ಪ್ರತಿಮೆ ಮಾನವ ಕೊನೆಗೂ ನಗಲಿಲ್ಲ: ನಗಿಸಲು ಯತ್ನಿಸಿದವರಿಗೆ ನಗದೂ ಇಲ್ಲ
ಶಿಲೆಮಾನವನ ರಾಜಗಾಂಭೀರ್ಯಕ್ಕೆ ಪುತ್ತೂರು ಫಿದಾ
ಪುತ್ತೂರು, ಆ. 9: ಜೀವನದಲ್ಲಿ ನಗು ಬೇಕು. ಇತರರನ್ನು ನಗಿಸಬೇಕು. ನಗುನಗುತಾ ಬಾಳಬೇಕು. ಆದರೆ ಇದಕ್ಕೆ ತದ್ವಿರುದ್ಧ ಸ್ಪರ್ಧೆ ನಡೆಸಿದರೆ ಹೇಗಾದೀತು..?
ಪುತ್ತೂರಲ್ಲಿ ಆದದ್ದೂ ಇದುವೇ..! ಒಬ್ಬ ಅಜಾನುಬಾಹು ವ್ಯಕ್ತಿಯನ್ನು ವೇದಿಕೆಯಲ್ಲಿ ನಿಲ್ಲಿಸಿ ಈತನನ್ನು ನಗಿಸಿದರೆ 51,000/- ರೂ. ಬಹುಮಾನ ಎಂಬ ಸವಾಲು ಹಾಕಲಾಗಿತ್ತು. ಹಣದ ಆಸೆ ಮಾತ್ರವಲ್ಲ ದಾಖಲೆ ವೀರನಾಗಬೇಕೆಂಬ ಬಯಕೆಯಿಂದ ಹಲವು ಮಂದಿ ಮುಂದೆ ಬಂದರು. ನಗಿಸಲು ಪ್ರಯತ್ನಿಸಿದರು. ನಾನಾ ಕಸರತ್ತು ನಡೆಸಿದರು. ವಿವಿಧ ಭಂಗಿಯ ನಟನೆ ಮಾಡಿದರು. ಜೋಕ್ಸ್ ಗಳ ಸುರಿಮಳೆಗೈದರು. ಶಿಲೆಯಂತೆ ನಿಂತ ಆ ಅಜಾನುಬಾಹು ವ್ಯಕ್ತಿ ನಗೋದು ಬಿಡಿ ಕಣ್ರೆಪ್ಪೆಯನ್ನೂ ಮಿಟುಕಿಸಿಲ್ಲ. ಒಂದಿಂಚೂ ಅಲುಗಾಡಲಿಲ್ಲ.
ಪುತ್ತೂರಿನ ಕೋರ್ಟ್ ರಸ್ತೆಯಲ್ಲಿರುವ ಟೋಪ್ಕೋ ಝಮ್ ಝಮ್ ಜ್ಯುವೆಲ್ಲರಿ ಆಕರ್ಷಣೆಯಾಗಿ ಚೆನ್ನೈಯಿಂದ ಶಿಲಾಮಾನವನನ್ನು ಕರೆತರಲಾಗಿತ್ತು. ಏಕಾಗ್ರತೆಯನ್ನು ಮೈಗೂಡಿಸಿಕೊಂಡು 1982 ರಿಂದ ಚೆನ್ನೈಯ ವಿಜಿಪಿ ಗೋಲ್ಡನ್ ಬೀಚ್ ನಲ್ಲಿ 'ಶಿಲಾ ಮಾನವ' (STATUE MAN) ನಾಗಿ ಪ್ರದರ್ಶನ ನೀಡುತ್ತಿರುವ ತಮಿಳುನಾಡು, ಪನಿಯೂರು ಗ್ರಾಮದ ಮುಹಮ್ಮದ್ ರಫೀಕ್ ಪುತ್ತೂರಿನಲ್ಲಿ ಆಕರ್ಷಣೆ, ಆಶ್ಚರ್ಯ ಹಾಗೂ ಕುತೂಹಲದ ವಸ್ತುವಾಗಿದ್ದರು.
