‘ಅವರದು ಮನ್ ಕೀ ಬಾತ್, ನಮ್ಮದು ವಾಂಗೀಬಾತ್’ : ಮುಖ್ಯಮಂತ್ರಿ ಸಿದ್ದರಾಮಯ್ಯ
ಜಿಲ್ಲಾ ಕೇಂದ್ರಗಳಿಗೂ ಇಂದಿರಾ ಕ್ಯಾಂಟಿನ್ ವಿಸ್ತರಣೆ
ಬೆಂಗಳೂರು, ಆ. 16: ಪ್ರಧಾನಿ ಮೋದಿ ಅವರದ್ದು ಕೇವಲ ಮನ್ ಕೀ ಬಾತ್, ಇದರಿಂದ ಜನರ ಹೊಟ್ಟೆ ತುಂಬುವುದಿಲ್ಲ. ಆದರೆ, ನಮ್ಮದು ಬಡವರ ಹೊಟ್ಟೆ ತುಂಬಿಸುವ ವಾಂಗೀಬಾತ್ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬುಧವಾರ ಇಲ್ಲಿನ ಜಯನಗರ ವಾರ್ಡ್ನ ಕನಕನ ಪಾಳ್ಯದಲ್ಲಿ ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಜನ ಸಾಮಾನ್ಯರ ಆಹಾರ ತಾಣ ‘ಇಂದಿರಾ ಕ್ಯಾಂಟಿನ್’ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು, ನಗರದ 198 ವಾರ್ಡ್ಗಳಲ್ಲಿ ಕ್ಯಾಂಟಿನ್ ಸ್ಥಾಪಿಸಲಾಗುವುದೆಂದು ಘೋಷಿಸಿದ್ದು, ಇದೀಗ 101 ಕ್ಯಾಂಟಿನ್ ಆರಂಭಿಸಲಾಗಿದೆ ಎಂದರು.
ಯಾವುದೇ ರಾಜಕೀಯ ಲಾಭಕ್ಕಾಗಿ ಇಂದಿರಾ ಕ್ಯಾಂಟಿನ್ ಘೋಷಿಸಿಲ್ಲ. ಬದಲಿಗೆ ಬಡವರ ಹಸಿವು ನೀಗಿಸುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ. ಹಸಿವು ಮುಕ್ತ ರಾಜ್ಯವನ್ನಾಗಿಸಬೇಕೆಂಬ ದೃಷ್ಟಿಯಿಂದ ರಾಜ್ಯದ 1.08 ಕೋಟಿ ಕುಟುಂಬಗಳಿಗೆ ಉಚಿತ ಪಡಿತರ ನೀಡಲಾಗುತ್ತಿದೆ ಎಂದು ಹೇಳಿದರು.
ಅನ್ನಭಾಗ್ಯ ಯೋಜನೆಯಿಂದ ಪುಣೆ, ಗೋವಾ, ಮುಂಬೈಗೆ ಗುಳೆ ಹೋಗುವುದು ನಿಂತಿದೆ. ಭೀಕರ ಸ್ವರೂಪದ ಬರ ಸ್ಥಿತಿ ಇದ್ದರೂ ಹಸಿವಿನಿಂದ ಸಾವನ್ನಪ್ಪಿದ ಉದಾಹರಣೆ ಇಲ್ಲ. ಅನ್ನಭಾಗ್ಯ ಯೋಜನೆ ಅನುಷ್ಠಾನಗೊಳಿಸುತ್ತಿರುವುದು ನಮಗೆ ಸಂತೃಪ್ತಿ ತಂದಿದೆ ಎಂದು ಅವರು ನುಡಿದರು.
