ದಲಿತರೇನು ಪ್ರಚಾರದ ಸಾಮಗ್ರಿಗಳೇ?
ಮಾನ್ಯರೆ,
ರಾಜ್ಯದಲ್ಲಿ ಹಿಂದೆಂದಿಗಿಂತಲೂ ಇಂದು ಎಲ್ಲಾ ರಾಜಕೀಯ ಪಕ್ಷಗಳಿಗೆ ದಲಿತರ ಬಗ್ಗೆ ಎಲ್ಲಿಲ್ಲದ ಪ್ರೀತಿ ಉಕ್ಕಿ ಹರಿಯುತ್ತಿದೆ. ಎಲ್ಲೆಲ್ಲಿಯೂ ಅಂಬೇಡ್ಕರ್ ಮತ್ತು ಬಾಬು ಜಗಜೀವನ್ರಾಮ್ ಅವರ ಭಾವಚಿತ್ರಗಳು ಅವರ ಕಾರ್ಯಕ್ರಮಗಳಲ್ಲಿ ರಾರಾಜಿಸುತ್ತಿವೆೆ. ದಲಿತರ ಮನೆಯಲ್ಲಿ ಊಟ, ದಲಿತರ ಕೇರಿ ಯಲ್ಲಿ ಓಡಾಟ, ದಲಿತರೊಂದಿಗೆ ಸಹಭೋಜನ, ದಲಿತರನ್ನು ಮನೆಗೆ ಆಹ್ವಾನಿಸುವ ವಿಶೇಷ ಕಾರ್ಯಕ್ರಮಗಳು, ಹೀಗೆ ಒಂದಲ್ಲಾ ಒಂದು ಕಾರ್ಯಕ್ರಮಗಳು ದಲಿತರ ಹೆಸರಿನಲ್ಲಿ ನಡೆಯುತ್ತಲೇ ಇವೆೆ. ಸದ್ಯಕ್ಕೆ ದಲಿತರೇ ಕರ್ನಾಟಕ ರಾಜ್ಯದಲ್ಲಿ ನಿರ್ಣಾಯಕ ಮತದಾರರೆನ್ನುವುದು ಸತ್ಯವಾಗಿರುವುದು ಸಂತೋಷದ ಸಂಗತಿ.
ರಾಜಕೀಯ ಪಕ್ಷಗಳಿಗೆ ದಲಿತರೆಂದರೆ, ಪ್ರಚಾರದ ಸಾಮಗ್ರಿಗಳಾಗಿದ್ದಾರೆ. ದಲಿತರ ಮನೆಯಲ್ಲಿ ಊಟ ಮಾಡುತ್ತೇವೆ ಎನ್ನುವುದು ಮನುಷ್ಯತ್ವ ಇಲ್ಲದ ಮಾತುಗಳು. ದಲಿತರೇನು ಮನುಷ್ಯರಲ್ಲವೇ? ಅವರ ಜೊತೆಯಲ್ಲಿ ಊಟ ಮಾಡುವುದು ದೊಡ್ಡ ಕಾರ್ಯಕ್ರಮವೇ? ಮನುಷ್ಯತ್ವ ಇರುವವರಿಗೆ ದಲಿತರು ಮತ್ತು ಇತರರು ಎನ್ನುವ ಭೇದಭಾವದ ಅರಿವೇ ಇರುವುದಿಲ್ಲ. ಯಾರು ತಮ್ಮ ಮನಸ್ಸಿನಲ್ಲಿ ಅಸ್ಪಶ್ಯತೆಯ ರೋಗವನ್ನು ಮೈಗೂಡಿಸಿಕೊಂಡಿರುತ್ತಾರೋ, ಅಂತಹವರಿಗೆ ಇಂತಹ ಪದಗಳು ಹೊಸದಾಗುತ್ತವೆ. ದಲಿತರ ಬಗ್ಗೆ ಮಾತನಾಡುವ ರಾಜಕೀಯ ಪಕ್ಷದವರು ದಲಿತರನ್ನೇಕೆ ಮುಂದಿನ ಮುಖ್ಯಮಂತ್ರಿಯೆಂದು ಯಾರೂ ಹೇಳುತ್ತಿಲ್ಲ.
