ಅಕ್ಕನ ಕೊಲೆಗೆ ಕಾರಣಗಳನ್ನು ಹುಡುಕುತ್ತಾ.....
ಸುಮಾರು ಐದಾರು ತಿಂಗಳ ಹಿಂದಿನ ಮಾತು. ನಮ್ಮದೇ ಪ್ರಗತಿಪರ ಬಳಗದ ಗೆಳೆಯರೊಬ್ಬರು 2016 ರಲ್ಲಿ ನಾವು ನಡೆಸಿದ 'ಉಡುಪಿ ಚಲೋ' ಕಾರ್ಯಕ್ರಮದ ಅಭೂತಪೂರ್ವ ಯಶಸ್ಸಿಗೆ ನಿರ್ದಿಷ್ಟವಾಗಿ ಒಂದು ಸಂಘಟನೆಯೇ ಮುಖ್ಯ ಕಾರಣ ಎಂಬರ್ಥದಲ್ಲಿ ವಾಟ್ಸಾಪ್ ಗುಂಪೊಂದರಲ್ಲಿ ಒಂದು ಪೋಸ್ಟ್ ಹಾಕಿದ್ದರು. ನಾನದನ್ನು ಖಂಡಿಸಿ ಉತ್ತರ ಬರೆದೆ. ಜಗಳ ಸ್ವಲ್ಪ ಮಟ್ಟಿಗೆ ತಾರಕ್ಕೇರಿತು. ನಾನು ಸಕ್ರಿಯವಾಗಿರುವ ಕೋಮು ಸೌಹಾರ್ದ ವೇದಿಕೆಯ ಪ್ರಮುಖ ನಾಯಕಿ ಅಕ್ಕ ಗೌರಿ ನನಗೆ ಕರೆ ಮಾಡಿ “ಮರಿ ಸ್ಟಾಪಿಟ್, ಈ ರೀತಿಯ ನಾನ್ಸೆನ್ಸ್ ಪೋಸ್ಟ್ ಗೆ ರಿಪ್ಲೈ ಮಾಡಬೇಡ. ಆಯ್ತು ಉಡುಪಿ ಚಲೋದ ಯಶಸ್ಸಿಗೆ ಅವರೇ ಕಾರಣ ಏನೀಗ? ಯಾರೇ ಕಾರಣರಾದರೂ ನಮಗೇನು? ಒಟ್ಟಿನಲ್ಲಿ ನಮ್ಮ ಕಾರ್ಯಕ್ರಮ ಯಶಸ್ವಿಯಾಯಿತಲ್ವಾ?” ಎಂದು ನನ್ನನ್ನು ತರಾಟೆಗೆ ತೆಗೆದುಕೊಂಡಿದ್ದರು.
ಈ ವಿಚಾರವನ್ನು ನಾನಿಲ್ಲಿ ಪ್ರಸ್ತಾಪಿಸಿದ್ದು ಏಕೆಂದರೆ...... ಅಕ್ಕ ಗೌರಿಯ ಕೊಲೆಗೆ ಏನು ಕಾರಣ ಎಂಬುವುದು ನಮಗೆಲ್ಲಾ ತಿಳಿದ ವಿಚಾರ. ಅದು ವೈಚಾರಿಕವಾಗಿ ಅಕ್ಕನನ್ನು ಎದುರಿಸಲಾಗದ ಹೇಡಿಗಳು ಮಾಡಿದ ಕೆಲಸ. ಅಕ್ಕ ಗೌರಿಗೆ ಅಷ್ಟೊಂದು ಭಯಪಡಲು ಕೆಲವು ಮುಖ್ಯ ಕಾರಣಗಳೇನೆಂದು ನನ್ನ ಅರಿವಿನ ಮಿತಿಯಲ್ಲಿ ಪಟ್ಟಿ ಮಾಡುವೆ.
