ಅವಘಡಗಳು ಸಂಭವಿಸುವ ಮುನ್ನ ಎಚ್ಚೆತ್ತುಕೊಳ್ಳೋಣ
ಮಾರ್ಚ್ 4 ರಾಷ್ಟ್ರೀಯ ಸುರಕ್ಷತಾ ದಿನ
ಪ್ರತೀ ವರ್ಷ ದೇಶದಾದ್ಯಂತ ಮಾರ್ಚ್ 4ರಂದು ರಾಷ್ಟ್ರೀಯ ಸುರಕ್ಷತಾ ದಿನ ಎಂದು ರಾಷ್ಟ್ರೀಯ ಸುರಕ್ಷತಾ ಪರಿಷತ್ತು ಆಚರಿಸುತ್ತಿದೆ. ಜನ ಸಾಮಾನ್ಯರಲ್ಲಿ ರಾಷ್ಟ್ರೀಯ ಸಂಪನ್ಮೂಲ ಮತ್ತು ಮಾನವ ಸಂಪನ್ಮೂಲಗಳ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವ ಸದುದ್ದೇಶ ಈ ಆಚರಣೆ ಹೊಂದಿದೆ. ರಾಷ್ಟ್ರೀಯ ಸುರಕ್ಷತಾ ಪರಿಷತ್ತು ಎನ್ನುವುದು ಸ್ವಾಯತ್ತ ಸಂಸ್ಥೆಯಾಗಿದ್ದು, ಸ್ವಂತ ಹಣಕಾಸಿನ ಬಲದಿಂದ ಲಾಭದಾಯಕವಲ್ಲದ ಉನ್ನತ ಸಂಸ್ಥೆಯಾಗಿದ್ದು ಭಾರತ ಸರಕಾರದ ಉದ್ಯೋಗ ಮಂತ್ರಾಲಯದ ಅಧೀನಕ್ಕೆ ಒಳಪಟ್ಟಿದೆ.
1966ರ ಮಾರ್ಚ್ 4ರಂದು ರಾಷ್ಟ್ರೀಯ ಸಂಪನ್ಮೂಲ ಗಳ ಸುರಕ್ಷತೆ, ಆರೋಗ್ಯ ಮತ್ತು ಪರಿಸರದ ಬಗ್ಗೆ ರಾಷ್ಟೀಯ ಮಟ್ಟದಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಸಂಸ್ಥೆಯನ್ನು ಹುಟ್ಟು ಹಾಕಲಾಯಿತು. ಸೊಸೈಟಿ ಕಾಯ್ದೆಗಳ ಅಧೀನಕ್ಕೆ ಒಳಪಡುವ ಈ ಸಂಸ್ಥೆಯ ಕೇಂದ್ರ ಕಚೇರಿ ಮುಂಬೈಯಲ್ಲಿದ್ದು, ಕೈಗಾರಿಕಾ ಸಂಸ್ಥೆಗಳ ಬಗ್ಗೆ ಹೆಚ್ಚಿನ ಸುರಕ್ಷತೆ ಮತ್ತು ಭದ್ರತೆಯನ್ನು ಮೂಡಿಸುವ ಹೆಚ್ಚಿನ ಹೊಣೆಗಾರಿಕೆಯನ್ನು ಹೊಂದಿದೆ. ಜನರಲ್ಲಿ ರಾಷ್ಟ್ರೀಯ ಸಂಪನ್ಮೂಲಗಳ ಸುರಕ್ಷತೆ, ಕೈಗಾರಿಕೀಕರಣದಿಂದಾ ಗುವ ಆರೋಗ್ಯದ ಮೇಲಿನ ದುಷ್ಟರಿಣಾಮ ಮತ್ತು ಪರಿಸರದ ಮೇಲಾಗುವ ದೌರ್ಜನ್ಯದ ಬಗ್ಗೆ ಜಾಗೃತಿ ಮೂಡಿಸಿ, ಜನರ ಹೃದಯದಲ್ಲಿ ವೈಜ್ಞಾನಿಕ ಚಿಂತನೆ, ರೋಗ ತಡೆಗಟ್ಟುವ, ಮಾನಸಿಕ ಸ್ಥಿತಿ ಮತ್ತು ವಿಪತ್ತುಗಳನ್ನು ಎದುರಿಸುವಲ್ಲಿ ರಚನಾತ್ಮಕ ಮತ್ತು ಧನಾತ್ಮಕ ವಿಚಾರ ಚಿಂತನೆಗಳನ್ನು ಮೂಡಿಸುವ ಮೂಲ ಉದ್ದೇಶವನ್ನು ರಾಷ್ಟ್ರೀಯ ಸುರಕ್ಷತಾ ಪರಿಷತ್ತು ಹೊಂದಿದೆ. ಈ ನಿಟ್ಟಿನಲ್ಲಿ ಮಾರ್ಚ್ 6ರಿಂದ 10ರ ವರೆಗೆ ರಾಷ್ಟ್ರದಾದ್ಯಂತ ರಾಷ್ಟ್ರೀಯ ಸುರಕ್ಷತಾ ಸಪ್ತಾಹ ಎಂದು ಆಚರಿಸಲಾಗುತ್ತದೆ. ಹೇಗೆ ಆಚರಿಸಲಾಗುತ್ತದೆ?
