ಎದೆಗೆ ಬಿದ್ದ ಬೆಂಕಿ
ಭಾಗ-1
ನನ್ನೆದೆಗೆ ಬೆಂಕಿ ಬಿದ್ದಿದೆ. ಎದೆಯೊಳಗಿನ ಗೂಡಲ್ಲಿರುವ ಹೃದಯ ಹೊತ್ತಿ ಉರಿಯುತ್ತಿದೆ. ನನ್ನೊಬ್ಬನ ಹೃದಯ ಮಾತ್ರವಲ್ಲ. ಅವಿಭಜಿತ ದಕ್ಷಿಣ ಕನ್ನಡದಲ್ಲಿ ಹುಟ್ಟಿ ಬೆಳೆದ ಪ್ರತಿಯೊಬ್ಬ ‘ಮನುಷ್ಯ’ರ ಹೃದಯ ಕೂಡ ಈಗ ಧಗಧಗಿಸುತ್ತಿದೆ.
ಏಕೆಂದರೆ, ನಮ್ಮ ದಕ್ಷಿಣ ಕನ್ನಡದ ಕುರಿತು ಕೇಳಿ ಬರುತ್ತಿರುವ ಮಾತುಗಳಿಂದಾಗಿ. ಆಡಳಿತಾತ್ಮಕ ನೆಲೆ ಯಲ್ಲಿ ಅವಿಭಜಿತ ಜಿಲ್ಲೆಯೀಗ ದಕ್ಷಿಣ ಕನ್ನಡ ಮತ್ತು ಉಡುಪಿ ಎರಡಾಗಿ ಹೋಳಾಗಿದ್ದರೂ, ನಮ್ಮೆಲ್ಲರ ಪಾಲಿಗೆ ಅದಿನ್ನೂ ಒಂದೇ ಜಿಲ್ಲೆಯಾಗಿದೆ. ಈ ಜಿಲ್ಲೆ ಕೇವಲ ಒಂದು ಭೂಮಿ ತುಂಡಲ್ಲ. ಬದಲಾಗಿ ನಮ್ಮೆಲ್ಲರ ಬದುಕನ್ನು ರೂಪಿಸಿದ ಸಾಮಾಜಿಕ, ಸಾಂಸ್ಕೃತಿಕ ನೆಲೆ.
‘‘ದಕ್ಷಿಣ ಕನ್ನಡ ರಾಜ್ಯದ ಅತೀ ಹೆಚ್ಚು ವಿದ್ಯಾವಂತರ ನೆಲೆ. ಅದರೆ, ವಿದ್ಯೆ ಇದ್ದ ಕೂಡಲೇ ಪ್ರಜ್ಞೆ ಇರಬೇಕಿಂದಿಲ್ಲ’’ ಎಂದು ದಕ್ಷಿಣ ಕನ್ನಡದ ಬಗ್ಗೆ ರಾಜ್ಯದ ಒಬ್ಬ ‘ಪ್ರಜ್ಞಾವಂತ’ ವ್ಯಕ್ತಿ ಫೇಸ್ಬುಕ್ನಲ್ಲಿ ಹಾಕಿದ ಪೋಸ್ಟ್ ನೋಡಿದಾಗ ನಗಬೇಕೋ? ಅಳಬೇಕೋ? ಎಂದು ಅರ್ಥವಾಗಲಿಲ್ಲ. ಇತ್ತೀಚೆಗೆ ದಕ್ಷಿಣ ಕನ್ನಡದಲ್ಲಿ ನಡೆದ ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಅವರ ಹತ್ಯೆ ಮತ್ತು ಅದರ ಸುತ್ತಮುತ್ತ ನಡೆದ ಘಟನೆಗಳನ್ನು ಆಧರಿಸಿ, ಕೊಡಗಿನ ಆ ‘ಪ್ರಜ್ಞಾವಂತ’ರು ಫೇಸ್ಬುಕ್ ಪೋಸ್ಟ್ ಹಾಕಿದ್ದರು. ಪಾಪ ಅವರದ್ದೇನೂ ತಪ್ಪಿಲ್ಲ. ದಕ್ಷಿಣ ಕನ್ನಡದ ಬಗ್ಗೆ ರಾಜ್ಯದ ಹೊರಭಾಗದಲ್ಲಿ ಮತ್ತು ದೇಶದೆಲ್ಲೆಡೆ ಕೇಳಿ ಬರುತ್ತಿರುವ ಸಾಮಾನ್ಯ ಮಾತಿದು. ಆ ‘ಪ್ರಜ್ಞಾವಂತ’ರಂತೆಯೇ ಹೊರಗಿನ ಬಹುತೇಕರು ದಕ್ಷಿಣ ಕನ್ನಡದ ಬಗ್ಗೆ ‘ಕರ್ನಾಟಕದ ಕಾಶ್ಮೀರ’ ಎಂಬ ನಿರ್ಧಾರಕ್ಕೆ ಬಂದಾಗಿದೆ.
