ಯೋಗಿ ಸರಕಾರದ ಆದೇಶ ಧಿಕ್ಕರಿಸಿದ ಉ.ಪ್ರದೇಶದ ಮದ್ರಸಗಳು
ದೇಶಪ್ರೇಮ ಪ್ರದರ್ಶನದ ವಿಷಯವಲ್ಲ: ಮದ್ರಸ ಮುಖ್ಯಸ್ಥರು
ಲಕ್ನೋ,ಆ.15: ಉತ್ತರ ಪ್ರದೇಶದ ಹಲವಾರು ಮದ್ರಸಗಳು ಮಂಗಳವಾರ ರಾಜ್ಯ ಸರಕಾರದ ವಿವಾದಾತ್ಮಕ ಆದೇಶವನ್ನು ಧಿಕ್ಕರಿಸಿದವು. ಸ್ವಾತಂತ್ರೋತ್ಸವ ಆಚರಣೆಯ ವೀಡಿಯೊ ದಾಖಲೀಕರಿಸುವಂತೆ ಇಸ್ಲಾಮಿಕ್ ಶಿಕ್ಷಣ ಸಂಸ್ಥೆಗಳಿಗೆ ಸರಕಾರವು ಆದೇಶಿಸಿತ್ತು.
ರಾಜ್ಯದ ಮೂರು ಬೃಹತ್ ಮದ್ರಸ ಕೇಂದ್ರಗಳಾದ ಕಾನ್ಪುರ, ಮೀರತ್ ಮತ್ತು ಬರೇಲಿಗಳಲ್ಲಿ ವಿದ್ಯಾರ್ಥಿಗಳು ಕವಿ ಮುಹಮ್ಮದ್ ಇಕ್ಬಾಲ್ರ ದೇಶಪ್ರೇಮದ ಗೀತೆ ‘ಸಾರೆ ಜಹಾಂ ಸೆ ಅಚ್ಛಾ’ ಹಾಡಿದರು. ಸ್ವಾತಂತ್ರೋತ್ಸವ ಆಚರಣೆಯನ್ನು ದಾಖಲಿಸಲು ನಿರಾಕರಿಸಿದ ಅವರು ತಮ್ಮ ದೇಶಪ್ರೇಮಕ್ಕೆ ಪುರಾವೆಯನ್ನು ನೀಡಲು ತಾವು ಬಯಸುವುದಿಲ್ಲ. ದೇಶಪ್ರೇಮ ಪ್ರದರ್ಶನದ ವಿಷಯವಲ್ಲ ಎಂದು ಸ್ಪಷ್ಟಪಡಿಸಿದರು.
ವಿದ್ಯಾರ್ಥಿಗಳು ರಾಷ್ಟ್ರ ಧ್ವಜಾರೋಹಣ ನಡೆಸಿ ಸಾಂಪ್ರದಾಯಿಕ ವೈಭವಗಳೊಂದಿಗೆ ಸ್ವಾತಂತ್ರೋತ್ಸವವನ್ನು ಆಚರಿಸಿದ್ದಾರೆ. ಸರಕಾರದ ಆದೇಶವು ನಮ್ಮ ದೇಶಪ್ರೇಮವನ್ನು ಪರೀಕ್ಷಿಸುವ ಪ್ರಯತ್ನವಾಗಿದ್ದು, ಇದು ತಪ್ಪು ಎಂದು ಸುನ್ನಿ ಉಲೇಮಾ ಮಂಡಳಿಯ ಸಂಚಾಲಕ ಹಾಜಿ ಮುಹಮ್ಮದ್ ಸಾಲೆಹ್ ಹೇಳಿದರು.
ರಾಜ್ಯದಲ್ಲಿಯ 16,000 ಮದರಸಗಳ ಪೈಕಿ ಹೆಚ್ಚಿನವು ಸರಕಾರದ ವಿವಾದಾತ್ಮಕ ಆದೇಶವನ್ನು ಪಾಲಿಸಲಿಲ್ಲ. ಹಲವಾರು ಗಣ್ಯ ಮುಸ್ಲಿಂ ಧರ್ಮಗುರುಗಳು ಬಹಿರಂಗ ವಾಗಿಯೇ ಈ ಆದೇಶವನ್ನು ವಿರೋಧಿಸಿದರು. ಉತ್ತರ ಪ್ರದೇಶವು ದೇಶದಲ್ಲಿ ಅತಿ ಹೆಚ್ಚು ಮುಸ್ಲಿಮರನ್ನು ಹೊಂದಿರುವ ರಾಜ್ಯಗಳಲ್ಲೊಂದಾಗಿದ್ದು, ಈ ಸಮುದಾಯ ಒಟ್ಟು ಜನಸಂಖ್ಯೆಯ ಶೇ.20ರಷ್ಟಿದೆ ಮತ್ತು ಕೇವಲ 600 ಮದ್ರಸಗಳು ಸರಕಾರದ ಅನುದಾನ ವನ್ನು ಪಡೆಯುತ್ತಿವೆ.
ಬರೇಲಿಯಲ್ಲಿಯ ಅತಿ ದೊಡ್ಡ ಬರೇಲ್ವಿ ಮದ್ರಸ ಮಂಝಾರೆ ಇಸ್ಲಾಮ್ನಲ್ಲಿ ವಿದ್ಯಾರ್ಥಿಗಳು ತ್ರಿವರ್ಣ ಧ್ವಜಾರೋಹಣ ಮಾಡಿದರು. ಮುಕ್ತ ಪ್ರಾರ್ಥನಾ ಮಂದಿರದಲ್ಲಿ ಸೇರಿದ್ದ ವಿದ್ಯಾರ್ಥಿಗಳು ‘ಸಾರೆ ಜಹಾಂ ಸೆ ಅಚ್ಛಾ’ ಹಾಡಿದರು. ಮದ್ರಸ ಅಧಿಕಾರಿಗಳು ಕಾರ್ಯಕ್ರಮದ ವೀಡಿಯೊ ಚಿತ್ರೀಕರಣದ ಗೋಜಿಗೆ ಹೋಗಲಿಲ್ಲ. ಸುಮಾರು ಒಂದು ಗಂಟೆ ಕಾಲ ನಡೆದ ಮುಖ್ಯ ಕಾರ್ಯಕ್ರಮಕ್ಕೆ ಮಾಧ್ಯಮ ಪ್ರತಿನಿಧಿಗಳಿಗೆ ಪ್ರವೇಶ ನಿರಾಕರಿಸಲಾಗಿತ್ತು.
ಮೀರತ್ನಲ್ಲಿ ಎಲ್ಲ ಮದ್ರಸಗಳು ಸ್ವಾತಂತ್ರ ದಿನವನ್ನು ಆಚರಿಸಿ ರಾಷ್ಟ್ರಧ್ವಜವನ್ನು ಹಾರಿಸಿದ್ದವು. ಕಾನ್ಪುರದಲ್ಲಿಯೂ ಸರಕಾರದ ಆದೇಶವನ್ನು ಧಿಕ್ಕರಿಸಲಾಯಿತು. ವಿದ್ಯಾರ್ಥಿಗಳು ‘ಸಾರೆ ಜಹಾಂ ಸೆ ಅಚ್ಛಾ’ ಹಾಡಿದರು.