ಪಾಲಿಕೆ ಸೊತ್ತುಗಳಲ್ಲಿ ಕ್ಯಾಂಟಿನ್: ಉದ್ಯಾನವನ, ಆಟದ ಮೈದಾನಗಳಲ್ಲಿ ಇಂದಿರಾ ಕ್ಯಾಂಟಿನ್ ನಿರ್ಮಿಸಿಲ್ಲ. ಬದಲಿಗೆ ಬಿಬಿಎಂಪಿ ಸೊತ್ತುಗಳಲ್ಲಿ ಕ್ಯಾಂಟಿನ್ ಸ್ಥಾಪಿಸಲಾಗಿದೆ. ಬಡತನ, ಹಸಿವಿನ ಅರಿವಿಲ್ಲದವರು ಕ್ಯಾಂಟಿನ್ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆಂದು ಸಿದ್ದರಾಮಯ್ಯ ಟೀಕಿಸಿದರು.
ಬಡತನ ನಿರ್ಮೂಲನೆಗಾಗಿ ಹೋರಾಟ ಮಾಡಿದ್ದ ಇಂದಿರಾ ಗಾಂಧಿ ಅವರ ಹೆಸರಿನಲ್ಲಿ ಕ್ಯಾಂಟಿನ್ ಸ್ಥಾಪಿಸಲಾಗಿದೆ. ಆದರೆ. ವಿರೋಧಿಗಳಿಗೆ ಇದು ಅರ್ಥ ಆಗುವುದಿಲ್ಲ ಎಂದ ಅವರು, ಬಿಬಿಎಂಪಿಯ 101 ವಾರ್ಡ್ಗಳಲ್ಲಿಯೂ ಕ್ಯಾಂಟಿನ್ ಆರಂಭಿಸಿದ್ದು, ಉಳಿದ 97 ಕ್ಯಾಂಟಿನ್ಗಳನ್ನು ಅ.2ಕ್ಕೆ ಆರಂಭ ಮಾಡಲಾಗುವುದು ಎಂದು ಹೇಳಿದರು.
ಅಗ್ಗದ ದರದಲ್ಲಿ ಬಡ ಕೂಲಿ ಕಾರ್ಮಿಕರಿಗೆ ಕೇವಲ 25 ರೂ.ಗಳಲ್ಲೆ ಬೆಳಗಿನ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟ ಒದಗಿಸಲಾಗುವುದು ಎಂದ ಅವರು, ಬಡವರ ಯೋಜನೆಗಳನ್ನು ಅತುರಾತುರವಾಗಿಯೇ ಅನುಷ್ಠಾನಕ್ಕೆ ತರಬೇಕು, ಯಾವುದೇ ವಿಳಂಬ ಮಾಡಬಾರದು ಎಂದು ಸಮರ್ಥಿಸಿಕೊಂಡರು.
‘ಅಗ್ಗದ ದರದಲ್ಲಿ ಬಡವರು ಹಾಗೂ ಜನಸಾಮಾನ್ಯರಿಗೆ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿ ಊಟ ಒದಗಿಸುವ ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಇಂದಿರಾ ಕ್ಯಾಂಟಿನ್ ಯೋಜನೆಯನ್ನು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿಯೂ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು’
-ಸಿದ್ದರಾಮಯ್ಯ ಮುಖ್ಯಮಂತ್ರಿ
ಬಿಜೆಪಿ ಮುಖಂಡರು ಗೈರು: ‘ಇಂದಿರಾ ಕ್ಯಾಂಟಿನ್ ಉದ್ಘಾಟನೆ ಸಮಾರಂಭಕ್ಕೆ ಕೇಂದ್ರ ಸಚಿವರಾದ ಅನಂತಕುಮಾರ್, ಡಿ.ವಿ.ಸದಾನಂದಗೌಡ, ನಿರ್ಮಲಾ ಸೀತಾರಾಮನ್ ಅವರಿಗೆ ಅಧಿಕೃತ ಆಹ್ವಾನ ನೀಡಲಾಗಿತ್ತು. ಆದರೆ, ಅವರು ಹಾಜರಾಗಿರಲಿಲ್ಲ'