ಟೋಪ್ಕೋ ಜ್ಯುವೆಲ್ಲರಿಯ ಎದುರುಗಡೆ ವೇದಿಕೆಯಲ್ಲಿ ತಲೆಗೊಂದು ಪೇಟ, ಕೈಯಲ್ಲೊಂದು ಗೂಟ ಹಿಡಿದು ಹಳದಿ ಬಣ್ಣದ ರಾಜ ಪೋಷಾಕಿನಲ್ಲಿ ನಿಂತುಕೊಂಡರೆ ಆತನನ್ನು ಅಲುಗಾಡಿಸಲೂ ಸಾಧ್ಯವಾಗಲಿಲ್ಲ. 'ನಗಿಸಿದರೆ ನಗದು' ಎಂಬ ತಲೆಬರಹದಲ್ಲಿ ಪ್ರತಿಮೆ ಮಾನವನನ್ನು ಮುಟ್ಟದೆ ನಗಿಸಿದವರಿಗೆ ಭಾರೀ ಬಹುಮಾನ ಕಾದಿತ್ತು. ಆದರೆ ಆತ ನಗಬೇಕೇ.
ಟೋಪ್ಕೋ ಉದ್ಘಾಟನೆ ದಿನವಾದ ಸೋಮವಾರ ಮಾತ್ರ ನಿಗದಿಯಾಗಿದ್ದ ಈ ಪ್ರದರ್ಶನ ಜನರ ಬೇಡಿಕೆಯ ಮೇರೆಗೆ ಮಂಗಳವಾರಕ್ಕೂ ಮುಂದುವರೆಸಲಾಗಿತ್ತು. ಪುತ್ತೂರಿಂದ ನಗಿಸಿಯೇ ಕಳುಹಿಸುತ್ತೇವೆಂದು ಪುತ್ತೂರ ಜನರು ಪಣತೊಟ್ಟರು. ಆದರೆ ಆದದ್ದೇ ಬೇರೆ. ಉಹುಂ... ನಗಿಸಲು ಬಿಡಿ, ಒಂಚೂರು ಅಲುಗಾಡಿಸಲೂ ಆಗಲಿಲ್ಲ.
ಥೇಟ್ ಪ್ರತಿಮೆಯೇ. ಸಹಸ್ರ ಸಹಸ್ರ ಸಂಖ್ಯೆಯ ಜನ ಎರಡು ದಿನಗಳ ಕಾಲ ಹರಸಾಹಸ ಪಟ್ಟರೂ ಶಿಲಾ ಮಾನವ ಏಕಚಿತ್ತದಿಂದ ಶಿಲೆಯಾಗಿಯೇ ನಿಂತು ದಾಖಲೆ ಬರೆದರು. ತಮಿಳು, ಮಲೆಯಾಳಂ, ಕನ್ನಡ, ತುಳು ಯಾವುದೇ ಭಾಷೆಯ ಜೋಕ್, ಮಿಮಿಕ್ರಿ, ಡ್ಯಾನ್ಸ್-ಲಾಗ ಹಾಕಿದರೂ ಫಲಿತಾಂಶ ಶೂನ್ಯ.
ಆತನ ನಗಿಸಲು ತಾಸುಗಟ್ಟಲೆ ಬೆವರು ಸುರಿಸಿ ಪೆಚ್ಚು ಮೋರೆ ಹಾಕಿ ಹಿಂದಿರುಗಿದವರೂ ಇದ್ದಾರೆ. ಆತನಂತೆ ಶಿಲೆಯಾಗಿ ನಿಂತು ಪ್ರತಿಸ್ಪರ್ಧೆ ಒಡ್ಡಲು ಪ್ರಯತ್ನಿಸಿ ವಿಫಲರಾದವರೂ ಇದ್ದಾರೆ. ನಾನಾ ಭಂಗಿಯ ಕಸರತ್ತು ನಡೆಸಿದವರೂ ಇದ್ದಾರೆ. ಆದರೆ 35 ವರ್ಷಗಳ ಶಿಲಾಮಾನವನ ದಾಖಲೆಯನ್ನು ಯಾರಿಗೂ ಮುರಿಯಲಾಗಲಿಲ್ಲ. ನಗಿಸಲಾಗಿಲ್ಲ. ಕೊನೆಪಕ್ಷ ಸೆಲ್ಫಿ ತೆಗೆಸೋಣ ಎಂದು ಸಹಸ್ರಾರು ಮಂದಿ ಮುಗಿಬಿದ್ದರು. ಹಲವರು ಫೇಸ್ಬುಕ್ ಲೈವ್ ವೀಡಿಯೊ ಮಾಡಿದರು. ಅಂತೂ ಶಿಲಾಮಾನವನ ಸುದ್ದಿ ವೈರಲ್ ಆಯಿತು.
