ಮೋದಿ ಚೀನಾ ಅಧ್ಯಕ್ಷರೊಂದಿಗೆ ಉಯ್ಯಾಲೆಯಲ್ಲಿ ತೂಗುತ್ತಿದ್ದಾಗ ಚೀನಾ ಸೈನಿಕರು ಗಡಿಯೊಳಗೆ ನುಗ್ಗಿದ್ದರು : ರಾಹುಲ್ಗಾಂಧಿ
ಕೇಂದ್ರ ಸರಕಾರದ ವಿರುದ್ಧ ರಾಹುಲ್ಗಾಂಧಿ ವಾಗ್ದಾಳಿ
ಬೆಂಗಳೂರು, ಆ.16: ಉತ್ತರಪ್ರದೇಶದ ಗೋರಖ್ಪುರದಲ್ಲಿ 90ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಸಾವನ್ನಪ್ಪಿದ ಘಟನೆಯನ್ನು ಉಲ್ಲೇಖಿಸಿದ ಎಐಸಿಸಿ ಉಪಾಧ್ಯಕ್ಷ ರಾಹುಲ್ಗಾಂಧಿ, ಪ್ರಧಾನಿ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬುಧವಾರ ನಗರದ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಕೆಪಿಸಿಸಿ ವತಿಯಿಂದ ಆಯೋಜಿಸಲಾಗಿದ್ದ ಸಾರ್ಥಕ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಸರಕಾರವು ಆರೋಗ್ಯ ಕ್ಷೇತ್ರಕ್ಕೆ ಅನುದಾನ ಕಡಿತ ಮಾಡಿದ ಪರಿಣಾಮ, ಆಸ್ಪತ್ರೆಗೆ ಆಮ್ಲಜನಕದ ಸಿಲಿಂಡರ್ಗಳನ್ನು ಖರೀದಿಸಲು ಸಾಧ್ಯವಾಗಿರಲಿಲ್ಲ ಎಂದು ಕಿಡಿಗಾರಿದರು.
ಗೋರಖ್ಪುರದ ಆಸ್ಪತ್ರೆಯಲ್ಲಿನ ಚಿಂತಾಜನಕ ಸ್ಥಿತಿಯ ಕುರಿತು ಈ ಹಿಂದೆಯೆ ನಾನು ಮಾಧ್ಯಮಗಳ ಮೂಲಕ ಪ್ರಧಾನಮಂತ್ರಿಗಳ ಗಮನ ಸೆಳೆದಿದ್ದೆ. ಆದರೆ, ನನ್ನ ಮನವಿಗೆ ಅವರು ಸ್ಪಂದಿಸಿಲ್ಲ. 90 ಮಕ್ಕಳ ಪೈಕಿ ಯಾರೊಬ್ಬರು ಶ್ರೀಮಂತ ಕುಟುಂಬಕ್ಕೆ ಸೇರಿದವರಲ್ಲ. ಎಲ್ಲರೂ, ಬಡವರು, ಮಧ್ಯಮ ವರ್ಗದ ಕುಟುಂಬದ ಮಕ್ಕಳು ಎಂದು ರಾಹುಲ್ಗಾಂಧಿ ನುಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರವು ಸಂಕಷ್ಟದಲ್ಲಿರುವ ರೈತರ ನೆರವಿಗೆ ಧಾವಿಸಿದೆ. ನಾನು ವಿಷಯ ಪ್ರಸ್ತಾಪ ಮಾಡಿದ 48 ಗಂಟೆಯೊಳಗೆ ರಾಜ್ಯ ಸರಕಾರವು ರೈತರ ಸಾಲ ಮನ್ನಾ ಮಾಡಿದೆ. ಇದೇ ರೀತಿಯಲ್ಲಿ ಪಂಜಾಬ್ನಲ್ಲಿಯೂ ರೈತರ ಸಾಲ ಮನ್ನಾ ಆಗಿದೆ. ಈ ಮೂಲಕ ನಾವು ರೈತರ ಸಂರಕ್ಷಕರು ಎಂಬುದನ್ನು ನಿರೂಪಿಸಿದ್ದೇವೆ ಎಂದು ರಾಹುಲ್ಗಾಂಧಿ ಹೇಳಿದರು.
