ಮಾಯಾ ವಾಸ್ತವದ ಜನಪದ ನಾಯಕ ಜುಂಜಪ್ಪ
ಗಾಂಧೀಜಿ ಪೂರ್ವದ ಮೂರು ಶತಮಾನಗಳಷ್ಟು ಹಿಂದಿನ ಕಥನ ‘ವೀರ ಜುಂಜಪ್ಪ’ ಗಾಂಧೀಜಿಯಂತೆಯೇ ಸ್ಥಳೀಯತೆಯ ಸವಿಬಲ್ಲ ರಸಋಷಿಯಾಗಿದ್ದ. ಆಧುನಿಕ ನಾಗರಿಕತೆಯ ಮನಃಶಾಸ್ತ್ರದ ಜೀವದೆಳೆಗಳನ್ನು ಮಿಡಿದು ನೋಡಿದರೆ ಅದರ ರೋಗಪೀಡಿತ ಸ್ಥಿತಿ ನಮ್ಮ ಅರಿವಿಗೆ ಬರುತ್ತದೆ.
‘ಜುಂಜಪ್ಪ’, ಕಾಡುಗೊಲ್ಲ ಬುಡಕಟ್ಟಿನ ಸಾಂಸ್ಕೃತಿಕ ವೀರನ ಕಥೆಯಾಗಿದೆ. ಈ ಕಥನದಲ್ಲಿ ಒಂದು ಸಂವೇದನಾ ಆವೇಗವನ್ನು, ಕಥಾ ಕುತೂಹಲವನ್ನು ಗುರುತಿಸಬಹುದಾಗಿದೆ. ಮೆರವಣಿಗೆಯಲ್ಲಿ ಮೆರೆಸುತ್ತಿರುವ ಊರ ದೇವರು ಮೈದುಂಬಿ ಹೊತ್ತವರನ್ನು ತನ್ನಿಚ್ಛೆಯತ್ತ ಎಳೆದೊಯ್ಯುವಂತೆ ಈ ಕಥನದ ಅಂತರಂಗ ಮೈದುಂಬಿದೆ. ಇದೊಂದು ಅಚ್ಚರಿಯ ವಿದ್ಯಮಾನ.
ಡಾ. ಮೀರಸಾಬಹಳ್ಳಿ ಶಿವಣ್ಣರವರು ಕಾಡುಗೊಲ್ಲ ಬುಡಕಟ್ಟು ಸಮುದಾಯದ ಈ ಸಾಂಸ್ಕೃತಿಕ ವೀರನ ಕುರಿತ ಜನಪದ ಕಥೆಯನ್ನು ಒಂದು ಕೃತಿಯ ರೂಪದಲ್ಲಿ ಸಂಯೋಜಿಸಿದ್ದಾರೆ. ತ್ರಿಪದಿ, ಗಣಿಕಾವ್ಯ ಹಾಗೂ ಗದ್ಯರೂಪದಲ್ಲಿ ದೊರೆಯುವ ವಿವಿಧ ಪಠ್ಯಗಳನ್ನು ಬಳಸಿಕೊಂಡು ಈ ಕೃತಿ ರೂಪಿಸಲಾಗಿದೆ.
ಈ ಕಥನವನ್ನು ಅದೇಕೋ ನನಗೆ ದೇವನೂರ ಮಹಾದೇವ ಅವರ ‘ಕುಸುಮ ಬಾಲೆ’ಗೆ ಹೋಲಿಸುವ ಮನಸ್ಸಾಗುತ್ತಿದೆ. ಒಂದು ಜನಪರ ಸೃಷ್ಟಿ ಎಂದು, ಇನ್ನೊಂದು ಲಿಖಿತ ಪರಂಪರೆಯ ಕರ್ತೃಕ ಸೃಷ್ಟಿ ಎಂಬ ಭಿನ್ನತೆಯ ಅರಿವಿದ್ದೂ ಈ ಬಗೆಯ ಹೋಲಿಕೆಗೆ ನನ್ನ ಮನಸ್ಸು ಮುಂದಾಗುತ್ತಿದೆ. ಸ್ವರೂಪದಲ್ಲಿ ಎರಡೂ ಅಸಲಿ ಜನಪದ ಕಥನಗಳಾಗಿ ಕಂಡು ಬೆರಗು ಹುಟ್ಟಿಸುತ್ತವೆ. ‘ಕುಸುಮ ಬಾಲೆ’ಯ ಹಾಗೂ ಜುಂಜಪ್ಪನ ಕಥಾ ಪರಂಪರೆಗಳೆರಡೂ ಅಥವಾ ಸಾಮಾಜಿಕ ಪರಿಸರಗಳೆರಡೂ ಕನ್ನಡದ ವಿಶಿಷ್ಟ ಭಾಷಾ ಪ್ರಭೇದಗಳ ಅಥವಾ ಭಾಷಾ ಸ್ವನಗಳ ಜನನ ಭೂಮಿಗಳಾಗಿ ಕಾಣುತ್ತವೆ. ಒಂದು ಏಕಕರ್ತೃಕವಾಗಿ, ಆಧುನಿಕ ಬೌದ್ಧಿಕತೆಯ ಪ್ರಜ್ಞಾಪೂರ್ವಕ ಸೃಷ್ಟಿಯಾದರೆ, ಇನ್ನೊಂದು ಸ್ವಾನುಭೂತ ಶ್ರದ್ಧಾಭೂಮಿಕೆಯಲ್ಲಿ ಮೈತಳೆಯುವ ಕೃತಿಯಾಗಿದೆ. ಎರಡೂ ಕಥನಗಳಿಗಿರುವ ಸಮಾನ ಅಂಶವೆಂದರೆ, ಎರಡೂ ಸಹ (ತಾವು ಕಣ್ಣುಬಿಟ್ಟ ನೆಲದಲ್ಲಿ ನೆಲೆ ನಿಂತು) ತಾವು ಮೈತಳೆದ ನೆಲದಲ್ಲಿ, ಜಲದಲ್ಲಿ, ಆಗಸದಲ್ಲಿ; ಹಗಲು ರಾತ್ರಿಗಳನ್ನು ಮೊಳೆಯಿಸುವ ಸ್ಥಳೀಯ ಪರಿಸರದಲ್ಲಿ ಭದ್ರವಾಗಿ ಕಾಲೂರಿ, ಅಮರ್ತ್ಯ, ಪೌರಾಣಿಕ ಆಯಾಮಗಳಿಗೆ ಪುಟಿಯುವ ಕಥನಗಳಾಗಿವೆ. ಸ್ಥಳೀಯದಿಂದ ವಿಶ್ವಾತ್ಮಕವಾಗುವ ಚಿಮ್ಮು ಕಥನಗಳಾಗಿವೆ.