ಸಾಮಾನ್ಯವಾಗಿ ಕೈಗಾರಿಕೆಗಳ ಮತ್ತು ಕಾರ್ಖಾನೆಗಳ ಸಾಂದ್ರತೆ ಜಾಸ್ತಿ ಇರುವ ಜಿಲ್ಲೆಗಳ ಕೇಂದ್ರ ಸ್ಥಾನಗಳಲ್ಲಿ ಸರಕಾರಿ ಮತ್ತು ಸರಕಾರೇತರ ಸಂಸ್ಥೆಗಳು ಒಂದುಗೂಡಿ, ಇತರ ಆರೋಗ್ಯ ಸಂಸ್ಥೆಗಳು, ಅಗ್ನಿಶಾಮಕದಳ, ಗೃಹರಕ್ಷಕದಳ, ಪೋಲಿಸ್ ಇಲಾಖೆ, ಅರಣ್ಯ ಇಲಾಖೆ, ಸಾರಿಗೆ ಇಲಾಖೆ ಮತ್ತು ಕೈಗಾರಿಕಾ ಸಂಘ ಸಂಸ್ಥೆಗಳೆಲ್ಲಾ ಒಟ್ಟು ಸೇರಿ ಈ ಆಚರಣೆಯನ್ನು ಮಾಡುತ್ತಿವೆ. ಜನರಲ್ಲಿ ಮತ್ತು ಸಾರ್ವಜನಿಕರಲ್ಲಿ ಕೈಗಾರಿಕಾ ಅವಘಡಗಳನ್ನು ತಡೆಯುವುದು ಹೇಗೆ ಮತ್ತು ಅವಘಡ ನಡೆದಾಗ ಮಾನವ ಸಂಪನ್ಮೂಲ, ಸಾರ್ವಜನಿಕ ಆಸ್ತಿಪಾಸ್ತಿಗಳ ನಾಶವನ್ನು ಯಾವ ರೀತಿ ಕಡಿಮೆ ಮಾಡುವುದು ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿ ಮತ್ತು ವಿಚಾರ ವಿನಿಮಯ ನಡೆಸ ಲಾಗುತ್ತದೆ. ಕೈಗಾರಿಕಾ ಸುರಕ್ಷತೆ ಬಗ್ಗೆ ವಿಚಾರ ಸಂಕಿರಣಗಳು, ವರ್ಕ್ಶಾಪ್ಗಳು, ಸಮ್ಮೇಳನಗಳು ಮತ್ತು ತರಬೇತಿ ಕಾರ್ಯಕ್ರಮಗಳನ್ನು ದೇಶದಾದ್ಯಂತ ಹಮ್ಮಿಕೊಂಡು, ಜನರಲ್ಲಿ ಹೆಚ್ಚಿನ ಕೈಗಾರಿಕಾ ದುರ್ಘಟನೆ ನಡೆದಾಗ ಯಾವ ರೀತಿ ವರ್ತಿಸಬೇಕು ಎಂಬುದರ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಅದೇ ರೀತಿ ಕೈಗಾರಿಕಾ ಕಾರ್ಖಾನೆಗಳ ಸಾಂದ್ರತೆ ಹೆಚ್ಚಿರುವ ಪ್ರದೇಶಗಳಲ್ಲಿ ಸುರಕ್ಷಿತ ಆಯವ್ಯಯಗಳ ಪಟ್ಟಿ ಮಾಡುವುದು, ಕೈಗಾರಿಕೆಗಳಿಂದಾಗುವ ದುರ್ಘಟನೆಗಳ ಮಾಪನ, ಅಪಘಾತಗಳ ಸಮಯದಲ್ಲಿ ಉಂಟಾಗುವ ಅಪಾಯಗಳು, ಪ್ರಮಾಣೀಕರಣ ಮತ್ತು ಕಡಿತಗೊಳಿಸುವ ಪ್ರಕ್ರಿಯೆಗಳ ಬಗೆಗಿನ ವಿಚಾರ ವಿನಿಮಯ ನಡೆಸಲಾಗುತ್ತದೆ.
