ಓ ಮೆಣಸೇ...
ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ
- ಆರ್.ಅಶೋಕ್, ಬಿಜೆಪಿ ನಾಯಕ
ಬಹುಶಃ ರಾಜ್ಯ ಬಿಜೆಪಿಗೆ ಎಂದರೆ ಇನ್ನಷ್ಟು ಸ್ಪಷ್ಟವಾಗುತ್ತದೆ.
---------------------
ಗುಜರಾತ್ ಕೈ ಶಾಸಕರು ಜಾನುವಾರುಗಳು
-ಸುಬ್ರಮಣಿಯನ್ ಸ್ವಾಮಿ, ಬಿಜೆಪಿ ಮುಖಂಡ
ಮತ್ತು ಐಟಿ ಅಧಿಕಾರಿಗಳು ಗೋರಕ್ಷಕರೇ?
---------------------
ವಯಸ್ಸಾಗಿದ್ದರೂ ನಾನು ಸುಮ್ಮನೆ ಕೂರುವುದಿಲ್ಲ
-ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ
ಇತ್ತೀಚೆಗೆ ಸುಮ್ಮನೆ ಮಲಗುತ್ತಿರುವುದು ಅದಕ್ಕೇ ಎಂದು ಕಾಣುತ್ತದೆ.
---------------------
ಜೆಡಿಎಸ್ ವರಿಷ್ಠರು ಮಾಡಿದ ತಪ್ಪಿನಿಂದ ಬಿಜೆಪಿ ರಾಜ್ಯದಲ್ಲಿ ಇಷ್ಟೊಂದು ಬೆಳೆದಿದೆ
- ಮೋಟಮ್ಮ, ಕೆಪಿಸಿಸಿ ಉಪಾಧ್ಯಕ್ಷೆ
ಕಾಂಗ್ರೆಸ್ ವರಿಷ್ಠರು ಮಾಡಿದ ತಪ್ಪಿಗೆ ದೇಶದಲ್ಲಿ ಬೆಳೆದಿದೆ.
---------------------
ಕೋಮುವಾದ ತೊಲಗಿಸಿ
-ನರೇಂದ್ರ ಮೋದಿ, ಪ್ರಧಾನಿ
ನಿಮ್ಮನ್ನು ತೊಲಗಿಸದೆ ಅದು ಹೇಗೆ ಸಾಧ್ಯ?
---------------------
ಮನುಷ್ಯನಿಗೆ ಪ್ರಕೃತಿ ನಾಶದ ಹಕ್ಕಿಲ್ಲ
-ಜೆ.ಆರ್.ಲೋಬೊ, ಶಾಸಕ
ಮನುಷ್ಯ ತನ್ನನ್ನು ತಾನು ಮನುಷ್ಯ ಎಂದು ಭಾವಿಸದೇ ಇದ್ದರೆ?
---------------------
ರಾಷ್ಟ್ರೀಕೃತ ಬ್ಯಾಂಕ್ಗಳ ಸಾಲದ ಒಂದು ಪೈಸೆಯನ್ನೂ ಕಟ್ಟಬೇಡಿ
-ರಮೇಶ್ಕುಮಾರ್, ಸಚಿವ
ಅವರೇ ಬಂದು ವಸೂಲು ಮಾಡುತ್ತಾರೆ ಎಂಬ ಸೂಚನೆಯೇ?
---------------------
ನಾನು ಮಾತ್ರ ಭ್ರಷ್ಟ, ಉಳಿದವರೆಲ್ಲ ಶುದ್ಧರಾ?
-ನವಾಝ್ ಶರೀಫ್, ಪಾಕ್ ಮಾಜಿ ಪ್ರಧಾನಿ
ನಿಮ್ಮ ಮಾತಿಗೆ ನರೇಂದ್ರ ಮೋದಿ ತಲೆ ದೂಗಿದರಂತೆ.
---------------------
ಧರ್ಮ ರಾಜಕೀಯ ಅಭಿವೃದ್ಧಿಗೆ ಮಾರಕ
-ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
ತಮ್ಮ ಸಮಯಸಾಧಕ ರಾಜಕೀಯಕ್ಕಿಂತ ಅದೇ ವಾಸಿ.
---------------------
ಮಾಜಿ ಸಚಿವ ಎಚ್.ವಿಶ್ವನಾಥ್ ಒಬ್ಬ ದಡ್ಡ
-ಆಂಜನೇಯ, ಸಚಿವ
ಇಷ್ಟು ಸಮಯ ಕಾಂಗ್ರೆಸ್ನೊಳಗಿದ್ದುದೇ ಅದಕ್ಕೆ ಸಾಕ್ಷಿ.
---------------------
ಲಾಲು ಸಹವಾಸ ಸಾಕಾಗಿ ಹೋಯಿತು ಅದಕ್ಕೆ ಮಹಾಮೈತ್ರಿ ಮುರಿಯಬೇಕಾಯಿತು.
- ನಿತೀಶ್ಕುಮಾರ್, ಬಿಹಾರ ಮುಖ್ಯಮಂತ್ರಿ
ಆದರೆ ಒಂದೇ ಉಸುರಿಗೆ ತ್ರಿವಳಿ ತಲಾಖ್ನ್ನು ಕೇಂದ್ರ ಮಾನ್ಯ ಮಾಡುವುದಿಲ್ಲವಲ್ಲ?
