ಭಾರತದ ಮುಖ್ಯ ನ್ಯಾಯಾಧೀಶರಾಗಬೇಕೇ?
ಗಂಭೀರವಾದ ನೈತಿಕತೆ ದೋಷವಿರುವ ಒಬ್ಬ ನ್ಯಾಯಾಧೀಶ
ಆಗಸ್ಟ್ 27ರಂದು ಭಾರತದ ಮುಖ್ಯ ನ್ಯಾಯಾಧೀಶ (ಚೀಫ್ ಜಸ್ಟಿಸ್-ಸಿಜೆಐ) ಜೆ.ಎಸ್.ಖೇಹರ್ ನಿವೃತ್ತರಾಗಲಿದ್ದಾರೆ. ಮುಂದಿನ ಸಿಜೆಐ ಆಗಲಿರುವವರು ಜಸ್ಟಿಸ್ ದೀಪಕ್ ಮಿಶ್ರಾ. ಆದರೆ ಅವರು ಕೇವಲ ಹಿರಿತನದ ಆಧಾರದಲ್ಲಿ ಆ ಹುದ್ದೆಗೆ ನೇಮಕವಾಗಬೇಕೇ?
ಸಿಜೆಐ ಒಂದು ಸಾಂವಿಧಾನಿಕ ಹುದ್ದೆ ಮತ್ತು ಈ ಹುದ್ದೆಯ ಲ್ಲಿರುವವರು 31 ಮಂದಿ ಸುಪ್ರೀಂ ಕೋರ್ಟ್ನ ನ್ಯಾಯಾಧೀಶರು, 1,000ಕ್ಕೂ ಹೆಚ್ಚು ಮಂದಿ ಉಚ್ಚನ್ಯಾಯಾಲಯಗಳ ನ್ಯಾಯಾಧೀಶರು ಹಾಗೂ 16,000ಕ್ಕೂ ಹೆಚ್ಚು ಮಂದಿ ಅಧೀನ ನ್ಯಾಯಾಲಯಗಳ ನ್ಯಾಯಾಧೀಶರನ್ನೊಳಗೊಂಡ ದೇಶದ ನ್ಯಾಯಾಂಗದ ಅಧ್ಯಕ್ಷತೆ ವಹಿಸುತ್ತಾರೆ; ಮುಖ್ಯಸ್ಥರಾಗಿರುತ್ತಾರೆ. ಸಿಜೆಐ, ಸಂಕೀರ್ಣ ಸಾಂವಿಧಾನಿಕ ವಿಷಯಗಳು, ದೇಶದ ಕಾನೂನು ವ್ಯವಸ್ಥೆ (ರೂಲ್ ಆಫ್ ಲಾ)ಯ ಮೇಲೆ ಪರಿಣಾಮ ಬೀರುವ ವಿಷಯಗಳು, 1.3 ಬಿಲಿಯ ಜನರ ಬದುಕು ಹಾಗೂ ಸ್ವಾತಂತ್ರಕ್ಕೆ ಸಂಬಂಧಿಸಿದ ವಿಷಯಗಳು ಇವೆಲ್ಲವುಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ದೇಶದ ಅತ್ಯುನ್ನತ ನ್ಯಾಯಾಲಯದಲ್ಲಿ ನ್ಯಾಯ ನೀಡುತ್ತಾರೆ. ರೆಗ್ಯುಲರ್ ಸಿವಿಲ್ ಮತ್ತು ಕ್ರಿಮಿನಲ್ ಅಪೀಲುಗಳಲ್ಲಿ ನ್ಯಾಯದಾನ ಮಾಡುತ್ತಾರೆ.
ಸುಪ್ರೀಂ ಕೋರ್ಟ್ನ ಮುಖ್ಯಸ್ಥರಾಗಿ ಸಿಜೆಐಗೆ ದೇಶದ ಆಡಳಿತದಲ್ಲಷ್ಟೇ ವ್ಯಾಪಕವಾದ ಅಧಿಕಾರಗಳಿರುವುದಲ್ಲ. ನ್ಯಾಯಪೀಠಗಳನ್ನು ರಚಿಸಿ ಅವುಗಳಿಗೆ ವಿಷಯಗಳನ್ನು, ಹಲವು ವೇಳೆ ರಾಜಕೀಯವಾಗಿ ತುಂಬ ಸೂಕ್ಷ್ಮವಾದ ಪ್ರಕರಣಗಳನ್ನು ಹಂಚುವುದರಲ್ಲೂ ಅವರಿಗೆ ಭಾರೀ ಅಧಿಕಾರವಿದೆ.
