ಚಿಕ್ಕಮಗಳೂರಿನ ಉತ್ತಿಷ್ಠ ಭಾರತ ಪ್ರತಿಷ್ಠಾನದ ಯುವಕರ ಸಾಧನೆ
ಚಿಕ್ಕಮಗಳೂರು, ಮೇ 25: ಪ್ರತಿನಿತ್ಯ ಸುತ್ತಮುತ್ತಲ ಪರಿಸರದಲ್ಲಿ ಒಂದಿಲ್ಲೊಂದು ಕಾರಣಗಳಿಗೆ ಮರಗಳ ಮಾರಣಹೋಮ ನಡೆಯುತ್ತಿದೆ. ಮರ ಕಡಿಯುವವರು ಸಾವಿರಾರು ಮಂದಿ ಇದ್ದರೂ ಗಿಡನೆಟ್ಟು ಬೆಳೆಸುವ ಮಂದಿ ಮಾತ್ರ ಬೆರಳೆಣಿಕೆಯಷ್ಟಿದ್ದಾರೆ. ಇಂತಹ ಹೊತ್ತಿನಲ್ಲಿ ಯುವ ಪಡೆಯೊಂದು ಪ್ರಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಗಿಡ ನೆಡಲು ಹೊಸ ಯೋಜನೆಯೊಂದನ್ನು ರೂಪಿಸಿದೆ.
ಚಿಕ್ಕಮಗಳೂರಿನ ಉತ್ತಿಷ್ಠ ಭಾರತ ಪ್ರತಿಷ್ಠಾನ ಎಂಬ ಹೆಸರಿನಲ್ಲಿ ಯುವಕರ ತಂಡ ಗಿಡಗಳನ್ನು ನೆಡಲು ‘ಸೀಡ್ಬಾಲ್’ ಎಂಬ ಹೊಸ ಯೋಜನೆ ರೂಪಿಸಿದೆ. ಈ ಯೋಜನೆಯಲ್ಲಿ ಮಣ್ಣು ಮತ್ತು ಸಗಣಿ ಮಿಶ್ರಿತ ಉಂಡೆಯಲ್ಲಿ ಬೆಟ್ಟದ ನೆಲ್ಲಿಕಾಯಿ, ಚಿಗರೆ, ಹೆಬ್ಬೇವು, ಬೇವು, ನೇರಳೆ ಹೀಗೆ ಅನೇಕ ಮರಗಳ ಬೀಜಗಳನ್ನು ಇಟ್ಟು ಅವುಗಳನ್ನು ಒಣಗಿಸಿ ಇಡಲಾಗುತ್ತದೆ. ನಂತರ ಮಳೆ ಬೀಳುವ ವೇಳೆ ಅಂದರೆ ಜೂನ್ ಅಥವಾ ಜುಲೈ ತಿಂಗಳಲ್ಲಿ ಮರಗಳು ಇಲ್ಲದ ಪ್ರದೇಶ ಹಾಗೂ ಕಡಿಮೆ ಮರಗಳಿರುವ ಪ್ರದೇಶದಲ್ಲಿ ಅವು ಗಳನ್ನು ಇಡಲಾಗುತ್ತದೆ. ನಂತರ ಆ ಬೀಜಗಳು ಅಲ್ಲಿ ಮೊಳಕೆಯೊಡೆದು ಬೆಳೆಯುತ್ತವೆ. ಈ ಮೂಲಕ ಗಿಡ ಬೆಳೆಸಲು ಹೊಸ ಯೋಜನೆ ರೂಪಿಸಲಾಗಿದೆ.
