ಮುನ್ನೆಚ್ಚರಿಕೆ ಕ್ರಮವಹಿಸಲಿ
ಮಾನ್ಯರೆ,
ದೇಶದಲ್ಲಿ ಅತೀ ಪ್ರಮುಖ ಸಂಚಾರ ವ್ಯವಸ್ಥೆ ಅಂದರೆ ರೈಲ್ವೆ ಸಾರಿಗೆ. ಆದರೆ ಈ ಇಲಾಖೆಯಲ್ಲಿ ಪ್ರಯಾಣಿಕರ ಜೀವಕ್ಕೆ ಬೆಲೆಯೇ ಇಲ್ಲದಂತಹ ರೀತಿಯಲ್ಲಿ ಒಂದಲ್ಲ ಒಂದು ದುರ್ಘಟನೆಗಳು ನಡೆಯುತ್ತಿದ್ದರೂ ರೈಲ್ವೆ ಇಲಾಖೆಯ ಆಧಿಕಾರಿಗಳು ಮಾತ್ರ ಏನೂ ನಡೆದಿಲ್ಲ ಎಂಬ ರೀತಿಯಲ್ಲಿ ವೌನವಹಿಸಿದ್ದಾರೆ. .
ಮುಂಬೈಯಲ್ಲಿ ನಡೆದ ಘಟನೆಯನ್ನೇ ಗಣನೆಗೆ ತೆಗೆದುಕೊಂಡರೆ ಸಾಕು, ಅಧಿಕಾರಿಗಳ ನಿರ್ಲಕ್ಷ ಬಯಲಾಗುತ್ತದೆ.
ಮಳೆಯಿಂದಾಗಿ ಮುಂಬೈ ರೈಲು ನಿಲ್ದಾಣದಲ್ಲಿ ವಿದ್ಯುತ್ ಶಾರ್ಟ್ಸರ್ಕ್ಯುಟ್ ಅಗಿದೆ ಎಂದು ತಿಳಿದ ಪ್ರಯಾಣಿಕರು ತಾವಿರುವ ಜಾಗವನ್ನು ಬದಲಿಸಲು ಓಡಾಟ ಪ್ರಾರಂಭಿಸಿದ್ದರಿಂದ ನೂಕುನುಗ್ಗಲುಂಟಾಗಿ ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರು, ಸೇರಿದಂತೆ 23 ಮಂದಿ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಇಷ್ಟೊಂದು ಪ್ರಮಾಣದಲ್ಲಿ ಸಾವನ್ನಪ್ಪಲು ಕಾರಣ, ರೈಲು ನಿಲ್ದಾಣಗಳಲ್ಲಿ ಕಿರಿದಾದ ಮೇಲ್ಸೇತುವೆ ಹಾಗೂ ಮಿತಿಮೀರಿದ ಪ್ರಯಾಣಿಕರ ಸಂಖ್ಯೆ ಎಂದು ತಿಳಿದು ಬಂದಿದೆ.
ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ರೈಲು ನಿಲ್ದಾಣಗಳಲ್ಲಿ ಸೌಲಭ್ಯಗಳನ್ನು ಕಲ್ಪಸಿದ್ದರೆ ಇಂತಹ ದುರಂತಗಳು ನಡೆಯುತ್ತಿರಲಿಲ್ಲ. ಆದ್ದರಿಂದ ಇನ್ನು ಮುಂದೆಯಾದರೂ ಸಂಬಂಧಪಟ್ಟ ಅಧಿಕಾರಿಗಳು ರೈಲು ನಿಲ್ದಾಣಗಳಲ್ಲಿ ವಿಸ್ತಾರವಾದ ಮೇಲ್ಸೇತುವೆ ಹಾಗೂ ಹೆಚ್ಚಿನ ಸಂಖ್ಯೆಯ ಫ್ಲಾಟ್ಫಾರಂಗಳನ್ನು ನಿರ್ಮಿಸಿ ಪ್ರಯಾಣಿಕರಿಗೆ ಅನುಕೂಲವಾಗುವಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡಲಿ.
-ತಿಪ್ಪೇಸ್ವಾಮಿ.ಜಿ.ಟಿ.ಕಲ್ಲಹಳ್ಳಿ