ವಾರ್ತಾ ಭಾರತಿ ವರದಿಗಾರನ ಬಂಧನ “ಪ್ರಜಾತಂತ್ರದ ತಲೆಗೆ ನೀಡಿದ ಏಟು”
“ಪೊಲೀಸ್ ಪಡೆಗೆ ಸೇರುವ ವ್ಯಕ್ತಿ ಕೋಮು ದ್ವೇಷದ ರೋಗಾಣುಗಳು ತುಂಬಿರುವ ಸಮಾಜದಿಂದಲೇ ಬಂದವನು”. ಇದು ನನ್ನ ಮಾತಲ್ಲ, ಉತ್ತರ ಭಾರತದಲ್ಲಿ ವಿವಿಧ ಉನ್ನತ ಪೊಲೀಸ್ ಹುದ್ದೆಗಳನ್ನು ನಿಭಾಯಿಸಿದ ಡಾ.ವಿಭೂತಿ ನಾರಾಯಣ್ ರಾಯ್ ಅವರು ತಮ್ಮ “ಭಾರತೀಯ ಪೊಲೀಸ್ ಔರ್ ಸಾಂಪ್ರದಾಯಿಕ್ ದಂಗಾ” ಎಂಬ ಕೃತಿಯಲ್ಲಿ ಬಹಳ ಸ್ಪಷ್ಟವಾಗಿ ನಮೂದಿಸಿದ ಮಾತುಗಳು.
ಇತ್ತೀಚೆಗೆ ಶರತ್ ಮಡಿವಾಳ ಕೊಲೆ ಆರೋಪಿ ಖಲಂದರ್ ಎಂಬಾತನ ಮನೆಗೆ ನುಗ್ಗಿ ಪವಿತ್ರ ಕುರ್ಆನ್ ಎಸೆದಿದ್ದನ್ನು ಸಚಿತ್ರ ವರದಿ ಮಾಡಿದ ವರದಿಗಾರ ಮಿತ್ರ ಇಮ್ತಿಯಾಝ್ ತುಂಬೆಯವರನ್ನು ಬಂಧಿಸಿ ಜೈಲಿಗಟ್ಟಿದ್ದು ಮತ್ತು ಸಂಪಾದಕರ ಮೇಲೆ ಕೇಸು ದಾಖಲಿಸಿದ್ದನ್ನು ಕೇಳಿ ನನಗೆ ಆಶ್ಚರ್ಯವಾಯಿತು. ಯಾಕೆಂದರೆ ಕಳೆದ ಹತ್ತು ವರ್ಷಗಳಿಂದ ಸಾಮಾಜಿಕ ಚಳವಳಿಗಳಲ್ಲಿ ಸಕ್ರಿಯವಾಗಿರುವ ನಾನು ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ಇಲಾಖೆಯ ಕಾರ್ಯ ವೈಖರಿಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಬಂದಿದ್ದೇನೆ ಮತ್ತು ಅವರ ತಪ್ಪುಗಳ ವಿರುದ್ಧ ಮಂಗಳೂರಿನ ಬೀದಿಗಳಲ್ಲಿ ನಿಂತು ಘೋಷಣೆ ಕೂಗುತ್ತಾ ಬಂದಿದ್ದೇನೆ. ನಮ್ಮ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಯಾವ ಮಟ್ಟಿಗೆ ಕೇಸರೀಕರಣಗೊಂಡಿದೆ ಎನ್ನುವುದಕ್ಕೆ ಒಂದು ಉದಾಹರಣೆ ಕೊಡುತ್ತೇನೆ. “ಸುಮಾರು ನಾಲ್ಕು ವರ್ಷಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ವೆಬ್ಸೈಟಿನಲ್ಲಿ ಆರೆಸ್ಸೆಸ್ ಪಥ ಸಂಚಲನದ ಚಿತ್ರಗಳು ರಾರಾಜಿಸುತ್ತಿತ್ತು. ಇದು ಡಾ.ವಿಭೂತಿ ನಾರಾಯಣ್ ರಾಯ್ ಅವರ ಮಾತುಗಳನ್ನು ದೃಢಪಡಿಸುತ್ತಿತ್ತು.
