ಮದ್ಯ ನಿಷೇಧ ಕೇವಲ ಧರ್ಮದ ಮಾತಲ್ಲ
ಟಿಪ್ಪು ಸುಲ್ತಾನನ ರಾಜನೀತಿ ►ಇತಿಹಾಸ-ವರ್ತಮಾನ
ನಮ್ಮ ಜನರ ಸಾಮಾಜಿಕ, ರಾಜಕೀಯ ಹಾಗೂ ನೈತಿಕ ಒಳಿತಿಗಾಗಿ ಮದ್ಯವನ್ನು ತಯಾರಿಸುವುದು ಮತ್ತು ಮಾರುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ವಿದೇಶಿಯರಿಗಾಗಿ ಸಣ್ಣ ಪ್ರಮಾಣದಲ್ಲಿ ಮದ್ಯ ಮಾರಾಟದ ಪರವಾನಿಗೆ ನೀಡಬೇಕು.
(1787ರಲ್ಲಿ ಟಿಪ್ಪು ಹೊರಡಿಸಿದ ಆದೇಶ) ಈ ಆದೇಶದಂತೆ ಬೆಂಗಳೂರಿನ ಅಮಲ್ದಾರ್ ಗುಲಾಮ್ ಹೈದರ್ ಮದ್ಯ ಮಾರಾಟ ಮತ್ತು ತಯಾರಿಕೆಯನ್ನು ನಿಲ್ಲಿಸಿ ಟಿಪ್ಪುಸುಲ್ತಾನನಿಗೆ ವರದಿಯನ್ನು ನೀಡುತ್ತಾನೆ. ಆ ವರದಿಗೆ ಪ್ರತಿಯಾಗಿ ಗುಲಾಮ್ ಹೈದರ್ಗೆ ಟಿಪ್ಪು ಈ ರೀತಿ ಪತ್ರ ಬರೆಯುತ್ತಾನೆ.
‘‘ನಿನ್ನ ವರದಿಯಂತೆ ನೀನು ಮದ್ಯ ತಯಾರಿಕೆ ಮತ್ತು ಮಾರಾಟವನ್ನು ನಿಷೇಧಿಸಿರುವುದು ತಿಳಿದುಬರುತ್ತದೆ. ಅದೇ ರೀತಿಯಲ್ಲಿಯೇ ಮಾರಾಟಗಾರರೊಂದಿಗೆ ನಿಷೇಧ ಕುರಿತು ಲಿಖಿತ ಒಪ್ಪಂದವನ್ನು ಮಾಡಿಕೊಳ್ಳತಕ್ಕದ್ದು. ಜೊತೆಗೆ, ಮದ್ಯ ತಯಾರಿಕೆಯಲ್ಲಿ ತೊಡಗಿರುವವರ ಜೊತೆಗೂ ಇದೇ ರೀತಿಯ ಒಪ್ಪಂದವನ್ನು ಮಾಡಿಕೊಂಡು ಅವರಿಗೆ ಮತ್ತೊಂದು ಉದ್ಯೋಗವನ್ನು ಕೈಗೊಳ್ಳಲು ಸಹಾಯ ಮಾಡತಕ್ಕದ್ದು.’’
ಇದೇ ವಿಚಾರವಾಗಿ ಮೀರ್ಸಾದಿಕ್ನಿಗೆ ಪತ್ರ ಬರೆಯುತ್ತಾ, ‘‘ಸಂಪೂರ್ಣ ನಿಷೇಧವು ನನ್ನ ಹೃದಯಕ್ಕೆ ಹತ್ತಿರವಾದುದು. ಇದು ಕೇವಲ ಧರ್ಮದ ಮಾತಲ್ಲ, ನಮ್ಮ ಯುವಕರ, ಜನರ ನೈತಿಕ ಗುಣಮಟ್ಟವನ್ನು ಎತ್ತಿಹಿಡಿಯುವುದರ ಜೊತೆಗೆ ಅವರ ಆರ್ಥಿಕತೆಯನ್ನು ಸದೃಢಗೊಳಿಸುವ ಪ್ರಶ್ನೆ. ಈಗ ಉಂಟಾಗುತ್ತಿರುವ ಆರ್ಥಿಕ ನಷ್ಟದ ಬಗೆಗೆ ನಿನಗಿರುವ ಕಾಳಜಿಯನ್ನು ನಾನು ಮೆಚ್ಚುತ್ತೇನೆ. ಆದರೆ ನಾವು ಈ ವಿಚಾರದಲ್ಲಿ ಹಿಂಜರಿಯಬಾರದು. ನಮ್ಮ ಜನರ ಆರೋಗ್ಯ ಮತ್ತು ಮನೋಸ್ಥೈರ್ಯಕ್ಕಿಂತ ಖಜಾನೆ ಮುಖ್ಯವಲ್ಲ. ಆದುದರಿಂದ ಆರ್ಥಿಕ ವಿಚಾರಗಳ ಬಗ್ಗೆ ನಾವು ಧೃತಿಗೆಡಬಾರದು’’