ಸಾಗರ: ಒಣಮೀನು ಮಾರುಕಟ್ಟೆ ತೆರವು ಕಾರ್ಯಾಚರಣೆ
ಸಾಗರ,ಆ.16 : ಇಲ್ಲಿನ ಒಣಮೀನು ಮಾರುಕಟ್ಟೆಯನ್ನು ಬುಧವಾರ ದಿಢೀರ್ ಕಾರ್ಯಾಚರಣೆ ಮೂಲಕ ತಾಲ್ಲೂಕು ಆಡಳಿತ ಹಾಗೂ ನಗರಸಭೆ ವತಿಯಿಂದ ಪೊಲೀಸ್ ರಕ್ಷಣೆಯಲ್ಲಿ ತೆರವುಗೊಳಿಸಲಾಯಿತು.
ಸಾಗರದ ಹೃದಯಭಾಗದಲ್ಲಿರುವ ಕೃಷ್ಣರಾಜೇಂದ್ರ ಒಡೆಯರ್ ಒಣಮೀನು ಮಾರುಕಟ್ಟೆ ಮತ್ತು ಹಸಿಮೀನು ಮಾರುಕಟ್ಟೆ ಶಿಥಿಲಗೊಂಡಿದ್ದು, ಅದನ್ನು ಪುನರ್ ನಿರ್ಮಾಣ ಮಾಡಲು ಸರ್ಕಾರದಿಂದ 2.50 ಕೋಟಿ ರೂ. ಹಣ ಬಿಡುಗಡೆಯಾಗಿದ್ದು, ಮೂರು ತಿಂಗಳ ಹಿಂದೆ ಮೀನುಗಾರಿಕೆ ಇಲಾಖೆ ಸಚಿವ ಪ್ರಮೋದ್ ಮಧ್ವರಾಜ್ ಹಾಗೂ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಶಂಕುಸ್ಥಾಪನೆ ನೆರವೇರಿಸಿದ್ದರು.
ನಗರಸಭೆ ಒಣಮೀನು ಮಾರುಕಟ್ಟೆ ವ್ಯಾಪಾರಿಗಳಿಗೆ ತಕ್ಷಣ ಮಳಿಗೆ ತೆರವುಗೊಳಿಸುವಂತೆ ನೋಟಿಸ್ ಜಾರಿ ಮಾಡಿದೆ. ಆದರೆ ವ್ಯಾಪಾರಸ್ಥರು ಅಂಗಡಿಗಳನ್ನು ಖಾಲಿ ಮಾಡಲು ಮೀನಾಮೇಷ ಎಣಿಸುತ್ತಿದ್ದರು. ನಗರಸಭೆ ನೋಟಿಸ್ಗೆ ಜಗ್ಗದ ಒಣಮೀನು ಮಾರುಕಟ್ಟೆ ವ್ಯಾಪಾರಿಗಳ ಮೇಲೆ ನಗರಸಭೆ ಬುಧವಾರ ರಾತ್ರಿ 3-30ಕ್ಕೆ ತೆರವು ಕಾರ್ಯಾಚರಣೆ ಅಸ್ತ್ರವನ್ನು ಪ್ರಯೋಗಿಸಿತ್ತು. ನೂರಾರು ಪೊಲೀಸರು, ಪೌರಕಾರ್ಮಿಕರನ್ನು ಒಳಗೊಂಡಂತೆ ಜೆಸಿಬಿ ಮೂಲಕ ರಾತ್ರೋರಾತ್ರಿ ತೆರವು ಕಾರ್ಯಾಚರಣೆ ಪ್ರಾರಂಭಿಸಿ, ಬೆಳಿಗ್ಗೆ 8 ಗಂಟೆಯೊಳಗೆ 24 ಒಣಮೀನು ಮಳಿಗೆ, 6 ಹಸಿ ಮೀನು ಮಳಿಗೆಗಳ ಕಚೇರಿ, 2 ಕೋಳಿ ಅಂಗಡಿಯನ್ನು ನೆಲಸಮಗೊಳಿಸಲಾಗಿದೆ.
ಸುಮಾರು 2.50 ಕೋಟಿ ರೂ. ವೆಚ್ಚದಲ್ಲಿ ಹಾಲಿ ತೆರವುಗೊಳಿಸಿರುವ ಜಾಗದಲ್ಲಿ ಹೈಟೆಕ್ ಮಾರುಕಟ್ಟೆ ನಿರ್ಮಾಣ ಮಾಡಲಾಗುತ್ತದೆ ಎಂದು ನಗರಸಭೆ ಅಭಿಯಂತರ ಎಚ್.ಕೆ.ನಾಗಪ್ಪ ತಿಳಿಸಿದ್ದಾರೆ.
ಒಣಮೀನು ಮತ್ತು ಹಸಿಮೀನು ಮಾರಾಟಗಾರರಿಗೆ 42 ಮಳಿಗೆಗಳನ್ನು ನಿರ್ಮಾಣ ಮಾಡಲಾಗುತ್ತದೆ. ಜೊತೆಗೆ ಮಾಂಸ ಮಾರಾಟಕ್ಕೆ ಪ್ರತ್ಯೇಕ ಮಳಿಗೆಗಳನ್ನು ನಿರ್ಮಾಣ ಮಾಡಲಾಗುತ್ತದೆ. ನಗರಸಭೆಯಿಂದ ಶುದ್ದ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಕೊಳಚೆ ನೀರನ್ನು ಸಂಗ್ರಹಿಸಿ ಅದನ್ನು ಶುದ್ದೀಕರಿಸಿ ಅದನ್ನು ಹೊರಗೆ ಬಿಡುವ ಘಟಕವನ್ನು ಯೋಜನೆಯಡಿ ನಿರ್ಮಾಣ ಮಾಡಲಾಗುತ್ತಿದೆ. ಮೀನು ಕೆಡದಂತೆ ಸಂಗ್ರಹಿಸಿ ಇಡಲು ಶೀಥಲೀಕರಣ ಘಟಕವನ್ನು ಸಹ ಸಚಿವರಾದ ಕಾಗೋಡು ತಿಮ್ಮಪ್ಪ ಅವರ ಸೂಚನೆಯಂತೆ ನಿರ್ಮಾಣ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.