'ವಾರ್ತಾಭಾರತಿ'ಯ ವರದಿಗಾರ ಇದ್ದುದನ್ನು ಇದ್ದ ಹಾಗೆ ವರದಿ ಮಾಡಿದ್ದಾರೆ. ಪೊಲೀಸರ ಸಮಜಾಯಿಷಿಕೆಯನ್ನು ಆತ್ಮಸಾಕ್ಷಿ ಇರುವ ಸಂಘ ಪರಿವಾರದ ಕಾರ್ಯಕರ್ತನೂ ನಂಬಲಾರ. ಅವರಿಗೂ ಪಕ್ಕಾ ಗೊತ್ತಿದೆ. “ಮುಸ್ಲಿಮನೊಬ್ಬ ಪರಮ ಕುಡುಕನಾದರೂ ಪವಿತ್ರ ಕುರ್ಆನನ್ನು ನೆಲದ ಮೇಲೆ ಎಸೆಯಲಾರ”. ಅಂತಹದ್ದರಲ್ಲಿ ಧಾರ್ಮಿಕ ನಂಬಿಕೆಯಿರುವ ಖಲಂದರ್ನ ಮನೆಯವರು ಪೊಲೀಸರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಸಲುವಾಗಿ ಖಂಡಿತ ಇಂತಹ ಕೆಲಸ ಮಾಡಲಾರರು.
ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರೇನು ಸತ್ಯ ಹರಿಶ್ಚಂದ್ರನ ಸಂತತಿಯವರೇ?, ಪೊಲೀಸ್ ಆಯುಕ್ತರು ಹೇಳಿದಂತೆ ಪೊಲೀಸರು ಎಲ್ಲವನ್ನೂ ರೆಕಾರ್ಡ್ ಮಾಡಿದ್ದಾರೆಂದು ಏನು ಗ್ಯಾರಂಟಿ?, ಒಂದು ವೇಳೆ ರೆಕಾರ್ಡ್ ಮಾಡಿಕೊಂಡಿದ್ದರೂ ಕುರ್ಆನ್ ಎಸೆದ ಚಿತ್ರೀಕರಣವನ್ನು ಎಡಿಟ್ ಮಾಡಿಲ್ಲ ಎಂದು ಏನು ಗ್ಯಾರಂಟಿ?, ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರ ಇಂತಹ ಟ್ರ್ಯಾಕ್ ರೆಕಾರ್ಡ್ ಧಾರಾಳವಿದೆ. ಅಲ್ಪಸಂಖ್ಯಾತರು ಮತ್ತು ಪ್ರಗತಿಪರರು ಮಾಡುವ ಯಾವುದೇ ಪ್ರತಿರೋಧ ಸಭೆಗಳ ಇಂಚಿಂಚೂ ರೆಕಾರ್ಡ್ ಮಾಡುವ ಇವರು ಸಂಘ ಪರಿವಾರದ ದ್ವೇಷ ಕಾರುವ ಭಾಷಣಗಳನ್ನು ಎಡಿಟ್ ಮಾಡಿದ ಧಾರಾಳ ಉದಾಹರಣೆಗಳೂ ಇವೆ.
ಸುಮಾರು ಆರೇಳು ವರ್ಷಗಳ ಹಿಂದೆ ಕೊಣಾಜೆ ಠಾಣೆಯ ಕಾಂಪೌಂಡಿನೊಳಗೆ ಜಿಲ್ಲೆಯ ಸಂಘ ಪರಿವಾರದ ನಾಯಕನೊಬ್ಬ ಕೋಮು ದ್ವೇಷ ಕೆರಳಿಸುವ ಭಾಷಣ ಮಾಡಿದ್ದ. ಆದನ್ನು ಠಾಣೆಯ ಅಧಿಕೃತ ಕ್ಯಾಮರಾದಲ್ಲೇ ರೆಕಾರ್ಡ್ ಮಾಡಲಾಗಿತ್ತು. ಆ ಸಂಘಪರಿವಾರದ ನಾಯಕನ ದ್ವೇಷ ಪೂರಿತ ಭಾಷಣವನ್ನು ರೆಕಾರ್ಡ್ ಮಾಡಿದ ಪೊಲೀಸಪ್ಪನೇ ಅದನ್ನು ಡಿಲೀಟ್ ಮಾಡಿದ್ದ. ಇಂತಹ ಪೊಲೀಸರಿರುವ ಇಲಾಖೆಯನ್ನು ನಾವು ಹೇಗೆ ನಂಬಬೇಕು...?
