ಶುಕ್ರವಾರ ದಿಲ್ಲಿ ಜಿಲ್ಲಾ ನ್ಯಾಯಾಲಯದ ವಕೀಲರ ಮುಷ್ಕರ
ಹೊಸದಿಲ್ಲಿ, ಅ. 12: ಕೆಲವು ನ್ಯಾಯಮೂರ್ತಿಗಳ ದುರ್ನಡತೆ ವಿರೋಧಿಸಿ ಹೊಸದಿಲ್ಲಿಯ 6 ಜಿಲ್ಲೆಗಳ ವಕೀಲರು ಶುಕ್ರವಾರ ಒಂದು ದಿನದ ಮುಷ್ಕರ ನಡೆಸಲಿದ್ದಾರೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರ ಹಾಗೂ ಕಕ್ಷಿಗಾರರೊಂದಿಗೆ ನ್ಯಾಯಮೂರ್ತಿಗಳು ದುರ್ನಡತೆ ತೋರುತ್ತಿರುವುದು ಈ ಮುಷ್ಕರಕ್ಕೆ ಕರೆ ನೀಡಲು ಮುಖ್ಯ ಕಾರಣ ಎನ್ನಲಾಗಿದೆ.
“ನಾವು ತಪ್ಪಿತಸ್ತ ನ್ಯಾಯಮೂರ್ತಿಗಳ ಹೆಸರನ್ನು ಈಗಾಗಲೆ ಉಚ್ಚ ನ್ಯಾಯಾಲಯಕ್ಕೆ ನೀಡಿದ್ದೇವೆ. ಆದರೆ, ಉಚ್ಚ ನ್ಯಾಯಾಲಯ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ” ಎಂದು ದಿಲ್ಲಿ ಬಾರ್ ಅಸೋಸಿಯೇಶನ್ನ ಸಹಕಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಜೈವೀರ್ ಸಿಂಗ್ ಹೇಳಿದ್ದಾರೆ.
ಎಲ್ಲ ಜಿಲ್ಲೆಗಳ ಬಾರ್ ಎಸೋಶಿಯೇಶನ್ನ ಸಹಕಾರ ಸಮಿತಿ ಇಂದಿಲ್ಲಿ ಸರ್ವಸಮ್ಮತವಾಗಿ ಈ ನಿರ್ಧಾರ ಅಂಗೀಕರಿಸಿತು.
ಈ ಮುಷ್ಕರದಿಂದ ಎಲ್ಲ ಆರು ಜಿಲ್ಲೆಗಳಲ್ಲಿರುವ ಪಟಿಯಾಲ ಹೌಸ್, ರೋಹಿಣಿ, ಸಾಕೇತ್, ಟಿಸ್ ಹಝಾರಿ, ದ್ವಾರಕಾ ಕಾರ್ಕರ್ಡೂಮಾದ ನ್ಯಾಯಾಲಯಗಳಲ್ಲಿ ಕಾರ್ಯಚಟುವಟಿಕೆ ಅಸ್ತವ್ಯಸ್ತಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.