ಜಿಲ್ಲಾಡಳಿತದ ಅವ್ಯವಸ್ಥೆ: ಆತಂಕದಲ್ಲಿ ಪ್ರವಾಸಿಗರು
ಚಿಕ್ಕಮಗಳೂರು, ಜೂ.13: ದೇಶ-ವಿದೇಶ, ರಾಜ್ಯ- ಹೊರರಾಜ್ಯಗಳಿಂದ ಸಾವಿರಾರು ಪ್ರವಾಸಿಗರು ಬಾಬಾ ಬುಡಾನ್ ಗಿರಿಯ ಸೊಬಗನ್ನು ವೀಕ್ಷಿಸಲು ಬರುತ್ತಿದ್ದಾರೆ. ಆದರೆ ಇಲ್ಲಿನ ಅವ್ಯವಸ್ಥೆ ಕಂಡು ತೀವ್ರ ಬೇಸರವನ್ನು ವ್ಯಕ್ತಪಡಿಸಿ ಮರಳುತ್ತಿದ್ದಾರೆ.
ಬಹಳ ಜನ ದೂರದ ಪ್ರವಾಸಿಗರಿಗೆ ಒಮ್ಮೆ ಮುಳ್ಳಯ್ಯನಗಿರಿ ನೋಡುವ ಹಂಬಲ ಇಲ್ಲದಿರದು. ಬಾಬಾಬುಡಾನ್ಗಿರಿ ಬೆಟ್ಟ ಸಾಲುಗಳಲ್ಲಿ ಸುತ್ತು ಹಾಕಿ, ಭೋರ್ಗರೆಯುವ ಜಲ-ತೊರೆಗಳನ್ನು ಕಣ್ತುಂಬಿಕೊಳ್ಳುವ ತವಕದಲ್ಲಿ ಬರುವವರಿದ್ದಾರೆ.
ಆದರೆ ಇಲ್ಲಿನ ಅವ್ಯವಸ್ಥೆಗಳು, ಪರಿಸರ ನಾಶ, ಸೂಚನಾ ಫಲಕ ಸಹಿತ ಮಾರ್ಗದರ್ಶನ ಇಲ್ಲದೇ ಪ್ರವಾಸಿಗರು ಸಮಸ್ಯೆಗೆ ಸಿಲುಕಿಕೊಳ್ಳದಿದ್ದರೆ ಅದೇ ಬಹುದೊಡ್ಡ ಪುಣ್ಯ ಎನ್ನುವಂತಾಗಿದೆ.
ಗಿರಿಸಾಲುಗಳಲ್ಲಿ ಪಯಣಿಸಲು ಸರಕಾರ ಯಾವುದೇ ವಾಹನದ ವ್ಯವಸ್ಥೆಗಳನ್ನು ಕೂಡ ಈ ತನಕ ಮಾಡಿಲ್ಲ. ಚಿಕ್ಕಮಗಳೂರು ಹೊರ ವಲಯದ ಅತ್ತಿಗುಂಡಿ ಬಳಿ ನೂರಾರು ಸಂಖ್ಯೆಯಲ್ಲಿ ಗುಜರಿ ಜೀಪುಗಳ ಮೂಲಕ ಪ್ರವಾಸಿಗರು ಗಿರಿದರ್ಶನ ಮಾಡದೇ ಬೇರೆ ದಿಕ್ಕು ಇಲ್ಲಿಲ್ಲ.
ಪ್ರವಾಸಿಗರನ್ನು ಸುಲಿಯುವ ಜೀಪು ಚಾಲಕರು 500 ರೂ.ರಿಂದ 1000 ರೂ.ವರೆಗೂ ಕಸಿಯದೇ ಬಿಡುವವರಲ್ಲ. ಇಂತಹ ಜೀಪುಗಳನ್ನು ಬಿಟ್ಟು ಬೇರೆ ಭರವಸೆ ಇಲ್ಲದಿರುವ ಹಿನ್ನೆಲೆಯಲ್ಲಿ ಅದೇ ಜೀಪುಗಳನ್ನೇ ನಂಬಿಕೊಂಡು ವಿಧಿಯಿಲ್ಲದೇ ಪ್ರವಾಸಿಗರು ಹಿಡಿಶಾಪ ಹಾಕುತ್ತಿದ್ದಾರೆ.