ಆಧುನಿಕ ನಾಗರಿಕತೆ ಜಗದ ಬಯಲನ್ನು ಪಾಪಿಗಳ ಆಡೊಂಬಲವನ್ನಾಗಿ ಪರಿವರ್ತಿಸಿದೆ, ಪಾಪದ ಭಿತ್ತಿಯನ್ನಾಗಿಸಿದೆ. ಇದನ್ನು ಗಾಂಧೀಜಿಯವರ ‘ಹಿಂದ್ ಸ್ವರಾಜ್’ ತನ್ನ ವಿರಾಟ್ ಗ್ರಹಿಕೆಯಲ್ಲಿ ಕಂಡರಿಸುತ್ತದೆ. ಈ ಪಾಪ ಭೂಮಿಕೆಯನ್ನು ಹೊತ್ತು ನಿಂತಿರುವ ತ್ರಿವಳಿ ಸ್ತಂಭಗಳಾಗಿ ‘ವೈದ್ಯರು, ವಕೀಲರು ಮತ್ತು ಸಾರಿಗೆ’ಯನ್ನು ಗಾಂಧೀಜಿ ಗುರುತಿಸುತ್ತಾರೆ. ಈ ಕೃತಿಯ ಹಲವು ನಿಟ್ಟಿನ ಗ್ರಹಿಕೆಗಳಲ್ಲಿ ಮೇಲ್ಕಂಡ ವೈದ್ಯ, ವಕೀಲ ಮತ್ತು ಸಾರಿಗೆ ವ್ಯವಸ್ಥೆಗಳು ಈ ಕೃತಿಯ ಪ್ರಧಾನ ಮತ್ತು ಪ್ರಾತಿನಿಧಿಕ ಆತಂಕಗಳಾಗಿವೆ. ಈ ಮೂರು ಸಹಜ ಮನುಷ್ಯನನ್ನು ‘ಆಧುನಿಕತೆ’ ಎಂಬ ಪಾಪದ ಪಿಂಡವಾಗಿ ಕಟ್ಟುತ್ತವೆ ಎಂಬುದು ಗಾಂಧೀಜಿ ಗ್ರಹಿಕೆಯ ಸಾರ ತಾತ್ವಿಕತೆಯಾಗಿದೆ. ‘ದೇವರು ಮನುಷ್ಯನನ್ನು ಎರಡು ಕಾಲುಗಳ ಜೀವಿಯನ್ನಾಗಿ ಸೃಷ್ಟಿಸಿ, ಆತನ ಬದುಕಿಗೆ ಒಂದು ಎಲ್ಲೆಕಟ್ಟನ್ನು ವಿಧಿಸಿದ್ದಾನೆ. ತನ್ನೆರಡು ಕಾಲುಗಳನ್ನು ಬಳಸಿ ಭೌಗೋಳಿಕವಾಗಿ ಎಷ್ಟು ದೂರ ಕ್ರಮಿಸಿ ತನ್ನ ತಂಗುನೆಲೆಗೆ ಬರಬಲ್ಲನೋ ಆ ಸ್ಥಳೀಯ ಭೂ ಪರಿಸರ ಆತನ ಬದುಕಿನ ಲೌಕಿಕ, ಆಧ್ಯಾತ್ಮಿಕ ಸಮಸ್ತದ ರಂಗಸ್ಥಳವೆನ್ನುವುದು ಭಗವಂತನ ಆಶಯವಾಗಿದ್ದು, ಮನುಷ್ಯ ಹದ್ದುಮೀರಿದ್ದಾನೆ’ ಎನ್ನುವುದು ‘ಹಿಂದ್ ಸ್ವರಾಜ್’ ಆಶಯವಾಗಿದೆ. ಗಾಂಧೀಜಿ ಮನುಷ್ಯನ ವಿರುದ್ಧ ಎತ್ತಿದ ಗಂಭೀರ ಆಕ್ಷೇಪ ಇದು.
