ಪರೀಕ್ಷೆಯ ಭಯ: ವಿದ್ಯಾರ್ಥಿನಿ ಆತ್ಮಹತ್ಯೆ
ಕಾರ್ಕಳ, ಸೆ.21: ಪರೀಕ್ಷೆಯ ಭಯದಿಂದ ಎಸೆಸೆಲ್ಸಿ ವಿದ್ಯಾರ್ಥಿನಿಯೊಬ್ಬಳು ನೇಣಿಗೆ ಶರಣಾಗಿರುವ ಘಟನೆ ನಿಟ್ಟೆ ಗ್ರಾಮದ ಬೊರ್ಗಲ್ಗುಡ್ಡೆ ಎಂಬಲ್ಲಿ ಇಂದು ಬೆಳಗ್ಗೆ 9:30ರ ಸುಮಾರಿಗೆ ನಡೆದಿದೆ.
ಮೃತರನ್ನು ಬೊರ್ಗಲ್ಗುಡ್ಡೆಯ ಸುರೇಶ್ ಜೈನ್ ಹಾಗೂ ಮಲ್ಲಿಕಾ ದಂಪತಿ ಪುತ್ರಿ ಮಗಳು ಪ್ರತೀಕ್ಷಾ(15) ಎಂದು ಗುರುತಿಸಲಾಗಿದೆ. ಕಾರ್ಕಳ ಆನೆಕೆರೆ ಎಸ್ಎನ್ವಿ ಸ್ಕೂಲ್ನ 10ನೆ ತರಗತಿಯ ವಿದ್ಯಾರ್ಥಿನಿಯಾಗಿದ್ದ ಪ್ರತೀಕ್ಷಾಳನ್ನು ತಂದೆ ಇಂದು ಬೆಳಗ್ಗೆ ಮನೆಯಿಂದ ಶಾಲಾ ವಾಹನ ಬರುವ ರಸ್ತೆಯವರೆಗೆ ಕರೆದುಕೊಂಡು ಬಂದು, ಬಳಿಕ ಅವರು ಕೆಲಸಕ್ಕೆ ಹೋಗಿದ್ದರು.
ಆದರೆ ಓದಿನಲ್ಲಿ ಹಿಂದಿದ್ದ ಪ್ರತೀಕ್ಷಾ ನಾಳೆ ನಡೆಯುವ ಮಧ್ಯಾವಧಿ ಪರೀಕ್ಷೆಯಿಂದ ಭಯಗೊಂಡು ಶಾಲೆಗೆ ಹೋಗದೆ ಮನೆಗೆ ವಾಪಾಸ್ಸು ಬಂದು ಕೋಣೆಯ ಸ್ಲಾಪ್ಗೆ ಅಳವಡಿಸಿದ ಹುಕ್ಕಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿ ಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಇವರ ತಾಯಿ ಮಲ್ಲಿಕಾ ಕೆಲ ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಓರ್ವ ತಂಗಿ ಶಾಲೆಗೆ ತೆರಳಿದ್ದಳು. ಹೀಗೆ ಪ್ರತೀಕ್ಷಾ ಆತ್ಮಹತ್ಯೆ ಮಾಡಿಕೊಳ್ಳುವ ವೇಳೆ ಮನೆಯಲ್ಲಿ ಯಾರು ಇರಲಿಲ್ಲ ಎಂದು ತಿಳಿದುಬಂದಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.