ಎಟಿಎಂಗಳಲ್ಲಿ ಇನ್ನೂ ಕೇವಲ ರೂ. 2000ದ ನೋಟುಗಳು!
ಮಾನ್ಯರೆ,
ಮೊನ್ನೆ ರಿಸರ್ವ್ ಬ್ಯಾಂಕ್ ಗವರ್ನರ್ ಊರ್ಜಿತ್ ಪಟೇಲ್ ‘‘ರೀ-ಮಾನಿಟೈಜೇಶನ್ ಕೆಲಸ ಪೂರ್ಣವಾಗಿದೆ. ಈಗ ಹೊಸ ನೋಟುಗಳ ಕೊರತೆ ಇಲ್ಲ’’ ಎಂದು ಹೇಳಿಕೆ ಕೊಟ್ಟಿದ್ದಾರೆ. ‘ರೀ-ಮಾನಿಟೈಜೇಶನ್’ ಅಂದರೆ ‘ನೋಟು ಅಮಾನ್ಯ’ದ ಮೂಲಕ ಚಲಾವಣೆಯಿಂದ ರದ್ದು ಮಾಡಿದ ಮೌಲ್ಯದಷ್ಟೇ ಮೊತ್ತವನ್ನು ಹೊಸ ನೋಟುಗಳ ಮೂಲಕ ಚಲಾವಣೆಗೆ ತರುವುದು. ಹಾಗಾದರೆ ಜನರಿಗೆ ಈಗಲೂ ಬೇಕಾದಷ್ಟು ವಿವಿಧ ಮುಖಬೆಲೆಯ ನೋಟುಗಳು ಎಟಿಎಂ ಅಥವಾ ಬ್ಯಾಂಕುಗಳಲ್ಲಿ ಯಾಕೆ ಸಿಗುತ್ತಿಲ್ಲ? ಹಿಂದೆಲ್ಲಾ ಶೇ. 90 ಎಟಿಎಂಗಳಲ್ಲಿ ಐನೂರರ ನೋಟುಗಳೇ ಸಿಗುತ್ತಿದ್ದವು, ಆದರೆ ಈಗ ಶೇ. 90 ಎಟಿಎಂಗಳಲ್ಲಿ ಕೇವಲ ರೂ. 2000ದ ನೋಟುಗಳು ಮಾತ್ರ ಸಿಗುತ್ತಿವೆ. ಯಾಕೆಂದರೆ ಬ್ಯಾಂಕಿನವರು ಐನೂರರ ನೋಟುಗಳನ್ನು ಎಟಿಎಂಗಳಲ್ಲಿ ಹಾಕುತ್ತಲೇ ಇಲ್ಲ. ಅದಕ್ಕೆ ಕಾರಣ ಈಗ ಹೊಸದಾಗಿ ಬಂದಿರುವ ಐನೂರರ ನೋಟುಗಳು ಹಳೆಯ ಐನೂರರ ನೋಟುಗಳಿಗಿಂತ ಆಕಾರದಲ್ಲಿ ಚಿಕ್ಕದಾಗಿವೆ, ಹಾಗಾಗಿ ಎಟಿಎಂ ಒಳಗಿನ ಕಂಪ್ಯೂಟರ್ಗಳನ್ನು ಮತ್ತೆ ರೀಕ್ಯಾಲಿಬರೇಟ್ ಮಾಡದೇ ಎಟಿಎಂಗಳಲ್ಲಿ ಐನೂರರ ಹೊಸ ನೋಟು ತುಂಬಲು ಸಾಧ್ಯವಿಲ್ಲ ಎಂದು ಬ್ಯಾಂಕ್ನವರೇ ಹೇಳುತ್ತಾರೆ. ಹಾಗಾಗಿ ನೋಟು ರದ್ದತಿಯಾಗಿ ಮೂರು ತಿಂಗಳು ಕಳೆದರೂ ಜನರು ಎರಡು ಸಾವಿರದ ನೋಟು