ರಾಷ್ಟ್ರೀಯ ಅವಘಡಗಳನ್ನು ಭೌಗೋಳಿಕ (ನೆರೆಹಾವಳಿ, ಸೈಕ್ಲೋನ್, ಭೂಕಂಪ, ಭೂಕುಸಿತ) ಕೈಗಾರಿಕಾ ಅವಘಡ (ವಿಷಾನಿಲ ದುರಂತ, ಬೆಂಕಿ ಅವಘಡ ಅಥವಾ ಸ್ಫೋಟ, ತೈಲ ಸೋರಿಕೆ)ಜೈವಿಕ ಅವಘಡ (ಸಾಂಕ್ರಾಮಿಕ ರೋಗಗಳು, ಆಹಾರ ಕಲಬೆರಕೆ, ವಿಷಪೂರಿತ ಆಹಾರ ಸೇವನೆ) ಮತ್ತು ಇತರ ಅವಘಡಗಳು (ರೈಲು, ಬಸ್ಸು, ವಿಮಾನ ದುರಂತ, ಕಟ್ಟಡ ಕುಸಿತ, ಕಾಲ್ತುಳಿತ, ಬಾಂಬ್ ಅವಘಡ) ಎಂಬುದಾಗಿ 4 ರೀತಿಯಲ್ಲಿ ವಿಂಗಡಿಸಲಾಗಿದೆ. ಯಾವುದೇ ರೀತಿಯ ಅವಘಡಗಳು ದೇಶದ ಯಾವುದೇ ರಾಜ್ಯದ, ಯಾವುದೇ ಭಾಗದಲ್ಲಿ, ಯಾವಾಗಲೂ ಸಂಭವಿಸುವ ಸಾಧ್ಯತೆ ಇರುತ್ತದೆ. ಆದರೆ ಸೂಕ್ತ ರೀತಿಯ ಪರಾಮರ್ಶೆ ಮತ್ತು ಕೂಲಂಕಷ ಅಧ್ಯಯನ ಮಾಡಿ, ಸಾಕಷ್ಟು ಮುಂಜಾಗರೂಕತೆ ವಹಿಸಿದ್ದಲ್ಲಿ ಹೆಚ್ಚಿನ ಜೀವ ಹಾನಿ, ಆಸ್ತಿಪಾಸ್ತಿ ಹಾನಿ ಮತ್ತು ರಾಷ್ಟ್ರೀಯ ಸಂಪನ್ಮೂಲದ ಹಾನಿಯನ್ನು ಕಡಿಮೆ ಮಾಡಬಹುದು.
ದ.ಕ. ಜಿಲ್ಲೆಯಲ್ಲಿ ಕೂಡಾ ಕೈಗಾರಿಕಾ ಕಾರ್ಖಾನೆಗಳ ಸಾಂದ್ರತೆ ಹೆಚ್ಚಾಗಿರುವುದರಿಂದ ಕೈಗಾರಿಕೆ ಮತ್ತು ರಾಸಾಯನಿಕ ಅವಘಡಗಳ ಪಟ್ಟಿಯಲ್ಲಿ 10 ಅಏ (ಚ್ಜಟ್ಟ ಅ್ಚ್ಚಜಿಛ್ಞಿಠಿ ಏಚ್ಢಚ್ಟ) ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಸುಮಾರು 11 ಮುಖ್ಯವಾದ ತೈಲ ಸಂಸ್ಕರಣಾ ಮತ್ತು ಸಂಗ್ರಹ ಘಟಕಗಳಿದ್ದು, ಹಿಂದೂಸ್ಥಾನ್ ಪೆಟ್ರೋಲಿಯಂ, ಭಾರತ್ ಪೆಟ್ರೋಲಿಯಂ, ಇಂಡಿಯನ್ ಆಯಿಲ್, ಎಂಆರ್ಪಿಎಲ್, ಟೋಟಲ್ ಆಯಿಲ್, ಒಎನ್ಜಿಸಿ, ಎಂಸಿಎಫ್ಎಲ್, ಜೆಬಿಎಫ್ಎಫ್, ಪುತ್ತೂರು ಪೆಟ್ರೋ ಪ್ರಾಡಕ್ಟ್ಸ್ ಮುಂತಾದ ಬೃಹತ್ ಕಂಪೆನಿಗಳು ತಮ್ಮ ಘಟಕಗಳನ್ನು ಮಂಗಳೂರು ತಾಲೂಕಿನಲ್ಲಿ ಹೊಂದಿದೆ.