ಅಕ್ಕ ಇತ್ತೀಚಿನ ದಿನಗಳಲ್ಲಿ ಮಾಡಿದ್ದ ಬಹು ದೊಡ್ಡ ಕೆಲಸವೇನೆಂದರೆ ಗುರಿ ಒಂದೇ ಆಗಿದ್ದರೂ ಸಂಘಟನಾತ್ಮಕವಾಗಿ ಛಿದ್ರ ಛಿದ್ರವಾಗಿದ್ದ ಪ್ರಗತಿಪರರ ಮಧ್ಯೆ ಸಮನ್ವಯ ಸಾಧಿಸಲು ಪ್ರಯತ್ನಿಸಿದ್ದು ಮತ್ತು ಅದರಲ್ಲಿ ಒಂದು ಹಂತದ ಯಶಸ್ಸು ಕಂಡಿದ್ದು. ಅದರ ಫಲವೇ 'ಉಡುಪಿ ಚಲೋ', ದಿಡ್ಡಳ್ಳಿ ಆದಿವಾಸಿಗಳ ಪರ ಹೋರಾಟ ಇತ್ಯಾದಿಗಳು. ಸೈದ್ಧಾಂತಿಕವಾಗಿ ತೀರಾ ಭಿನ್ನವಾಗಿರುವ ಎಡ (ಕೆಂಪು) ಮತ್ತು ದಲಿತ (ನೀಲಿ) ಚಳವಳಿಕಾರರನ್ನು ಒಂದುಗೂಡಿಸುವಲ್ಲಿ ಅಕ್ಕನ ಶ್ರಮ ಅಪಾರವಾದುದು.
ಕೋಮು ಸೌಹಾರ್ದ ವೇದಿಕೆ ಯಾವುದೇ ರಾಜಕೀಯ ಆಸೆ ಆಕಾಂಕ್ಷೆಗಳನ್ನಿಟ್ಟುಕೊಳ್ಳದೇ ಕಳೆದ ಒಂದೂವರೆ ದಶಕದಿಂದೀಚೆಗೆ ನಿರಂತರವಾಗಿ ಜನಪರ ಚಳವಳಿಗಳನ್ನು ಕಟ್ಟುತ್ತಾ ಬಂದಿದೆ. ಅಕ್ಕ ಅದರ ಬಹುಮುಖ್ಯ ಭಾಗವಾಗಿದ್ದರು. “ಯಾವಾಗ ನಾವು ಅಧಿಕಾರದ ಲಾಲಸೆಯಿಟ್ಟುಕೊಂಡು ಕೆಲಸ ಮಾಡುತ್ತೇವೋ ಅಂದು ನಮ್ಮ ಹೋರಾಟಗಳು ಶತ್ರುವಿನ ಮುಂದೆ ಮಂಡಿಯೂರಿದಂತೆ” ಎಂದು ಅಕ್ಕ ಬಲವಾಗಿ ಪ್ರತಿಪಾದಿಸುತ್ತಿದ್ದರು. ಅಕ್ಕ ಬಯಸಿದ್ದರೆ ಸಿದ್ದರಾಮಯ್ಯ ಅವರು ಅಕ್ಕನಿಗೆ ಎಂತಹದೇ ಹುದ್ದೆ ಅಥವಾ ಪದವಿ ನೀಡುತ್ತಿದ್ದರು. ಅಕ್ಕ ಬಯಸಿದ್ದು ಈ ನಾಡಿನ ನಾಳಿನ ನೆಮ್ಮದಿಯನ್ನು ಮಾತ್ರ. ಅನೇಕ ಮಂದಿ ಅಕ್ಕ ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯರನ್ನು ವಹಿಸಿಕೊಂಡು ಸ್ವಲ್ಪ ಅತಿಯಾಗಿಯೇ ಕೆಲಸ ಮಾಡುತ್ತಿದ್ದರು ಎಂದು ಆರೋಪಿಸುತ್ತಾರೆ. ನಾನೂ ಕೆಲವು ಬಾರಿ ಅಕ್ಕನಿಗೆ ಈ ಪ್ರಶ್ನೆ ಹಾಕಿದ್ದೆ. ಅದಕ್ಕವರು “ನೋಡು ಮರಿ, ಇವತ್ತು ಸಂಘ ಪರಿವಾರವನ್ನು ರಾಜಕೀಯವಾಗಿ ಮಣಿಸುವ ಶಕ್ತಿ ಯಾರಿಗಿದೆ? ನಾವು ಯಾರನ್ನು ನಂಬೋಣ? ನಮಗೆ ಚುನಾವಣಾ ರಾಜಕೀಯಕ್ಕೆ ಇಳಿಯೊಕ್ಕಾಗುತ್ತಾ? ಕಾಂಗ್ರೆಸ್ನವರು ಸಾಚಾಗಳು ಎಂದು ನಾವು ಅವರಿಗೆ ಪರೋಕ್ಷ ಬೆಂಬಲ ನೀಡುವುದಲ್ಲ” ಎಂದಿದ್ದರು.
ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಕೆಲವು ವರ್ಷಗಳ ಹಿಂದೆ “ಪ್ರಜಾಪ್ರಭುತ್ವಕ್ಕಾಗಿ ಜನರ ವೇದಿಕೆ” ಎಂಬ ಒಕ್ಕೂಟವೊಂದನ್ನು ರಚಿಸಿತ್ತು. ವೇದಿಕೆಯ ಉದ್ದೇಶ ಬಹಳ ಸ್ಪಷ್ಟ. ಕೋಮುವಾದಿ ಶಕ್ತಿಗಳನ್ನು ಅಧಿಕಾರದಿಂದ ಹೊರಗಿಡುವುದು. ವೇದಿಕೆ ಇನ್ನೂರ ಇಪ್ಪತ್ತ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸನ್ನು ಬೆಂಬಲಿಸಿಲ್ಲ. ಕಾಂಗ್ರೆಸ್, ಜೆಡಿಎಸ್, ಸಿಪಿಎಂ, ಬಿ.ಎಸ್ಪಿ ಮುಂತಾದ ಪಕ್ಷಗಳಲ್ಲಿ ಯಾವುದು ಯಾವ ಕ್ಷೇತ್ರದಲ್ಲಿ ಬಿಜೆಪಿಯ ನೇರ ಎದುರಾಳಿಯೋ ಆಯಾ ಕ್ಷೇತ್ರದಲ್ಲಿ ಆಯಾ ಪಕ್ಷಗಳನ್ನು ಬೆಂಬಲಿಸುತ್ತಾ ಬಂದಿದೆ. ವೇದಿಕೆಯ ಕಟ್ಟಕಡೆಯ ಗುರಿ ಸೆಕ್ಯುಲರಿಸಂನ ಉಳಿವು ಮಾತ್ರ. ಇದೆಲ್ಲದರ ಹಿಂದಿನ 'ಮಾಸ್ಟರ್ ಮೈಂಡ್' ಅಕ್ಕ ಗೌರಿ ಆಗಿದ್ದರು.
ಅಕ್ಕನಿಗೆ ಸಂಘ ಪರಿವಾರ ಮೊನ್ನೆ ಸೆಪ್ಟೆಂಬರ್ ಐದರವರೆಗೆ ನಕ್ಸಲೈಟ್ ಎಂಬ ಬಿರುದನ್ನು ನೀಡಿತ್ತು. ಅಕ್ಕ ಹುತಾತ್ಮರಾದ ಮರುಕ್ಷಣದಿಂದ ಸಂಘ ಪರಿವಾರ ಮತ್ತದರ ಕೃಪಾಪೋಷಿತ ಶಕ್ತಿ, ವ್ಯಕ್ತಿ ಮತ್ತು ಮಾಧ್ಯಮಗಳು ಪ್ಲೇಟ್ ಬದಲಿಸಿ ಅಕ್ಕನನ್ನು 'ನಕ್ಸಲೀಯರು ಕೊಂದರು' ಎಂಬ ಪ್ರಚಾರಕ್ಕೆ ತೊಡಗಿತು. ಆ ಚರ್ಚೆ ಬಹಳ ದೊಡ್ಡದಿದೆ. ಅದಿರಲಿ, ಅಕ್ಕನ ಪ್ರಯತ್ನದಿಂದ ಒಟ್ಟು ಒಂಬತ್ತು ಮಂದಿ ನಕ್ಸಲೀಯರು