ಈ ಅಂಶಗಳನ್ನು ಇಲ್ಲಿ ಪ್ರಸ್ತಾಪಿಸಿದ ಉದ್ದೇಶವೇನೆಂದರೆ, ಗಾಂಧೀಜಿ ಪೂರ್ವದ ಮೂರು ಶತಮಾನಗಳಷ್ಟು ಹಿಂದಿನ ಕಥನ ‘ವೀರ ಜುಂಜಪ್ಪ’ ಗಾಂಧೀಜಿಯಂತೆಯೇ ಸ್ಥಳೀಯತೆಯ ಸವಿಬಲ್ಲ ರಸಋಷಿಯಾಗಿದ್ದ. ಆಧುನಿಕ ನಾಗರಿಕತೆಯ ಮನಃಶಾಸ್ತ್ರದ ಜೀವದೆಳೆಗಳನ್ನು ಮಿಡಿದು ನೋಡಿದರೆ ಅದರ ರೋಗಪೀಡಿತ ಸ್ಥಿತಿ ನಮ್ಮ ಅರಿವಿಗೆ ಬರುತ್ತದೆ. ಅಪರಿಚಿತ ಕಾಲ, ದೇಶ ವಾಸಗಳಿಗೆ ಮಾನವ ಬದುಕನ್ನು ಎತ್ತೆಸೆಯುವ ವಿಘಟನೆಯನ್ನು ನಾವು ‘ಆಧುನಿಕ ನಾಗರಿಕತೆ’ ಎಂದು ಒಪ್ಪಿದ್ದೇವೆ. ಆದರೆ ಕೇವಲ ಹದಿನಾರೇ ವರ್ಷಕ್ಕೆ ತನ್ನ ಮಾವಂದಿರ ವಿಷಪ್ರಾಶನದಿಂದ ಅಕಾಲ ಮೃತ್ಯುವಿಗೆ ಬಲಿಯಾದ ಧ್ಯೇಯವಾದಿ ಜುಂಜಪ್ಪ ಬದುಕಿದ ರೀತಿ ವಿಸ್ಮಯಪೂರ್ಣವಾಗಿದೆ. ಗಾಂಧೀಜಿ ಕನಸಿದಂತೆ ಸ್ಥಳೀಯತಾ ಸಂಸ್ಕೃತಿಯನ್ನು ರೂಪಿಸುವ ಮಾನವ ಸಮುದಾಯಗಳು ತಾವು ಹುಟ್ಟಿ ಬೆಳೆದ ಕಿರು ಭೌಗೋಳಿಕ ಎಲ್ಲೆಕಟ್ಟಿನಲ್ಲೇ ತಮ್ಮ ಬದುಕಿನ ಗತಿವಿಧಿಯನ್ನು ಅರಸುತ್ತಾ, ಜಗತ್ತಿನ ದ್ವಂದ್ವಾತ್ಮಕ ರಹಸ್ಯವನ್ನರಿಯುತ್ತಾ ಜನ್ಮಮೃತ್ಯುಗಳ ಕಣ್ಣಮುಚ್ಚಾಲೆಯಾಟವಾಡುತ್ತಾರೆ. ಅದಕ್ಕೆಂತಲೇ ಅದು ಮಾನವ ಆವಾಸಗಳು, ಕಿರಿ ಭೌಗೋಳಿಕ ಎಲ್ಲೆಕಟ್ಟುಗಳು ಗಾಂಧೀಜಿಗೆ ಸೃಜನಶೀಲತೆಯ ಅಕ್ಷಯ ಭಂಡಾರದಂತೆ ಕಾಣಿಸಿರಬೇಕು.
ಜುಂಜಪ್ಪನ ಸ್ಥಳೀಯ ಕುಲಕಥನ ಈ ಕಾರಣದಿಂದಾಗಿ ಅತ್ಯಂತ ಮುಖ್ಯವಾಗುತ್ತದೆ. ಕೇವಲ ಜುಂಜಪ್ಪನ ಕಥನ ಮಾತ್ರವಲ್ಲ ಮಲೆಯ ಮಾದೇಶ್ವರ, ಮಂಟೇಸ್ವಾಮಿ, ಹಾಲುಮತ ಕಾವ್ಯದ ಕಥಾಪಾತ್ರ, ಪರಿಸರಗಳ Mega Narratorಗಳನ್ನು ಒಳಗೊಂಡು, ‘ಉತ್ತರದೇವಿ’ಯಂತಹ ಕಿರು ಕಥನಗಳವರೆಗೆ, ಅಷ್ಟೇ ಏಕೆ ಜನಪದ ತ್ರಿಪದಿಗಳ ಅತಿ ಸೂಕ್ಷ್ಮ ಪದ್ಯಗಳವರೆಗೆ, ಸ್ಥಳೀಯ ಕಥನ ಪರಂಪರೆಗಳು ಆಧುನಿಕ ನಾಗರಿಕತೆಗೆ ಒಡ್ಡಿದ ತೀವ್ರ ಪ್ರತಿರೋಧದಂತೆ ಕಾಣುತ್ತವೆ. ಉದಾ: ‘ಹಾಲುಂಡ ತವರೀಗೆ ಏನೆಂದು ಹರಸಲಿ ಹೊಳೆದಂಡಿಲಿರುವ ಕರಕೀಯ ಕುಡಿಹಾಂಗ ಹಬ್ಬಲಿ ಅವರ ರಸಬಳ್ಳಿ’ ಎಂದ ಅನಾಮಿಕ ಕವಯಿತ್ರಿ ‘ಗರತಿ’ಯವರೆಗೆ ಈ ಸ್ಥಳೀಯ ಕಥನದ ಕಿರು ಪುರಾಣಗಳು ಸ್ವಾಯತ್ತವಾಗಿ ಬಾಳಿಕೆ ಬರುವ ಶಬ್ದಗಳಾಗಿ ನಿಂತಿರುವುದನ್ನು ಗಮನಿಸಬಹುದಾಗಿದೆ. ಹೊಳೆದಂಡಿ, ಕರಕಿ, ಕುಡಿ, ರಸಬಳ್ಳಿ ಇಂತಹ ಶಬ್ದಗಳನ್ನು ಟಂಕಿಸುವ ಜನಪದ ಪ್ರತಿಭಾ ಪ್ರಭೆಯೂ ಆಗಿದೆ. ಈ ಜನಪದ ಕಥನಗಳ ಚಿಮ್ಮುನೆಲೆ (Take off ನೆಲೆ) ಸ್ಥಳೀಯತೆಯೇ ಆಗಿದ್ದು ಇಲ್ಲಿನ ಸಸ್ಯ, ಬೆಟ್ಟ, ನದಿ, ಆಕಾಶಗಳೆಲ್ಲ ಈ ಮಹಾಜೀವನದ ರೂಪಕದಂತೆ ಭಾಸವಾಗುತ್ತವೆ. ತಾವು ನೆಲೆ ನಿಂತ ಭೂಮಿಯ ಮೇಲೆ ಆಗಸದ ಮಹೋನ್ನತದತ್ತ ದೃಷ್ಟಿನೆಟ್ಟು ಅನುಕ್ತವಾದ ಘನಜೀವಿತವೇನನ್ನೋ ಸ್ಫುರಿಸುತ್ತ ನಿಂತಿರುವ ಈ ಸ್ಥಾವರ ಜೀವಗಳು ಜಡವೆಂದು ಭಾಸವಾದರೂ ಕಾಲಾತೀತ ತತ್ವವನ್ನು ಉಸುರುತ್ತಿರುವಂತೆ ಭಾಸವಾಗುತ್ತವೆ.