ಈ ಕಾರಣದಿಂದಾಗಿ ಹೆಚ್ಚಿನ ಜಾಗ್ರತೆ, ಮುತುವರ್ಜಿ ಮತ್ತು ಮುಂಜಾಗರೂಕತೆ ಅತೀ ಅಗತ್ಯ. ತೈಲ ಸೋರಿಕೆ, ವಿಷಾನಿಲ ಸೋರಿಕೆ ಮತ್ತು ಬೆಂಕಿ ಸ್ಫೋಟ ಮತ್ತು ಹೆಚ್ಚು ಬೇಗನೆ ಹೊತ್ತಿ ಉರಿಯುವ ತೈಲಗಳಿಂದಾಗಿ ಅವಘಡಗಳು ಸಾಧ್ಯತೆ ಹೆಚ್ಚಿರುತ್ತದೆ. ಅದೇ ರೀತಿ ಕ್ಲೋರಿನ್ ಮತ್ತು ಅಮೋನಿಯ ಸೋರಿಕೆ ಆಗುವ ಸಾಧ್ಯತೆಯೂ ಇದೆ. ಕ್ಲೋರಿನ್ ಅನಿಲವನ್ನು ಸಾಮಾನ್ಯವಾಗಿ ನೀರು ಶುದ್ಧೀಕರಿಸಲು ಮತ್ತು ಪರಿಷ್ಕರಿಸುವ ಕಾರ್ಖಾನೆಗಳಲ್ಲಿ ಹೆಚ್ಚು ಬಳಸಲಾಗುತ್ತದೆ. ಅದೇ ರೀತಿ ಅಮೋನಿಯ ಅನಿಲವನ್ನು ಮಂಗಳೂರು ಬಂದರಿನಲ್ಲಿ ಮತ್ತು ಎಂಸಿಎಫ್ನಲ್ಲಿ ಹೆಚ್ಚಾಗಿ ಸಂಗ್ರಹಣೆ ಮತ್ತು ಸಾಗಣೆಗಾಗಿ ವ್ಯವಹರಿಸಲಾಗುತ್ತದೆ. ಹಾಗೆಯೇ ಎಲ್ಪಿಜಿ ಅಥವಾ ದ್ರವ ಪೆಟ್ರೋಲಿಯಂ ಅನಿಲ ಹಾಗೂ ಔ ಪೆಟ್ರೋಲಿಯಂ ಆಯಿಲ್ ಉತ್ಪನ್ನಗಳನ್ನು ಹೆಚ್ಚಿನ ಆಮದು ಮಾಡಿಕೊಳ್ಳುವ ಸಂದರ್ಭದಲ್ಲಿ ನ್ಯೂ ಮಂಗಳೂರು ಪೋರ್ಟ್ ನಲ್ಲಿ ವ್ಯವಹರಿಸಲಾಗುತ್ತದೆ. ಅದೇ ರೀತಿ ಸಂಸ್ಕರಿಸುವ, ಪರಿಷ್ಕರಿಸಿ ಸಂಗ್ರಹಿಸುವ ವ್ಯವಸ್ಥೆಯೂ ಇರುವುದರಿಂದ ಸಾಕಷ್ಟು ಮುಂಜಾಗರೂಕತೆ ಮತ್ತು ವಿಪತ್ತು ನಿರ್ವಹಣೆ ಯೋಜನೆಯ ಅಗತ್ಯವಿರುತ್ತದೆ.
