ನ.21ರಂದು ಕುಮಟದ ಮಣಕಿ ಕ್ರೀಡಾಂಗಣದಲ್ಲಿ ಮೀನುಗಾರರ ರಾಜ್ಯ ಸಮಾವೇಶಕ್ಕೆ ರಾಹುಲ್ ಗಾಂಧಿ ಸಾಧ್ಯತೆ
ಉಡುಪಿ, ಅ.19: ಕರ್ನಾಟಕ ಪ್ರದೇಶ ಮೀನುಗಾರರ ಕಾಂಗ್ರೆಸ್ ವತಿಯಿಂದ ನವೆಂಬರ್ 21ರಂದು ಅಂತಾರಾಷ್ಟ್ರೀಯ ಮೀನುಗಾರ ದಿನದ ಸಮಾರಂಭ ಉತ್ತರ ಕನ್ನಡ ಜಿಲ್ಲೆಯ ಕುಮಟದ ಮಣಕಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಇದರಲ್ಲಿ ಪಾಲ್ಗೊಳ್ಳಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒಪ್ಪಿಕೊಂಡಿದ್ದಾರೆ ಎಂದು ಸಮಿತಿಯ ನೂತನ ಅಧ್ಯಕ್ಷ, ಮಾಜಿ ಶಾಸಕ ಯು. ಆರ್.ಸಭಾಪತಿ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂತಾರಾಷ್ಟ್ರೀಯ ಮೀನುಗಾರರ ದಿನದ ಪ್ರಯುಕ್ತ ಬೃಹತ್ ಮೀನುಗಾರರ ಸಮಾವೇಶ ನಡೆಯಲಿದ್ದು, ಇದರಲ್ಲಿ ರಾಜ್ಯದ ಸುಮಾರು 60ರಿಂದ 70,000 ಮೀನುಗಾರರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಈ ಸಮಾವೇಶದಲ್ಲಿ ಮೀನುಗಾರರ ಹಲವು ಬೇಡಿಕೆಗಳ ಈಡೇರಿಕೆಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳನ್ನು ಒತ್ತಾಯಿಸಲಾಗುವುದು. ಅವುಗಳಲ್ಲಿ ಪ್ರಮುಖ ಬೇಡಿಕೆ ಎಂದರೆ, ದೇಶದಲ್ಲಿ ಏಕರೂಪದ ಮೀನುಗಾರಿಕಾ ನೀತಿಯನ್ನು ಪ್ರಕಟಿಸುವುದು. ಈಗ ಪ್ರತಿ ರಾಜ್ಯಕ್ಕೂ ಅದರದೇ ಆದ ಪ್ರತ್ಯೇಕ ಮೀನುಗಾರಿಕಾ ನೀತಿಗಳಿದ್ದು, ಇದರಿಂದ ರಾಜ್ಯ ರಾಜ್ಯಗಳ ನಡುವೆ ಸಂಘರ್ಷಕ್ಕೆ ಕಾರಣವಾಗುತ್ತದೆ. ಇದಕ್ಕೆ ಬದಲು ಮೀನುಗಾರಿಕೆಗೆ ರಾಷ್ಟ್ರೀಯ ನೀತಿಯನ್ನು ಪ್ರಕಟಿಸಬೇಕು ಎಂದರು.
ಅಲ್ಲದೇ ಈಗ ಪ್ರತಿ ರಾಜ್ಯಗಳಲ್ಲೂ ಮೀನುಗಾರಿಕೆಗೆ ಪ್ರತ್ಯೇಕ ಸಚಿವರಿದ್ದಾರೆ. ಆದರೆ ಕೇಂದ್ರದಲ್ಲಿ ಇನ್ನೂ ಮೀನುಗಾರಿಕೆಗೆ ಪ್ರತ್ಯೇಕ ಇಲಾಖೆ ಇಲ್ಲವಾಗಿದೆ. ಕೃಷಿ ಸಚಿವರೇ ಅದನ್ನು ನೋಡಿಕೊಳ್ಳುತಿದ್ದು, ಇದರಿಂದ ಮೀನುಗಾರಿಕೆಗೆ ಹೆಚ್ಚಿನ ಆದ್ಯತೆ ದೊರಕುತ್ತಿಲ್ಲ ಆದುದರಿಂದ ಮೀನುಗಾರಿಕೆಗೆ ಪ್ರತ್ಯೇಕ ಸಚಿವಾಲಯ ರಚಿಸಬೇಕು ಎಂಬುದು ತಮ್ಮ ಬೇಡಿಕೆಯಾಗಿದೆ ಎಂದರು.