ಜುಂಜಪ್ಪನ ಕಾರ್ಯಕ್ಷೇತ್ರ ಕೂಡ ಗಾಂಧಿ ಕಂಡುಕೊಂಡಂತೆ ಸೀಮಿತ ಭೌಗೋಳಿಕ ಎಲ್ಲೆಕಟ್ಟಿನಲ್ಲಿಯೇ ಸ್ಥಿರೀಕೃತಗೊಂಡಿದೆ. ಆತ ಅಲೆಮಾರಿ ಪಶುಗಾಹಿಯಲ್ಲವೇ? ಎಂಬ ಪ್ರಶ್ನೆ ಉದಿಸಬಹುದಾದರೂ, ಉತ್ತರವೂ ಅಲ್ಲೇ ಇರುವುದನ್ನು ಗಮನಿಸಬಹುದಾಗಿದೆ. ಮನುಷ್ಯ ಮತ್ತು ಪಶುವಿನ ಸಂಯೋಜಿತ ಆಹಾರದ ಅಗತ್ಯವನ್ನು ಪೂರೈಸಲು ಆತ ಕ್ರಮಿಸುವ ಸರಹದ್ದು, ಅತ್ಯಂತ ಕಿರು ಮಾನವ ಆವಾಸವಾಗಿ ಕಾಣುತ್ತದೆ.
ಹಾಗಲವಾಡಿ, ಸೀರ್ಯ, ಮದ್ದಗಿರಿ ಮುಂತಾದ ಹಳ್ಳಿಗಳ ನಲವತ್ತು - ನಲವತ್ತೈದು ಚದರ ಮೈಲಿಗಳಲ್ಲಿ ಜುಂಜಪ್ಪನ ಮಹಿಮಾಪೂರ್ಣ ಕಾರ್ಯ ವ್ಯಾಪಿಸಿರುವುದು ಕಾಣುತ್ತದೆ. ಇಡೀ ಕಥನದ ಭಿತ್ತಿಯೂ ಅದೇ, ದ್ರವ್ಯವೂ ಅದೇ ಎಂಬಂತೆ ಈ ನಿರೂಪಣೆ ಇದೆ. ಈ ಕಥನ, ನೆಲೆ ಅಥವಾ ‘ಸ್ಥಲ’ ಬಂಜೆಯಾಗಿ ಕಾಣದೆ, ಇಲ್ಲಿನ ಭಾಷೆ, ಬದುಕು, ಜೀವನದ ಆದಿತತ್ವವನ್ನು ಉಸುರುತ್ತಿರುವಂತೆ ಕಾಣುತ್ತದೆ.
ಎರಡನೆಯ ಬಹುಮುಖ್ಯ ಅಂಶ, ಈ ಕಥನದ ಸಂಯೋಜನೆಯ ಹಿಂದಿರುವ ಮಹತ್ವಾಕಾಂಕ್ಷೆ. ಇಂತಹ ಪ್ರಯತ್ನಗಳು ಕನ್ನಡಕ್ಕೆ ಹೊಸದಲ್ಲವಾದರೂ ಅಪರೂಪದಲ್ಲಿ ಅಪರೂಪವೆಂಬಂತೆ ಈ ಬಗೆಯ ಸಾಹಿತ್ಯ ಸಂಭವಗಳು ಸಂಭವಿಸುತ್ತಿರುತ್ತವೆ ಎನ್ನಬಹುದು. ದಶಕದಷ್ಟು ಹಿಂದೆ ನಾಟಕಕಾರ ಕವಿ ಎಚ್.ಎಸ್. ಶಿವಪ್ರಕಾಶ್ ‘ಮಂಟೇಸ್ವಾಮಿ ಕಥಾ ಪ್ರಸಂಗ’ದ ಮೂಲಕ ಜನಪದ ಮೂಲದ ಮಂಟೇಸ್ವಾಮಿ ಮಹಾಕಾವ್ಯವನ್ನು ಅದರೆಲ್ಲ ನಾಟಕೀಯ ತೀವ್ರತೆ ಮತ್ತು ಘಟನಾತ್ಮಕ ಬಿಗಿ ಬಂಧದಲ್ಲಿ ತಂದಿದ್ದರು. ಇಡಿಯನ್ನು ಹಿಡಿಯಲ್ಲಿ ಹಿಡಿಯುವ ಯಶಸ್ವಿ ಪ್ರಯತ್ನ ಅದಾಗಿತ್ತು.
