ಉಪವಾಸದ ಕೆಲವು ಆಯಾಮಗಳು ಮತ್ತು ಪ್ರಯೋಜನಗಳು
ಉಪವಾಸದಿಂದಾಗಿ ದೇಹದ ತೂಕ ಕಡಿಮೆಯಾಯಿತೆಂದು ಯಾರೂ ಚಿಂತಿಸಬೇಕಾದ ಅಗತ್ಯವಿಲ್ಲ. ಸ್ವಲ್ಪತೂಕ ಕರಗಿದರೆ ದೇಹಕ್ಕೇನೂ ಹಾನಿಯಾಗದು. ಒಬ್ಬಾತ ಉಪವಾಸ ವ್ರತ ಅನುಷ್ಠಾನಿಸಿಯೂ ಆತನ ದೇಹದ ತೂಕ ಏರುತ್ತದಾದರೆ ಆತ ತನ್ನ ಹೊಟ್ಟೆಯನ್ನು ತೊಟ್ಟಿಯನ್ನಾಗಿಸಿದ್ದಾನೆ ಎಂದೇ ಅರ್ಥ. ಉಪವಾಸದಿಂದ ದೊರಕುವ ವೈಜ್ಞಾನಿಕ ಲಾಭ ಲಭ್ಯವಾಗಬೇಕಾದರೆ ನಾವು ತಿನ್ನುವ ಆಹಾರದ ಮೇಲೆ ನಮಗೆ ನಿಯಂತ್ರಣವಿರಬೇಕು.
ರಮಝಾನ್ ವ್ರತ ಅನುಷ್ಠಾನ ಮಾಡುವ ಹೆಚ್ಚಿನೆಲ್ಲರಿಗೆ ರಮಝಾನ್ ಉಪವಾಸ ಎಂದರೆ ಒಂದು ಶ್ರೇಷ್ಠ ಆರಾಧನೆಯೆಂದು ಮಾತ್ರ ತಿಳಿದಿದೆ. ಉಪವಾಸ ವ್ರತದ ಹಿಂದೆ ತಾತ್ವಿಕವಾದ, ಸಾಮಾಜಿಕವಾದ ಮತ್ತು ವೈಜ್ಞಾನಿಕವಾದ ಹಲವಾರು ವಿಚಾರಗಳಿವೆ ಎಂಬ ಸತ್ಯ ಅನೇಕರಿಗೆ ತಿಳಿದಿರಲಿಕ್ಕಿಲ್ಲ. ಒಂದು ಆರಾಧನೆಯ ನೆಪದಲ್ಲಿ ಒಂದು ಸಮೂಹವನ್ನು ಹಸಿವಿನಲ್ಲಿ ಕೂರಿಸಿ ಸೃಷ್ಟಿಕರ್ತನಿಗೆ ಆಗಬೇಕಾದುದೇನೂ ಇಲ್ಲ. ಉಪವಾಸದ ಮುಖಾಂತರ ಸೃಷ್ಟಿಕರ್ತನು ನಮಗೆ ಹಲವು ಪಾಠಗಳನ್ನು ಕಲಿಸುತ್ತಾನೆ. ಈ ನಿಟ್ಟಿನಲ್ಲಿ ಉಪವಾಸದ ತಾತ್ವಿಕ, ಸಾಮಾಜಿಕ, ವೈಜ್ಞಾನಿಕ ಆಯಾಮಗಳ ಮೇಲೆ ಒಂದು ಕಿರು ವಿಶ್ಲೇಷಣೆ.
