ಕತರ್ ನಲ್ಲಿ ಸಂಬಳವೂ ಸಿಗದೆ, ಅನಾರೋಗ್ಯಕ್ಕೀಡಾಗಿ ಸಂಕಷ್ಟದಲ್ಲಿದ್ದ ಎರ್ಮಾಳ್ ನಿವಾಸಿಗೆ ನೆರವಾದ QIFF
ಕತರ್, ಆ.13: ಅತ್ತ ಕೆಲಸ ಮಾಡಿದ್ದಕ್ಕಾಗಿ ಸಂಬಳವೂ ಸಿಗದೆ, ಇತ್ತ ಊರಿಗೂ ಹೋಗಲಾಗದೆ ಕಂಗಾಲಾಗಿದ್ದ ಎರ್ಮಾಳ್ ನಿವಾಸಿಯೊಬ್ಬರಿಗೆ QIFF ತಂಡ ನೆರವಾಗಿದೆ.
ಎರ್ಮಾಳ್ ನಿವಾಸಿ ಶಹಬಾನ್ ಬ್ಯಾರಿಯವರ ಪುತ್ರ ಅಬೂಬಕರ್ ಸಿದ್ದೀಕ್ ದೋಹಾ ಕತರ್ ನ ಕೈಗಾರಿಕಾ ವಲಯದಲ್ಲಿ 2 ವಷ೯ಗಳಿಂದ ಘನ ವಾಹನದ ಚಾಲಕನಾಗಿ ದುಡಿಯುತ್ತಿದ್ದರು. ಆದರೆ ಇವರು ಕೆಲಸ ಮಾಡುತ್ತಿದ್ದ ಕಂಪೆನಿ 3 ತಿಂಗಳಿನಿಂದ ಸಂಬಳ ನೀಡಿರಲಿಲ್ಲ. ಹಲವು ಬಾರಿ ಪ್ರಾಯೋಜಕರಿಗೆ ಹಾಗೂ ಕಂಪೆನಿಯ ಸಾರ್ವಜನಿಕ ಸಂಪರ್ಕಾಧಿಕಾರಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಒಂದೆಡೆ ಸಂಬಳ ಸಿಗದೆ ನೊಂದಿದ್ದ ಸಿದ್ದೀಕ್ ಅನಾರೋಗ್ಯಕ್ಕೀಡಾಗಿ ಆತಂಕದಲ್ಲಿದ್ದರು.
ಈ ಸಂದರ್ಭ ಅವರು, QIFFನ ಜಬ್ಬಾರ್ ಮುಲ್ಕಿಯವರಲ್ಲಿ ತನ್ನ ಪರಿಸ್ಥಿತಿಯ ಬಗ್ಗೆ ವಿವರಿಸಿದರು. ಕೂಡಲೇ ಜಬ್ಬಾರ್ QIFF ಕನಾ೯ಟಕ ಘಟಕದ ಸಾವ೯ಜನಿಕ ಸಂಪಕಾ೯ಧಿಕಾರಿ ಸಲೀಂ ಉಳ್ಳಾಲರಿಗೆ ವಿಷಯ ತಿಳಿಸಿದರು. ಕನಾ೯ಟಕ ಘಟಕದ ಲತೀಫ್ ಮಡಿಕೇರಿ, ಸಲೀಂ ಉಳ್ಳಾಲ, ಶರೀಫ್ ವಗ್ಗ, ಫಾರೂಕ್ ಬೋಳಂತೂರ್, ಅಶ್ರಫ್ ಮತ್ತು ಆಸಿಫ್ ನಿಟ್ಟೆಯವರ ತಂಡವು ಸಿದ್ದೀಕ್ ರನ್ನು ಸಂಪರ್ಕಿಸಿ, ಕಾನೂನು ಹೋರಾಟಕ್ಕೆ ಮುಂದಾಯಿತು. ಇದಕ್ಕಾಗಿ ಕಾರ್ಮಿಕ ನ್ಯಾಯಾಲಯ, ಮಾನವ ಹಕ್ಕು ಮತ್ತು ಪೋಲಿಸ್ ಇಲಾಖೆಗೆ ದೂರು ನೀಡಲು ಸಿದ್ಧವಾಗಿತ್ತು.
ಸಿದ್ದೀಕ್ ಅನಾರೋಗ್ಯದಿಂದಿದ್ದ ಕಾರಣ ತನಗೆ ಸಿಗಬೇಕಾದ ಯಾವುದೇ ಹಕ್ಕಿನ ಅಗತ್ಯವಿಲ್ಲ. ಟಿಕೆಟ್ ನೀಡಿ ಊರಿಗೆ ಕಳುಹಿಸಿದರೆ ಸಾಕು ಎಂದು ವಿನಂತಿಸಿದರು. ಆದ್ದರಿಂದ ಕಾನೂನು ಹೋರಾಟವನ್ನು ಕೈಬಿಟ್ಟು, ಕಂಪೆನಿಯ ಪಿಆರ್ ಒರನ್ನು ಸಂಪಕಿ೯ಸಿ ಟಿಕೆಟ್ ಮತ್ತು ಸಿಐಡಿಯಲ್ಲಿ ಇದ್ದ ಪಾಸ್ ಪೋರ್ಟನ್ನು ಹಿಂದಕ್ಕೆ ಪಡೆಯಲಾಯಿತು. ಪ್ರಯಾಣದ ವೆಚ್ಚವನ್ನೂ ಭರಿಸಿ ಆ.11ರಂದು ಸಿದ್ದೀಕ್ ರನ್ನು ಊರಿಗೆ ಕಳುಹಿಸಲಾಯಿತು.