ಸ್ವಯಂ ತಾನೇ ಒಂದು ಸೃಜನಶೀಲ ಕಥನವಾಗಿರುವ ‘ಜುಂಜಪ್ಪ’ ಪಠ್ಯ, ಲೇಖಕರ ಕಥನ ಸಮಗ್ರೀಕರಣದ ಮಹತ್ವಾಕಾಂಕ್ಷೆಯ ಫಲವಾಗಿ ಕಲಾತ್ಮಕತೆ ಹಾಗೂ ವಿದ್ವತ್ಪೂರ್ಣ ಪ್ರಾಜ್ಞತೆಗಳೆರಡೂ ಬೆರೆತ ಒಂದು ಸ್ವಯಂಪೂರ್ಣ, ಸ್ವಾಯತ್ತ ಕಥನವಾಗಿ ಬಿಡುತ್ತದೆ. ಲಿಖಿತ ಸಾಹಿತ್ಯ ಪರಂಪರೆಯಲ್ಲಿ ಕಥನಗಳ ಸೃಷ್ಟಿ ಮರುಸೃಷ್ಟಿಯ ವಿದ್ಯಮಾನವನ್ನು ನೋಡುತ್ತೇವೆ. ಅದೇ ರೀತಿಯಲ್ಲಿ ಮೌಖಿಕ ಕಾವ್ಯ ಕಥನಗಳಲ್ಲೂ ಇದೇ ಬಗೆಯ ವಿದ್ಯಮಾನ ಸಹಜವಾಗಿದೆ ಎನ್ನುವುದು ಬಲ್ಲ ಸಂಗತಿಯೇ ಆಗಿದೆ. ಇದು ಸಾಹಿತ್ಯದ ಸ್ವಾಯತ್ತತೆಗೆ, ಸಾಹಿತ್ಯದ ‘ಪ್ರತಿಮಾ’ ಚೈತನ್ಯದ ಪುನರ್ಸೃಷ್ಟಿಗೆ ಅಗತ್ಯ ವಿದ್ಯಮಾನವಾಗಿದೆ.
ಕನ್ನಡದಲ್ಲಿ ಪಂಪ, ರನ್ನ, ಕುಮಾರವ್ಯಾಸ, ಕುವೆಂಪು ಅಂತಹ ಕಲಾಕಾರರು ಪುನರ್ಸೃಷ್ಟಿಯ ‘ಪ್ರತಿಮಾ’ ಪರಂಪರೆಯ ಮಹತ್ವದ ಪ್ರತಿಪಾದಕರಾಗಿ, ಆಚರಿಸುವವರಾಗಿ ಪ್ರಜ್ವಲಿಸುತ್ತಾರೆ. ಅದೇ ರೀತಿಯಲ್ಲಿ ಮೌಖಿಕ ಪರಂಪರೆಯ ಸೃಜನಶೀಲ ರಚನೆಗಳು ಸಹ ತಮ್ಮ ಭಿನ್ನ ಪಾಠಾಂತರಗಳ ಮೂಲಕ ಇದನ್ನೇ ಹೇಳುತ್ತಿರುತ್ತವೆ ಕೂಡಾ. ಪ್ರತಿ ಪಠ್ಯ ನಿರ್ಮಾಣವು ಸಹ ತನ್ನ ರೂಪದಿಂದ ಹಿಡಿದು (ಜುಂಜಪ್ಪ ಕಥನದಲ್ಲಿ ತ್ರಿಪದಿ, ಗಣೆಕಾವ್ಯ, ಗದ್ಯ) ವಸ್ತು (Content)ವಿನ ತನಕ ಬದಲಾಗುತ್ತ, ಸಮಕಾಲೀನವಾಗುತ್ತ, ಯುಗಧರ್ಮದ ಜೊತೆಗೆ ಸಂವಾದಿಸುತ್ತ ಮುನ್ನಡೆಯುವುದನ್ನು ಕಾಣಬಹುದು.
‘ಜುಂಜಪ್ಪ’ ಕಥನವು ಸ್ಫುರಿಸುವ ಮೌಲಿಕ ಅಂಶಗಳು ಯಾವುವು ಎಂದು ಕೇಳಿಕೊಂಡು ಉತ್ತರಿಸುವ ಒತ್ತಾಯ ಉಂಟಾಗುತ್ತದೆ. ಈ ಕಥನದಲ್ಲಿ ನಿರೂಪಿಸಲ್ಪಟ್ಟಿರುವ ತತ್ತ್ವದೃಷ್ಟಿ, ಸ್ಥಳೀಯತಾ ಸಂಸರ್ಗವನ್ನು ಅದರ ಪರಾಕಾಷ್ಠೆಯಲ್ಲಿ ಸ್ವೀಕರಿಸಿದ್ದರ ಫಲದಿಂದ ರೂಪುಗೊಂಡದ್ದಾಗಿದೆ. ನೆಲೆನಿಂತ ಸ್ಥಳವೆಲ್ಲವೂ ಆತ್ಮೀಯ ಪರಿಸರವಾಗಿ, ಐತಿಹ್ಯವಾಗಿ, ಪುರಾಣವಾಗಿ ಮಾನವ ಸ್ವೀಕೃತ ಅನುಬಂಧವಾಗಿ ಬೆಸೆಯುವ ಅನನ್ಯ ಜೀವನ ಮೀಮಾಂಸೆಯನ್ನು ಲೋಹಿಯಾ ತಮ್ಮ ಲೋಕಪ್ರಖ್ಯಾತ ‘ರಾಮ-ಕೃಷ್ಣ-ಶಿವ ಪ್ರಬಂಧದಲ್ಲಿ ಹೀಗೆ ಮಂಡಿಸುತ್ತಾರೆ:
‘‘ಇವತ್ತಿಗೂ ಇಂಡಿಯಾದ ಬೆಟ್ಟಗುಡ್ಡಗಳೆಲ್ಲ ದೇವಾನುದೇವತೆಗಳ ನಿವಾಸಗಳೇ ಆಗಿದ್ದಾವೆ. ಈ ದೇವವರ್ಗ ಒಮ್ಮಾಮ್ಮೆ ಮನುಷ್ಯಗಾತ್ರ ದಲ್ಲಿ ಅವತರಿಸಿ ಇಲ್ಲಿನ ಬಯಲುಗಳಲ್ಲಿ ಬದುಕಿದ್ದೂ ಉಂಟು’’.
