10 ಮಂದಿ ಆರೋಪಿಗಳ ಸೆರೆ: ಪೊಲೀಸ್ ಆಯುಕ್ತ ಸುನೀಲ್ ಕುಮಾರ್
‘ಆಯುಕ್ತರ ಸಮಿತಿ’ ಸದಸ್ಯರ ಮೇಲೆ ಹಲ್ಲೆ ಪ್ರಕರಣ
ಬೆಂಗಳೂರು, ಅ. 19: ಅನಧಿಕೃತ ಕಸಾಯಿಖಾನೆಗಳ ಪರಿಶೀಲನೆಗೆ ಹೈಕೋರ್ಟ್ ನೇಮಕ ಮಾಡಿದ್ದ ‘ಆಯುಕ್ತರ ಸಮಿತಿ’ ಸದಸ್ಯರ ಮೇಲೆ ಹಲ್ಲೆ ನಡೆಸಿದ ಪ್ರಕರಣ ಸಂಬಂಧ ಪೊಲೀಸರು ಹತ್ತು ಮಂದಿ ಆರೋಪಿಗಳನ್ನು ಬಂಧಿಸಿದ್ದು, ಮೂರು ದನ, ಒಂದು ಕರುವನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ತಿಳಿಸಿದ್ದಾರೆ.
ಬುಧವಾರ ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿನ್ನೆ ಸಂಜೆ 4:30ರ ಸುಮಾರಿಗೆ ಇಲ್ಲಿನ ವಿದ್ಯಾರಣ್ಯಪುರ ಮತ್ತು ಯಲಹಂಕ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಚಿಕ್ಕಬೆಟ್ಟಹಳ್ಳಿ ಪ್ರದೇಶದ ಎರಡು ಪ್ರತ್ಯೇಕ ಸ್ಥಳಗಳ ಮೇಲೆ ಸಮಿತಿ ಭೇಟಿ ನೀಡಿತ್ತು.
ಈ ಸಂದರ್ಭದಲ್ಲಿ ಸಮಿತಿ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿ, ಕಾರಿನ ಗಾಜನ್ನು ಪುಡಿ ಮಾಡಿದ್ದು, ಅನಂತರ ಗುಂಪು ಸೇರಿದ್ದ ಜನ ಬಿಎಂಟಿಸಿ ಬಸ್ ನ ಗಾಜನ್ನು ಪುಡಿ ಮಾಡಿದ್ದರು. ಈ ಸಂಬಂಧ ಹತ್ತು ಮಂದಿ ಆರೋಪಿಗಳನ್ನು ಬಂಧಿಸಿದ್ದು, ಕ್ಯಾಂಟರ್ ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
Next Story