ಮಲೆನಾಡಿನ ಸಮಾಜವಾದಿ ಹೋರಾಟದ ಅದಮ್ಯ ಚೇತನ 'ಗುಬ್ಬಿಗ ಸದಾಶಿವರಾವ್'
ನಾನು ಓದಿದ ಪುಸ್ತಕ
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಗುಬ್ಬಿಗ ಗ್ರಾಮದ ಸಾಹುಕಾರ್ ಕಾಳಪ್ಪನವರು ಒಂದು ಕಾಲದಲ್ಲಿ 300 ಎಕರೆಗೂ ಮಿಗಿಲಾದ ಭೂಮಿ ಹೊಂದಿದ ದೊಡ್ಡ ಜಮೀನ್ದಾರ ಕುಟುಂಬದವರು. ಅವರ ಮಗ ಗುಬ್ಬಿಗ ಸದಾಶಿವರಾವ್. ಅವರ ತಾಯಿ ಕುಂದಾಪುರದವರು. ಸೋದರ ಮಾವನಿಗೆ ತಮ್ಮ ಅಳಿಯ ದೊಡ್ಡ ವಿದ್ಯಾವಂತನಾಗಬೇಕೆಂಬ ಬಯಕೆ. ಸದಾಶಿವರಾಯರ ಪ್ರೌಢಶಾಲೆಯವರೆಗಿನ ಶಿಕ್ಷಣ ಕುಂದಾಪುರ ದಲ್ಲಿ, ಪದವಿ ಶಿಕ್ಷಣ ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ನಡೆಯಲು ಇದು ಕಾರಣ. ಕೋ.ಲ ಕಾರಂತ, ಶಿವರಾಮ ಕಾರಂತ ಸದಾಶಿವರಾಯರ ಒಡನಾಡಿಗಳು.
ಮಂಗಳೂರಿಗೆ ಬಂದು ಹೋರಾಟಗಾರ ಕಾರ್ನಾಡ್ ಸದಾ ಶಿವರಾಯರ ಮನೆಯಲ್ಲಿ ತಂಗಿದ್ದ ಗಾಂಧೀಜಿಯವರ ಭೇಟಿ ಸದಾ ಶಿವರಾಯರ ಬದುಕನ್ನೇ ಬದಲಿಸಿಬಿಡುತ್ತದೆ. ಮುಂದೆ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗಿಯಾಗುತ್ತಾರೆ. ಮಲೆನಾಡಿಗೆ ಮರಳುವ ಸದಾಶಿವರಾ ಯರ ಗರಡಿಯಲ್ಲಿ ಶಾಂತವೇರಿ ಗೋಪಾಲಗೌಡರು, ಜಾರ್ಜ್ ಫೆರ್ನಾಂಡಿಸ್ ರಂತಹ ಹೋರಾಟಗಾರರು ಬೆಳೆಯುತ್ತಾರೆ. ಐತಿಹಾಸಿಕ ಕಾಗೋಡು ಚಳವಳಿಯನ್ನು ಪ್ರಮುಖ ನೇತಾರರಾಗಿ ಅದರ ಯಶಸ್ಸಿಗೆ ಕೈಜೋಡಿಸುತ್ತಾರೆ. ಅದಕ್ಕಿಂತ ಮುಂಚೆ ತಮ್ಮ 20 ಎಕರೆ ಭೂಮಿಯನ್ನು ನಿರ್ಮೋಹದಿಂದ ಭೂರಹಿತರಿಗೆ ಹಸ್ತಾಂತರಿಸುತ್ತಾರೆ.
ಒಡನಾಡಿಗಳ ಒತ್ತಾಸೆಯಿಂದ 1952 ರ ಮಹಾ ಚುನಾವಣೆಗೆ ನಿಲ್ಲುತ್ತಾರೆ. ಈ ಚುನಾವಣೆಯಲ್ಲಿ ಸದಾಶಿವರಾಯರ ಪರ ಪ್ರಚಾರ ಮಾಡಿದ ಯು.ಆರ್. ಅನಂತಮೂರ್ತಿ ಪ್ರಸ್ತಾಪಿಸುವ ಘಟನೆಗಳು ಕುತೂಹಲಕರವಾಗಿವೆ. ‘‘ಸದಾಶಿವರಾಯರಿಗೆ ತೀರ್ಥಹಳ್ಳಿಯಲ್ಲಿ ಬೆಂಬಲ ಸಿಕ್ಕಿತೆಂದು ಮೊದಲ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ನಿಲ್ಲಿಸಲಾಗಿತ್ತು. ಇವರ ವಿರುದ್ಧ ಕಾಂಗ್ರೆಸ್ಸಿನಿಂದ ನಿಂತವರುಕಡಿದಾಳ್ ಮಂಜಪ್ಪಗೌಡರು. ಇನ್ನೊಬ್ಬ ಅಭ್ಯರ್ಥಿ ಸದಾ ಶಿವರಾಯರ ಹತ್ತಿರದ ನೆಂಟರಾದ (ಹೆಂಡತಿಯ ಅಣ್ಣ) ಕಾಸರವಳ್ಳಿ ಸಾಹುಕಾರರು. ಜನಸಂಘದ ಅಭ್ಯರ್ಥಿ ಅವರು. ಗೋಪಾಲಗೌಡರು ನಿಂತದ್ದು ಸಾಗರದಿಂದ. ಆಗ ಇಂಟರ್ ಮೀಡಿಯಟ್ ಮುಗಿಸಿದ್ದ ನಾನು ಹಳ್ಳಿ ಹಳ್ಳಿ ತಿರುಗಿ ಸದಾಶಿವರಾ ಯರಿಗಾಗಿ ಪ್ರಚಾರ ಮಾಡಿದ್ದೆ. ಎಳ್ಳಮವಾಸ್ಯೆ ಜಾತ್ರೆಯಲ್ಲಂತೂ ತೀರ್ಥಹಳ್ಳಿ ಚೌಕದ ಮಹಡಿ ಮೇಲೊಂದು ಮೈಕ್ ಇಟ್ಟುಕೊಂಡು ನಾನು ಗಂಟೆಗಟ್ಟಲೆ ಸತತವಾಗಿ ಭಾಷಣ ಬಿಗಿಯುತ್ತಿದ್ದೆ. ನನ್ನ ಪಕ್ಕದಲ್ಲಿ ಸಮಾಜವಾದಿ ಗೆಳೆಯ ಸಿನ್ಹಾ ಕೂತು ನನಗೆ ಕಿವಿಯಲ್ಲಿ ಹಲವು ವಿಚಾರ ಗಳನ್ನು ಪಿಸುಗುಟ್ಟಿ ಹೇಳಿ ನನ್ನಿಂದ , ಬಳಸಿ ಮಾತಾಡಿಸುತ್ತಿದ್ದರು. ನನಗಿನ್ನೂ ನೆನಪಿದೆ-ಸತತವಾಗಿ ನಾನು ಹೇಳುತ್ತಿದ್ದ ಒಂದು ಮಾತು ಇದು: ಸದಾಶಿವರಾಯರಿಗೆ ಓಟು ಕೊಡಿ: ಒಮ್ಮೆ ನೀವು ಕೊಡಲು ಇಚ್ಛಿಸದಿದ್ದರೆ ಕಾಂಗ್ರೆಸ್ ನ ಕಡಿದಾಳ್ರಿಗೆ ಕೊಡಿ. ಆದರೆ ಜನಸಂಘಕ್ಕೆ ಕೊಡಬೇಡಿ.’’
ಹೀಗೆ ಭಾಷಣ ಮಾಡುತ್ತ ಅಲೆದಾಡಿದ ನಾನು ಒಮ್ಮೆ ಕಾಸರವಳ್ಳಿಯಲ್ಲಿ ಜ್ವರ ಬಂದು ರಾಮಕೃಷ್ಣರಾಯರ ಮನೆಯಲ್ಲೇ ಮಲಗಬೇಕಾಯಿತು. ಅಲ್ಲಿಯೂ ಸಿಕ್ಕ ಆಳುಕಾಳುಗಳಿಗೆ ನನ್ನ ಸಂದೇಶವನ್ನು ಮುಜುಗರವಿಲ್ಲದೆ ಮುಟ್ಟಿಸುತ್ತಿದ್ದೆ. ಜೊತೆಗೆ ಸಾಹುಕಾರರ ಮನೆಯವರ ಅಪಾರವಾದ ಔದಾರ್ಯದ ಚಿಕಿತ್ಸೆಯನ್ನು ಪಡೆದಿದ್ದೆ. ನನ್ನಲ್ಲಿ ಈ ಬಗೆಯ ನಿಚ್ಚಳವಾದ ಮುಜುಗರವಿಲ್ಲದ ತತ್ವನಿಷ್ಠೆಯನ್ನು ಆ ಎಳೆಯವಯಸ್ಸಿನಲ್ಲಿ ನಾನು ಪಡೆದಿದ್ದು ಸದಾಶಿವರಾಯರು ಗೋಪಾಲಗೌಡರು ಇಂಥವರ ಸಹವಾಸದಿಂದ
ಮಲೆನಾಡು ಭಾಗದಲ್ಲಿ ಸಮಾಜವಾದಿ ಪಕ್ಷ ವನ್ನು ಕಟ್ಟಿ ಬೆಳೆಸಲು ಅಪಾರವಾಗಿ ಶ್ರಮಿಸಿದ ಸದಾ ಶಿವರಾಯರು ತಮ್ಮ ಜೀವನದ ಸಂಧ್ಯಾಕಾಲವನ್ನು ಕಡುಕಷ್ಟದಲ್ಲಿ ಕಳೆದರು. ಆಗ ಸದಾಶಿವರಾಯರ ದುಸ್ಥಿತಿಯ ಬಗ್ಗೆ ಕೇಂದ್ರ ಮಂತ್ರಿಯಾಗಿದ್ದ ರಾಯರ ಶಿಷ್ಯ ಜಾರ್ಜ್ ಫೆರ್ನಾಂಡಿಸ್ ಅವರ ಗಮನಕ್ಕೆ ತಂದರೂ ಅವರಿಗೊಂದು ನೆಲೆ ಕಲ್ಪಿಸಿ ನೆರವಾಗುವ ವ್ಯವಸ್ಥೆಯನ್ನು ಯಾರೂ ಸಹ ಮಾಡಲಿಲ್ಲ.