ಸಾಮಾಜಿಕ ಆಯಾಮ:
ಎಲ್ಲಾ ಧರ್ಮಗಳಲ್ಲೂ ಹಸಿದವನ ಹಸಿವು ತಣಿಸುವುದು ಒಂದು ಪುಣ್ಯದ ಕೆಲಸ. ಆದರೆ ಒಬ್ಬ ಮುಸ್ಲಿಮನಿಗೆ ಹಸಿದವನ ಹಸಿವು ತಣಿಸುವುದು ಆತನ ಧಾರ್ಮಿಕ ಬಾಧ್ಯತೆಯಾಗಿರುತ್ತದೆ. ನಾವೆಲ್ಲ ಕೇಳಿರುವ ಒಂದು ಅತ್ಯಂತ ಜನಪ್ರಿಯ ಪ್ರವಾದಿ(ಸ) ವಚನ ‘‘ನೆರೆಮನೆಯವನು ಹಸಿದಿರುವಾಗ ಹೊಟ್ಟೆ ತುಂಬಾ ಉನ್ನುವವನು ನನ್ನ ಅನುಯಾಯಿಯಲ್ಲ’’. ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ ಪ್ರವಾದಿ(ಸ) ‘ನೆರೆಮನೆಯವನು’ ಎಂದಿದ್ದಾರೆಯೇ ಹೊರತು ಧರ್ಮದ ಉಲ್ಲೇಖ ಮಾಡಿಲ್ಲ. ಹಸಿದವನು ಎಂದ ಮೇಲೆ ಆತನ ಹಸಿವು ಮುಖ್ಯವೇ ಹೊರತು ಧರ್ಮವಲ್ಲ. ಹಸಿವಿಗೆ ಧರ್ಮವಿಲ್ಲ. ಈ ನಿಯಮ ಕೇವಲ ಮನುಷ್ಯನಿಗೆ ಮಾತ್ರ ಅನ್ವಯಿಸುವುದಿಲ್ಲ. ಇನ್ನೊಂದು ಪ್ರವಾದಿ(ಸ) ವಚನ ಹೀಗಿದೆ. ‘‘ನೀವು ಭೂಮಿಯಲ್ಲಿರುವವರ ಮೇಲೆ ಕರುಣೆ ತೋರಿರಿ. ಆಗಸದಲ್ಲಿರುವವನು ನಿಮ್ಮ ಮೇಲೆ ಕರುಣೆ ತೋರುವನು’’. ಇದರ ಒಂದು ಅರ್ಥ ‘‘ಯಾವುದೇ ಜೀವಿಯು ಹಸಿದಿದ್ದರೆ ಅದರ ಹಸಿವು ತಣಿಸುವುದು ಸಾಮರ್ಥ್ಯವಿರುವ ಪ್ರತಿಯೋರ್ವ ಮುಸ್ಲಿಮನಿಗೂ ಕಡ್ಡಾಯವಾಗಿದೆ’’.
ಉಪವಾಸ ವ್ರತ ಅನುಷ್ಠಾನಿಸುವ ಮೂಲಕ ಹಸಿವು ಮತ್ತು ದಾಹವನ್ನು ಸ್ವಯಂ ಅನುಭವಿಸಿ, ಹಸಿವಿನ ಕಾಠಿಣ್ಯತೆ ಅರಿತು ಸಮಾಜದ ಬಡಬಗ್ಗರ ಹಸಿವು ನೀಗಿಸಲು ಬಾಧ್ಯತೆಯನ್ನು ರಮಝಾನ್ ಕಲಿಸುತ್ತದೆ. ಇದನ್ನು ಅರ್ಥೈಸದೆ ಹಸಿವಿನಲ್ಲಿ ಕೂರುವುದರಿಂದ ಪ್ರಯೋಜನವಿಲ್ಲ. ಪವಿತ್ರ ಕುರ್ಆನ್ನಲ್ಲಿ ಅಲ್ಲಾಹನು ಬೋಧಿಸುತ್ತಾನೆ ‘‘ಉಪವಾಸದ ಮುಖಾಂತರ ನೀವು ನಿಮ್ಮ ಹೃದಯವನ್ನು ಶುದ್ಧೀಕರಿಸಿ’’. ಸಮಾಜದ ನೊಂದವರ ನೋವಿಗೆ ಸ್ಪಂದಿಸುವುದು ಹೃದಯ ಶುದ್ಧೀಕರಣದ ಪ್ರಮುಖ ಅಂಗವಾಗಿದೆ.