ಉತ್ತರಪ್ರದೇಶದಲ್ಲಿ ನಾನು 40 ದಿನಗಳ ಪ್ರವಾಸ ಕೈಗೊಂಡು, ಲಕ್ಷಾಂತರ ರೈತರೊಂದಿಗೆ ಸಂವಾದ ನಡೆಸಿ, ಅವರ ಅಭಿಪ್ರಾಯಗಳನ್ನು ಆಲಿಸಿದೆ. ಲೋಕಸಭೆಯಲ್ಲಿ ರೈತರ ಸಾಲ ಮನ್ನಾ ಮಾಡುವಂತೆ ನಾವು ಹೋರಾಟ ಮಾಡಿದರೆ, ಕೇಂದ್ರ ಹಣಕಾಸು ಸಚಿವ ಅರುಣ್ಜೇಟ್ಲಿ ‘ರೈತರ ಸಾಲ ಮನ್ನಾ ನಮ್ಮ ನೀತಿಯಲ್ಲ’ವೆಂದು ಉತ್ತರಿಸುತ್ತಾರೆ ಎಂದು ರಾಹುಲ್ಗಾಂಧಿ ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ಹೋರಾಟಕ್ಕೆ ಮಣಿದು ಮಹಾರಾಷ್ಟ್ರ ಹಾಗೂ ಉತ್ತರಪ್ರದೇಶದಲ್ಲಿ ರೈತರ ಸಾಲ ಮನ್ನಾ ಮಾಡಲಾಗಿದೆ. ರೈತರ ಸಾಲ ಮನ್ನಾ ಮಾಡುವುದು ನಮ್ಮ ನೀತಿಯಲ್ಲ ಎಂದವರು ತಮ್ಮ ನೀತಿಗಳಲ್ಲಿ ಬದಲಾವಣೆ ತರುವವರೆಗೆ ನಾವು ಸುಮ್ಮನೆ ಕೂರುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದರು.
ಸ್ವಾತಂತ್ರ ದಿನಾಚರಣೆ ಅಂಗವಾಗಿ ನರೇಂದ್ರಮೋದಿ ಕಳೆದ ಬಾರಿ ಮಾಡಿದ ಭಾಷಣವು, ಸ್ವತಂತ್ರ ಭಾರತದ ಇತಿಹಾಸದಲ್ಲಿ ಪ್ರಧಾನಿಯೊಬ್ಬರು ಮಾಡಿದ ಸುದೀರ್ಘ ಭಾಷಣವೆಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೆ, ಈ ಬಾರಿ 45 ನಿಮಿಷಗಳಲ್ಲಿ ತಮ್ಮ ಭಾಷಣ ಮುಗಿಸಿದ್ದಾರೆ. ಬಹುಷಃ ಮುಂದಿನ ವರ್ಷ ಕೇವಲ 15 ನಿಮಿಷಗಳಲ್ಲಿ ಮುಗಿಯಬಹುದು. ಏಕೆಂದರೆ, ದೇಶದ ಜನರಿಗೆ ಹೇಳಲು ಅವರ ಬಳಿ ಇನ್ನು ಏನು ಉಳಿದಿಲ್ಲ ಎಂದು ರಾಹುಲ್ಗಾಂಧಿ ಟೀಕಿಸಿದರು.