ಮೊದಲ ನ್ಯಾಯಾಧೀಶರ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಹೀಗೆ ಹೇಳಿತ್ತು: ‘‘ನ್ಯಾಯಾಧೀಶರು ನಿಷ್ಠುರ ಸ್ವಭಾವದವರಾಗಿದ್ದು ಕಠಿಣ ಪ್ರವೃತ್ತಿಯವರಾಗಿರಬೇಕು; ಆರ್ಥಿಕ ಅಥವಾ ರಾಜಕೀಯ ಅಧಿಕಾರದ ಮುಂದೆ ನಡುಬಗ್ಗಿ ನಿಲ್ಲುವವರಾಗಿರಬಾರದು ಮತ್ತು ಅವರು ರೂಲ್ ಆಫ್ ಲಾದ ತಿರುಳು ತತ್ವಗಳನ್ನು ಎತ್ತಿ ಹಿಡಿಯಬೇಕು...’’
ಎರಡನೆಯ ನ್ಯಾಯಾಧೀಶರ ಪ್ರಕರಣದಲ್ಲಿ 1993ರಲ್ಲಿ ಸುಪ್ರೀಂ ಕೋರ್ಟ್ನ ಅಭಿಪ್ರಾಯ ಹೀಗಿತ್ತು: ‘‘ಕಾನೂನು ಪ್ರವೃತ್ತಿಯಲ್ಲಿ ಕೀರ್ತಿ ಪಡೆದಿರುವ ಹಾಗೂ ಎಲ್ಲರಿಗೂ ತಿಳಿದಿರುವ ಹಿನ್ನೆಲೆ ಹೊಂದಿರುವ ವ್ಯಕ್ತಿ ಉನ್ನತ ನ್ಯಾಯಾಧೀಶರಾಗಿ ನೇಮಕಗೊಳ್ಳಬೇಕೆಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಈ ಉನ್ನತ ಹುದ್ದೆಗಳಿಗೆ ನಿಷ್ಕಳಂಕ ವ್ಯಕ್ತಿತ್ವ ಹೊಂದಿರುವವರು ನೇಮಕವಾಗುವಂತೆ ಹಾಗೂ ಅನುಮಾನಾಸ್ಪದ ನಡತೆಯವರು ಪ್ರವೇಶ ಪಡೆಯದಂತೆ ನೋಡಿಕೊಳ್ಳಬೇಕು...’’
ಹೀಗೆ, ಅಪೆಕ್ಸ್ ಮತ್ತು ಹೈಕೋರ್ಟ್ಗಳಿಗೆ ನ್ಯಾಯಾಧೀಶರನ್ನು ನೇಮಕ ಮಾಡುವ ಪ್ರಕ್ರಿಯೆಯಲ್ಲಿ ಸುಪ್ರೀಂ ಕೋರ್ಟ್ನ ಸಿಜೆಐಗೆ ಬಹಳ ಮಹತ್ವ ನೀಡಿದೆ. ಯಾಕೆಂದರೆ ದೇಶದ ನ್ಯಾಯಾಂಗದ ಭವಿಷ್ಯವನ್ನು ರೂಪಿಸುವುದರಲ್ಲಿ ಸಿಜೆಐ ಅಪಾರವಾದ ಅಧಿಕಾರ ಹೊಂದಿರುತ್ತಾರೆ.
ಜಮೀನು ಮಂಜೂರಾತಿ ಪ್ರಕರಣ
ತನ್ನ ನಡತೆಯಲ್ಲಿ ಗಂಭೀರ ಸ್ವರೂಪದ ಒಂದು ಕೊರತೆಯಂತೆ ಕಾಣುವ ತನ್ನ ನಡೆಯಿಂದಾಗಿ ನ್ಯಾಯಮೂರ್ತಿ ಮಿಶ್ರಾ ಹಲವರಿಗೆ ಆಶ್ಚರ್ಯ ಉಂಟು ಮಾಡಿದ್ದಾರೆ.