ತಾತ್ವಿಕ ಆಯಾಮ:
ಜಗತ್ತಿನಲ್ಲಿ ಹಸಿವಿಗಿಂತ ಮಿಗಿಲಾದ ಫಿಲಾಸಫಿ ಇನ್ನೊಂದಿಲ್ಲ. ಹಸಿವಿನ ಕಾಠಿಣ್ಯ ಅರಿಯಬೇಕೆಂದರೆ ಹಸಿವನ್ನು ಸ್ವಯಂ ಅನುಭವಿಸಬೇಕು. ಹಸಿವಿನ ಬಗ್ಗೆ ಬರೆಯಲು, ಭಾಷಣ ಮಾಡಲು ಸುಲಭ. ಅದನ್ನು ಅನುಭವಿಸದೆ ಅರ್ಥೈಸುವುದು ಸುಲಭವಲ್ಲ. ಅನುಭವಕ್ಕಿಂತ ಮಿಗಿಲಾದ ಗುರುವಿಲ್ಲ. ಪವಿತ್ರ ಕುರ್ಆನ್ನಲ್ಲಿ ಹಲವೆಡೆ ‘ಚಿಂತಿಸುವವನಿಗೆ ದೃಷ್ಟಾಂತವಿದೆ’ ಎಂದು ಬೋಧಿಸಲಾಗಿದೆ. ಯಾವುದೇ ಒಂದು ವಿಚಾರದ ಬಗ್ಗೆ ಚಿಂತನೆ ನಡೆಸಬೇಕೆಂದರೆ ಅದನ್ನು ಅರಿಯಬೇಕು. ಕೇಳಿ ಅರಿಯುವುದರಿಂದ ಅನುಭವಿಸಿ ಅರಿಯುವುದರಲ್ಲಿ ಒಳ್ಳೆಯ ಪಾಠ ಸಿಗುತ್ತದೆ. ಉಪವಾಸದ ಈ ತಾತ್ವಿಕ ಆಯಾಮವನ್ನು ಅರ್ಥೈಸಿದರೆ ಮಾತ್ರ ಸಾಮಾಜಿಕ ಆಯಾಮವನ್ನು ಅರ್ಥೈಸಲು ಸಾಧ್ಯ. ಇವೆರಡೂ ಒಂದಕ್ಕೊಂದು ಅಂತರ್ಸಂಬಂಧವಿರುವಂತಹವುಗಳು.
ಕನ್ನಡದ ಪ್ರಸಿದ್ಧ ಕತೆಗಾರ ಫಕೀರ್ ಮುಹಮ್ಮದ್ ಕಟ್ಪಾಡಿಯವರ ‘ನೋಂಬು’ (ಉಪವಾಸ) ಮತ್ತು ಬಿ.ಎಂ. ಬಶೀರ್ ಅವರ ‘ಚಿಕ್ಕಿಯ ಬೆಳಗಿನ ತಿಂಡಿ’ ಕತೆಗಳಲ್ಲಿ ಹಸಿವು ಎಂದರೇನೆಂದು ಕಥಾ ಪಾತ್ರಗಳ ಮೂಲಕ ನಿರೂಪಿಸಿದ್ದಾರೆ. ಬಿ.ಎಂ. ಬಶೀರ್ ಅವರ ಕತೆಯಲ್ಲಿ ಬರುವ ಎರಡು ಪಾತ್ರಗಳು ಚಿಕ್ಕಿ ಮತ್ತು ಪಿಂಕಿ. ಶ್ರೀಮಂತರ ಮನೆಯ ಹುಡುಗಿ ಪಿಂಕಿ ಬಡವರ ಹುಡುಗಿ ಚಿಕ್ಕಿಯಲ್ಲಿ ಕೇಳುತ್ತಾಳೆ. ಇವತ್ತು ಬೆಳಗ್ಗೆ ನಿಮಗೆ ಏನು ತಿಂಡಿ? ಚಿಕ್ಕಿಯ ಉತ್ತರ ಉಪವಾಸ....! ಉಪವಾಸ ಎಂದರೆ ಒಂದು ತಿಂಡಿ ಎಂದೇ ಬಗೆಯುವ ಪಿಂಕಿ ತನ್ನ ತಾಯಿಯಲ್ಲಿ ನನಗೂ ‘ಉಪವಾಸ’ ಎಂಬ ತಿಂಡಿ ಮಾಡಿಕೊಡು ಎಂದು ರಚ್ಚೆ ಹಿಡಿಯುತ್ತಾಳೆ. ಕಟ್ಪಾಡಿಯವರ ‘ನೋಂಬು’ ಕತೆಯಲ್ಲಿ ಬಡ ತಾಯಿ ತನ್ನ ಮಗ ಅದ್ದುವಿನಲ್ಲಿ ಕೇಳುತ್ತ್ತಾಳೆ ‘‘ಹೇಗಾಯ್ತು ಮಗಾ ನೋಂಬು?’’ ‘‘ಅರೆ ನೋಂಬಂದ್ರೆ ಇದೇ ಏನಮ್ಮಾ....? ಹೀಗೆ ನಾವು ತುಂಬಾ ಸಲ ಇದ್ದೆವಲ್ಲಾ.....! ಆ ದಿನ ನೋಡು, ಅಪ್ಪ ಆಸ್ಪತ್ರೆಯಲ್ಲಿದ್ದಾಗ ನೀನು ಬೀಡಿ ಕಟ್ಟದ ದಿನ.... ಅನ್ನ ಮಾಡದೆ, ಹೀಗೆಯೇ ನೋಂಬಿನಂತೆಯೇ ಇತ್ತಲ್ಲಾ....?’’
ಇದಾಗಿದೆ ಹಸಿವನ್ನು ಅನುಭವಿಸಿದವನಿಗೂ, ಅನುಭವಿಸದವನಿಗೂ ಇರುವ ವ್ಯತ್ಯಾಸ. ಉಪವಾಸ ವ್ರತದ ಈ ತಾತ್ವಿಕ ಆಯಾಮವನ್ನು ಅರ್ಥೈಸಿದವನಿಗೆ ಸಾಮಾಜಿಕ ಆಯಾಮದ ಅರಿವಾಗುತ್ತದೆ.
ವೈಜ್ಞಾನಿಕ ಆಯಾಮ:
ಪ್ರವಾದಿ(ಸ)ರ ಒಂದು ವಚನ ಹೀಗಿದೆ. ‘‘ಮನುಷ್ಯನಿಗೆ ಆತನ ಹೊಟ್ಟೆಗಿಂತ ಕೆಟ್ಟ ಪಾತ್ರೆ ಇನ್ನೊಂದಿಲ್ಲ’’. ತಿಬ್ಬುನ್ನಬವಿ ಎಂಬುದು ಪ್ರವಾದಿ(ಸ)ರ ಚಿಕಿತ್ಸಾ ಪದ್ಧತಿ. ಅದರಲ್ಲಿ ನಮಗೆ ಆರೋಗ್ಯಕ್ಕೆ ಸಂಬಂಧಿಸಿದ ಅಸಂಖ್ಯಾತ ಪಾಠಗಳಿವೆ. ಅದರಲ್ಲಿ ಒಂದೆಡೆ ಪ್ರವಾದಿಯವರು ಹೀಗಂದಿದ್ದಾರೆ: ‘‘ನಿಮ್ಮ ಹೊಟ್ಟೆಯನ್ನು ಮೂರು ಭಾಗ ಮಾಡಿ. ಒಂದು ಭಾಗ ಆಹಾರಕ್ಕೆ, ಎರಡನೆ ಭಾಗ ನೀರಿಗೆ ಮತ್ತು ಮೂರನೆ ಭಾಗವನ್ನು ಗಾಳಿಗೆ ಮೀಸಲಿಡಿ.’’