ಸದಾಶಿವರಾಯರಂತೆಯೇ ಸಮಾಜವಾದಕ್ಕೆ ಬದ್ಧರಾಗಿ ಸಮಾಜದ ಎಲ್ಲ ಬಗೆಯ ಅಸಮಾನತೆಗಳ ವಿರುದ್ಧ ಹೋರಾಟ ನಡೆಸಿದ ಅನೇಕರು ಮಲೆನಾಡಿನಲ್ಲಿ ಆಗಿಹೋಗಿದ್ದಾರೆ. ಅವರಲ್ಲಿ ಪ್ರಮುಖರಾದವರೆಂದರೆ ಶಂಕರನಾರಾಯಣ ಭಟ್ಟರು, ಗುಂಡಮನೆ ರಾಮಕೃಷ್ಣ, ಶ್ಯಾಮ ಐತಾಳರು, ಪಟಮಕ್ಕ ಗುರುಮೂರ್ತಿರಾಯರು, ಗೇರುಗಲ್ಲು ಕರಿಬಸಪ್ಪ, ಭಾವಿಕೈ ನಾರಾಯಣಗೌಡರು, ಭಾರತೀಪುರದ ಕೃಷ್ಣಮೂರ್ತಿ, ಹುಗಳವಳ್ಳಿ ಸುರೇಂದ್ರ, ಮೇಗರವಳ್ಳಿ ಶೇಷಪ್ಪಗೌಡ, ಬಿ.ವಿ ಮೂರ್ತಿ, ಆರಗದ ವೆಂಕಟರಮಣ, ಹಾದಿಗಲ್ಲು ರಾಮಣ್ಣ, ಮತ್ತು ಮಿಣುಕಮ್ಮ.
ಮಲೆನಾಡು ಭಾಗದ ಕ್ರೀಯಾಶೀಲ ಹೋರಾಟಗಾರ ಕಲ್ಲೂರು ಮೇಘ ರಾಜ್ ಅವರು ಸಂಪಾದಿಸಿ, ಶಿವಮೊಗ್ಗದ ಮತ್ತೊಬ್ಬ ಪ್ರಮುಖ ಹೋರಾಟ ಗಾರ ಎಸ್.ಸುಂದರ್ ಅವರು ತಮ್ಮ ಸಿರಿಗನ್ನಡ ಪುಸ್ತಕಮನೆ ಪ್ರಕಾಶನದಿಂದ ಪ್ರಕಟಿಸಿರುವ ‘ಗುಬ್ಬಿಗ ಸದಾಶಿವರಾವ್’ ಪುಸ್ತಕ ಸದ್ಯಕ್ಕೆ ನಂಬಲಾಗದ ಮಲೆ ನಾಡಿನ ವ್ಯಕ್ತಿತ್ವಗಳನ್ನು ಅನಾವರಣಗೊಳಿಸುತ್ತದೆ. ಸದಾಶಿವರಾಯರ ಒಡ ನಾಡಿಗಳು, ಶಿಷ್ಯರು ಇಲ್ಲಿ ಆಪ್ತವಾಗಿ ಬಹುದೊಡ್ಡ ವ್ಯಕ್ತಿತ್ವವನ್ನು ತಮ್ಮ ಅನುಭವಗಳ ಮೂಲಕವೇ ಚಿತ್ರಿಸಿದ್ದಾರೆ. 20ನೆ ಶತಮಾನದ ಕರ್ನಾಟಕವು ರೂಪಿಸಿದ ಅತ್ಯುತ್ತಮ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ಗುಬ್ಬಿಗ ಸದಾಶಿವರಾಯರ ಬದುಕಿನ ಬಗ್ಗೆ ಜನಪರ ಚಳವಳಿಯಲ್ಲಿರುವವರು ಮಾತ್ರವಲ್ಲ, ಜನಸಾಮಾ ನ್ಯರೂ ಸಹ ಓದಬೇಕಾದ ಪುಸ್ತಕವಿದು. ಇದರ ಓದು ನಮ್ಮ ಅರಿವನ್ನು ಮಾತ್ರವಲ್ಲ, ಜೀವನ ದೃಷ್ಟಿಯನ್ನು ಸಮೃದ್ಧಗೊಳಿಸುವಂತದ್ದು.
ಪುಸ್ತಕದ ಹೆಸರು: ಗುಬ್ಬಿಗ ಸದಾಶಿವರಾವ್, ಸಮಾಜವಾದಿ ಹೋರಾಟದ ಅದಮ್ಯ ಚೇತನ ಪ್ರಕಾಶಕರು: ಸಿರಿಗನ್ನಡ ಪುಸ್ತಕಮನೆ, ಶಿವಮೊಗ್ಗ ಪುಟಗಳು : 68 ಬೆಲೆ :ರೂ.50