1979ರಲ್ಲಿ (ಅವರು ಓರ್ವ ವಕೀಲನಾಗಿದ್ದಾಗ) 2 ಎಕರೆ ಕೃಷಿಭೂಮಿಗೆ ಅರ್ಜಿ ಸಲ್ಲಿಸಿ ಅವರು ಒಡಿಶಾ ಸರಕಾರದಿಂದ ಗೇಣಿಗೆ ಭೂಮಿ ಪಡೆದಿದ್ದರು. (ಭೂಮಿ ಮಂಜೂರಾಗಲು ಇದ್ದ ಶರತ್ತಿನಂತೆ) ಅವರು ಸಲ್ಲಿಸಿದ್ದ ಪ್ರಮಾಣ ಪತ್ರ (ಅಫಿದವಿತ್)ದಲ್ಲಿ ಅವರು ಹೀಗೆ ಹೇಳಿದ್ದರು: ‘‘ಜಾತಿಯಲ್ಲಿ ನಾನೊಬ್ಬ ಬ್ರಾಹ್ಮಣ ಮತ್ತು ನನ್ನ ಕುಟುಂಬದ ಎಲ್ಲ ಸದಸ್ಯರೂ ಸೇರಿ ಯಾವುದೇ ಜಮೀನು ಆಸ್ತಿಯನ್ನು ಹೊಂದಿಲ್ಲ’’.
ಒಡಿಶಾ ಸರಕಾರದ ಲ್ಯಾಂಡ್ ಸೆಟಲ್ಮೆಂಟ್ ಆ್ಯಕ್ಟ್, 1962ರ ಪ್ರಕಾರ ನಡೆದ ನ್ಯಾಯಾಲಯದ ಕಲಾಪಗಳಲ್ಲಿ, 1985 ಫೆಬ್ರವರಿ 11ರಂದು ಕಟಕ್ನ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರು ನೀಡಿದ ಒಂದು ವಿವೇಕಯುತವಾದ ಆಜ್ಞೆಯ ಮೂಲಕ ಈ ಗೇಣಿ ಪತ್ರವನ್ನು ರದ್ದುಗೊಳಿಸಲಾಯಿತು.
ಆ ಆಜ್ಞೆಯಲ್ಲಿ ಹೀಗೆ ಹೇಳಲಾಗಿದೆ: ‘‘ಒಬ್ಬ ಜಮೀನು ರಹಿತ ವ್ಯಕ್ತಿಯೆಂದರೆ ಅವನು ಮತ್ತು ಅವನ ಕುಟುಂಬದ ಸದಸ್ಯರು ಎರಡು ಎಕರೆಗಿಂತ ಹೆಚ್ಚು ಜಮೀನು ಹೊಂದಿರಬಾರದು ಮತ್ತು ಬೇಸಾಯವಲ್ಲದೆ ಬದುಕಲು ಲಾಭದಾಯಕವಾದ ಬೇರೆ ಯಾವುದೇ ದಾರಿಗಳು ಇರಕೂಡದು’’.
‘‘ಆದ್ದರಿಂದ ಪ್ರತಿವಾದಿಯು (ನ್ಯಾಯಾಧೀಶ ಮಿಶ್ರಾ) ಓರ್ವ ಭೂರಹಿತ ವ್ಯಕ್ತಿಯಾಗಿರಲಿಲ್ಲ. ಹಾಗಾಗಿ ಕೃಷಿ ಉದ್ದೇಶಕ್ಕಾಗಿ ಸರಕಾರದ ಜಮೀನು ಪಡೆಯಲು ಅವರು ಅರ್ಹರಾಗಿರಲಿಲ್ಲ ಎಂದು ನನಗೆ ಮನವರಿಕೆಯಾಗಿದೆ. ಜಮೀನು ಪಡೆದಾತ ತಪ್ಪು ಪ್ರಾತಿನಿಧ್ಯ (ಮಿಸ್ ರೆಪ್ರೆಸೆಂಟೇಶನ್) ಮತ್ತು ವಂಚನೆಯ ಮೂಲಕ ಗೇಣಿಗೆ ಜಮೀನು ಪಡೆದಿದ್ದಾರೆಂಬುದು ನನಗೆ ದೃಢಪಟ್ಟಿದೆ’’.
ಚಿತ್ತರಂಜನ್ ಮೊಹಾಂತಿ ಎಂಬವರು ಒಡಿಶಾದ ಹೈಕೋರ್ಟ್ ನಲ್ಲಿ ಸಲ್ಲಿಸಿದ ಒಂದು ಮೇಲ್ಮನವಿ ಅರ್ಜಿಯ ವಿಚಾರಣೆ ಮಾಡಿದ ನ್ಯಾಯಾಲಯವು 2012ರ ಜನವರಿ 18ರಂದು ಒಂದು ಆಜ್ಞೆ ನೀಡಿತು. ಅದರ ಪ್ರಕಾರ ಅಕ್ರಮವಾಗಿ ಭೂಮಿಯ ಒತ್ತುವರಿ, ಸರಕಾರಿ ಜಮೀನುಗಳನ್ನು ವಶಪಡಿಸಿಕೊಂಡ ಪ್ರಕರಣಗಳ ವಿಚಾರಣೆ ನಡೆಸುವಂತೆ ನ್ಯಾಯಾಲಯವು ಸಿಬಿಐಗೆ ಆದೇಶಿಸಿತು.