ನಾವಿಂದು ಏನು ಮಾಡ್ತಿದ್ದೇವೆ.....? ನಮ್ಮ ಹೊಟ್ಟೆಯನ್ನು ಆಹಾರ ತುಂಬಿಸುವ ತೊಟ್ಟಿಯಾಗಿಸಿದ್ದೇವೆ. ಗಾಳಿಗೆ ಬಿಡಿ, ನೀರಿಗೂ ಜಾಗ ಬಿಡದೆ ಆಹಾರ ತುಂಬಿಸುತ್ತೇವೆ. ನಮ್ಮ ಬಹುತೇಕ ರೋಗ ರುಜಿನಗಳಿಗೆ ಬಹುದೊಡ್ಡ ಕಾರಣ ನಮ್ಮ ಹೊಟ್ಟೆ. ಉಪವಾಸದ ವೈಜ್ಞಾನಿಕ ಆಯಾಮವನ್ನು ಅರ್ಥೈಸಿದವನು ತನ್ನ ಹೊಟ್ಟೆಯನ್ನು ತೊಟ್ಟಿಯಾಗಿಸಲಾರ. ನಾವೆಲ್ಲಾ ಬೆಳಗ್ಗಿನಿಂದ ಸಂಜೆಯವರೆಗೆ ದುಡಿಯುತ್ತೇವೆ. ದುಡಿದು ಸುಸ್ತಾದ ದೇಹಕ್ಕೆ ವಿಶ್ರಾಂತಿಯ ಅಗತ್ಯವಿರುತ್ತದೆ. ಅದಕ್ಕಾಗಿ ನಾವು ರಾತ್ರಿ ನಿದ್ರೆ ಮಾಡಿ ವಿಶ್ರಾಂತಿ ಪಡೆದುಕೊಳ್ಳುತ್ತೇವೆ. ಮನುಷ್ಯನಲ್ಲಿ ಶಕ್ತಿ ಉತ್ಪಾದನೆಗೆ ಆಹಾರದಷ್ಟೇ ನಿದ್ರೆಯೂ ಆವಶ್ಯಕ. ಒಂದು ರಾತ್ರಿಯ ನಿದ್ರೆಯ ಬಳಿಕ ನಮಗೆ ಮರುದಿನ ದುಡಿಯಲು ಬೇಕಾದ ಶಕ್ತಿ ಸಿಗುತ್ತದೆ. ಒಂದು ವೇಳೆ ಒಂದಿಡೀ ರಾತ್ರಿ ನಿದ್ರೆಗೆಟ್ಟರೆ ನಮಗೆ ಮರುದಿನ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಅಂತೆಯೇ ಒಂದು ನಿರ್ಜೀವ ಯಂತ್ರವೂ ಕೂಡಾ. ಯಾವುದಾದರೊಂದು ಯಂತ್ರವನ್ನು 24X7 ಕೆಲಸ ಮಾಡಿಸಲು ಸಾಧ್ಯವೇ? ಅದಕ್ಕೂ ಒಂದಿಷ್ಟು ವಿಶ್ರಾಂತಿ ಕೊಟ್ಟರೆ ಮಾತ್ರ ಅದೂ ಕೂಡಾ ಸರಾಗವಾಗಿ ಕೆಲಸ ಮಾಡಬಲ್ಲುದು.
