ಹರೀಶ್ ಸಾಂತ್ವನ ಯೋಜನೆ: ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆ!
ದೇಹವು ಎರಡು ತುಂಡಾಗಿ ಸಾವಿನ ದವಡೆಯಲ್ಲಿದ್ದಾಗಲೂ ಅಂಗಾಂಗ ದಾನ ಘೋಷಣೆ ಮಾಡಿ ಬದುಕಿನಿಂದ ವಿರಮಿಸಿದ ಅಪ್ಪಟ ಮಾನವ ಪ್ರೇಮಿ ಹರೀಶ್ ಎಂಬವರ ಹೆಸರಲ್ಲಿ ರಾಜ್ಯ ಸರಕಾರವು ಜಾರಿಗೆ ತಂದ ‘ಹರೀಶ್ ಸಾಂತ್ವನ ಯೋಜನೆ’ ಇಂದು ಯಾವ ಮಟ್ಟಕ್ಕಿಳಿದಿದೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಹರೀಶ್ ಸಾಂತ್ವನ ಯೋಜನೆ ಕಾರ್ಪೊರೇಟ್, ದಂಧೆಕೋರ ಆಸ್ಪತ್ರೆಗಳಿಗೆ ತಿಜೋರಿ ತುಂಬಿಸಲು ನೀಡಿದ ಸುವರ್ಣಾವಕಾಶವಾಗಿ ಮಾರ್ಪಟ್ಟಿರುವುದು ವಿಷಾದದ ಸಂಗತಿ.
ಹರೀಶ್ ಸಾಂತ್ವನ ಯೋಜನೆಯನ್ವಯ ರಸ್ತೆ ಅಪಘಾತದಲ್ಲಿ ಗಾಯಗೊಂಡ ಗಾಯಾಳುವಿನ ಮೊದಲ 48 ಗಂಟೆಗಳ ಅವಧಿಯ 25,000 ರೂಪಾಯಿಗಳವರೆಗಿನ ಯಾವುದೇ ಚಿಕಿತ್ಸೆಯ ಮೊತ್ತವನ್ನು ಸರಕಾರವೇ ಭರಿಸುತ್ತದೆ. ಈ ಯೋಜನೆಯ ಫಲಾನುಭವಿಯಾಗಲು ಬಿ.ಪಿ.ಎಲ್., ಎ.ಪಿ.ಎಲ್ ಕಾರ್ಡು ಎಂಬ ವರ್ಗೀಕೃತ ಮಾನದಂಡಗಳಿಲ್ಲ ಮತ್ತು ಈ ಯೋಜನೆಯನ್ನು ಸರಕಾರವು ಖಾಸಗಿ ಆಸ್ಪತ್ರೆಗಳ ಸಹಭಾಗಿತ್ವದಲ್ಲಿ ನಡೆಸುತ್ತಿದೆ. ಈ ಯೋಜನೆಯನ್ನು ಆರೋಗ್ಯ ಕ್ಷೇತ್ರದ ಕಾರ್ಪೊರೇಟ್ ಕಳ್ಳರು ಹೇಗೆ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂಬುವುದನ್ನು ಅರಿಯಲು ಮುಂದೆ ಓದಿ. ಯಾವುದಾದರೂ ಅಪಘಾತದಲ್ಲಿ ಗಾಯಗೊಂಡ ರೋಗಿಯನ್ನು ತುರ್ತು ಚಿಕಿತ್ಸೆಗೆಂದು ಆಸ್ಪತ್ರೆಗೆ ಕೊಂಡೊಯ್ದರೆ ಆಸ್ಪತ್ರೆಯವರು ಸಹಜವಾಗಿಯೇ ಕ್ಯಾಸುವಾಲಿಟಿಗೆ ಕೊಂಡೊಯ್ದು ತುರ್ತು ಚಿಕಿತ್ಸೆ ನೀಡುತ್ತಾರೆ.
ಗಾಯಾಳುವಿನ ಗಾಯದ ಗಂಭೀರತೆಯ ಆಧಾರದಲ್ಲಿ ಒಳರೋಗಿಯಾಗಿ ದಾಖಲಿಸಬೇಕೋ ಅಥವಾ ಹೊರರೋಗಿ ವಿಭಾಗದಲ್ಲಿ ಚಿಕಿತ್ಸೆ ನೀಡಬೇಕೋ ಎಂದು ನಿರ್ಧರಿಸುತ್ತಾರೆ. ಆದರೆ ಹರೀಶ್ ಸಾಂತ್ವನ ಯೋಜನೆ ಯಾವಾಗಿಂದ ಜಾರಿ ಬಂತೋ ಆ ಬಳಿಕ ಆ ಯೋಜನೆಯ ಸಹಭಾಗಿತ್ವ ಪಡೆದುಕೊಂಡ ಅನೇಕ ಕಾರ್ಪೊರೇಟ್ ಆಸ್ಪತ್ರೆಗಳು ಚಿಕ್ಕಪುಟ್ಟ ತರಚು ಗಾಯಗಳಿಗೂ ಒಳರೋಗಿಯಾಗಿ ದಾಖಲಿಸುವ ಪರಿಪಾಠ ಪ್ರಾರಂಭಿಸಿವೆ. ಒಂದು ವೇಳೆ ಗಾಯಾಳು ಒಳರೋಗಿಯಾಗಿ ದಾಖಲಾಗಲು ಒಪ್ಪದಿದ್ದರೆ ಆತನಲ್ಲಿ ಅನಗತ್ಯ ಪ್ರಶ್ನೆಗಳನ್ನು ಕೇಳತೊಡಗುತ್ತಾರೆ. ಆತನಿಗಾಗಿ ಚಿಕ್ಕಪುಟ್ಟ ಗಾಯವನ್ನೂ ಗಂಭೀರವಾಗಿ ವಿವರಿಸಿ ಆತನ ಮನದಲ್ಲಿ ಭೀತಿಯನ್ನು ಹುಟ್ಟಿಸಲಾಗುತ್ತದೆ. ಇದಕ್ಕೂ ಗಾಯಾಳು ಬಗ್ಗದಿದ್ದರೆ ಕಾರ್ಪೊರೇಟ್ ದಂಧೆಕೋರರ ಕೊನೆಯ ಅಸ್ತ್ರ ‘ತಲೆಗೆ ಪೆಟ್ಟಾಗಿದೆ‘ ಎಂಬ ಎರಡು ಪದಗಳು.
ಈ ಎರಡು ಪದಗಳನ್ನು ಉಸುರಿದರೆ ಸಾಕು ಎಂತಹ ಗಟ್ಟಿ ಗುಂಡಿಗೆಯವನೂ ಅಧೀರನಾಗಿಬಿಡುತ್ತಾನೆ. ಒಂದು ವೇಳೆ ಗಾಯಾಳು ಎಷ್ಟು ದುಡ್ಡು ಬೇಕಾದೀತು ಎಂದು ಕೇಳಿದರೆ ‘‘ದುಡ್ಡಿನ ವಿಚಾರದಲ್ಲಿ ನೀವು ತಲೆಕೆಡಿಸಿಕೊಳ್ಳಬೇಡಿ. ನಮಗೆ ನಿಮ್ಮ ಜೀವ ಮುಖ್ಯ, ದುಡ್ಡಲ್ಲ. ಅಷ್ಟಕ್ಕೂ ನಿಮಗೆ ತೀವ್ರತರ ಆರ್ಥಿಕ ಮುಗ್ಗಟ್ಟಿದ್ದರೆ ಸರಕಾರದ ಯೋಜನೆಯಂತೆ ಎರಡು ದಿನಗಳ ಅವಧಿಯ 25,000 ರೂಪಾಯಿ ಚಿಕಿತ್ಸೆಗೆ ನೀವೇನೂ ಭರಿಸಬೇಕಾಗಿಲ್ಲ’’ ಎಂದು ಧೈರ್ಯ ತುಂಬಿ ಗಾಯಾಳುವನ್ನು ಒಳರೋಗಿಯಾಗಿ ದಾಖಲಾಗಲು ಒಪ್ಪಿಸಲಾಗುತ್ತದೆ. ಒಮ್ಮೆ ಗಾಯಾಳುವನ್ನು ಒಳರೋಗಿಯಾಗಿ ದಾಖಲಿಸಿದ ಬಳಿಕ ಮತ್ತೆ ಕೇಳಬೇಕೇ? ಅಬ್ಸರ್ವೇಶನ್ಗೆಂದು ತೀವ್ರ ನಿಗಾ ಘಟಕದಲ್ಲಿರಿಸುವುದು, ಅನಗತ್ಯ ರಕ್ತ ಪರೀಕ್ಷೆ, ಎಕ್ಸ್ರೇ, ಸ್ಕ್ಯಾನಿಂಗ್ ಇತ್ಯಾದಿಗಳನ್ನು ಮಾಡಿಸುವುದು ಇದ್ದೇ ಇದೆ. ಹೆಚ್ಚಿನ ಸಂದರ್ಭಗಳಲ್ಲಿ ಓರ್ವ ಹಳ್ಳಿ ವೈದ್ಯನ ಒಂದು ಮುಲಾಮು, ನಾಲ್ಕು ನೋವು ನಿವಾರಕ ಗುಳಿಗೆ, ಒಂದು ಟಿ.ಟಿ. ಇಂಜೆಕ್ಷನ್ನಲ್ಲಿ ಕೇವಲ ನೂರು ರೂಪಾಯಿಯೊಳಗೆ ಮುಗಿಸಬಹುದಾದ ಚಿಕಿತ್ಸೆಯನ್ನು 25,000ದ ಆಜುಬಾಜಿಗೆ ಕೊಂಡೊಯ್ಯಲಾಗುತ್ತದೆ.
