ಕಾವೇರಿ ನದಿ ಸ್ವಚ್ಛತೆಗೆ ನಟ ಸೃಜನ್ ಮನವಿ
ಮಡಿಕೇರಿ, ಅ.19: ಜೀವನದಿ ಕಾವೇರಿಯ ಸಂರಕ್ಷಣೆ, ಪಾವಿತ್ರ್ಯತೆಯನ್ನು ಕಾಪಾಡಲು ಪ್ರತಿಯೊಬ್ಬರೂ ಮುಂದಾಗಬೇಕಾಗಿದೆ ಎಂದು ಚಲನಚಿತ್ರ ನಟ ಸೃಜನ್ ಲೋಕೇಶ್ ಹೇಳಿದ್ದಾರೆ.
ಕುಶಾಲನಗರದ ಬಾರವಿ ಕನ್ನಡ ಸಂಘದ 5ನೆ ವಾರ್ಷಿಕೋತ್ಸವ ಹಾಗೂ ಕಾವೇರಿ ತುಲಾ ಸಂಕ್ರಮಣದ ಅಂಗವಾಗಿ ಕೊಪ್ಪ ಬಳಿ ಹಮ್ಮಿಕೊಂಡಿದ್ದ ಕಾವೇರಿ ತೀರ್ಥ ವಿತರಣೆ ಹಾಗೂ ಕಾವೇರಿ ನದಿಗೆ ಬಾಗಿನ ಸಮರ್ಪಣೆಯ ಕಾರ್ಯಕ್ರಮದಲ್ಲಿ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ಚಲನಚಿತ್ರದ ಹಾಸ್ಯನಟ ತರಂಗ ವಿಶ್ವ ಪಾಲ್ಗೊಂಡು, ಪಾಶ್ಚಿಮಾತ್ಯ ಭಾಷೆಗೆ ಮಾರು ಹೋಗಿರುವ ಜನರು ಕನ್ನಡ ಮಾತನಾಡಲು ಸಂಕೋಚ ಹಾಗೂ ನಾಚಿಕೆ ಮನೋಭಾವ ತೋರುತ್ತಿರುವುದು ವಿಷಾದನೀಯ ಎಂದರು.
ಈ ಸಂದರ್ಭ ಚಿತ್ರನಟ ಸೃಜನ್ಲೋಕೇಶ್ಗೆ ಕಾವೇರಿ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾವೇರಿ ತೀರ್ಥ ಪೂಜೆ ನಂತರ ಸಾರ್ವಜನಿಕರಿಗೆ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು.
ಕಾರ್ಯಕ್ರಮದಲ್ಲಿ ನಂತರ ಮಾಜಿ ಸಂಸದ ಸಿ.ಎಚ್.ವಿಜಯ್ಶಂಕರ್, ಬಾರವಿ ಕನ್ನಡ ಸಂಘದ ಸಂಸ್ಥಾಪಕ ಬಬೀಂದ್ರ ಪ್ರಸಾದ್, ರವೀಂದ್ರ ಪ್ರಸಾದ್, ವಿಜೇಂದ್ರ ಪ್ರಸಾದ್, ಕೊಪ್ಪಗ್ರಾಮ ಪಂಚಾಯತ್ ಅಧ್ಯಕ್ಷೆ ಸಾವಿತ್ರಿ ಮತ್ತಿತರರಿದ್ದರು.