‘ಜುಂಜಪ್ಪ’ ಕಥನದಲ್ಲಿ ಅಂತಹ ದೇವಸ್ಪರ್ಶಕ್ಕೊಳಗಾದ ಭಾಗಗಳಿವೆ: ಕಂಬಕ್ಕನ ಕಷ್ಟಕ್ಕೆ ಸ್ಪಂದಿಸುವ ಶಿವ-ಪಾರ್ವತಿ, ದೈಮಾರನ ಮಗುವಿಗೆ ಪ್ರಕೃತಿಯ ಉಪಚಾರ ದೊರೆಯುವಂತೆ ಮಾಡುವ ಅದೇ ಶಿವ-ಪಾರ್ವತಿಯರು ನರಲೋಕದ ಆಡಳಿತ ಪರಿಶೀಲನೆಗೆ ಆಗಾಗ್ಗೆ ಬರುವ ಪ್ರಸಂಗಗಳನ್ನು ನೆನೆಯಬಹುದು.
ಜನಪದ ಭೂಗೋಳವನ್ನು ಪ್ರವೇಶಿಸಿ ಅಲಂಕರಿಸುವ ಬಗೆ ಇದಾದರೆ ಜುಂಜಪ್ಪ ಕಥನದ ಕೇಂದ್ರ ಪಾತ್ರವಾಗಿ ‘ಜುಂಜಪ್ಪ’ನಾಗಿ ಬಿಡುವ ‘ವೀರಭದ್ರ’ನ ಮೂಲಕ ಶಿವತತ್ವದ ಸಂಚಲನೆ ಈ ಕಥನದ ರಕ್ತನಾಳಗಳಲ್ಲಿ ಪ್ರವಹಿಸುತ್ತದೆ. ಡಾ. ಲೋಹಿಯಾ ಹೇಳುವಂತೆ ಭಾರತದ ಭೌಗೋಳಿಕ ಸ್ಥಳಗಳನ್ನಷ್ಟೆ ಅಲಂಕರಿಸದೆ, ಕಥಾತರಂಗಕ್ಕೂ ಇಳಿದು ಒಂದು ಅಭಿನ್ನತಾ ಪರಿಸರವನ್ನು ಸೃಷ್ಟಿಸಿಬಿಡುತ್ತಾರೆ.
ಶಿರಾ, ಮಧುಗಿರಿ, ಗುಬ್ಬಿ, ಹಿರಿಯೂರು ಪ್ರಾಂತದ ಭೌಗೋಳಿಕ ಅಥವಾ ಪ್ರಾದೇಶಿಕ ಸ್ಥಳೀಯ ಆವರಣಕ್ಕೆ ವಿಶ್ವದ ವಿರಾಟ್ಶಕ್ತಿಯನ್ನು ಆಹ್ವಾನಿಸುವ, ಆ ವಿಶ್ವಶಕ್ತಿಯನ್ನು ಸ್ಥಳೀಕರಿಸುವ, ಮಾನುಷರೂಪಿಯಾಗಿ ಜನಿಸುವಂತೆ ಹಂಬಲಿಸಿ ಶಿವಸಂಚಾರದ ಪದಭೂಮಿಯನ್ನಾಗಿಸುವ ತಪ ಜುಂಜಪ್ಪ ಕಥನದ್ದಾಗಿದೆ.
ಜುಂಜಪ್ಪನಾಗಿ ಹುಟ್ಟುವವನನ್ನು ಆಯ್ಕೆ ಮಾಡಲು ಗೌರಸಂದ್ರ ಮಾರಿಯನ್ನೇ ಕಳುಹಿಸುವ ಉದಾರ, ಮುಕ್ತ ಹೃದಯಿ ಶಿವನ ವಿಸ್ಮಯ ಒಂದೆಡೆಯಾದರೆ, ಗೌರಸಂದ್ರದ ಮಾರವ್ವ ವೀರಭದ್ರನನ್ನೇ ಆಯ್ದುಕೊಳ್ಳುವ ಮೂಲಕ, ಬಿತ್ತಲು ಗಟ್ಟಿ ಕಾಳನ್ನೇ ಆಯ್ದುಕೊಳ್ಳುವ ಅಸಲಿ ರೈತನಂತೆ ಕಾಣುತ್ತಾಳೆ.
ಗೌರಸಂದ್ರದ ಮಾರಮ್ಮನ ಹಠ ಕೇವಲ ಆಕೆಯ ಹಠವಾಗಿ ಕಾಣುವುದಿಲ್ಲ, ಬದಲಾಗಿ ‘ಜುಂಜಪ್ಪ’ ಕಲಾಕೃತಿಯ ಹಠವೂ ಹೌದು. ಅಷ್ಟೇ ಏಕೆ ಅದು ಈ ಕೃತಿಯನ್ನು ರೂಪಿಸಿದ ಮೌಖಿಕ ಪರಂಪರೆಯ ಸಮಷ್ಟಿ ಹಠ ಕೂಡಾ, ಅದು ಗೌರಸಂದ್ರದ ಮಾರಮ್ಮನ ಮುಖದಲ್ಲಿ ತೀವ್ರ ಹಠವಾಗಿ, ಅಭೀಪ್ಸೆಯಾಗಿ ಪ್ರಕಟವಾಗುತ್ತದೆ ಮಾತ್ರ. ಕಲಾಕೃತಿ ಯೊಂದು- ಸಮಾಜದ ಅಭೀಪ್ಸೆಯ ಬಿಂಬವಾಗುವುದು ಈ ಪರಿಯಲ್ಲೇ.
ಈ ಕಥನದ ಸ್ವಯಂಪೂರ್ಣತೆಯನ್ನು, ಸ್ವಾಯತ್ತತೆಯನ್ನು ಮತ್ತು ಘನತೆಯನ್ನು ಮೇಲಿನ ‘ಸಂಭವೆ’ ಸೂಚಿಸಿದರೆ, ಈ ವಿದ್ಯಮಾನದೊಳಗಿನಿಂದ ನಾವು ಘನ ದರ್ಶನವೊಂದು ಮೈತಳೆಯುವುದನ್ನು ಕಾಣಬಹುದು.