ನನ್ನ ಆತ್ಮೀಯ ಗೆಳೆಯರು ಮತ್ತು ಹಿರಿಯ ಪತ್ರಕರ್ತರೂ ಆದ ಒಬ್ಬರು, ‘ರಿಪಬ್ಲಿಕ್ ಆಫ್ ದಕ್ಷಿಣ ಕನ್ನಡ’ ಎಂದು ಕೂಡ ಘೋಷಣೆ ಮಾಡಿಬಿಟ್ಟಿದ್ದಾರೆ. ಇನ್ನೂ ಕೆಲವು ತಿಂಗಳ ಹಿಂದೆ ‘ಶ್ರೇಷ್ಠ ಮುಸ್ಲಿಂ ಸಾಹಿತಿ’ ಎಂಬ ಪ್ರಶಸ್ತಿಗಳಿಸಿದ ನಾವೆಲ್ಲರೂ ಪ್ರೀತಿಸುವ ಹಿರಿಯ ಸಾಹಿತಿಯೊಬ್ಬರು ‘ದಕ್ಷಿಣ ಕನ್ನಡದ ಮುಸ್ಲಿಮರ ರಕ್ಷಣೆಗೆ ಯಾವ ರಾಜಕೀಯ ಪಕ್ಷದ ಮೊರೆ ಹೋಗಬೇಕು?’’ ಎಂದು ಮೊರೆಯಿಟ್ಟಿದ್ದಾರೆ. ದುರಂತವೆಂದರೆ ಅಂತಾರಾಷ್ಟ್ರೀಯ ಸಮ್ಮೇಳನದ ವೇದಿಕೆಯಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ದಕ್ಷಿಣ ಕನ್ನಡದ ಬಗ್ಗೆ ಗೋಳು ಹೊಯ್ದುಕೊಳ್ಳುತ್ತಿರುವ ಇವರ್ಯಾರಿಗೂ ಅಲ್ಲಿನ ಸಾಮಾಜಿಕ ಹಂದರ ಈಗಲೂ ಎಷ್ಟು ಬಿಗಿಯಾಗಿದೆ ಎಂಬ ಅರಿವಿಲ್ಲ.
ಅವಿಭಜಿತ ದಕ್ಷಿಣ ಕನ್ನಡದ ಸಾಮಾಜಿಕ ಪರಿಸ್ಥಿತಿ ಮೊದಲಿನಂತೆ ಈಗಿಲ್ಲ. ಖಂಡಿತ ನಾನು ಒಪ್ಪಿಕೊಳ್ಳುತ್ತೇನೆ. ಆದರೆ, ಈಗಲ್ಲಿ ಕೋಮು ದಳ್ಳುರಿ ಹೊತ್ತಿಕೊಂಡು ಮನುಷ್ಯರು ಬದುಕುವ ಸ್ಥಿತಿಯೇ ಇಲ್ಲ ಎನ್ನುವುದು ಮಾತ್ರ ಅತಿರಂಜಕ. ಇದು ಮಾಧ್ಯಮಗಳು, ಅಧಿಕಾರ ಪೀಪಾಸು ರಾಜಕಾರಣಿಗಳು ಒಟ್ಟಾಗಿ ಸೃಷ್ಟಿಸಿದ ಭ್ರಮೆಯಷ್ಟೆ. ಅಂತಹ ಭ್ರಮೆ ಸೃಷ್ಟಿಯಾಗಲು ಸ್ಥಳೀಯ ಕೆಲವು ರಾಜಕೀಯ ಶಕ್ತಿಗಳು ಕೂಡ ಕುಮ್ಮಕ್ಕು ನೀಡುತ್ತಿವೆ.
