ಕಾರಾಗೃಹಕ್ಕೆ ದೊರೆಯುತ್ತಿಲ್ಲ ಉದ್ಘಾಟನಾ ಭಾಗ್ಯ!
ಶಿವಮೊಗ್ಗ: ಗೃಹ, ಬಂದಿಖಾನೆ ಇಲಾಖೆಯ ನಿರ್ಲಕ್ಷ
ಶಿವಮೊಗ್ಗ, ಜೂ.15: ನಗರದ ಹೊರವಲಯ ಸೋಗಾನೆ ಗ್ರಾಮದಲ್ಲಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಅಭಿವೃದ್ಧ್ದಿಗೊಳಿಸಲಾಗಿರುವ ನೂತನ ಕಾರಾಗೃಹವು ಉದ್ಘಾಟನೆಗೆ ಸಜ್ಜಾಗಿ ನಿಂತಿದೆ. ಆದರೆ, ಯಾವ ದಿನ ಲೋಕಾರ್ಪಣೆಗೊಳ್ಳಲಿದೆ ಎಂಬುವುದು ಮಾತ್ರ ಗೊತ್ತಾಗುತ್ತಿಲ್ಲ.
ಹಿಂದಿನ ತಿಂಗಳು ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಕಾರಾಗೃಹ ಉದ್ಘಾಟನೆಗೆ ಸಕಲ ಸಿದ್ಧ್ದತೆ ಮಾಡಲಾಗಿತ್ತು. ಅಧಿಕಾರಿಗಳು ದಿನಾಂಕ ಕೂಡಾ ನಿಗದಿಪಡಿಸಿದ್ದರು. ಆದರೆ,ವಿವಿಧ ಕಾರಣಗಳಿಂದ ಉದ್ಘಾಟನೆ ಕಾರ್ಯಕ್ರಮ ಆಯೋಜನೆಯಾಗಿರಲಿಲ್ಲ. ಇದಾದ ನಂತರ ಕಾರಾಗೃಹ ಲೋಕಾರ್ಪಣೆಗೊಳಿಸುವ ನಿಟ್ಟಿನಲ್ಲಿ ಗೃಹ ಇಲಾಖೆಯಾಗಲಿ, ಬಂಧೀಖಾನೆ ಇಲಾಖೆಯಾಗಲಿ ಗಂಭೀರ ಚಿತ್ತ ಹರಿಸುವ ಗೋಜಿಗೆ ಹೋದಂತೆ ಕಾಣುತ್ತಿಲ್ಲ.
ಅನುದಾನದ ಕೊರತೆ:
ನಗರದ ಹೃದಯ ಭಾಗದಲ್ಲಿರುವ ಕಾರಾಗೃಹ ಸ್ಥಳಾಂತರಿ ಸಬೇಕೆಂಬ ಕೂಗು ಕೇಳಿಬಂದಿತ್ತು. ಹಾಗೆಯೇ ಜೈಲ್ನಲ್ಲಿ ನಿಗದಿತ ಸಾಮರ್ಥ್ಯಕ್ಕಿಂತ ಹೆಚ್ಚಿನ ವಿಚಾರಣಾಧೀನ ಖೈದಿಗಳನ್ನಿಡಲಾಗಿತ್ತು. ಶಿವಮೊಗ್ಗದಲ್ಲಿ ಹೊಸ ಕಾರಾಗೃಹ ನಿರ್ಮಾಣ ಮಾಡಬೇಕೆಂಬ ಪ್ರಸ್ತಾವವನ್ನು ಬಂದಿಖಾನೆ ಇಲಾಖೆಯು ರಾಜ್ಯ ಸರಕಾರಕ್ಕೆ ಸಲ್ಲಿಸಿತ್ತು. ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಸೋಗಾನೆಯ ಬಳಿ ನೂತನ ಕಾರಾಗೃಹ ನಿರ್ಮಾಣಕ್ಕೆ ಅನುಮತಿ ನೀಡಿ, ಕಾಮಗಾರಿಗೆ ಚಾಲನೆ ನೀಡಿದ್ದರು. ಆದರೆ, ನಂತರ ಕಾಮಗಾರಿಗೆ ಅನುದಾನದ ಕೊರತೆ ಉಂಟಾಗಿತ್ತು. ಇದರಿಂದ ಅರ್ಧಕ್ಕೆ ಕಾರಾಗೃಹದ ಕಾಮಗಾರಿ ಸ್ಥಗಿತಗೊಂಡಿತ್ತು. ಸಿಎಂ ಸಿದ್ದರಾಮಯ್ಯಅವರು ಸೂಕ್ತ ಅನುದಾನ ಬಿಡುಗಡೆ ಮಾಡಿದ್ದರು. ಸರಕಾರದ ಸೂಚನೆಯಂತೆ ಕಾಮಗಾರಿಯ ನಿರ್ವಹಣೆ ಮಾಡುತ್ತಿದ್ದ ಲೋಕೋಪಯೋಗಿ ಇಲಾಖೆಯು ಕಾಲಮಿತಿಯಲ್ಲಿ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಿದೆ. ಹಾಗೆಯೇ ವಿವಾದದಲ್ಲಿದ್ದ ಕಾರಾಗೃಹದ ಸಂಪರ್ಕ ರಸ್ತೆಯ ಕಾಮಗಾರಿ ವಿವಾದ ಕೂಡಾ ಬಗೆಹರಿದಿದ್ದು, ರಸ್ತೆ ನಿರ್ಮಾಣ ಕಾರ್ಯ ಕೂಡ ಪೂರ್ಣಗೊಂಡಿತ್ತು.