ನಾನು ಈ ಹಿಂದೆ ಪ್ರಸ್ತಾಪಿಸಿದ ಗಾಂಧೀಜಿಯವರ ‘ಹಿಂದ್ ಸ್ವರಾಜ್’ನ ಕೇಂದ್ರ ಪ್ರತಿಪಾದನೆಯನ್ನು ಇಲ್ಲಿ ಕಾಣಬಹುದು.
ಗಾಂಧೀಜಿ ಆಶಯದಂತೆ ‘ಜುಂಜಪ್ಪ’ ಒಂದು ಸ್ಥಳೀಯ ಸ್ಥಿತಕಥನ. 20ನೆ ಶತಮಾನದ ಆಧುನಿಕ ನಾಗರಿಕತೆಯ ವಿಮರ್ಶೆ ಗಾಂಧೀಜಿಯ ಕಳವಳ ತುಂಬಿದ ಮಾತುಗಳಲ್ಲಿ ಪ್ರಕಟವಾಗುತ್ತದೆ. ಗಾಂಧೀಜಿಯವರ ಮಾತುಗಳು ತಲೆ ಬುಡವಿಲ್ಲದ ಆಧಾರ ರಹಿತ ಬಡಬಡಿಕೆಯಂತೆ ಕಂಡಿದ್ದರೂ ಆಶ್ಚರ್ಯವಿಲ್ಲ. ಈ ಮಾತುಗಳ ಅರ್ಥ ಮನದಟ್ಟಾಗಬೇಕಾದರೆ ‘ಜುಂಜಪ್ಪನ ಕಥನ’ವನ್ನು ಆಧಾರದಂತೆ, ಅನುಬಂಧದಂತೆ ಜೊತೆಗಟ್ಟಿ ಓದಿಕೊಳ್ಳಬೇಕು. ಇಂಥದೊಂದು ಪ್ರಯತ್ನ ಮಾಡಿದಲ್ಲಿ ಆಧುನಿಕ ನಾಗರಿಕತೆಯ ಬಂಜೆತನ ಅರಿವಿಗೆ ಬರುತ್ತದೆ, ಅದರ ಅನಾಧ್ಯಾತ್ಮಿಕ ಒಬ್ಬಂಟಿತನ, ವಿಚ್ಛಿದ್ರತೆ ಅನುಭವಕ್ಕೆ ಬರುತ್ತದೆ.
ಹಾಗಿದ್ದಲ್ಲಿ ‘ಜುಂಜಪ್ಪ’ ಹೇಗೆ ಗಾಂಧಿಯ ಹಿಂದ್ ಸ್ವರಾಜ್ನ ಸಮರ್ಥನ ಕೃತಿಯಾಗುತ್ತದೆ ಎಂಬ ಪ್ರಶ್ನೆ ಏಳುತ್ತದೆ. ನಾವು ಅದಕ್ಕೆ ಸಂವೇದನಾಶೀಲತೆಯಿಂದ ಉತ್ತರಿಸಬೇಕಾಗುತ್ತದೆ.
1.ಜುಂಜಪ್ಪ ಸ್ಥಳೀಯ ಸ್ಥಿತಕಥನ. ಸ್ಥಳೀಯ ಸ್ಥಿತ ಬದುಕಿನ ಹೆಗ್ಗಳಿಕೆಯಂತೆ ಆತನ ಚೇತನ ವಿಕಸಿಸುತ್ತದೆ.
2.ಸ್ಥಳೀಯ ಸ್ಥಿತಕಥನ ಐತಿಹ್ಯವಾಗಿ, ಪುರಾಣವಾಗಿ, ಮನುಕುಲದ ಮಹಾನ್ ನಿರೂಪಣೆಯಾಗಿ ಬೆಳೆಯುವ ಸಾಧ್ಯತೆಯನ್ನು ಪ್ರಕಟಿಸುತ್ತದೆ. ಅದಕ್ಕೆ ‘ಜುಂಜಪ್ಪ’ನೇ ಸಾಕ್ಷಿ.
3.ಈ ಕಥನ ಸಂಭವದ ಭೂಗೋಳ, ಆಕಾಶಗಳೆಲ್ಲ ವಿರಾಟ್-ಧೀಶಕ್ತಿಯ ಮಾಂತ್ರಿಕ ಸ್ಪರ್ಶಕ್ಕೆ ಸಿಕ್ಕುತ್ತವೆ, ಈ ಕಥನದಲ್ಲಿ ‘ಶಿವ-ಪಾರ್ವತಿ’ಯರ ಸಂಚಾರದ ಭೂ-ವ್ಯೋಮವೊಂದು ಸೃಜಿಸಲ್ಪಟ್ಟಿದೆ.
4.ಈ ಕಿರು ಮಾನವ ಸಮುದಾಯದ ಅಸ್ತಿತ್ವ ತನ್ನ ಆಧ್ಯಾತ್ಮಿಕ ಘನತೆಯನ್ನು ಪ್ರಕಟಿಸುವ ಧೀಮಂತಿಕೆ ತೋರುತ್ತದೆ. ತನ್ನ ನಾಯಕನನ್ನು ವಿಶ್ವಶಕ್ತಿಯ ಎದುರು ಆಗ್ರಹಿಸಿ ಕೇಳುವ ದೃಢತೆಯನ್ನು ತೋರುತ್ತದೆ. ಗೌರಸಂದ್ರದ ಮಾರವ್ವ ವೀರಭದ್ರನಂತಹ ತೇಜಸ್ವಿಯನ್ನೇ ಆಯ್ದುಕೊಳ್ಳುವಲ್ಲಿ ಆ ಸತ್ವಯುತ ಆಯ್ಕೆಯ ಉನ್ನತಿಕೆ ಅರಿವಿಗೆ ಬರುತ್ತದೆ- ಗೌರಸಂದ್ರದ ಮಾರವ್ವನಂತಹ ‘ಶಿವಪುತ್ರಿ’ ಸ್ಥಳೀಯ ಮರ್ತ್ಯದಲ್ಲಿ ನೆಲೆಗೊಳ್ಳುತ್ತಾಳೆ, ಸಮಷ್ಠಿ ಹಂಬಲದ ಪ್ರತೀಕದಂತೆ ಪ್ರವರ್ತಿಸಿ ಅಚ್ಚರಿ ಹುಟ್ಟಿಸುತ್ತಾಳೆ.