ಮುಖ್ಯವಾಹಿನಿಗೆ ಬಂದಿದ್ದಾರೆ. ನಕ್ಸಲ್ ಚಳವಳಿಯಲ್ಲಿದ್ದವರಿಗೆ ಅಪಾರ ಬದ್ಧತೆಯಿರುತ್ತದೆ. ಅಂತಹ ಕಠಿಣ ಬದ್ಧತೆಯಿರುವವರು ಕಾಡಿಕೊಳಗಿದ್ದು, ಇಂದೋ, ನಾಳೆಯೋ ಪೊಲೀಸರ ಗುಂಡಿಗೆ ಆಹುತಿಯಾಗಿ ಮುಗಿಯಬಾರದು. ಅವರ ಅಗತ್ಯತೆ ಈ ನಾಡಿನ ಜನಪರ ಚಳವಳಿಗಿದೆ ಎಂದರಿತೇ ಅವರನ್ನು ಶತಾಯಗತಾಯ ಮುಖ್ಯವಾಹಿನಿಗೆ ತಂದರು. ಕಳೆದ ಮೂರು ವರ್ಷಗಳಲ್ಲಿ ಈ ನಾಡಿನ ಪ್ರಗತಿಪರ ಚಳವಳಿಗೆ ಮಾಜಿ ನಕ್ಸಲೀಯರಾದ ಸಂಗಾತಿ ಸಿರಿಮನೆ ನಾಗರಾಜ್ ಮತ್ತು ಸಂಗಾತಿ ನೂರ್ ಶ್ರೀಧರ್ ಅಪಾರ ಕೊಡುಗೆ ನೀಡುತ್ತಾ ಬಂದಿದ್ದಾರೆ.
ಕಳೆದ ಮೂರು ವರ್ಷಗಳಿಂದೀಚೆಗೆ ಅಕ್ಕ 'ನ್ಯಾಶನಲ್ ಫಿಗರ್' ಆಗಿ ಬೆಳೆದಿದ್ದರು. ಅಕ್ಕ ತೀಸ್ತಾ ಸೆಟಲ್ವಾಡ್, ಆನಂದ ತೇಲ್ತುಂಬ್ಡೆ, ರಾಮ್ ಪುನಿಯಾನಿ, ಮೇಧಾ ಪಾಟ್ಕರ್, ಹರ್ಷ ಮಂದರ್ರಾದಿಯಾಗಿ ಹಲವಾರು ರಾಷ್ಟ್ರೀಯ ಮಟ್ಟದ ಹೋರಾಟಗಾರರೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು. 2014ರ ಡಿಸೆಂಬರ್ ತಿಂಗಳಲ್ಲಿ ಯಾದಗಿರಿ ಜಿಲ್ಲೆಯ ತಿಂಥಣಿಯಲ್ಲಿ ನಡೆದ ಕೋಮು ಸೌಹಾರ್ದ ವೇದಿಕೆಯ ವಾರ್ಷಿಕ ಸಮಾವೇಶದಲ್ಲಿ ತೀಸ್ತಾ ಸೆಟಲ್ವಾಡ್ ಅವರು ಬಹಿರಂಗವಾಗಿ ಒಂದು ರಾಷ್ಟ್ರೀಯ ಮಟ್ಟದ ಒಕ್ಕೂಟ ರಚನೆಯ ಪ್ರಸ್ತಾಪವಿಟ್ಟಿದ್ದರು. ಅದರ ರೂಪೀಕರಣಕ್ಕಾಗಿಯೂ ಅಕ್ಕ ಹಗಲು ರಾತ್ರಿಯೆನ್ನದೇ ದುಡಿಯುತ್ತಿದ್ದರು.
