ಅಮಾನ್ಯೀಕರಣ ಒಂದು ತಪ್ಪು ಕ್ರಮವಾಗಿತ್ತು ಎಂದು ಮೋದಿ ಒಪ್ಪಿಕೊಳ್ಳಬೇಕು : ಕಮಲ್ ಹಾಸನ್
ಚೆನ್ನೈ,ಅ.19 : ಈ ಹಿಂದೆ ನೋಟು ಅಮಾನ್ಯೀಕರಣವನ್ನು ಬೆಂಬಲಿಸಿದ್ದಕ್ಕಾಗಿ ಕ್ಷಮೆ ಕೋರಿರುವ ನಟ ಕಮಲ್ ಹಾಸನ್, ನೋಟು ರದ್ದತಿ ಒಂದು ತಪ್ಪು ಕ್ರಮವಾಗಿತ್ತೆಂದು ಪ್ರಧಾನಿ ನರೇಂದ್ರ ಮೋದಿ ಕೂಡಾ ಒಪ್ಪಿಕೊಂಡರೆ ತಾವು ಪ್ರಧಾನಿಗೆ ಮತ್ತೆ ಸೆಲ್ಯೂಟ್ ಮಾಡುವುದಾಗಿ ಹೇಳಿಕೊಂಡಿದ್ದಾರೆ.
ತಮಿಳು ಮ್ಯಾಗಜೀನ್ ಆನಂದವಿಕಟನ್ ನಲ್ಲಿ ಲೇಖನವೊಂದರಲ್ಲಿ ಈ ರೀತಿ ಬರೆದಿರುವ ಕಮಲ ಹಾಸನ್, ತಮ್ಮ ತಪ್ಪುಗಳನ್ನು ಒಪ್ಪಿಕೊಡು ಅದನ್ನು ತಿದ್ದುವುದು ಮಹಾನ್ ನಾಯಕರ ಲಕ್ಷಣ. ಮಹಾತ್ಮ ಗಾಂಧಿಯಂತಹ ನಾಯಕರು ಈ ರೀತಿ ಮಾಡಲು ಸಫಲರಾಗಿದ್ದರು ಎಂದು ಬರೆದಿದ್ದಾರೆ. ತಾವು ಹಿಡಿದ ಮೊಲಕ್ಕೆ ಮೂರು ಕಾಲುಗಳಿವೆ ಎಂದು ವಾದಿಸುತ್ತಾ ಮೋದಿ ಹಠಮಾರಿಯಾಗಬಾರದೆಂದೂ ಕಮಲ್ ಹೇಳಿದ್ದಾರೆ.
ಈ ಹಿಂದೆ ತಾವು ನೋಟು ಅಮಾನ್ಯೀಕರಣವನ್ನು ಬೆಂಬಲಿಸಿ ಟ್ವೀಟ್ ಕೂಡ ಮಾಡಿದ್ದನ್ನು ನೆನಪಿಸಿಕೊಂಡ ಕಮಲ್, ``ಕಾಳಧನದ ಮೂಲೋಚ್ಛಾಟನೆ ಮಾಡುವ ಉದ್ದೇಶವಿರುವಾಗ ಸಣ್ಣ ಸಣ್ಣ ಸಮಸ್ಯೆಗಳನ್ನು ಜನರು ಸಹಿಸಬೇಕು ಎಂದು ನಾನಂದುಕೊಂಡಿದ್ದೆ,'' ಎಂದಿದ್ದಾರೆ.
ಆದರೆ ನಂತರ ಆರ್ಥಿಕತೆಯ ಬಗ್ಗೆ ಒಳ್ಳೆಯ ಜ್ಞಾನವಿದ್ದ ತಮ್ಮ ಗೆಳೆಯರು ತನಗೆ ಕರೆ ಮಾಡಿ ತಾನು ಅಮಾನ್ಯೀಕರಣಕ್ಕೆ ಬೆಂಬಲ ಸೂಚಿಸಿದ್ದಕ್ಕೆ ತನ್ನನ್ನು ಟೀಕಿಸಿದ್ದರು. ಅಮಾನ್ಯೀಕರಣ ಒಳ್ಳೆಯದಾದರೂ ಅದನ್ನು ಜಾರಿಗೊಳಿಸಿದ ರೀತಿ ತಪ್ಪು ಎಂದು ನಂತರ ನನಗೆ ತಿಳಿದು ಬಂದಿದೆ, ಎಂದಿದ್ದಾರೆ ಕಮಲ್.