ನರೇಂದ್ರಮೋದಿ ‘ಸ್ವಚ್ಛ ಭಾರತ್’ ಬಗ್ಗೆ ಮಾತನಾಡಿದರೆ ನಾವು ‘ಸಚ್ ಭಾರತ್’(ಸತ್ಯ ಭಾರತ)ವನ್ನು ಪ್ರತಿಪಾದಿಸುತ್ತೇವೆ. ಪ್ರಧಾನಿ ತಮ್ಮ ಭಾಷಣದಲ್ಲಿ ಈ ದೇಶದ ಸಂಪತ್ತಾಗಿರುವ ಯುವ ಸಮೂಹದ ಬಗ್ಗೆ ಚಕಾರವೆತ್ತಿಲ್ಲ. ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿದ್ದ ಮೋದಿ, ಕಳೆದ ವರ್ಷ 1 ಲಕ್ಷಕ್ಕಿಂತ ಕಡಿಮೆ ಉದ್ಯೋಗ ಸೃಷ್ಟಿಸಿದ್ದಾರೆ. ಅದೇ ಮುಖ್ಯಮಂತ್ರಿ ಸಿದ್ದರಾಮಯ್ಯ 30 ಸಾವಿರ ಸರಕಾರಿ ಹುದ್ದೆಗಳನ್ನು ಸೃಷ್ಟಿಸಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ನಮ್ಮ ದೇಶದ ಪ್ರಧಾನಿ, ಚೀನಾ ಅಧ್ಯಕ್ಷರನ್ನು ಆಲಂಗಿಸಿಕೊಂಡು ಉಯ್ಯಾಲೆಯಲ್ಲಿ ತೂಗುತ್ತಿದ್ದಾಗ ಚೀನಾ ದೇಶದ ಒಂದು ಸಾವಿರ ಸೈನಿಕರು ನಮ್ಮ ದೇಶದ ಗಡಿಯೊಳಗೆ ನುಗ್ಗಿದ್ದರು. ಭಾರತ, ಚೀನಾದ ಗಡಿಯಲ್ಲಿರುವ ಭೂತಾನ್ ದೇಶದ ರಕ್ಷಣೆಯ ಹೊಣೆಯನ್ನು ಭಾರತ ಹೊತ್ತಿದೆ. ಭೂತಾನ್ ಗಡಿಯಲ್ಲಿ ಚೀನಾದ ಸೈನಿಕರು ಬಂದು ಜಮೆಯಾಗಿದ್ದಾರೆ. ಆದರೆ, ಪ್ರಧಾನಿ ಮಾತ್ರ ವೌನಕ್ಕೆ ಶರಣಾಗಿದ್ದಾರೆ ಎಂದು ರಾಹುಲ್ಗಾಂಧಿ ಟೀಕಿಸಿದರು.
ಪ್ರಧಾನಿ ಕಳೆದ ಮೂರು ವರ್ಷಗಳಲ್ಲಿ ದೇಶವನ್ನು ಒಡೆದಿರುವುದು ಬಿಟ್ಟರೆ ಬೇರೆ ಏನು ಮಾಡಿಲ್ಲ. ದಲಿತರ ಮೇಲೆ ಹಲ್ಲೆ, ಅಲ್ಪಸಂಖ್ಯಾತರ ಕೊಲೆಗಳು ನಡೆಯುತ್ತಿದ್ದರೂ ಒಂದೇ ಒಂದು ಚಕಾರವೆತ್ತಿಲ್ಲ. ಜಮ್ಮು ಕಾಶ್ಮೀರದಲ್ಲಿ ಶಾಂತಿ, ಸೌಹಾರ್ದತೆ ನೆಲೆಸಲು ಡಾ.ಮನಮೋಹನ್ಸಿಂಗ್ ನೇತೃತ್ವದ ಯುಪಿಎ ಸರಕಾರದ ಅವಧಿಯಲ್ಲಿ ಯಶಸ್ಸು ಸಾಧಿಸಲಾಗಿತ್ತು. ಆದರೆ, ಬಿಜೆಪಿ ಸರಕಾರದ ಆಡಳಿತದಲ್ಲಿ ದ್ವೇಷದ ವಾತಾವರಣ ನಿರ್ಮಾಣವಾಗಿದೆ ಎಂದು ಅವರು ಕಿಡಿಗಾರಿದರು.