ಏಕೆಂದರೆ ಈ ಭ್ರಮೆ ಇದ್ದರಷ್ಟೇ ಚುನಾವಣೆಗಳ ಸಂದರ್ಭದಲ್ಲಿ ‘ಧರ್ಮ’ಗಳ ಹೆಸರಲ್ಲಿ ಮತಗಳ ಧ್ರುವೀಕರಣವಾಗಿ ಅವರು ಗೆಲ್ಲಲಾಗುವುದು. ಇದು ಗೊತ್ತಿದ್ದೋ, ಗೊತ್ತಿಲ್ಲೆದೆಯೋ ನಮ್ಮ ಬುದ್ಧಿ ಜೀವಿಗಳು ಗೋಳು ಹೊಯ್ದುಕೊಳ್ಳಲಾರಂಭಿಸಿದ್ದಾರೆ. ಟಿಆರ್ಪಿ ಬೆನ್ನ ಹಿಂದಿರುವ ಮಾಧ್ಯಮಗಳು ಬೊಬ್ಬೆ ಹೊಡೆಯಲಾರಂಭಿಸಿವೆ. ಎಲ್ಲೋ ಒಂದೆಡೆ ಇವರೆಲ್ಲ ಅರವಿದ್ದೋ, ಅರಿವಿಲ್ಲದೆಯೋ ರಾಜಕೀಯ ಪಕ್ಷಗಳು ಹಾಕಿರುವ ಬಹುದೊಡ್ಡ ‘ಟ್ರ್ಯಾಪ್’ಗೆ ಹೋಗಿ ಬೀಳಲಾರಂಭಿಸಿದ್ದಾರೆ.
ಕಳೆದ ಸುಮಾರು ನಾಲ್ಕು ದಶಕಗಳಿಂದ ದಕ್ಷಿಣ ಕನ್ನಡದ ಏಳು-ಬೀಳುಗಳ ಅವಿಭಾಜ್ಯ ಅಂಗವಾಗಿ ಬೆಳೆದು ಬಂದ ಲಕ್ಷಾಂತರ ಜನಸಾಮಾನ್ಯರ ಪೈಕಿ ಒಬ್ಬನಾಗಿ, ಅಲ್ಲಿನ ನಿವಾಸಿಯಾಗಿ, ಆ ನೆಲದ ಸಾಮಾಜಿಕ ಹಂದರದ ಒಂದೆಳೆಯಾಗಿ ಹೇಳುವುದಾದರೆ ಈಗ ನಡೆಯುತ್ತಿರುವುದೆಲ್ಲ ಅಧಿಕಾರ ಪೀಪಾಸು ರಾಜಕೀಯ ಪಕ್ಷಗಳ ಮತ್ತು ನಾಯಕರ ‘ಧರ್ಮ’ದಾಟ.
ಈ ‘ಧರ್ಮ’ದಾಟಕ್ಕೆ ಬಲಿಯಾಗುತ್ತಿರುವುದು ಯಾರೆಂದರೆ? ಗಲಭೆಗಳಿಗೆ ಮೂಲ ಕಾರಣರಾದ ಯಾವುದೇ ಭಟ್ಟ-ಶೆಟ್ಟಿ- ಸಾಯ್ಬರ ಮನೆ ಮಕ್ಕಳಲ್ಲ. ಬದಲಾಗಿ ಸಾಮಾಜಿಕ ಸ್ಥರದಲ್ಲಿ ಕೆಳ ಹಂತದಲ್ಲಿರುವ ಬಡವರ ಮನೆಯ ಮಕ್ಕಳು. ಬೇಕಿದ್ದರೆ ಉಡುಪಿ ಲೋಕಸಭಾ ಸದಸ್ಯೆ ಶೋಭಾ ಕರಂದ್ಲಾಜೆ ಅವರು ಕೇಂದ್ರ ಗೃಹ ಸಚಿವರಿಗೆ ಸಲ್ಲಿಸಿದ ಪತ್ರದಲ್ಲಿನ ಪಟ್ಟಿಯನ್ನೇ ತೆಗೆದು ನೋಡಿ!
