1984ರ ಗಲಭೆ ಪ್ರಕರಣ: 199 ಮೊಕದ್ದಮೆ ಸಮಾಪ್ತಿ ನಿರ್ಧಾರ ಪರಿಶೀಲಿಸಲು ಸಮಿತಿ ರಚನೆ
ಹೊಸದಿಲ್ಲಿ, ಆ.16: 1984ರ ಸಿಖ್ ವಿರೋಧಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದ 199 ಮೊಕದ್ದಮೆಗಳನ್ನು ಸಮಾಪ್ತಿಗೊಳಿಸಿರುವ ವಿಶೇಷ ತನಿಖಾ ತಂಡ(ಎಸ್ಐಟಿ)ದ ನಿರ್ಧಾರವನ್ನು ಪರಿಶೋಧಿಸಲು ಸುಪ್ರೀಂಕೋರ್ಟ್ನ ಇಬ್ಬರು ಮಾಜಿ ನ್ಯಾಯಾಧೀಶರನ್ನು ಒಳಗೊಂಡಿರುವ ಮೇಲ್ವಿಚಾರಕ ಸಮಿತಿಯೊಂದನ್ನು ಸುಪ್ರೀಂಕೋರ್ಟ್ ರಚಿಸಿದೆ.
ಅಲ್ಲದೆ ಗಲಭೆಗೆ ಸಂಬಂಧಿಸಿದ ಇನ್ನೂ 42 ಪ್ರಕರಣಗಳನ್ನು ಸಮಾಪ್ತಿಗೊಳಿಸುವ ಎಸ್ಐಟಿ ನಿರ್ಧಾರದ ಬಗ್ಗೆ ಪರಿಶೀಲಿಸುವಂತೆ ಮತ್ತು ಮೂರು ತಿಂಗಳೊಳಗೆ ವರದಿ ಸಲ್ಲಿಸುವಂತೆ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ನ್ಯಾಯಾಲಯ ಪೀಠ ಸೂಚಿಸಿದ್ದು ವಿಚಾರಣೆಯನ್ನು ನವೆಂಬರ್ 28ಕ್ಕೆ ಮುಂದೂಡಿದೆ.
1984ರ ಸಿಖ್ ವಿರೋಧಿ ಗಲಭೆ ಪ್ರಕರಣದ ತನಿಖೆ ನಡೆಸಲು ಗೃಹ ಸಚಿವಾಲಯ ನೇಮಿಸಿದ್ದ ವಿಶೇಷ ತನಿಖಾ ತಂಡವು ಸಮಾಪ್ತಿಗೊಳಿಸಲು ನಿರ್ಧರಿಸಿರುವ 199 ಮೊಕದ್ದಮೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸುವಂತೆ ಕೇಂದ್ರ ಸರಕಾರಕ್ಕೆ ಮಾರ್ಚ್ 24ರಂದು ಸುಪ್ರೀಂಕೋರ್ಟ್ ಸೂಚಿಸಿತ್ತು. 1984ರಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿಯವರ ಹತ್ಯೆಯಾದ ಬಳಿಕ ನಡೆದ ಸಿಖ್ ವಿರೋಧಿ ಹಿಂಸಾಚಾರಕ್ಕೆ ದಿಲ್ಲಿಯಲ್ಲೇ 2,733 ಮಂದಿ ಬಲಿಯಾಗಿದ್ದರು.