ಚಿಕ್ಕಪುಟ್ಟ ಮೂಳೆ ಮುರಿತಗಳನ್ನು ಒಂದು ಕ್ಷ-ಕಿರಣ ತೆಗೆದು ಪರೀಕ್ಷಿಸಿ ಒಂದು ಪಿಒಪಿ ಬ್ಯಾಂಡೇಜ್ ಸುತ್ತಿ ಅಬ್ಬಬ್ಬಾ ಎಂದರೆ ಎರಡು ಸಾವಿರದೊಳಗೆ ಮುಗಿಸಬಹುದಾದ ಪ್ರಕರಣಗಳನ್ನು ಪುಗಸಟ್ಟೆ ದುಡ್ಡು ಸಿಗುತ್ತದೆಂದು ಶಸ್ತ್ರಚಿಕಿತ್ಸೆ ಮಾಡಿ 20-25,000 ರೂಪಾಯಿಗಳವರೆಗೆ ತಲುಪಿಸುವ ಕಲೆ ಕಾರ್ಪೊರೇಟ್ ದಂಧೆಕೋರರಿಗೆ ಕರತಲಾಮಲಕ.
ಎಕ್ಸ್ರೇ ತೆಗೆದಾಗ ಮೂಳೆ ಮುರಿತ ಕಂಡುಬರದಿದ್ದರೂ ರೋಗಿ ನೋವಿನಿಂದ ನರಳುತ್ತಿರುತ್ತಾನೆ. ಸಾಮಾನ್ಯವಾಗಿ ಜಜ್ಜಿದ, ಹೊಡೆತದ ನೋವು ಶಮನವಾಗಲು ಎರಡು ದಿನಗಳಾದರೂ ಬೇಕಾಗುತ್ತದೆ. ಮೂರನೆ ದಿನಕ್ಕೆ ಕಾದರೆ ಎಲ್ಲಿ ಗಾಯಾಳುವಿನ ನೋವು ಮಾಯವಾಗಿ ಸರಕಾರದ ದುಡ್ಡು ಗಿಂಜುವ ಅವಕಾಶ ಕೈ ತಪ್ಪಿಹೋಗುತ್ತದೋ ಎಂಬ ಭಯದಿಂದ ಎಂ.ಆರ್.ಐ. ಸ್ಕ್ಯಾನಿಂಗ್ ಮಾಡಿಸಿಬಿಡುತ್ತಾರೆ. ಒಂದು ಎಂ.ಆರ್.ಐ. ಸ್ಕ್ಯಾನಿಂಗ್ಗೆ ಕನಿಷ್ಠವೆಂದರೂ ನಾಲ್ಕರಿಂದ ಐದು ಸಾವಿರ ರೂಪಾಯಿ ಶುಲ್ಕ ಹಾಕಲಾಗುತ್ತದೆ.
ಇತ್ತೀಚಿನ ವರ್ಷಗಳಲ್ಲಿ ಹೆದ್ದಾರಿ ಬದಿಗಳಲ್ಲಿ ಅಪಘಾತದ ಗಾಯಾಳುಗಳನ್ನು ತಂತಮ್ಮ ಆಸ್ಪತ್ರೆಗಳಿಗೆ ಕರೆದುಕೊಂಡು ಬರಲು ಕಾರ್ಪೊರೇಟ್ ಆಸ್ಪತ್ರೆಗಳು ಏಜೆಂಟರುಗಳನ್ನು ನಿಯೋಜಿಸಿರುವುದು ಗುಟ್ಟಾಗಿರುವ ವಿಚಾರವೇನಲ್ಲ. ಅಪಘಾತ ವಲಯಗಳೆಂದು ಹೆಸರಿಸಲಾದ ಸ್ಥಳಗಳಲ್ಲಿ ಇದಕ್ಕೆಂದೇ ಸನ್ನದ್ಧವಾದ ಏಜೆಂಟರುಗಳಿರುತ್ತಾರೆ. ಈ ರೀತಿಯ ದಂಧೆಗಳಿಗೆ ಸರಕಾರ ಕಡಿವಾಣ ಹಾಕಲೇಬೇಕಾಗಿದೆ. ಸರಕಾರದ ದುಡ್ಡೆಂದರೆ ಅದು ಜನರ ದುಡ್ಡು. ಅದನ್ನು ಕಾರ್ಪೊರೇಟ್ ಕಳ್ಳರಿಂದ ರಕ್ಷಿಸಲೇಬೇಕಾಗಿರುವುದು ತುರ್ತು ಅಗತ್ಯ.