ಕೊನೆ ಮಾತು:
ವ್ಯೆಜ್ಞಾನಿಕತೆ, ತಂತ್ರಜ್ಞಾನ ಮತ್ತು ಆವಿಷ್ಕಾರಗಳು ಹುಟ್ಟಿಕೊಂಡಂತೆ, ಜೊತೆ ಜೊತೆಗೆ ಮನುಷ್ಯನ ಪ್ರಾಥಮಿಕ ಆವಶ್ಯಕತೆಗಳ ಹೊರತಾಗಿ, ಇನ್ನಿತರ ಭೋಗ ಭಾಗ್ಯಗಳ ಪಟ್ಟಿ ಬೆಳೆಯುತ್ತಲೇ ಇದೆ. ಹಾಗಾಗಿ ಔದ್ಯೋಗಿಕರಣ, ಕೈಗಾರಿಕರಣ, ವ್ಯಾಪಾರೀಕರಣ ಎಲ್ಲವೂ ಜೊತೆ ಜೊತೆಯಾಗಿಯೇ ಧಾವಂತದಲ್ಲಿ ಮುನ್ನಗ್ಗುತ್ತಲಿದೆ. ಇದರ ಜೊತೆಗೆ ಹಲವಾರು ಅಡ್ಡ ಪರಿಣಾಮಗಳು, ತೊಂದರೆಗಳು ಮತ್ತು ಸಂಕಷ್ಟಗಳು ಬರತೊಡಗಿದೆ. ಜನರ ಆಸೆ ಅಕಾಂಕ್ಷೆಗಳಿಗೆ ಹೇಗೆ ಇತಿಮಿತಿ ಇಲ್ಲವೋ, ಹಾಗೆಯೇ ಕೈಗಾರಿಕರಣ ಮತ್ತು ಔದ್ಯೋಗಿಕ ಕ್ರಾಂತಿಯಿಂದ ಹಲವಾರು ಮನುಷ್ಯ ನಿರ್ಮಿತ ಅವಘಡಗಳ ಸಾಧ್ಯತೆಯನ್ನು, ಮನುಷ್ಯ ತನ್ನ ಸುತ್ತಲಿನ ವಾತಾವರಣದಲ್ಲಿ ಬೆಳಸಿಕೊಂಡಿದ್ದಾನೆ. ಈ ಕಾಲಘಟ್ಟದಲ್ಲಿ ಅವಘಡಗಳು ಆಗುವುದು ಸಾಮಾನ್ಯ. ಆದರೆ ಈ ಅವಘಡಗಳನ್ನು ಹೇಗೆ ಪರಿಣಾಮಕಾರಿಯಾಗಿ ತಡೆಗಟ್ಟಬಹುದು ಮತ್ತು ಸುರಕ್ಷಿತವಾಗಿ ನಿಯಂತ್ರಿಸಬಹುದು ಎಂಬುದರ ಬಗ್ಗೆ ಪ್ರತಿಯೊಬ್ಬ ನಾಗರಿಕನೂ ಚಿಂತಿಸಬೇಕಾದ ಅನಿವಾರ್ಯತೆ ಖಂಡಿತವಾಗಿಯೂ ಇದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಪ್ರಜೆಯು ತನ್ನ ಸಾಮಾಜಿಕ ಹೊಣೆಗಾರಿಕೆಯನ್ನು ಅರಿತು ನಿಭಾಯಿಸಿದ್ದಲ್ಲಿ ಈ ರೀತಿಯ ಮಾನವ ನಿರ್ಮಿತ ಅವಘಡಗಳನ್ನು ಹತೋಟಿಯಲ್ಲಿಡಲು ಸಾಧ್ಯವಾಗಬಹುದು. ಈ ಕಾರಣದಿಂದಲೇ ರಾಷ್ಟ್ರೀಯ ಸುರಕ್ಷತಾ ಪರಿಷತ್ತು ಇದರ ವತಿಯಿಂದ ನಡೆಯುವ ರಾಷ್ಟ್ರೀಯ ಸುರಕ್ಷತಾ ದಿನ ಮತ್ತು ಸಪ್ತಾಹಕ್ಕೆ ಹೆಚ್ಚಿನ ಮಹತ್ವ ಬಂದಿದೆ ಎಂದರೂ ಅತಿಶಯೋಕ್ತಿಯಲ್ಲ. ಈ ಆಚರಣೆಯನ್ನು ನಾವೆಲ್ಲರೂ ಅರ್ಥಪೂರ್ಣವಾಗಿ ಆಚರಿಸೋಣ ಮತ್ತು ನಾವು ನಮ್ಮ ಸಾಮಾಜಿಕ ಜವಾಬ್ದಾರಿಗಳನ್ನು ಸೂಕ್ತ ರೀತಿಯಲ್ಲಿ ಸಕಾಲದಲ್ಲಿ ನಿಭಾಯಿಸೋಣ. ಇದರಲ್ಲಿಯೇ ನಮ್ಮ ಸಮಾಜದ ಮತ್ತು ಮನುಕುಲದ ಉನ್ನತಿ ಅಡಗಿದೆ.