ಪ್ರವಾಸಿಗರು ತೆರಳುವ ಜೀಪುಗಳು ಯಾವುದೂ ಸರಿಯಾಗಿಲ್ಲ. ಎಲ್ಲವೂ ಯಾವುದೋ ಕಾಲದಲ್ಲಿಯೇ ಗುಜರಿ ಸೇರಬೇಕಿದ್ದರೂ ಇಲ್ಲಿ ಗಿರಿ ದರ್ಶನ ದಾರಿಯಲ್ಲಿ ಪ್ರವಾಸಿಗರನ್ನು ಕರೆದೊಯ್ಯುವ ವಾಹನವಾಗಿಬಿಟ್ಟಿದೆ.
ಕೆಲವು ಜೀಪುಗಳ ಚಾಲಕರು ಪ್ರವಾಸಿಗರನ್ನು ಸೆಳೆಯಲು ಹಳೆ ಜೀಪುಗಳಿಗೆ ಬಣ್ಣ ಬಳಿದು, ಟಾಪ್ ತೆಗೆದು ವೇಗವಾಗಿ ಗಿರಿಯ ಅಂಕುಡೊಂಕು ರಸ್ತೆಗಳಲ್ಲಿ ಸಾಗುವುದು ಅಪಾಯಕಾರಿಯಾಗಿದೆ.
ಬಾಬಾಬುಡಾನ್ ಗಿರಿ ಸುತ್ತಮುತ್ತಲ ಪ್ರದೇಶಗಳಿಗೆ ತೆರಳುವ ಜೀಪುಗಳು ಆಂಧ್ರಪ್ರದೇಶ, ಮಧ್ಯಪ್ರದೇಶ, ತಮಿಳುನಾಡು, ಕೇರಳ ರಾಜ್ಯಗಳ ನಂಬರ್ ಪ್ಲೇಟ್ಗಳಲ್ಲಿ ಕಾಣುತ್ತದೆ.
ಇವೆಲ್ಲವೂ 25ರಿಂದ 30 ವರ್ಷಗಳ ಹಿಂದಿನ ಜೀಪುಗಳು ಎನ್ನುವುದು ನೋಡುವಾಗಲೇ ತಿಳಿಯುತ್ತದೆ. ಹಳದಿ ಮಾತ್ರವಲ್ಲದೆ, ಬಿಳಿ ಬೋರ್ಡಿನ ಜೀಪುಗಳನ್ನು ಇಲ್ಲಿ ಬಳಕೆಯಾಗುತ್ತಿದೆ. ಈ ಬಗ್ಗೆ ಆರ್ಟಿಒ ಅಥವಾ ಪೊಲೀಸರು ಕ್ರಮ ಕೈಗೊಳ್ಳದಿರುವುದು ಅನುಮಾನ ಮೂಡಿಸಿದೆ.
ಬಾಬಾಬುಡಾನ್ಗಿರಿಗೆ ಬರುವ ಪ್ರವಾಸಿಗರಿಗೆ ಜಿಲ್ಲಾಡಳಿತ ಸುರಕ್ಷತೆ ಒದಗಿಸಬೇಕು. ಅತ್ತಿಗುಂಡಿಯಲ್ಲಿ ಜೀಪುಗಳ ದಂಧೆಗೆ ಕಡಿವಾಣ ಹಾಕಬೇಕು. ಹಳೇ ಜೀಪುಗಳನ್ನು ಗಿರಿಭಾಗದಲ್ಲಿ ಪ್ರವಾಸಿಗರನ್ನು ಕರೆದುಕೊಂಡು ಹೋಗುವುದು ಅಪಾಯಕಾರಿ. ಅಧಿಕಾರಿಗಳು ಎಚ್ಚೆತ್ತುಕೊಂಡು ಸರಕಾರಿ ವಾಹನಗಳನ್ನು ಪ್ರವಾಸಿಗರ ಅನುಕೂಲಕ್ಕೆ ಒದಗಿಸಬೇಕು.