ಸರಕಾರ ಈ ರೀತಿ ಖಾಸಗಿ ಕಾರ್ಪೊರೇಟ್ ದರೋಡೆಕೋರರಿಗೆ ಯೋಜನೆಗಳ ಸಹಭಾಗಿತ್ವ ನೀಡುವುದಕ್ಕಿಂತ ಎಲ್ಲಾ ತಾಲೂಕು ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಿ, ಗುಣಮಟ್ಟ ಕಾಯ್ದುಕೊಳ್ಳಬೇಕು. ಈ ಯೋಜನೆಯಲ್ಲಿ ಕೆಲವು ಆಮೂಲಾಗ್ರ ಬದಲಾವಣೆ ಮಾಡಲೇಬೇಕಾಗಿದೆ. ಅಪಘಾತದ ಗಾಯಾಳು ಆಸ್ಪತ್ರೆಗೆ ದಾಖಲಾದಾಗ ಅತನಿಗೆ ತುರ್ತಾಗಿ ಬೇಕಾಗುವ ಚಿಕಿತ್ಸೆಯನ್ನು ಮಾತ್ರ ಖಾಸಗಿ ಸಹಭಾಗಿತ್ವದ ಆಸ್ಪತ್ರೆಯಲ್ಲಿ ಮಾಡಿ ಮುಂದಿನ ಚಿಕಿತ್ಸೆ ಸಮೀಪದ ಸರಕಾರಿ ಜಿಲ್ಲಾಸ್ಪತ್ರೆ ಅಥವಾ ತಾಲೂಕು ಆಸ್ಪತ್ರೆಯಲ್ಲೇ ಪಡೆಯುವಂತೆ ಮಾಡಬೇಕು.
ಯಾವುದೇ ಕಾರಣಕ್ಕೂ 5,000 ರೂಪಾಯಿಗಳಿಗಿಂತ ಮೇಲಿನ ಚಿಕಿತ್ಸೆಯನ್ನು ಖಾಸಗಿ ಆಸ್ಪತ್ರೆಯಲ್ಲಿ ನೀಡದಂತೆ ಮಾನದಂಡ ರೂಪಿಸಬೇಕು. ಈ ಯೋಜನೆಯಡಿ ಒಬ್ಬ ಗಾಯಾಳುವಿಗೆ ಐದು ಸಾವಿರಕ್ಕಿಂತ ಹೆಚ್ಚಿನ ಮೊತ್ತವನ್ನು ಸರಕಾರ ಖಾಸಗಿ ಆಸ್ಪತ್ರೆಗಳಿಗೆ ನೀಡಬಾರದು. ಕೆಲವು ವಿಶೇಷ ಚಿಕಿತ್ಸೆಗಳಿಗೆ ಇದರಿಂದ ವಿನಾಯಿತಿ ನೀಡಬೇಕು. ಅಂತಹ ವಿಶೇಷ ಚಿಕಿತ್ಸೆಗಳ ಪಟ್ಟಿಯನ್ನು ಸರಕಾರ ತಜ್ಞ ವೈದ್ಯರುಗಳ ಸಮಿತಿ ರಚಿಸಿ ತೀರ್ಮಾನಿಸಬೇಕು. ಓರ್ವ ಮಾನವಪ್ರೇಮಿ ಸಹಮಾನವರಿಗೆ ಒಳಿತಾಗಲಿ ಎಂಬ ಸದುದ್ದೇಶದಿಂದ ಮಾಡಿದ ಘೋಷಣೆಗಾಗಿ ಆತನ ಹೆಸರಲ್ಲಿ ಪ್ರಾರಂಭಿಸಿದ ಯೋಜನೆ ಉಳ್ಳವರಿಗೆ ಅಡ್ಡ ಸಂಪಾದನೆಯ ದಾರಿಯಾಗದಂತೆ ಕಾಪಾಡಬೇಕಾಗಿದೆ.