ಜಮ್ಮು ಕಾಶ್ಮೀರದಲ್ಲಿ ಶಾಂತಿ ನೆಲೆಸಿದರೆ ಪಾಕಿಸ್ತಾನ ಯಾವುದೆ ಪ್ರಯತ್ನಗಳನ್ನು ಮಾಡಲು ಸಾಧ್ಯವಾಗುವುದಿಲ್ಲ. ಆದರೆ, ಕಳೆದ ಮೂರು ವರ್ಷಗಳಲ್ಲಿ ಪಾಕಿಸ್ತಾನ ಹೊರತುಪಡಿಸಿ ನಮ್ಮ ನೆರೆಯ ರಾಷ್ಟ್ರಗಳೊಂದಿಗಿನ ಸಂಬಂಧ ಹಾಳಾಗಿದೆ. ಇತಿಹಾಸದಲ್ಲೆ ಇದೆ ಮೊದಲ ಬಾರಿಗೆ ರಷ್ಯಾ ದೇಶವು ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡಿದೆ ಎಂದು ರಾಹುಲ್ಗಾಂಧಿ ಹೇಳಿದರು.
ದೇಶದ ಸೈನ್ಯಕ್ಕೆ ಅಗತ್ಯವಿರುವ ಶಸ್ತ್ರಾಸ್ತ್ರಗಳ ದಾಸ್ತಾನು ಸಾಕಷ್ಟು ಪ್ರಮಾಣದಲ್ಲಿ ಇಲ್ಲ ಎಂದು ಸಿಎಜಿ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಕೇವಲ ಹೇಳಿಕೆಗಳು, ಘೋಷಣೆಗಳನ್ನು ಮಾಡುವ ಪ್ರಧಾನಿಯ ಅಗತ್ಯ ತಮಗಿಲ್ಲ. ದೇಶದ ಅಸ್ಮಿತೆಯನ್ನು ಪ್ರತಿನಿಧಿಸುವ ಪ್ರಧಾನಿ ಬೇಕೆಂದು ಜನತೆ ಬಯಸಿದ್ದಾರೆ ಎಂದು ಅವರು ತಿಳಿಸಿದರು.
ಬಿಜೆಪಿಯವರು ಕ್ಯಾಂಟೀನ್ಗೆ ಬರುತ್ತಾರೆ
‘ರಾಜಧಾನಿ ಬೆಂಗಳೂರಿನ ಬಡವರು ಹಸಿವಿನಿಂದ ನರಳಬಾರದು ಎಂಬ ಕಾರಣಕ್ಕೆ ಇಂದಿರಾ ಕ್ಯಾಂಟೀನ್ ಆರಂಭಿಸುತ್ತಿರುವ ರಾಜ್ಯ ಸರಕಾರಕ್ಕೆ ಅಭಿನಂದನೆ. ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಯಾವೊಬ್ಬ ಬಡವರು ಹಸಿವಿನಿಂದ ನರಳದಂತಹ ವಾತಾವರಣ ನಿರ್ಮಾಣವಾಗಲಿದೆ.
5 ರೂ.ಗಳಿಗೆ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿ 10 ರೂ.ಗಳಿಗೆ ಊಟ ನೀಡಲಾಗುತ್ತದೆ. ಈ ಕ್ಯಾಂಟೀನ್ಗಳಲ್ಲಿನ ಆಹಾರದ ರುಚಿಯು ಯಾವುದೆ ಐಷಾರಾಮಿ ಹೊಟೇಲ್ಗಳಲ್ಲಿನ ಖಾದ್ಯಗಳಿಗೆ ಕಡಿಮೆ ಇಲ್ಲ. ಈ ಕ್ಯಾಂಟೀನ್ಗೆ ವಿರೋಧಿಸುತ್ತಿರುವ ಬಿಜೆಪಿಯವರು ಮುಂದಿನ ದಿನಗಳಲ್ಲಿ ಸರತಿ ಸಾಲಿನಲ್ಲಿ ನಿಂತು ಊಟ ಮಾಡಲಿದ್ದಾರೆ’. -ರಾಹುಲ್ಗಾಂಧಿ, ಎಐಸಿಸಿ ಉಪಾಧ್ಯಕ್ಷ