ತಮ್ಮ ತಮ್ಮ ಗೆಲುವಿಗೆ ದಲಿತರ ಮನೆಗಳು ಬೇಕು, ತಮ್ಮ ಪ್ರಚಾರಕ್ಕೆ ದಲಿತರ ಮನೆಯ ತಿಂಡಿ ಬೇಕು, ತಮ್ಮ ವ್ಯಕ್ತಿತ್ವದ ವೈಭವೀಕರಣಕ್ಕೆ ದಲಿತರೊಂದಿಗೆ ಕಾಣಿಸಿಕೊಳ್ಳಬೇಕು. ಆದರೆ, ರಾಜ್ಯದ ಚುಕ್ಕಾಣಿ ಮಾತ್ರ ಅವರ ಕೈಗೆ ನೀಡಲು ಮನಸ್ಸಿಲ್ಲ. ನಿಜಕ್ಕೂ ದಲಿತರ ಮೇಲೆ ಪ್ರೀತಿ ಇದ್ದರೆ, ಎಲ್ಲಾ ರಾಜಕೀಯ ಪಕ್ಷಗಳು ಮುಂದಿನ ಮುಖ್ಯಮಂತ್ರಿಯನ್ನು ತಮ್ಮ ತಮ್ಮ ಪಕ್ಷದಿಂದ ದಲಿತರನ್ನೇ ಮಾಡುತ್ತೇವೆಂದು ಬಹಿರಂಗವಾಗಿ ಘೋಷಿಸಲಿ. ದಲಿತ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಮುಂಚೂಣಿಗೆ ತಂದು ಅವರ ನೇತೃತ್ವದಲ್ಲಿ ಚುನಾವಣೆಯನ್ನು ನಡೆಸಲಿ. ಕೇವಲ ತೋರಿಕೆಗಾಗಿ, ಓಟಿಗಾಗಿ ದಲಿತರ ಹೆಸರನ್ನು ಹೇಳುತ್ತಿರುವ ನಾಯಕರ ಬಗ್ಗೆ ಎಚ್ಚರವಿರಲಿ.
ಇವತ್ತಿಗೂ ನಮ್ಮ ರಾಜ್ಯದ ಅನೇಕ ಭಾಗಗಳಲ್ಲಿ ಮರ್ಯಾದಾ ಹತ್ಯೆಗಳು ನಿರಂತರವಾಗಿ ನಡೆಯುತ್ತಿವೆ. ದಲಿತರ ಮನೆಯ ಮಕ್ಕಳನ್ನು ಮೇಲ್ವರ್ಗದವರು ವಿವಾಹವಾಗಲು ನೂರಾರು ಅಡ್ಡಿ ಆತಂಕಗಳಿವೆ. ದಲಿತರ ಬಗ್ಗೆ ಮಾತಾಡುವ ನಾಯಕರು ತಮ್ಮ ಕುಟುಂಬದಲ್ಲಿ ಯಾವುದಾದರೊಬ್ಬ ಸದಸ್ಯರಿಗೆ ದಲಿತರ ಮನೆಯ ಮಕ್ಕಳನ್ನು ತಂದು ಅವರೊಂದಿಗೆ ಮದುವೆ ಮಾಡಲಿ. ಆಗ ಇವರ ಬದ್ಧತೆಯನ್ನು ನಾವು ಪ್ರಾಮಾಣಿಕವಾಗಿದೆ ಎಂದು ಭಾವಿಸಬಹುದು. ದಲಿತರೊಂದಿಗೆ ಸಂಬಂಧ ಬೇಡ, ದಲಿತರಿಗೆ ಅಧಿಕಾರ ಬೇಡ, ಆದರೆ ದಲಿತರ ಮತಗಳು ಮಾತ್ರ ಬೇಕು.