ಹಿಡಿದುಕೊಂಡು ನೂರು ರೂಪಾಯಿಯ ತರಕಾರಿ ಕೊಳ್ಳಲು ಅಂಗಡಿಯಿಂದ ಅಂಗಡಿಗೆ ಅಲೆದಾಡುವಂತಹ ದುಸ್ಥಿತಿ ಮುಂದುವರಿದಿದೆ. ಮುಂದಿನ ತಿಂಗಳಿನಿಂದ ಹೊಸ ಒಂದು ನೂರು ರೂಪಾಯಿಯ ನೋಟುಗಳೂ ಬರಲಿವೆ. ಇವುಗಳೂ ಈಗಿನ ಹಳೆಯ ನೂರರ ನೋಟುಗಳಿಗಿಂತ ಸೈಜಿನಲ್ಲಿ ಚಿಕ್ಕದಾಗಿವೆ ಎನ್ನಲಾಗುತ್ತಿದೆ. ಹಾಗಾಗಿ ಮತ್ತೆ ಎಲ್ಲಾ ಎಟಿಎಂಗಳನ್ನು ರೀಕ್ಯಾಲಿಬರೇಟ್ ಮಾಡಬೇಕಾಗುತ್ತದೆ. ಅಂದರೆ ಹಿಂದಿನ ಮೂರು ತಿಂಗಳಿನಲ್ಲಿ ಮೂರು ಬಾರಿ ದೇಶದ ಎಲ್ಲಾ ಎರಡೂಕಾಲು ಲಕ್ಷ ಎಟಿಎಂಗಳನ್ನು ಇಂಜಿನಿಯರ್ಗಳು ರೀಕ್ಯಾಲಿಬರೇಟ್ ಮಾಡುವುದರಲ್ಲಿಯೇ ವ್ಯರ್ಥ ಕಾಲ ಕಳೆಯಬೇಕಾಯಿತು. ಹಾಗೂ ಈ ಕೆಲಸವನ್ನು ಬ್ಯಾಂಕುಗಳು ಔಟ್-ಸೋರ್ಸ್ ಮಾಡಿದ್ದರಿಂದ ಬ್ಯಾಂಕುಗಳು ಕೋಟ್ಯಂತರ ರೂಪಾಯಿ ಸಂಭಾವನೆಯನ್ನು ಈ ಹೊರಗಿನ ಇಂಜಿನಿಯರ್ಗಳಿಗೆ ಕೊಡಬೇಕಾಯಿತು. ಮೊದಲೆಲ್ಲಾ ಎರಡೂಕಾಲು ಲಕ್ಷ ಎಟಿಎಂ ಗಳಲ್ಲಿ ಕೇವಲ ಹತ್ತು ಸಾವಿರ ಎಟಿಎಂಗಳು ಮಾತ್ರ ಒಂದು ಸಾವಿರ ಮುಖಬೆಲೆಯ ನೋಟುಗಳನ್ನು ಕೊಡುತ್ತಿದ್ದರೆ ಉಳಿದ ಎರಡು ಲಕ್ಷಕ್ಕೂ ಮಿಕ್ಕಿದ ಎಟಿಎಂಗಳು ಕೇವಲ ಐನೂರು ಮತ್ತು ಒಂದು ನೂರು ರೂಪಾಯಿಯ ನೋಟುಗಳನ್ನು ಮಾತ್ರ ಕೊಡುತ್ತಿದ್ದವು. ಆದುದರಿಂದ ಮಾರುಕಟ್ಟೆಯಲ್ಲಿ ಐನೂರು ಮತ್ತು ನೂರು ರೂಪಾಯಿ ನೋಟುಗಳಿಗೆ ಎಂದೂ ಕೊರತೆ ಬಂದಿರಲಿಲ್ಲ. ಆದರೆ ಈಗ ಪರೀಸ್ಥಿತಿ ಸಂಪೂರ್ಣ ಉಲ್ಟಾ ಆಗಿದೆ.
