ರಂಗಮಂದಿರವನ್ನು ವಾಣಿಜ್ಯ ಚಟುವಟಿಕೆಗಳ ಬಳಕೆಗೆ ಖಂಡನೆ
ಬೆಂಗಳೂರು, ಅ.19: ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮೀಸಲಿಟ್ಟ ರಾಜರಾಜೇಶ್ವರಿ ನಗರದ ಟಿ.ಎಸ್.ಬಾಲಕೃಷ್ಣ ಬಯಲು ರಂಗಮಂದಿರವನ್ನು ವಾಣಿಜ್ಯ ವ್ಯವಹಾರಕ್ಕಾಗಿ ಅವಕಾಶ ಕಲ್ಪಿಸಿರುವುದನ್ನು ಖಂಡಿಸಿ ವಿವಿಧ ಕನ್ನಡ ಪರ ಸಂಘಟನೆಗಳು ಬಿಬಿಎಂಪಿ ಜಂಟಿ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ರಂಗ ಮಂದಿರವನ್ನು ಕಳೆದ ಒಂದೂವರೆ ತಿಂಗಳಿಂದ ಕೇವಲ 50 ಸಾವಿರಕ್ಕೆ ಬಾಡಿಗೆಗೆ ವಾಣಿಜ್ಯ ವ್ಯಾಪಾರ, ಕಾರು ಮಾರಾಟಕ್ಕೆ ಅನುವು ಮಾಡಿಕೊಟ್ಟು ಸಾಂಸ್ಕೃತಿಕ, ಧಾರ್ಮಿಕ, ಮಕ್ಕಳ ಮನರಂಜನೆ, ಗಣರಾಜ್ಯೋತ್ಸವ, ಸ್ವಾತಂತ್ರೋತ್ಸವ ಕಾರ್ಯಕ್ರಮಗಳಿಗೆ ಅವಕಾಶ ಸಿಗುತ್ತಿಲ್ಲ ಎಂದು ಆರೋಪಿಸಿ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಕನ್ನಡ ಸಾಹಿತ್ಯ ಪರಿಷತ್ತು, ರಂಗ ಸಮುದ್ರ ಸೇರಿದಂತೆ ವಿವಿಧ ಕನ್ನಡ ಪರ ಸಂಘಟನೆಗಳು ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಸಾಹಿತ್ಯ ಸಾಂಸ್ಕೃತಿಕ ಉತ್ಸವಗಳಿಗೆ ಒಂದು ದಿನಕ್ಕೆ ಐದು ಸಾವಿರ ಬಾಡಿಗೆ ಪಡೆಯುವ ಬಿಬಿಎಂಪಿ, ವಾಣಿಜ್ಯ ಮಾರಾಟಕ್ಕೆ 45 ದಿನಗಳಿಗೆ ಕೇವಲ 50 ಸಾವಿರ ಬಾಡಿಗೆ ಪಡೆದು, ಪಾಲಿಕೆಗೆ ಬರಬೇಕಾದ ಸಾವಿರಾರು ರೂ. ಹಣವನ್ನು ವಂಚಿಸುತ್ತಿದ್ದಾರೆ ಎಂದ ಕಸಾಪ ಅಧ್ಯಕ್ಷ ಹೊ.ಬೋ.ಪುಟ್ಟೇಗೌಡ, ಕೂಡಲೇ ಅನುಮತಿ ನೀಡಿದ ಸಹಾಯಕ ಇಂಜಿನಿಯರ್ರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.