ಅ.20: ತುಳು ಪಠ್ಯ ಯೋಜನೆ ಅನುಷ್ಠಾನಕ್ಕೆ ಸಮಾಲೋಚನಾ ಸಭೆ
ಮಂಗಳೂರು, ಅ.19: ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಹಾಗೂ ತುಳುವರ ಬೇಡಿಕೆಯಂತೆ ರಾಜ್ಯ ಸರಕಾರದ 2010ರಲ್ಲಿ 6ನೇ ತರಗತಿಯಿಂದ ತುಳುಭಾಷೆಯನ್ನು ತೃತೀಯ ಭಾಷೆಯಾಗಿ ಪರಿಗಣಿಸಲು ಆದೇಶ ನೀಡಿದೆ. ಅದರಂತೆ ಅಕಾಡಮಿಯ ವಿಶೇಷ ಪ್ರಯತ್ನದಿಂದ 2015ರಲ್ಲಿ 18 ಮತ್ತು 2016ರಲ್ಲಿ 25 ಹಾಗು 2017ರಲ್ಲಿ 283 ವಿದ್ಯಾರ್ಥಿಗಳು ಎಸೆಸೆಲ್ಸಿ ಪರೀಕ್ಷೆ ಬರೆದು ಎದುರಿಸಿ ಶೇ.100 ಫಲಿತಾಂಶ ದಾಖಲಿಸಿದ್ದಾರೆ.
ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ದ.ಕ. ಮತ್ತು ಉಡುಪಿಯ 35 ಶಾಲೆಗಳಲ್ಲಿ 1,647 ವಿದ್ಯಾರ್ಥಿಗಳು ತುಳು ಪಠ್ಯವನ್ನು ಅಭ್ಯಾಸ ಮಾಡುತ್ತಿದ್ದು, 2018ರ ಎಸೆಸೆಲ್ಸಿ ಪರೀಕ್ಷೆಗೆ 463 ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ.
2017-18ನೆ ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ 200 ಶಾಲೆಗಳಲ್ಲಿ ತುಳುಪಠ್ಯ ಯೋಜನೆಯನ್ನು ಅನುಷ್ಠಾನಗೊಳಿಸಲು ಉದ್ದೇಶಿಸಿದ್ದು ಈ ಯೋಜನೆಗೆ ತುಳುಪರ ಸಂಘಟನೆ, ಚಳವಳಿಗಳಲ್ಲಿ ಮಂಚೂಣಿಯಲ್ಲಿರುವ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕಿದೆ. ಈ ಬಗ್ಗೆ ಚರ್ಚಿಸಲು ಅ.20ರಂದು ಅಪರಾಹ್ನ 2:30ಕ್ಕೆ ಸಮಾಲೋಚನಾ ಸಭೆಯನ್ನು ಅಕಾಡಮಿಯ ಸಿರಿಚಾವಡಿಯಲ್ಲಿ ಏರ್ಪಡಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.