ಮೂಲತಃ ಯಾವುದೇ ಕೋಮುದ್ವೇಷ ಇಲ್ಲದೇ, ಕೆಲವೊಮ್ಮೆ ವೈಯಕ್ತಿಕ ದ್ವೇಷಾಸೂಯೆ, ಆಸ್ತಿ ವಿವಾದಗಳ ಕಾರಣದಿಂದ ನಡೆದ ಗಲಭೆ-ಹಲ್ಲೆ- ಕೊಲೆಗೆ ಕೂಡ ರಾಜಕೀಯ ಪಕ್ಷಗಳು ಕೋಮು ಭಾವನೆಯ ಬಣ್ಣ ಬಳಿದು, ಹೆಣವನ್ನೇ ಬಂಡವಾಳ ಮಾಡಿಕೊಳ್ಳುವ ಅಮಾನುಷ ವೃತ್ತಿ ಮಾಡುತ್ತಿವೆ. ಇಲ್ಲಿ ಹಿಂದು ಯುವಕರ ಮೇಲೆ ನಡೆಯುತ್ತಿರುವ ಎಲ್ಲ ಹಲ್ಲೆಯಲ್ಲಿ ಮುಸ್ಲಿಮರ ಕೈವಾಡವಿರುವುದಿಲ್ಲ. ಅದೇ ರೀತಿ ಎಲ್ಲ ಮುಸ್ಲಿಂ ಯುವಕರ ಮೇಲೆ ನಡೆಯುವ ಹಲ್ಲೆಯ ಹಿಂದೆ ಹಿಂದೂಗಳ ಕೈವಾಡ ಇರುವುದಿಲ್ಲ. ಆದರೆ, ಹಲ್ಲೆ ನಡೆದು ಹೆಣ ಬಿದ್ದ ಕೂಡಲೇ ಅದಕ್ಕೆ ಕೋಮು ಬಣ್ಣ ಬಳಿಯಲು ರಾಜಕೀಯ ಪಕ್ಷಗಳ ಸಿದ್ಧವಾಗಿರುತ್ತವೆ. ಬಡವರ ಮಕ್ಕಳ ಹೆಣಗಳ ಮೇಲೆ ರಾಜಕೀಯ ಪಕ್ಷಗಳು ಮತ್ತು ರಾಜಕೀಯ ಮುಖಂಡರು ನೃತ್ಯ ಮಾಡುತ್ತಲೇ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ.
ಇಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿ(ಎಸ್) ಅಥವಾ ಇನ್ಯಾವುದೇ ರಾಜಕೀಯ ಪಕ್ಷಕ್ಕೂ ಯಾವುದೇ ವ್ಯತ್ಯಾಸವಿಲ್ಲ. ಎಲ್ಲರೂ ಬಡವರ ಮಕ್ಕಳ ಹೆಣವನ್ನೇ ಬಂಡವಾಳ ಮಾಡಿಕೊಂಡು ರಾಜಕೀಯ ಮಾಡಿದ್ದಾರೆ, ಇನ್ನು ಮುಂದೆ ಕೂಡ ಅದನ್ನೆ ಮಾಡಲು ಹೊರಟಿದ್ದಾರೆ.
ನಾಲ್ಕು ದಶಕಗಳ ಹಿಂದಿನಿಂದ ಈವರೆಗಿನ ದಕ್ಷಿಣ ಕನ್ನಡದ ರಾಜಕೀಯ ಇತಿಹಾಸ ಗಮನಿಸಿದರೆ ಇಲ್ಲಿ ಎಲ್ಲವೂ ಸ್ಪಷ್ಟವಾಗುತ್ತದೆ. ಈವತ್ತು ಈ ಅಧಿಕಾರ ಪೀಪಾಸುಗಳು ಬಡವರ ಮಕ್ಕಳ ಹೆಣವನ್ನು ಏಕೆ ಬಂಡವಾಳ ಮಾಡಿಕೊಳ್ಳುತ್ತಿದ್ದಾರೆ ಎನ್ನುವುದು ಕೂಡ ಅರ್ಥವಾಗುತ್ತದೆ. ಎಪ್ಪತ್ತರ ದಶಕದಲ್ಲಿ ಇಡೀ ಕರ್ನಾಟಕ ಇಂದಿರಾ ಕಾಂಗ್ರೆಸ್ ಅಲೆಯಲ್ಲಿ ಕೊಚ್ಚಿ ಹೋದ ಸಂದರ್ಭದಲ್ಲಿಯೇ ದಕ್ಷಿಣ ಕನ್ನಡದಲ್ಲಿ ಜನಸಂಘ ಮತ್ತು ಆರೆಸ್ಸೆಸ್ ಭದ್ರವಾಗಿದ್ದವು. ರಾಷ್ಟ್ರೀಯ ಮಟ್ಟದಲ್ಲಿ ಹೇಗೆ ನಾಗ್ಪುರ ಆರೆಸ್ಸೆಸ್ ಶಕ್ತಿ ಕೇಂದ್ರವೋ, ಅದೇ ರೀತಿಯಲ್ಲಿ ಕರ್ನಾಟಕ ರಾಜ್ಯದ ಮಟ್ಟಿಗೆ ಪುತ್ತೂರು ಆರೆಸ್ಸೆಸ್ ಶಕ್ತಿ ಕೇಂದ್ರವಾಗಿತ್ತು. ಈಗಲೂ ಆಗಿದೆ.
ಮುಂದುವರಿಯುವುದು...