ಧವನ್, ಕಾರ್ತಿಕ್, ಠಾಕೂರ್ ವಾಪಸ್; ಜಡೇಜ, ಅಶ್ವಿನ್ಗೆ ವಿಶ್ರಾಂತಿ
ನ್ಯೂಝಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಟೀಮ್ ಇಂಡಿಯಾ ಪ್ರಕಟ
ಹೊಸದಿಲ್ಲಿ, ಅ.14: ನ್ಯೂಝಿಲೆಂಡ್ ವಿರುದ್ಧ ಅ. 22ರಿಂದ ಆರಂಭವಾಗಲಿರುವ ಸೀಮಿತ ಓವರ್ಗಳ ಕ್ರಿಕೆಟ್ ಸರಣಿಗೆ 15 ಮಂದಿ ಸದಸ್ಯರ ಭಾರತದ ಕ್ರಿಕೆಟ್ ತಂಡ ವನ್ನು ಪ್ರಕಟಿಸಲಾಗಿದ್ದು, ಆರಂಭಿಕ ದಾಂಡಿಗ ಶಿಖರ್ ಧವನ್, ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಮತ್ತು ವೇಗಿ ಶಾರ್ದೂಲ್ ಠಾಕೂರ್ ತಂಡಕ್ಕೆ ಮರಳಿದ್ದಾರೆ.
ವೇಗಿಗಳಾದ ಉಮೇಶ್ ಯಾದವ್ ಮತ್ತು ಮುಹಮ್ಮದ್ ಶಮಿ, ಹಿರಿಯ ಸ್ಪಿನ್ನರ್ಗಳಾದ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜ ಮತ್ತು ಕರ್ನಾಟಕದ ಬ್ಯಾಟ್ಸ್ಮನ್ ಲೋಕೇಶ್ ರಾಹುಲ್ ಅವರಿಗೆ ವಿಶ್ರಾಂತಿ ನೀಡಲಾಗಿದೆ.
ಅಶ್ವಿನ್ ಮತ್ತು ಜಡೇಜ ತಮ್ಮ ರಾಜ್ಯಗಳ ಪರ ರಣಜಿ ಟ್ರೋಫಿ ಟೂರ್ನಮೆಂಟ್ನಲ್ಲಿ ಆಡುತ್ತಿದ್ದಾರೆ.
ಶಿಖರ್ ಧವನ್ ಪತ್ನಿಗೆ ಅಸೌಖ್ಯದ ಕಾರಣಕ್ಕಾಗಿ ಆಸ್ಟ್ರೇಲಿಯ ವಿರುದ್ಧದ ಏಕದಿನ ಸರಣಿಯಲ್ಲಿ ಅಡಿರಲಿಲ್ಲ. ಆದರೆ ಟ್ವೆಂಟಿ-20 ಸರಣಿಯಲ್ಲಿ ಆಡಿದ್ದರು. ನ್ಯೂಝಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಸರಣಿಗೆ ತಂಡದಲ್ಲಿ ಅವಕಾಶ ಪಡೆದಿದ್ದಾರೆ.
ಕಾರ್ತಿಕ್ ಜುಲೈನಲ್ಲಿ ವೆಸ್ಟ್ಇಂಡೀಸ್ ವಿರುದ್ಧದ ಪ್ರವಾಸ ಸರಣಿಯಲ್ಲಿ ಕೊನೆಯ ಬಾರಿ ಆಡಿದ್ದರು. ಅವರು ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಿದ್ದರು.
32ರ ಹರೆಯದ ಕಾರ್ತಿಕ್ ಆಸ್ಟ್ರೇಲಿಯ ವಿರುದ್ಧದ ಟ್ವೆಂಟಿ-20 ಸರಣಿಗೆ ತಂಡಕ್ಕೆ ಆಯ್ಕೆಯಾಗಿದ್ದರೂ, ಅಂತಿಮ ಹನ್ನೊಂದರ ಬಳಗದಲ್ಲಿ ಆಡುವ ಅವಕಾಶ ಪಡೆಯಲಿಲ್ಲ.
ವೇಗಿ ಠಾಕೂರ್ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಆಡಿದ್ದರು. ಆದರೆ ಅವರನ್ನು ಆಸ್ಟ್ರೇಲಿಯ ವಿರುದ್ಧದ ಸರಣಿಗೆ ಕಡೆಗಣಿಸಲಾಗಿತ್ತು. ನ್ಯೂಝಿಲೆಂಡ್ ವಿರುದ್ಧದ ಸರಣಿಗೆ ಉಮೇಶ್ ಯಾದವ್ ಬದಲಿಗೆ ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ.
ಭಾರತ ತಂಡ:ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮ(ಉಪನಾಯಕ), ಶಿಖರ್ ಧವನ್, ಅಜಿಂಕ್ಯ ರಹಾನೆ, ಮನೀಷ್ ಪಾಂಡೆ, ಕೇದಾರ್ ಜಾಧವ್, ದಿನೇಶ್ ಕಾರ್ತಿಕ್, ಎಂ.ಎಸ್.ಧೋನಿ(ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಯುಜುವೇಂದ್ರ ಚಹಾಲ್, ಜಸ್ಪ್ರೀತ್ ಬುಮ್ರಾ, ಭುವನೇಶ್ವರ ಕುಮಾರ್ ಮತ್ತು ಶಾರ್ದೂಲ್ ಠಾಕೂರ್