ತಡೆರಹಿತವಾಗಿ ಮಿತಿಗಿಂತ ಹೆಚ್ಚು ಕೆಲಸ ಮಾಡಿದರೆ ಯಂತ್ರಗಳೂ ಕೆಡುತ್ತವೆ. ಅಂತೆಯೇ ನಮ್ಮ ದೇಹದ ಕೆಲವು ಅಂಗಗಳಿಗೆ ಯಾವತ್ತಾದರೂ ಸ್ವಲ್ಪವಿಶ್ರಾಂತಿ ಬೇಕಾಗುತ್ತದೆ. ಉಪವಾಸ ಕಾಲ ಅದಕ್ಕೆ ಸೂಕ್ತ ಸಮಯ. ಹೃದಯ, ಮೂತ್ರಪಿಂಡ, ಶ್ವಾಸಕೋಶ ಮುಂತಾದ ಅಂಗಾಂಗಗಳು ಒಂದು ಸೆಕೆಂಡೂ ಕೆಲಸ ನಿಲ್ಲಿಸುವಂತಿಲ್ಲ. ಆದರೆ ಮೇದೋಜ್ಜೀರಕ ಗ್ರಂಥಿ, ಜೀರ್ಣಾಂಗಗಳಿಗೆ ಸ್ವಲ್ಪವಿಶ್ರಾಂತಿಯ ಅಗತ್ಯವಿರುತ್ತದೆ. ಉಪವಾಸ ಕಾಲದಲ್ಲಿ ಬೆಳಗ್ಗಿನಿಂದ ಸಂಜೆ ತನಕ ಏನನ್ನೂ ತಿನ್ನದೆ, ಕುಡಿಯದೆ ಇರುವುದರಿಂದ ಹೊಟ್ಟೆ ಖಾಲಿಯಾದ ಬಳಿಕ ಅವುಗಳಿಗೆ ಸ್ವಲ್ಪವಿಶ್ರಾಂತಿ ದೊರಕುತ್ತದೆ. ಹೀಗೆ ಯಾವತ್ತಾದರೊಮ್ಮೆ ವಿಶ್ರಾಂತಿ ಸಿಕ್ಕರೆ ಅವು ಕೂಡಾ ರಿಫ್ರೆಶ್ ಆಗುತ್ತವೆ. ಅವುಗಳಿಗೆ ಕಾರ್ಯನಿರ್ವಹಿಸಲು ಚೈತನ್ಯ ಸಿಗುತ್ತದೆ. ಆದರೆ ನಾವೇನು ಮಾಡುತ್ತಿದ್ದೇವೆ.....?
ಬೆಳಗ್ಗಿನಿಂದ ಸಂಜೆಯವರೆಗೆ ಕೊಟ್ಟ ವಿಶ್ರಾಂತಿಗೆ ಪ್ರತೀಕಾರವೆಂಬಂತೆ, ಜಿದ್ದಿಗೆ ಬಿದ್ದವರಂತೆ ಉಪವಾಸ ತೊರೆದ ಕೂಡಲೇ ಹೊಟ್ಟೆ ಬಿರಿಯುವಂತೆ ತಿನ್ನುತ್ತೇವೆ. ನೀರು ಅಥವಾ ಹಣ್ಣಿನ ರಸದಿಂದ ಉಪವಾಸ ತೊರೆದ ಕೂಡಲೇ ಎಣ್ಣೆಯಲ್ಲಿ ಕರಿದ ತಿಂಡಿಗಳನ್ನು ಹೊಟ್ಟೆಗೆ ತುಂಬಿಸುತ್ತೇವೆ. ಇದರಿಂದ ‘ಎಲ್ಲಾ ಬಣ್ಣ ಮಸಿ ನುಂಗಿತು’ ಎಂಬ ನಾಣ್ಣುಡಿಯಂತೆ ಆಗುತ್ತದೆ. ನಾವು ವಿಶ್ರಾಂತಿ ನೀಡಿದ ಅಂಗಾಂಗಗಳಿಗೆ ಒಂದೇ ಏಟಿಗೆ ಹೊರಲಾರ ದಷ್ಟು ಕೆಲಸ ಸಿಗುತ್ತದೆ. ಮಧುಮೇಹಿಗಳ ಸಕ್ಕರೆ ಅಂಶ, ಗ್ಯಾಸ್ಟ್ರಬಲ್ ಇರುವವರ ಸಮಸ್ಯೆ, ಕೊಲೆಸ್ಟ್ರಾಲ್ ಸಮಸ್ಯೆ ಇರುವವರ ಕೊಬ್ಬು ಒಂದೇ ಸಮನೆ ಏರುತ್ತದೆ. ಇನ್ಸುಲಿನನ್ನು ಸ್ವಾಭಾವಿಕವಾಗಿ ದೇಹದೊಳಗೆ ಉತ್ಪಾದಿಸುವ ಮೇದೋಜ್ಜೀರಕ ಗ್ರಂಥಿಗೆ ಏಕಾಏಕಿ ತಡೆರಹಿತವಾಗಿ ಬೀಳುವ ಗ್ಲುಕೋಸನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ಅಂತೆಯೇ ಜೀರ್ಣಾಂಗ ಉತ್ಪಾದಿಸುವ ಜೀರ್ಣರಸ ಏಕಾಏಕಿ ತಿಂದದ್ದನ್ನೆಲ್ಲಾ ಜೀರ್ಣಿಸಲು ಸಾಕಾಗುವುದಿಲ್ಲ.
