ಅ.26 ರಂದು ಕರ್ನಾಟಕ ರಾಜ್ಯ ಮುಸ್ಲಿಂ ಸಮಾವೇಶ: ಶಬೀರ್ ಅಹ್ಮದ್ ಖಾನ್
ಮೈಸೂರು, ಅ.19: ಮೈಸೂರು ಸಿಟಿ ಮುಸ್ಲಿಂ ಫೋರಂ ವತಿಯಿಂದ ಅ.26ರಂದು ಕರ್ನಾಟಕ ರಾಜ್ಯ ಮುಸ್ಲಿಂ ಸಮಾವೇಶ ಹಾಗೂ ಕುಂದು ಕೊರತೆ ಚರ್ಚಾ ಸಭೆಯನ್ನು ಆಯೋಜಿಸಲಾಗಿದೆ ಎಂದು ಸಂಚಾಲಕ ಶಬೀರ್ ಅಹ್ಮದ್ ಖಾನ್ ತಿಳಿಸಿದರು.
ನಗರದ ಪತ್ರಕರ್ತರಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅಂದು ಬೆಳಗ್ಗೆ 11ಕ್ಕೆ ರಾಜೀವ್ ನಗರದ ಮಹಾನಗರ ಪಾಲಿಕೆ ಮೈದಾನದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಸಿಎಂ ಸಿದ್ದರಾಮಯ್ಯ, ಲೋಕಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಕಾರ್ಯದರ್ಶಿ ದಿನೇಶ್ ಗುಂಡೂರಾವ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ, ಮಾಜಿ ಕೇಂದ್ರ ಸಚಿವರಾದ ರೆಹಮಾನ್ ಖಾನ್, ಸಿ.ಕೆ.ಜಾಫರ್ ಷರೀಪ್, ಸಿಎಂ.ಇಬ್ರಾಹೀಂ, ಮೇಯರ್ ಎಂ.ಜೆ.ರವಿಕುಮಾರ್, ಮುಡಾ ಅಧ್ಯಕ್ಷ ಡಿ.ಧ್ರುವಕುಮಾರ್, ಗೋವಾ ಮತ್ತು ವಿವಿಯ ಉಪಕುಲಪತಿ ತರೀನ್, ವಿಟಿಯೂ ಮಾಜಿ ಡೀನ್ ಶಕೀಬ್ ಉರ್ ರಹಮಾನ್ ಮೊದಲಾದವರು ಭಾಗಿಯಾಗುವರು ಎಂದು ತಿಳಿಸಿದರು.
ಸಮಾಜದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಕುಂದು ಕೊರತೆಗಳನ್ನು ಮುಖ್ಯ ಮಂತ್ರಿಗಳ ಬಳಿ ಅಲವತ್ತುಕೊಂಡು, ಅಲ್ಪಸಂಖ್ಯಾತರ ಅಭ್ಯುದಯಕ್ಕೆ ಸಮಾವೇಶದಲ್ಲಿ ಮನವಿ ಮಾಡಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಮೈಸೂರು ಸಿಟಿ ಮುಸ್ಲಿಂ ಫೋರಂ ಪದಾಧಿಕಾರಿಗಳಾದ ಅಬ್ದುಲ್, ನೂರ್ ಮಹ್ಮದ್, ಇರ್ಷಾದ್ ಬೇಗ್ ಮೊದಲಾದವರು ಭಾಗಿಯಾಗಿದ್ದರು.