ಸೌಲಭ್ಯಗಳೇನಿವೆ?:
ವಿದೇಶಿ ಕಾರಾಗೃಹ ವೊಂದರ ಮಾದರಿಯಲ್ಲಿ, 62.02 ಎಕರೆ ಪ್ರದೇಶದಲ್ಲಿ ಶಿವಮೊಗ್ಗದ ನೂತನ ಕಾರಾಗೃಹ ನಿರ್ಮಾಣ ಮಾಡಲಾಗಿದೆ. ಕಾರಾಗೃಹ 500 ಪುರುಷ ಖೈದಿ ಹಾಗೂ 100 ಮಹಿಳಾ ಖೈದಿಗಳನ್ನಿಡುವ ಸಾಮರ್ಥ್ಯ ಹೊಂದಿದೆ. ಮಹಿಳಾ ಬ್ಯಾರಕ್ನಲ್ಲಿ 8 ಡಾರ್ಮೆಂಟರಿಗಳು, 12 ಡಬ್ಬಲ್ ಸೆಲ್ ಹಾಗೂ 4 ಸಿಂಗಲ್ ಸೆಲ್ಗಳಿವೆ. ಪುರುಷ ವಿಭಾಗದಲ್ಲಿ 224 ಡಬ್ಬಲ್ ಸೆಲ್ಗಳಿದ್ದು, 49 ಸಿಂಗಲ್ ಸೆಲ್ಗಳಿವೆ. ಕಾರಾಗೃಹ ಮೇಲ್ದರ್ಜೆಗೆ: ಪ್ರಸ್ತುತ ನಗರದಲ್ಲಿರುವ ಹಳೇಯ ಕಾರಾಗೃಹವು ವಿಚಾರಣಾಧೀನ ಕೈದಿಗಳನ್ನು ಮಾತ್ರ ಇಡಬಹುದಾಗಿದೆ. ಶಿಕ್ಷೆಗೊಳಗಾದ ಖೈದಿಗ ಳನ್ನು ರಾಜ್ಯದ ವಿವಿಧೆಡೆಯಿರುವ ಕೇಂದ್ರ ಕಾರಾಗೃಹಕ್ಕೆ ರವಾನೆ ಮಾಡಬೇಕಾಗಿತ್ತು. ನೂತನಾಗಿ ನಿರ್ಮಾಣವಾಗಿರುವ ಕಾರಾಗೃಹವನ್ನು ರಾಜ್ಯ ಸರಕಾರ ಕೇಂದ್ರ ಕಾರಾಗೃಹವಾಗಿ ಮೇಲ್ದರ್ಜೆಗೇರಿಸಿದೆ. ಈಗಾಗಲೇ ಈ ಕುರಿತಂತೆ ಸಚಿವ ಸಂಪುಟ ಸಭೆಯಲ್ಲಿಯೂ ಚರ್ಚಿಸಿ ಅನುಮೋದನೆ ನೀಡಲಾಗಿದೆ.
ಸೋಗಾನೆ ಗ್ರಾಮದ ಬಳಿ ನೂತನ ಕಾರಾಗೃಹ ಕಟ್ಟಡ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಸಕಲ ಸೌಲಭ್ಯ ಕಲ್ಪಿಸಲಾಗಿದೆ. ಕಟ್ಟಡ ಯಾವಾಗ ಉದ್ಘಾಟನೆಯಾಗಲಿದೆ ಎಂಬುದರ ಬಗ್ಗೆ ತಮಗೆ ಮಾಹಿತಿಯಿಲ್ಲವಾಗಿದೆ. ಈ ಬಗ್ಗೆ ಸಂಬಂಧಿಸಿದ ಇಲಾಖೆಯವರು ನಿರ್ಧಾರ ಕೈಗೊಳ್ಳುತ್ತಾರೆ’ ಎಂದು ಲೋಕೋಪಯೋಗಿ ಇಲಾಖೆಯ ವಿಶೇಷ ವಿಬಾಗದ ಕಾರ್ಯಪಾಲಕ ಅಭಿಯಂತರ ಚಂದ್ರಹಾಸ್ರವರು ಗುರುವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರಿಗೆ ತಿಳಿಸಿದ್ದಾರೆ. ಚಂದ್ರಹಾಸ್ಪಿಡಬ್ಲ್ಯೂಡಿ ಎಂಜಿನಿಯರ್