ಮಿತಿ ಮೀರಿದ ಕೊಬ್ಬು, ಪಿಷ್ಟ ಇರುವ ತಿನಿಸುಗಳು ಎಣ್ಣೆಯಲ್ಲಿ ಕರಿದ ತಿಂಡಿಗಳು ಕೊಲೆಸ್ಟ್ರಾಲ್ ಆಗಿ ದೇಹದಲ್ಲಿ ಶೇಖರವಾಗುತ್ತದೆ. ಪಿಷ್ಟದಿಂದಾಗಿ ‘ಟ್ರೈಗಿಸರೈಡ್’ ಎಂಬ ಅಂಶವು ಏರಿ ಯಕೃತ್ತಿಗೆ ಸೇರಿ ಫ್ಯಾಟಿ ಲಿವರ್ ಆಗುತ್ತದೆ. ಉಪವಾಸದಿಂದಾಗಿ ದೇಹದ ತೂಕ ಕಡಿಮೆಯಾಯಿತೆಂದು ಯಾರೂ ಚಿಂತಿಸಬೇಕಾದ ಅಗತ್ಯವಿಲ್ಲ. ಸ್ವಲ್ಪತೂಕ ಕರಗಿದರೆ ದೇಹಕ್ಕೇನೂ ಹಾನಿಯಾಗದು. ಒಬ್ಬಾತ ಉಪವಾಸ ವ್ರತ ಅನುಷ್ಠಾನಿಸಿಯೂ ಆತನ ದೇಹದ ತೂಕ ಏರುತ್ತದಾದರೆ ಆತ ತನ್ನ ಹೊಟ್ಟೆಯನ್ನು ತೊಟ್ಟಿಯನ್ನಾಗಿಸಿದ್ದಾನೆ ಎಂದೇ ಅರ್ಥ. ಉಪವಾಸದಿಂದ ದೊರಕುವ ವೈಜ್ಞಾನಿಕ ಲಾಭ ಲಭ್ಯವಾಗಬೇಕಾದರೆ ನಾವು ತಿನ್ನುವ ಆಹಾರದ ಮೇಲೆ ನಮಗೆ ನಿಯಂತ್ರಣವಿರಬೇಕು. ಜಗತ್ತಿನ ಎಲ್ಲಾ ವೈದ್ಯ ವಿಜ್ಞಾನಿಗಳ ಪ್ರಕಾರ ಇಸ್ಲಾಮಿನ ಉಪವಾಸ ಅತ್ಯಂತ ಪರಿಪೂರ್ಣ. ಆದರೆ ಅದರ ವೈಜ್ಞಾನಿಕ ಲಾಭ ಪಡೆಯುವುದು ನಮ್ಮ ನಮ್ಮ ಕೈಯಲ್ಲಿದೆ.