ಇವೆಲ್ಲಾ ಒತ್ತಟ್ಟಿಗಿರಲಿ, ಪೊಲೀಸ್ ಇಲಾಖೆ ಯಾಕೆ ಕೇಸು ದಾಖಲಿಸಿತೆಂದರೆ “ವಾರ್ತಾಭಾರತಿಯ ವರದಿಗಾರ ತೆಗೆದ ಭಾವಚಿತ್ರ ಕೋಮುಭಾವನೆ ಕೆರಳಿಸುವಂತಿತ್ತು” ಎಂಬುವುದು ಪೊಲೀಸರ ವಾದ. 'ವಾರ್ತಾಭಾರತಿ' ತನ್ನ ವರದಿಗಾರನ ವರದಿಯನ್ನು ಮಾತ್ರ ಪ್ರಕಟಿಸಿ ಸುಮ್ಮನಾಗಲಿಲ್ಲ. ಅದೇ ವಿಚಾರದಲ್ಲಿ ಆಯುಕ್ತರಾದ ಸುಧೀರ್ ಕುಮಾರ್ ರೆಡ್ಡಿಯವರ ವರ್ಶನ್ ಪ್ರಕಟಿಸುವ ತನ್ನ ಅಪ್ಪಟ ಪ್ರಜಾಸತ್ತಾತ್ಮಕ ಧೋರಣೆಯನ್ನೂ ತೋರಿಸಿದೆ.
ಈ ಜಿಲ್ಲೆಯಲ್ಲಿ ವರ್ಷದ 360 ದಿನವೂ ಒಂದಲ್ಲ ಇನ್ನೊಂದು ವಿಧದಲ್ಲಿ ಕೋಮುದ್ವೇಷ ಕೆರಳಿಸುವ ಬರಹಗಳನ್ನು, ವರದಿಗಳನ್ನು ಪ್ರಕಟಿಸುವ ಮಾಧ್ಯಮಗಳಿವೆ. ಅಂತಹ ಎಷ್ಟು ವರದಿಗಾರರನ್ನು ಬಂಧಿಸಿದ್ದಾರೆ?, ಎಷ್ಟು ಸಂಪಾದಕರ ಮೇಲೆ ಕೇಸು ಜಡಿದಿದ್ದಾರೆ?.
ಸಿಂಧಗಿಯಲ್ಲಿ ಪಾಕ್ ಧ್ವಜ, ಪಾಕಿಸ್ತಾನ್ ಝಿಂದಾಬಾದ್ ಎಂಬ ಕಪೋಲಕಲ್ಪಿತ ವರದಿಗಳು ಇತಿಹಾಸದ ಪುಟ ಸೇರುವಷ್ಟು ಹಳತಾಗಿಲ್ಲ. ಇದೇ ಜಿಲ್ಲೆಯಲ್ಲಿ ಬೂಟುಗಾಲಿನಲ್ಲೇ ಮಸೀದಿಯೊಳಕ್ಕೆ ಎಷ್ಟು ಬಾರಿ ಪೊಲೀಸರು ನುಗ್ಗಿಲ್ಲ?, ಆಗೆಲ್ಲಾ ಯಾರಿಗೂ ಅದು ಧಾರ್ಮಿಕ ಭಾವನೆಗಳನ್ನು ಕೆರಳಿಸುತ್ತದೆಂದೆನಿಸಿಲ್ಲ. ಜಿಲ್ಲೆಯ ಎಲ್ಲಾ ಠಾಣೆಗಳ, ಅಧೀಕ್ಷಕರ ಕಚೇರಿಯ, ಆಯುಕ್ತರ ಕಚೇರಿಯ ರಿಜಿಸ್ಟರ್ ಬುಕ್ ತೆಗೆದು ನೋಡಿ. ಮುಸ್ಲಿಮರ ಧಾರ್ಮಿಕ ಭಾವನೆಗಳನ್ನು ಕೆರಳಿಸಿದ್ದಕ್ಕೆ, ಧಾರ್ಮಿಕ ವಿಚಾರಗಳಿಗೆ ಘಾಸಿಗೊಳಿಸಿದ್ದಕ್ಕೆ ಈ ಜಿಲ್ಲೆಯಲ್ಲಿ ಎಷ್ಟು ಮಂದಿ ಪೊಲೀಸರ ಮೇಲೆ ಕೇಸು ದಾಖಲಾಗಿದೆ?.
ಇದು ಪ್ರಜಾಪ್ರಭುತ್ವ. ನಮಗೂ ನಮ್ಮ ಅಭಿವ್ಯಕ್ತಿಗಳನ್ನು ಪ್ರಕಟಿಸುವ ಸ್ವಾತಂತ್ರ್ಯವಿದೆ. 'ವಾರ್ತಾಭಾರತಿ' ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಧ್ವನಿಯಾಗಿ ಕೆಲಸ ಮಾಡಿದೆ. ಈ ಸಂದರ್ಭದಲ್ಲಿ 'ವಾರ್ತಾಭಾರತಿ'ಯ ಧ್ವನಿಯನ್ನು ಅಮುಕುವವರ ವಿರುದ್ಧ ಧ್ವನಿಯೆತ್ತಬೇಕಾದುದು ಈ ನೆಲದ ಪ್ರತಿಯೋರ್ವ ಪ್ರಜಾತಂತ್ರವಾದಿಯ ಕರ್ತವ್ಯ.