---------------------
ಪ್ರಧಾನಿ ನರೇಂದ್ರ ಮೋದಿ ಹೇಳೋದೊಂದು, ಮಾಡೋದೊಂದು
-ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ
ಹೇಳಿದ್ದನ್ನೆಲ್ಲ ಮಾಡಿದರೆ ಅವರು ಪ್ರಧಾನಿ ಹೇಗಾಗುತ್ತಾರೆ
---------------------
ಕರ್ನಾಟಕ ಕೋಮುಗಲಭೆಯ ತವರೂರು
-ಪ್ರಹ್ಲಾದ್ ಜೋಷಿ, ಸಂಸದ
ನಿಮ್ಮ ಪಾಲಿಗೆ ತವರು ಮನೆಯ ಉಡುಗೊರೆ.
---------------------
ದೇವೇಗೌಡರು ನನ್ನ ರಾಜಕೀಯ ಗುರು
-ಝಮೀರ್ ಅಹ್ಮದ್, ಜೆಡಿಎಸ್ ಬಂಡಾಯ ಶಾಸಕ
ಚೋರಶಿಷ್ಯನಿಗೆ ಅದೇನೋ ಗುರು ಅಂತಾರಲ್ಲ.....
---------------------
ವಂದೇ ಮಾತರಂ ಹಾಡದಿದ್ದರೆ ತಪ್ಪಿಲ್ಲ
-ರಾಮದಾಸ್ ಅಠಾವಳೆ, ಕೇಂದ್ರ ಸಚಿವ
ಹಾಡಿದರೆ ಸರಿ ಎಂದವರು ಯಾರು?
---------------------
ಜಾತಿಗಳ ಮಧ್ಯೆ ಬೆಂಕಿ ಹಚ್ಚುತ್ತಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ನೊಬೆಲ್ ಪ್ರಶಸ್ತಿ ಕೊಡಬೇಕು
-ಕೆ.ಎಸ್.ಈಶ್ವರಪ್ಪ, ಬಿಜೆಪಿ ನಾಯಕ
ನಿಮಗೆ ಗೊಬೆಲ್ಸ್ ಪ್ರಶಸ್ತಿ ಕೊಟ್ಟರೆ ಹೇಗೆ?
---------------------
ಕೇರಳ ಈಗ ದೇವರ ನಾಡಾಗಿ ಉಳಿದಿಲ್ಲ
- ಮೀನಾಕ್ಷಿ ಲೇಖಿ, ಬಿಜೆಪಿ ಸಂಸದೆ
ದೇವರು ನಿಮ್ಮ ಕೈ ಬಿಟ್ಟಿರುವುದು ಈಗ ಸ್ಪಷ್ಟವಾಯಿತೇ?
---------------------
ಗೋಮಾಂಸವು ವಿಷಕಾರಿ
-ಇಂದ್ರೇಶ್ ಕುಮಾರ್, ಆರೆಸ್ಸೆಸ್ ನಾಯಕ
ನಿಮ್ಮ ಸಿದ್ಧಾಂತದಷ್ಟು ವಿಷವೇನೂ ಅದರಲ್ಲಿಲ್ಲ.
---------------------
ನಗುವಿಗಿಂತ ಉತ್ತಮ ಮದ್ದು ಬೇರೆ ಇಲ್ಲ
-ಬಾಬಾ ರಾಮ್ದೇವ್, ಯೋಗಗುರು
ನಿಮ್ಮ ಪತಂಜಲಿ ಉತ್ಪನ್ನದ ಕುರಿತ ಜೋಕುಗಳು ಹುಟ್ಟಿದ ಬಳಿಕ ಜನರಲ್ಲಿ ಆರೋಗ್ಯ ಹೆಚ್ಚುತ್ತಿದೆ.
---------------------
ಸೇನೆ ಇರುವುದೇ ಯುದ್ಧ ಮಾಡಲು
- ಸುಶ್ಮಾ ಸ್ವರಾಜ್, ಕೇಂದ್ರ ಸಚಿವೆ
ಸೇನೆ ಇದೆ ಎನ್ನುವ ಕಾರಣಕ್ಕಾಗಿ ಗಡಿಯಲ್ಲಿ ಇರುವೆ ಬಿಟ್ಟುಕೊಂಡಿರುವುದೇ?
---------------------
ನಾನೇನೂ ಕಿವಿಯಲ್ಲಿ ಹೂವು ಇಟ್ಟುಕೊಂಡಿಲ್ಲ
-ಸಚಿವ ಡಿ.ಕೆ. ಶಿವಕುಮಾರ್, (ಐಟಿ ದಾಳಿಯ ಬಳಿಕ)
ಕಿವಿಯಲ್ಲಿ ಕಮಲದ ಹೂವು ಇಟ್ಟುಕೊಂಡಿದ್ದರೆ ಈ ದಾಳಿ ನಡೆಯುತ್ತಿರಲಿಲ್ಲ.