ರಾಜ್ಯದಲ್ಲಿ ಮೀನುಗಾರರ ಕೋ-ಆಪರೇಟಿವ್ ಸೊಸೈಟಿಗಳನ್ನು ಸ್ಥಾಪಿಸಿ, ಒಳನಾಡು ಮೀನುಗಾರಿಕೆಯ ಗುತ್ತಿಗೆಯನ್ನು ಈ ಸೊಸೈಟಿಗೆ ನೀಡಬೇಕು. ಇಲ್ಲದಿದ್ದರೆ ಹೆಚ್ಚಿನ ಜಿಲ್ಲೆಗಳಲ್ಲಿ ಮೀನುಗಾರರಿಗೆ ಈ ಗುತ್ತಿಗೆ ಕೈತಪ್ಪುತ್ತಿದೆ ಎಂದವರು ವಿವರಿಸಿದರು.
ಮೀನುಗಾರರು ಪ.ಪಂಗಡಕ್ಕೆ: ಕರ್ನಾಟಕದಲ್ಲಿ ಮೀನುಗಾರ ಜನಾಂಗವನ್ನು ಪರಿಶಿಷ್ಟ ಜನಾಂಗಕ್ಕೆ ಸೇರಿಸಬೇಕೆಂಬ ಆಗ್ರಹ ಕಳೆದ ಹಲವು ದಶಕಗಳಿಂದ ಕೇಳಿ ಬರುತ್ತಿದೆ. ರಾಜ್ಯದಿಂದ ಈ ಪ್ರಸ್ತಾಪವನ್ನು ಕೇಂದ್ರಕ್ಕೆ ಕಳುಹಿಸಿದ್ದರೂ, ಕೇಂದ್ರ ಸರಕಾರ ಅದನ್ನು ತಿರಸ್ಕರಿಸಿದೆ. ಈ ಬಗ್ಗೆ ಮತ್ತೊಮ್ಮೆ ಪ್ರಯತ್ನ ನಡೆಸಲಾಗುವುದು. ಈ ಬಗ್ಗೆ ಸಮಾವೇಶದಲ್ಲಿ ಮತ್ತೊಮ್ಮೆ ಬೇಡಿಕೆ ಮಂಡಿಸಲಾಗುವುದು ಎಂದರು.
ರಾಜ್ಯದಲ್ಲಿ ಮೀನುಗಾರ ಜನಾಂಗದ ಜನಸಂಖ್ಯೆ 23 ಲಕ್ಷಕ್ಕೂ ಹೆಚ್ಚಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಈ ಸಮಾಜಕ್ಕೆ ಸೂಕ್ತ ಪ್ರಾತಿನಿಧ್ಯವನ್ನು ನೀಡಬೇಕೆಂದು ಒತ್ತಾಯಿಸಲಾಗುವುದು. ಕನಿಷ್ಠ 8ರಿಂದ 10 ಸೀಟುಗಳಲ್ಲಿ ಸ್ಪರ್ಧಿಸಲು ಅವಕಾಶ ನೀಡಬೇಕೆಂಬುದು ನಮ್ಮ ಬೇಡಿಕೆಯಾಗಿದೆ ಎಂದರು.
ಪದಾಧಿಕಾರಿಗಳ ಪಟ್ಟಿ ಪ್ರಕಟ: ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಸೂಚನೆಯಂತೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರ ಅನುಮೋದನೆಯೊಂದಿಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯ ಪದಾಧಿಕಾರಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಗಿದ್ದು, ಅದನ್ನು ಇಲ್ಲಿ ಬಿಡುಗಡೆಗೊಳಿಸುತ್ತಿರುವುದು ಸಭಾಪತಿ ತಿಳಿಸಿದರು.
ಈಗ ಜಿಲ್ಲಾ ಸಮಿತಿ ಹಾಗೂ ಬ್ಲಾಕ್ ಸಮಿತಿಗಳನ್ನು ರಚಿಸಲಾಗುತಿದ್ದು, ತಿಂಗಳ ಕೊನೆಯೊಳಗೆ ಈ ಕಾರ್ಯವನ್ನು ಮುಗಿಸಿ ನ.1ರಿಂದ ಕೇಂದ್ರ ಸರಕಾರದ ನೀತಿಯನ್ನುಖಂಡಿಸಿ ಪ್ರತಿಭಟನೆಗಳನ್ನು ಜಿಲ್ಲಾ ಮಟ್ಟದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ಸಭಾಪತಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಪದಾಧಿಕಾರಿಗಳಾದ ಕೇಶವ್ ಕುಂದರ್, ಸರಳಾ ಕಾಂಚನ್ ಉಡುಪಿ, ರಾಮ ಎಂ.ಮೊಗೇರ ಭಟ್ಕಳ, ಕಿರಣ್ಕುಮಾರ್, ಸದಾಶಿವ ಕರ್ಕೇರ, ಮನೋಜ್ ಕರ್ಕೇರ, ವಿಲ್ಸನ್ ಉಪಸ್ಥಿತರಿದ್ದರು.