ರೋಹಿತ್ ವೇಮುಲಾ ಆತ್ಮಹತ್ಯೆ ಪ್ರಕರಣದ ಬಳಿಕ ಅಕ್ಕ ವಿದ್ಯಾರ್ಥಿ ಯುವಜನತೆಯನ್ನು ಸಂಘಟಿಸುವ ರಾಷ್ಟ್ರೀಯ ಮಟ್ಟದ ಪ್ರಯತ್ನಕ್ಕಿಳಿದರು. ಕನ್ಹಯ್ಯಾ, ಉಮರ್ ಖಾಲಿದ್, ಶೆಹ್ಲಾ ರಶೀದ್, ಜಿಗ್ನೇಶ್ ಮೆವಾನಿ, ಉತ್ತರಪ್ರದೇಶದ ಭೀಮಸೇನೆಯ ರಾವಣ್ ಮುಂತಾದವರಿಗೆ ಅಕ್ಕ ಕೇವಲ ಅಮ್ಮ ಮಾತ್ರವಾಗಿರದೆ ಐಡಿಯೋಲಾಜಿಕಲ್ ಗುರು ಆಗಿದ್ದರು.
ಅಕ್ಕ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದ ಇನ್ನೊಂದು ಪ್ರಮುಖ ಚಳವಳಿ “ಪ್ರತ್ಯೇಕ ಲಿಂಗಾಯಿತ ಧರ್ಮ”. ಇದು ಸಂಘ ಪರಿವಾರದ ಎದೆಗೂಡಿನಲ್ಲಿ ಚಳಿ ಹಿಡಿಸಿದ ಚಳವಳಿ ಎಂದರೆ ತಪ್ಪಾಗದು. ಯಾಕೆಂದರೆ ಲಿಂಗಾಯಿತರಲ್ಲಿ ದೊಡ್ಡ ಸಂಖ್ಯೆಯಲ್ಲಿ ಬಿಜೆಪಿ ಪರ ಒಲವಿರುವವರಿದ್ದಾರೆ. ಎಂ.ಎಂ. ಕಲ್ಬುರ್ಗಿ ಈ ಚಳವಳಿಗೆ ಒಂದು ಬಲಿಷ್ಠವಾದ ತಾತ್ವಿಕ ಅಡಿಪಾಯ ಹಾಕಿದ್ದರು. ಅದನ್ನು ಜನರ ಬಳಿಗೆ ಕೊಂಡೊಯ್ಯುವಲ್ಲಿ ಅಕ್ಕ ಮತ್ತು 'ಗೌರಿ ಲಂಕೇಶ್ ಪತ್ರಿಕೆ'ಯ ಬಹುದೊಡ್ಡ ಪಾಲಿದೆ. ಹೆಚ್ಚು ಕಡಿಮೆ ಕಳೆದೊಂದು ವರ್ಷದಿಂದೀಚೆಗೆ ಲಿಂಗಾಯಿತ ಸ್ವತಂತ್ರ ಧರ್ಮವೆಂಬ ಪ್ರತಿಪಾದನೆಗೆ ಶಕ್ತಿ ನೀಡಬಲ್ಲಂತಹ ಪೂರಕ ಸಾಹಿತ್ಯದ ಪ್ರಕಟನೆಗೆ ಅಕ್ಕ ತನ್ನ ಪತ್ರಿಕೆಯಲ್ಲಿ ಅವಕಾಶ ನೀಡಿದ್ದರು. ಪ್ರಸಿದ್ಧ ಬಸವ ತಜ್ಞ ರಂಜಾನ್ ದರ್ಗಾ ಅವರು ಬಸವಣ್ಣ ಮತ್ತು ಇತರ ತಳ ಸಮುದಾಯದ ಶಿವಶರಣೆಯ ವಚನಗಳ ಆಧಾರದ ಮೇಲೆ ಗೌರಿ ಲಂಕೇಶ್ ವಾರ ಪತ್ರಿಕೆಯಲ್ಲಿ ನಿರಂತರವಾಗಿ ಬರೆಯುತ್ತಿದ್ದರು.