ಈಗಾಗಲೇ ಈ ತಂಡ ಕಳೆದ ವರ್ಷ ಈ ರೀತಿಯ 3 ಲಕ್ಷ ಸೀಡ್ಬಾಲ್ಗಳನ್ನು ತಯಾರಿಸಿ ಅವುಗಳನ್ನು ಪ್ರಕೃತಿಗೆ ಸೇರಿಸಿದೆ. ಈ ಬಾರಿ ಸುಮಾರು 3 ಕೋಟಿ ಸೀಡ್ಬಾಲ್ ತಯಾರಿಸುವ ಉದ್ದೇಶ ಹೊಂದಿದ್ದು, ಈಗಾಗಲೇ ಒಂದು ಕೋಟಿ ಸೀಡ್ಬಾಲ್ಗಳನ್ನು ತಯಾರಿಸಲಾಗಿದೆ. ಇನ್ನುಳಿದಂತೆ ಇನ್ನು 2 ಕೋಟಿ ಬೀಜದುಂಡೆ ತಯಾರಾದ ಬಳಿಕ ವಿಶ್ವ ಪರಿಸರ ದಿನದಂದು ಈ ಸೀಡ್ಬಾಲ್ಗಳನ್ನು ಪ್ರಕೃತಿ ಮಡಿಲಿಗೆ ಹಾಕಲಾಗುತ್ತದೆ. ಈಗಾಗಲೇ ಚಿಕ್ಕಮಗಳೂರಿನ ಹಲವು ಕಡೆ ಯುವಕರು ಈ ಸೀಡ್ಬಾಲ್ ತಯಾರು ಮಾಡುತ್ತಿದ್ದಾರೆ.
ವರ್ಷದಿಂದ ವರ್ಷಕ್ಕೆ ಮಲೆನಾಡು ಎಂದು ಖ್ಯಾತಿ ಪಡೆದ ಚಿಕ್ಕಮಗಳೂರಿನಲ್ಲಿಯೂ ಮರಗಳ ಸಂಖ್ಯೆ ಕಡಿಮೆಯಾಗುವ ಜೊತೆಗೆ ಬರದ ಛಾಯೆ ಆವರಿಸುತ್ತಿದೆ. ಇಂತಹ ಹೊತ್ತಿನಲ್ಲಿ ನೈಜ ಮಲೆನಾಡು ಪ್ರಯತ್ನಕ್ಕೆ ಕೈಹಾಕಿರುವ ಈ ಯುವಕರ ಹೊಸ ಮಾದರಿ ನಿಜಕ್ಕೂ ಪ್ರಶಂಸನೀಯ. ‘ಯೋಜನೆ ಯಶಸ್ವಿಯಾಗಲಿ ಮತ್ತಷ್ಟು ಮರಗಳು ಮಲೆನಾಡಲ್ಲಿ ಸೃಷ್ಟಿಯಾಗಲಿ’ ಎನ್ನುವುದು ಮಲೆನಾಡಿನ ಜನರ ಆಶಯ.
ಚಿಕ್ಕಮಗಳೂರಿನ ಅರೆಮಲೆನಾಡು ಭಾಗವಾದ ಲಕ್ಯಾ, ಬೆಳವಾಡಿ ಸೇರಿದಂತೆ ಕಾಡಿನಲ್ಲಿಯೂ ಸಹ ಈ ಬೀಜ ಗಳನ್ನು ಬಿತ್ತುತ್ತಿದ್ದೇವೆ. ಮೂರು ಕೋಟಿ ಬೀಜದಲ್ಲಿ ಅರ್ಧದಷ್ಟಾದರೂ ಸೀಡ್ಬಾಲ್ಗಳು ಮೊಳಕೆಯೊಡೆದು ಗಿಡಗಳಾಗಿ ಬೆಳೆದು ಮರ ವಾದರೆ ಪ್ರಕೃತಿಗೆ ಸಾಕಷ್ಟು ಅನುಕೂಲ ಆಗುತ್ತದೆ. ಜೊತೆಗೆ ನಮ್ಮ ಪ್ರಯತ್ನ ಸಾರ್ಥಕವಾಗುತ್ತದೆ.
ಕಾರ್ತಿಕ್,ಉತ್ತಿಷ್ಠ ಭಾರತ ಪ್ರತಿಷ್ಠಾನದ ಸದಸ್ಯ