ಮಂಗಳವಾರ ಸಂಜೆ ಸ್ಪರ್ಧೆಯ ಅಂತಿಮ ಹಂತಕ್ಕೆ ತಲುಪಿದಾಗ ಮಕ್ಕಳು ಮಹಿಳೆಯರೆನ್ನದೆ ಸೇರಿದ ಜನಸ್ತೋಮ ಸ್ಪರ್ಧೆ ಕಳೆದಾದರೂ ವೇದಿಕೆಯ ಲ್ಲೊಮ್ಮೆ ನಕ್ಕುಬಿಡಿ ಎಂದು ಪರಿಪರಿಯಾಗಿ ವಿನಂತಿಸಿದಾಗ ಶಿಲಾ ಮಾನವ ತಿರುವಿದ ದಪ್ಪ ಮೀಸೆಯ ಅಡಿಯಿಂದ ನಗು ಚಿಮ್ಮಿಸಿದರು. ಎರಡು ದಿನಗಳಲ್ಲಿ ನಗದ ಅವರು ಕೊನೆಗೂ ನಕ್ಕರು. ಜನ ಶಹಬ್ಬಾಸ್ ಗಿರಿಯ ಚಪ್ಪಾಳೆ ತಟ್ಟಿದರು. ಅಭಿನಂದಿಸಿದರು.
ಮಾತುಗಾರ ನೌಫಾಲ್ ಕುಡ್ತಮುಗೇರು ಅವರ ಎರಡು ದಿನಗಳ ಶಿಲಾಮಾನವನ ಕುರಿತ ನಿರ್ವಹಣೆ ಜನರಿಗೆ ಮುದ ನೀಡಿತು. ಕುಶಾಲನಗರದ ಅನಸ್ ಅವರಿಗೆ ಸಹಕಾರ ನೀಡಿದರು. ಸ್ಪರ್ಧೆಯ ಕೊನೆಯ ಸಂದರ್ಭ ಟೋಪ್ಕೋ ಸಂಸ್ಥೆಯ ವತಿಯಿಂದ ಟಿ.ಕೆ. ಮಹಮ್ಮದ್ ಹಾಗೂ ರಶೀದ್ ವಿಟ್ಲ 'ಪ್ರತಿಮೆ ಮಾನವ' ಮಹಮ್ಮದ್ ರಫೀಕ್ ರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಿದರು.
ಟೋಪ್ಕೋ ಸಿಬ್ಬಂದಿಗೆ ವಿಶೇಷ ಸ್ಪರ್ಧೆ; ಸ್ಪರ್ಧೆಯ ಸಮಯ ಕಳೆದ ಬಳಿಕ ವೇದಿಕೆ ಇಳಿದು ನೇರವಾಗಿ ಟೋಪ್ಕೋ ಝಮ್ ಝಮ್ ಶೋರೂಮ್ ಒಳಬಂದ ಪ್ರತಿಮೆ ಮಾನವ ಸಿಬ್ಬಂದಿ ಜೊತೆ ಸೆಲ್ಫಿ ತೆಗೆಸಿಕೊಂಡರು. ಶೋರೂಮ್ ಒಳಗೂ 5 ನಿಮಿಷ ಶಿಲೆಯಂತೆ ನಿಂತರು. ಈ ಸಂದರ್ಭ ಕುತ್ತಿಗೆಯಿಂದ ಸೊಂಟದ ತನಕ ಮುಟ್ಟಿ ನಗಿಸಲು ಪ್ರಯತ್ನಿಸುವ ಸವಾಲು ಹಾಕಿದರು. ಏನೇ ಕಚಗುಳಿ ಮಾಡಿದರೂ, ಮೀಸೆ ಎಳೆದರೂ ಜಪ್ಪೆನ್ನದ ಮೃದು ಮನಸ್ಸಿನ ರಫೀಕ್ ಅದ್ಭುತವನ್ನೇ ಸೃಷ್ಟಿಸಿದರು. ಒಟ್ಟಿನಲ್ಲಿ ಪುತ್ತೂರ ಜನತೆಗೆ ಅಚ್ಚರಿ ಹುಟ್ಟಿಸಿ, ಸೆಲೆಬ್ರಿಟಿಯಾದರು.