ದೋಹಾಕ್ಕೆ ಪ್ರಯಾಣ ಮುಂದುವರಿಸಿದ ಏರ್ ಇಂಡಿಯಾ
ಇಂಜಿನ್ನಲ್ಲಿ ತಾಂತ್ರಿಕ ದೋಷ ಹಿನ್ನೆಲೆ
ಮಂಗಳೂರು, ಸೆ. 22: ಇಂಜಿನ್ನಲ್ಲಿ ಉಂಟಾಗಿದ್ದ ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನವು ಶುಕ್ರವಾರ ಬೆಳಗ್ಗೆ 5:30ಕ್ಕೆ ದೋಹಾಕ್ಕೆ ಪ್ರಯಾಣ ಬೆಳೆಸಿದೆ.
ಗುರುವಾರ ಸಂಜೆ 5:30ಕ್ಕೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೋಹಾದ ಕಡೆಗೆ ಪ್ರಯಾಣ ಬೆಳೆಸಿದ್ದ ಏರ್ ಇಂಡಿಯಾ ವಿಮಾನವು ಹಾರಾಟ ನಡೆಸಿದ ಸುಮಾರು ಅರ್ಧ ತಾಸಿನಲ್ಲೇ ತಾಂತ್ರಿಕ ದೋಷಕ್ಕೆ ಒಳಗಾಗಿ ತುರ್ತು ಭೂಸ್ಪರ್ಶ ಮಾಡಿತ್ತು. ವಿಮಾನದಲ್ಲಿ 172 ಮಂದಿ ಪ್ರಯಾಣಿಕರು ಇದ್ದರು. ತಾಂತ್ರಿಕ ದೋಷ ಕಂಡುಬಂದಿದ್ದರಿಂದ ಗುರುವಾರ ಏರ್ ಇಂಡಿಯಾ ವಿಮಾನ ಯಾನವನ್ನು ರದ್ದುಗೊಳಿಸಲಾಗಿತ್ತು. ಇದರಿಂದಾಗಿ ಪ್ರಯಾಣಿಕರು ಸಂಕಷ್ಟವನ್ನು ಎದುರಿಸಬೇಕಾಯಿತು.
ಶುಕ್ರವಾರ ಬೆಳಗ್ಗೆ 5:30ಕ್ಕೆ ಹೊರಟಿದ್ದ ಏರ್ ಇಂಡಿಯಾ ವಿಮಾನದಲ್ಲಿ ಮೂವರು ಮಕ್ಕಳು ಸಹಿತ 118 ಮಂದಿ ಪ್ರಯಾಣಿಕರು ಇದ್ದರು. ಗುರುವಾರದ 172 ಮಂದಿ ಪ್ರಯಾಣಿಕರಲ್ಲಿ ಕೆಲವರು ತಮ್ಮ ಟಿಕೆಟ್ಗಳನ್ನು ಮುಂದೂಡಿದ್ದಾರೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.