ಕ್ಷೌರಿಕರ ಕ್ಷಮೆ ಯಾಚಿಸಲು ಒತ್ತಾಯಿಸಿ ಧರಣಿ
ಸಚಿವ ರಮೇಶ್ ಕುಮಾರ್ ಹೇಳಿಕೆಗೆ ಖಂಡನೆ
ಚಿಕ್ಕಮಗಳೂರು, ಅ.19: ವೈದ್ಯಕೀಯ ಸಚಿವ ರಮೇಶ್ ಕುಮಾರ್ ಹೇಳಿಕೆಯನ್ನು ಖಂಡಿಸಿ, ಸಚಿವರು ಕ್ಷೌರಿಕರ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿ ನಗರದ ಅಝಾದ್ ಪಾರ್ಕ್ನಲ್ಲಿ ಜಿಲ್ಲಾ ಸವಿತ ಸಮಾಜದ ಕಾರ್ಯಕರ್ತರು ಸಚಿವರ ಪ್ರತಿಕೃತಿ ದಹಿಸಿ ಗುರುವಾರ ಧರಣಿ ನಡೆಸಿದರು.
ಸಂಘದ ಜಿಲ್ಲಾಧ್ಯಕ್ಷ ರವಿಕುಮಾರ್ ಕಡೂರು ಮಾತನಾಡಿ, ಕ್ಷೌರಿಕ ವೃತ್ತಿಯಲ್ಲಿ ತೊಡಗಿರುವವರು ಯಾರಿಗೂ ಭೇದ-ಭಾವ ಮಾಡದೇ ಕಾರ್ಯನಿರ್ವಹಿಸುತ್ತಿದ್ದಾರೆ. ಅವರನ್ನು ಜೇಬುಗಳ್ಳರಿಗೆ ಹೋಲಿಸುವ ಮೂಲಕ ಇಡಿ ಸವಿತಾ ಸಮೂಹವನ್ನೆ ಆರೋಗ್ಯ ಸಚಿವ ರಮೇಶ್ ಕುಮಾರ್ ಅವಮಾನ ಮಾಡಿದ್ದಾರೆ. ಆದ್ದರಿಂದ ಕೂಡಲೇ ಸಚಿವರು ಬಹಿರಂಗವಾಗಿ ಸವಿತಾ ಸಮಾಜದ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಸಿದರು.
ಈ ಸಂದಭರ್ದಲ್ಲಿ ಕ್ಷೌರಿಕ ಬ್ರಿಗೇಡ್ ಜಿಲ್ಲಾ ಸಂಚಾಲಕ ವಿಶ್ವನಾಥ್ ಮಾತನಾಡಿದರು. ಯಶ್ವಿಸ್, ಲತೇಶ್, ಜೆ.ಸತ್ಯನಾರಾಯಣ, ಚೇತನ್.ಚಿ.ಜಿ,ಶ್ರೀಧರ್, ಹರೀಶ್, ಮಂಜುನಾಥ್, ವೆಂಕಟೇಶ್ ಸಿ, ವೆಂಕಟೇಶ್ ಕುಮಾರ್ ಮತ್ತಿತರರಿದ್ದರು.