗಳಿಗಾಗಿ ಗ್ರಾಹಕರು ತಮ್ಮ ಹಕ್ಕುಗಳಿಗೆ ದೂರು ನೀಡಲು ಮುಂದಾಗಬೇಕು. ತಮಗಾಗುವ ಹಾನಿ, ನಷ್ಟಗಳಿಗಾಗಿ ಪರಿಹಾರ ಪಡೆಯಲು ಮುಂದಾಗಬೇಕು. ಪ್ರತಿ ಜಿಲ್ಲೆಯಲ್ಲೂ ಗ್ರಾಹಕ ನ್ಯಾಯಾಲಯಗಳಿವೆ. ಗ್ರಾಹಕ ಎಚ್ಚರಗೊಳ್ಳಬೇಕು. ತಮ್ಮದೇ ಹಕ್ಕನ್ನು ನ್ಯಾಯಯುತವಾಗಿ ಪಡೆಯಲು ಮುಂದಾಗಬೇಕು. ಸಲಹೆ ಸಹಕಾರಗಳಿಗಾಗಿ ಮಂಗಳೂರು ಗ್ರಾಹಕ ಜಾಗೃತಿ ವೇದಿಕೆ, ಕಂಕನಾಡಿ ಅಂಚೆ (ಆ 546) ಅಥವಾ ಯಾವುದೇ ಹತ್ತಿರದ ಗ್ರಾಹಕ ಸಂಘಟನೆಗಳ ನೆರವು ಪಡೆಯಬಹುದು.
ಎಚ್ಚರ! ಗ್ರಾಹಕರೇ ನಿಮ್ಮ ಹಕ್ಕುಗಳಿಗಾಗಿ ಹೋರಾಡಿರಿ. ಈ ದಿನ, ನೆನಪಿಸಬೇಕಾದ ವಿಚಾರ ಇದು.
ಗ್ರಾಹಕನೆಂದರೆ ಪ್ರತಿಯೋರ್ವ ಜನಸಾಮಾನ್ಯನೂ ಆಗಿದ್ದಾನೆ ಎಂಬ ವಿಶ್ವಾಸವೇ ಮೂಡಿಲ್ಲ. ಮೋಸ ಮಾಡುವವರು, ವಂಚಿಸುವವರು, ಭ್ರಷ್ಟಾಚಾರಿಗಳು ಏನು ಮಾಡಿದರೂ ಜನರು ಎಚ್ಚರಗೊಳ್ಳುವುದಿಲ್ಲ. ತೀವ್ರ ಹಾನಿಯಾದಾಗ, ಪೊಲೀಸರಲ್ಲಿ ದೂರಿಕೊಳ್ಳುವುದು ಬಿಟ್ಟರೆ, ಗ್ರಾಹಕ ಸಂರಕ್ಷಣಾ ವ್ಯವಸ್ಥೆಯೊಂದಿದೆ ಎಂಬ ಜ್ಞಾನವೇ ಇದ್ದಂತಿಲ್ಲ. ಪ್ರತಿ ಜಿಲ್ಲೆಯಲ್ಲೂ ಜಿಲ್ಲಾ ಗ್ರಾಹಕ ಪರಿಷತ್ಗಳಿವೆ. ಗ್ರಾಹಕ ಮಾಹಿತಿ ಕೇಂದ್ರಗಳಿವೆ. ಸರಕಾರ ನಿಗದಿತ ಮೊತ್ತವನ್ನು ಕೂಡಾ ವ್ಯಯಿಸುತ್ತದೆ. ಆದರೆ ಇವುಗಳಾವುವೂ ಗ್ರಾಹಕರನ್ನು ಪ್ರಜ್ಞಾವಂತರಾಗಿರಲು ಪ್ರಯತ್ನಿಸುವುದಿಲ್ಲ.