ನೋಟು ಅಮಾನ್ಯಗೊಂಡಾಗ ಒಟ್ಟು 15 ಲಕ್ಷ ಕೋಟಿ ಮೌಲ್ಯದ ಹಣ ಚಲಾವಣೆಯಿಂದ ಹೊರ ಹೋಯಿತು. ಅದರ ಜಾಗದಲ್ಲಿ ಅಷ್ಟೇ ಮೌಲ್ಯದ ಹೊಸ ನೋಟುಗಳು ಚಲಾವಣೆಗೆ ಬಂದಿವೆ ಎಂದು ಆರ್ಬಿಐ ಗವರ್ನರ್ ಹೇಳಿದ್ದಾರೆ. ಆದರೂ ಈಗಲೂ ಐನೂರರ ನೋಟುಗಳ ಕೊರತೆ ಯಾಕೆ ಇದೆ? ಕಾರಣ ಇಷ್ಟೇ, ನೋಟು ರದ್ದತಿಯಾದಾಗ ಚಲಾವಣೆಯಿಂದ ಹೊರ ಹೋದ 15 ಲಕ್ಷ ಕೋಟಿ ರೂ. ಮೌಲ್ಯದ ನೋಟುಗಳಲ್ಲಿ ಐನೂರರ ಪಾಲು ಇದ್ದಿದ್ದು ಹನ್ನೆರಡು ಲಕ್ಷ ಕೋಟಿ ಮೌಲ್ಯದ್ದು ಹಾಗೂ ಒಂದು ಸಾವಿರದ್ದು ಇದ್ದಿದ್ದು ಕೇವಲ ಮೂರು ಲಕ್ಷ ಕೋಟಿ ಮೌಲ್ಯದ್ದು. ಆದರೆ ಹೊಸ ನೋಟು ಚಲಾವಣೆಗೆ ತರುವಾಗ ಅದೇ ಹನ್ನೆರಡು ಲಕ್ಷ ಕೋಟಿ ಮೌಲ್ಯದ ಐನೂರರ ನೋಟು ತರುವ ಬದಲು ಕೇವಲ ನಾಲ್ಕು ಲಕ್ಷ ಕೋಟಿ ಮೌಲ್ಯದ ಹೊಸ ಐನೂರರ ನೋಟುಗಳನ್ನು ಮಾತ್ರ ತಂದಿದ್ದು, ಹಾಗೂ ಉಳಿದ ಹನ್ನೊಂದು ಲಕ್ಷ ಕೋಟಿ ಮೌಲ್ಯದ ಹೊಸ ನೋಟು ಕೇವಲ ಎರಡು ಸಾವಿರ ಮುಖಬೆಲೆಯದ್ದೇ ಚಲಾವಣೆಗೆ ತರಲಾಗಿದೆ. ಈ ರೀತಿ ಮೂರು ಹಳೆಯ ಐನೂರರ ನೋಟಿಗೆ ಬದಲಾಗಿ ಕೇವಲ ಒಂದು ಹೊಸ ಐನೂರರ ನೋಟು ಚಲಾವಣೆಗೆ ಬಂದಂತಾಯಿತು. ಹಾಗಾಗಿ ಐನೂರರ ಕೊರತೆ ಉಂಟಾಗಿದೆ.
ಇನ್ನೊಂದು ವಿಚಿತ್ರ ಕಾರಣ ಎಂದರೆ ಈ ಐನೂರರ ಹೊಸ ನೋಟು ನಮ್ಮ ಕರ್ನಾಟಕದ ಮೈಸೂರಿನ ಸೆಕ್ಯುರಿಟಿ ಪ್ರೆಸ್ನಲ್ಲಿಯೇ ಮುದ್ರಣ ಆಗುತ್ತಿದ್ದರೂ ಅದರ ಚಲಾವಣೆ ಗೋವಾ, ಉತ್ತರ ಪ್ರದೇಶ, ಪಂಜಾಬ್ ಮತ್ತು ಉತ್ತರಾಖಂಡ್ ರಾಜ್ಯಗಳಲ್ಲಿ ಹೆಚ್ಚು ಮಾಡಲಾಗಿದೆ. ಕಾರಣ ಈ ರಾಜ್ಯಗಳಲ್ಲಿ ಈಗ ಚುನಾವಣೆ ನಡೆಯುತ್ತಿದ್ದು ಅಲ್ಲಿ ನೋಟು ರದ್ದತಿಯಿಂದ ಉಂಟಾದ ಭೀಕರ ಬವಣೆ ಚುನಾವಣೆ ಸಮಯದಲ್ಲಿ ಮತದಾರರಿಗೆ ನೆನಪು ಬರಬಾರದು ಹಾಗೂ ಅವರೆಲ್ಲಾ ತಮ್ಮ ಪಕ್ಷಕ್ಕೇ ಓಟು ಕೊಡಬೇಕು ಎಂದು ಎಲ್ಲಾ ಐನೂರರ ಹೊಸ ನೋಟುಗಳನ್ನು ಆ ರಾಜ್ಯಗಳಿಗೇ ಕೇಂದ್ರ ಸರಕಾರ ರವಾನಿಸಿದೆಯೆಂದು ಸುದ್ದಿಯಿದೆ.
ಒಟ್ಟಾರೆ ನೋಟು ರದ್ದತಿಯ ದುಷ್ಪರಿಣಾಮ ನಾವು ಇನ್ನೂ ಎಷ್ಟು ಕಾಲ ಅನುಭವಿಸಬೇಕೋ ಏನೋ !