ಆ ಆದೇಶದ ಪ್ರಕಾರ ವಿಚಾರಣೆ ನಡೆಸಿದ ಸಿಬಿಐ 2013ರ ಮೇ 30ರಂದು ಸಲ್ಲಿಸಿದ ಅಂತಿಮ ಸ್ಥಿತಿಗತಿ (ಸ್ಟೇಟಸ್) ವರದಿಯಲ್ಲಿ ಸ್ಪಷ್ಟವಾಗಿ ಹೀಗೆ ಹೇಳಿದೆ: ‘‘ಈ ಪ್ರಕರಣದಲ್ಲಿ ರಘುನಾಥ ಮಿಶ್ರಾರವರ ಮಗ ದೀಪಕ್ ಮಿಶ್ರಾರವರಿಗೆ 30-11-1979ರಂದು ವೌಜಬಿದ್ಯಾಕರ್ಪುರ್ನ 330ನೆ ಸಂಖ್ಯೆಯ ಖಾತಾ, ಪ್ಲಾಟ್ ನಂಬರ್ 34ರಲ್ಲಿ ಅಂದಿನ ತಹಶೀಲ್ದಾರ್ ಶ್ರೀ ಜೆ.ಎ.ಖಾನ್ ಎರಡು ಎಕರೆ ಜಮೀನು ಮಂಜೂರು ಮಾಡಿದ್ದರು’’.
‘‘ತಹಶೀಲ್ದಾರರ ಮಂಜೂರಾತಿ ಆದೇಶವನ್ನು 11-2-1985ರ ಕಟಕ್ನ ಎಡಿಎಂರವರ ಆದೇಶದ ಪ್ರಕಾರ ರದ್ದುಗೊಳಿಸಲಾಯಿತು. ಆದರೆ ಕಟಕ್ನ ತಹಶೀಲ್ದಾರ್ 6-1-2012ರ ನಂತರವಷ್ಟೇ ಹೊರಡಿಸಿದ ಆಜ್ಞೆಯ ಪ್ರಕಾರ ದಾಖಲೆಯನ್ನು 6-1-2012ರಂದೇ ಸರಿಪಡಿಸಲಾಯಿತು. ಅನರ್ಹ ಫಲಾನುಭವಿಗಳಿಗೆ ತಹಶೀಲ್ದಾರರು ಸರಕಾರಿ ಜಮೀನನ್ನು ಅಕ್ರಮವಾಗಿ ಗೇಣಿಗೆ ಕೊಟ್ಟಿರುವ ಹಲವು ಪ್ರಕರಣಗಳನ್ನು ವಿಚಾರಣೆಯು ಈಗಾಗಲೇ ಬಹಿರಂಗಗೊಳಿಸಿದೆ’’.
ಘೋಷಣಾ ಪತ್ರದಲ್ಲಿ ಸುಳ್ಳು ಹೇಳಿಕೆ ನೀಡುವುದು ಐಪಿಸಿಯ ಸೆಕ್ಷನ್ 199 ಮತ್ತು ಸೆಕ್ಷನ್ 200ರ ಪ್ರಕಾರ ಗಂಭೀರ ಸ್ವರೂಪದ ಅಪರಾಧವಾಗಿದ್ದು ಇದಕ್ಕೆ 7 ವರ್ಷಗಳವರೆಗಿನ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ನ್ಯಾಯಾಧೀಶ ಮಿಶ್ರಾ ಹೀಗೆ ಆ ಪ್ರಮಾಣ ಪತ್ರದಲ್ಲಿ ಸುಳ್ಳು ಹೇಳಿಕೆ ನೀಡಿರುವುದು ಒಂದು ಗಂಭೀರ ಅಪರಾಧವಾಗಿರುವಾಗ, ಇಂತಹ ಒಬ್ಬ ವ್ಯಕ್ತಿ, ಆತ ಅತ್ಯಂತ ಹಿರಿಯ ನ್ಯಾಯಾಧೀಶನಾಗಿದ್ದರೂ ಕೂಡ ಈ ದೇಶದ ಸಿಜೆಐ ಆಗಬಹುದೇ?
ಕೃಪೆ: thewire