ಕಲ್ಬುರ್ಗಿ, ದಾಬೋಲ್ಕರ್, ಪನ್ಸಾರೆ, ಅಕ್ಕ ಈ ನಾಲ್ವರ ಹತ್ಯೆಯ ಮಧ್ಯೆ ನಡೆದಂತಹ ಇನ್ನೋರ್ವ ಮಹತ್ವದ ಬಸವತತ್ವದ ವಿದ್ವಾಂಸ ಲಿಂಗಣ್ಣ ಸತ್ಯಂಪೇಟೆಯವರ ಕೊಲೆಯನ್ನು ನಾವು ಮರೆತೇ ಬಿಟ್ಟಿದ್ದೇವೆ. ಲಿಂಗಣ್ಣ ಪ್ರತ್ಯೇಕ ಲಿಂಗಾಯಿತ ಧರ್ಮದ ಪ್ರಬಲ ಪ್ರತಿಪಾದಕರಾಗಿದ್ದರು ಎಂಬುವುದು ಇಲ್ಲಿ ಉಲ್ಲೇಖನೀಯ. ಪ್ರತ್ಯೇಕ ಲಿಂಗಾಯಿತ ಧರ್ಮಕ್ಕೆ ಮಾನ್ಯತೆ ಸಿಕ್ಕರೆ ಅದರ ಕೀರ್ತಿ ಅಕ್ಕನಿಗೂ ಸಲ್ಲುತ್ತದೆ. ಒಮ್ಮೆ ಪ್ರತ್ಯೇಕ ಲಿಂಗಾಯಿತ ಧರ್ಮ ಅಸ್ತಿತ್ವಕ್ಕೆ ಬಂದರೆ ಬಿಜೆಪಿಯ ಮತ ಬ್ಯಾಂಕ್ಗೆ ತಾಳಿಕೊಳ್ಳಲಾರದ ಹೊಡೆತ ಬೀಳುತ್ತದೆ.
ಅಕ್ಕ ಕಳೆದರ್ಧ ದಶಕದಿಂದೀಚೆಗೆ ದಕ್ಷಿಣ ಕನ್ನಡದ ಲೇಖಕರಾದ ಸುರೇಶ್ ಭಟ್, ಪ್ರವೀಣ್ ಶೆಟ್ಟಿ, ರವಿ ಪುತ್ತೂರು, ಶ್ರೀನಿವಾಸ್ ಕಾರ್ಕಳ ಮತ್ತು ನನಗೆ ಒಳ್ಳೆಯ ಮಹತ್ವ ಮತ್ತು ಸ್ಪೇಸನ್ನು ನೀಡಿದ್ದರು. ದಕ್ಷಿಣ ಕನ್ನಡವನ್ನು ಕರ್ನಾಟಕದ ಗುಜರಾತ್ ಮಾಡುವ ಸಂಘ ಪರಿವಾರದ ಷಡ್ಯಂತ್ರಕ್ಕೆ ವೈಚಾರಿಕ ತಿರುಗೇಟು ನೀಡುವಲ್ಲಿ ಇದೂ ಒಂದು ಮಹತ್ವದ ನಡೆಯಾಗಿತ್ತು. ನಮಗ್ಯಾರಿಗೂ ಬರಹಗಳು ಸಾಹಿತ್ಯದ ತೌಡುಗುಟ್ಟುವಿಕೆಯಾಗಿರಲಿಲ್ಲ. ನಾವೆಲ್ಲಾ ನಮ್ಮನ್ನು 'ಲೇಖಕರು' ಎಂದು ಗುರುತಿಸಿಕೊಳ್ಳುವುದಕ್ಕಿಂತ 'ಆ್ಯಕ್ಟಿವಿಸ್ಟ್'ಗಳು ಎಂದೇ ಗುರುತಿಸಿಕೊಳ್ಳಲು ಇಷ್ಟಪಡುತ್ತೇವೆ.