5.ಸ್ಥಳೀಯವು ತನ್ನ ಉನ್ನತಿಕೆಯಿಂದ ವಿಶ್ವಶಕ್ತಿಯಲ್ಲಿ ಒಂದಾಗುವ ವಿದ್ಯಮಾನಕ್ಕೆ ಇದು ಆಶ್ರಯ ಕಲ್ಪಿಸುತ್ತದೆ.
6.ಈ ಮರ್ತ್ಯರ ಕೈಲಾಸದಂತಹ ಅಮರ್ತ್ಯದವರೆಗೆ - ಊರು, ಹೊಲ, ಕೆರೆ-ಕಟ್ಟೆ, ಬಯಲು, ಅರಣ್ಯ, ಹಗಲು-ರಾತ್ರಿಗಳೆಲ್ಲವೂ - ಆಧ್ಯಾತ್ಮಿಕ ಸ್ಪರ್ಶ ಪಡೆದು ನಿಲ್ಲುತ್ತವೆ. 7. ಜುಂಜಪ್ಪನಂತಹ ನಾಯಕ ಚೇತನದೊಡನೆ ಒಂದು ಸಮುದಾಯವೇ ಆಧ್ಯಾತ್ಮಿಕ ಮುನ್ನಡೆ ಕಾಣುತ್ತದೆ ಮತ್ತು ಆ ಸಮುದಾಯ ಪುರಾಣ ಸೃಷ್ಟಿಸಬಲ್ಲ ಚೈತನ್ಯಪೂರ್ಣ ‘ಸೃಜನಶೀಲತೆ’ಯನ್ನು ಪ್ರಕಟಿಸುತ್ತದೆ. ಲೌಕಿಕ, ಪಾರಮಾರ್ಥಿಕ ಎನ್ನುವ ಭಿನ್ನತೆ ಅಳಿದು ಒಂದು ಅಭಿನ್ನತಾ ಯೋಗವೊಂದು ಅಲ್ಲಿ ರೂಪುಗೊಳ್ಳುತ್ತದೆ.
ಇದೆಲ್ಲವೂ ಸ್ಥಳೀಯ ಸ್ಥಿತಜೀವನದ ಮಹಾ ಗಳಿಕೆಯನ್ನು ತೋರುತ್ತದೆ. ಸ್ಥಳೀಯ ಸ್ಥಿತಜೀವನ ಈ ಕಾರಣಗಳಿಂದ ಮಹಾಜ್ಞಾನೋದಯದ ಮಹಾಪಾತ್ರವೆಂದು ಕರೆಯಲು ತಕ್ಕುದಾಗಿದೆ. ಗಾಂಧೀಜಿಯವರ ಆಶಯದ ಹಿಂದೆ ಈ ಸೃಜನಶೀಲ ಗ್ರಾಮಭಾರತ ಕುರಿತ ಅವ್ಯಕ್ತ ಕಾಣ್ಕೆ ಇದೆ.
ಪಶುಪಾಲನೆಯನ್ನು ಗಾಢ ಆಸಕ್ತಿಯಿಂದ ತಬ್ಬಿದ ಜುಂಜಪ್ಪನ ಘನ ಕಥನದ ಪೌರಾಣಿಕ ಪ್ರಭೆ ಬೆಳಗುವ ಈ ಸ್ಥಳಗಳು ಕಳೆಗಟ್ಟುತ್ತವೆ. ಈ ಕಥನದಲ್ಲಿ ರಭಸಗತಿಯನ್ನು, ಭಾಷೆಯ ಫಲವಂತಿಕೆಯನ್ನು, ಕಥಾ ವೇಗವನ್ನು ಗುರುತಿಸಬಹುದು.
ಕಥೆಯಲ್ಲಿ ನಾವು ಕಾಣುವ ತುಮಕೂರು, ಮದ್ದಗಿರಿ, ಸೀರ್ಯ ಮುಂತಾದವೆಲ್ಲವೂ ಸ್ಥಳೀಯ ಪರಿಸರವಾಗಿದ್ದು, ಜುಂಜಪ್ಪ ಕಥನ ವಾಸ್ತವದಲ್ಲಿ ಅದ್ದಿ ತೆಗೆದಂತೆ ಕಾಣುತ್ತದೆ. ಮಾಯಾ ವಾಸ್ತವ(Magical Realism) ‘ಜುಂಜಪ್ಪ’ ಕಥನ ಎಲ್ಲಾ ಜನಪದ ಸಾಹಿತ್ಯ ಸೃಷ್ಟಿಯಂತೆ ಅಚ್ಚಕನ್ನಡದ ಪದಗಳ ಟಂಕಸಾಲೆಯಂತಿದೆ ಅಥವಾ ಕನ್ನಡೀಕರಣದ ಕಮ್ಮಾರಸಾಲೆಯಂತಿದೆ.
ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ಕಳುವೋರಳ್ಳಿಯಲ್ಲಿರುವ ಜುಂಜಪ್ಪನವರ ಸಮಾಧಿ
ಮಹಾತ್ಮಾ ಗಾಂಧಿ
ಮನೋಹರ್ ಲೋಹಿಯಾ
ಎಚ್.ಎಸ್. ಶಿವಪ್ರಕಾಶ್
ದೇವನೂರ ಮಹಾದೇವ