ಪ್ರವೀಣ್ ಶೆಟ್ಟಿ, ರವಿ ಪುತ್ತೂರು, ಶ್ರೀನಿವಾಸ್ ಕಾರ್ಕಳ ತಮ್ಮ ಪ್ರಖರ ವೈಚಾರಿಕ ಪತ್ರ ಲೇಖನಗಳಿಂದ ಸಂಘ ಪರಿವಾರದ ಚಿಂತಕರ ಚಾವಡಿಗೆ ಚಿಂತೆಯಾಗಿಬಿಟ್ಟಿದ್ದರು. ಸುರೇಶ್ ಭಟ್ ಅವರ “ಬೂಸಿ ಬಸ್ಯ ಮೋದಿ” ಎಂಬ ಅಂಕಣವಂತೂ ಮೋದಿ ಮತ್ತು ಸಂಘ ಪರಿವಾರವನ್ನು ಪ್ರತೀ ವಾರ ಬೆತ್ತಲೆ ಮಾಡುತ್ತಿತ್ತು. ಇನ್ನು ಅಕ್ಕ ಗೌರಿಯವರ ಕಂಡ ಹಾಗೆ ಸಂಪಾದಕೀಯ ಬರಹವಂತೂ ಸಂಘ ಪರಿವಾರದ ಯುದ್ದೋನ್ಮಾದಿಗಳಿಗೆ ತಾಳಿಕೊಳ್ಳಲಾರದಷ್ಟು ಬಲವಾದ ಏಟು ನೀಡುತ್ತಿತ್ತು. ನಾವು ತಿಳಿದುಕೊಂಡ ಪ್ರಕಾರ ಆರೆಸ್ಸೆಸ್ನ ಪ್ರಮುಖ ನಾಯಕರು ಪ್ರತೀ ವಾರವೂ ನಮಗಿಂತ ಮುಂಚೆಯೇ ಗೌರಿ ಲಂಕೇಶ್ ಖರೀದಿಸುತ್ತಿದ್ದರು. ಸೆಪ್ಟೆಂಬರ್ ಐದರ ಮಧ್ಯ ರಾತ್ರಿ ಹಿರಿಯ ವಿಚಾರವಾದಿ ಮಿತ್ರ ವಾಸುದೇವ ಉಚ್ಚಿಲ್ ನನಗೊಂದು ಸಂದೇಶ ಕಳುಹಿಸಿದ್ದರು. “ಹೇಡಿಗಳು ಬರಹಕ್ಕೆ ಅಂಜುತ್ತಾರೆ”.
ಇಂತಹ ಹತ್ತಾರು ಪ್ರತಿಗಾಮಿ ಶಕ್ತಿಗಳ ವಿರುದ್ಧದ ಹೋರಾಟವೇ ಅಕ್ಕನ ಹತ್ಯೆಗೆ ಮುನ್ನುಡಿ ಬರೆದಿತ್ತು. ಅಕ್ಕ ತನ್ನ ಜೀವಮಾನದುದ್ದಕ್ಕೂ ಯಾರನ್ನೂ ವೈಯಕ್ತಿಕವಾಗಿ ದ್ವೇಷಿಸಿಲ್ಲ. ಅಕ್ಕನಿಗೆ ಅಷ್ಟು ಸಮಯವೂ ಇರಲಿಲ್ಲ. ಅಕ್ಕ ಮಾಡಿದ ಹೋರಾಟಗಳಿಗೆಲ್ಲಾ ಗಟ್ಟಿಯಾದ ಸೈದ್ಧಾಂತಿಕ ತಳಹದಿಯಿತ್ತು. ವೈಚಾರಿಕ ನೆಲೆಗಟ್ಟಿತ್ತು. ಅಕ್ಕನನ್ನು ವೈಚಾರಿಕವಾಗಿ ಎದುರಿಸಲು ಸಾಧ್ಯವಾಗದ ಶಕ್ತಿಗಳು ಅಕ್ಕನನ್ನು ಕೊಂದಿವೆ. ಆದರೆ ಅಕ್ಕನ ಹುತಾತ್ಮತೆ ವ್ಯರ್ಥವಾಗದಂತೆ ಅಕ್ಕ ಹಚ್ಚಿದ ಹೋರಾಟದ ಪಂಜನ್ನು ಕೈಗೆತ್ತಿಕೊಳ್ಳುವುದು ನಾವು ಅಕ್ಕನಿಗೆ ನೀಡುವ ಅತೀ ದೊಡ್ಡ ಶ್ರದ್ಧಾಂಜಲಿ.