ಅ.22: ಕೆಎಂಸಿಯಲ್ಲಿ ಮೂಲವ್ಯಾಧಿ ಖಾಯಿಲೆ ಕುರಿತು ಶಿಬಿರ
ಮಂಗಳೂರು, ಅ.20: ನಗರದ ಅತ್ತಾವರ ಕೆಎಂಸಿ ಆಸ್ಪತ್ರೆಯ ವತಿಯಿಂದ ಮೂಲವ್ಯಾಧಿ ಖಾಯಿಲೆಯ ಕುರಿತು ಮಾಹಿತಿ ಹಾಗೂ ತಪಾಸಣಾ ಶಿಬಿರ ಅ. 22ರಂದು ಬೆಳಗ್ಗೆ 10:30ಕ್ಕೆ ಆಸ್ಪತ್ರೆಯ 2ನೆ ಮಹಡಿಯ ಸಭಾಂಗಣದಲ್ಲಿ ನಡೆಯಲಿದೆ ಎಂದು ಶಸಚಿಕಿತ್ಸಾ ವಿಭಾಗದ ಅಡಿಷನಲ್ ಪ್ರೊ.ಡಾ. ಮನೋಹರ್ ಪೈ ತಿಳಿಸಿದರು.
ನಗರದ ಪ್ರೆಸ್ಕ್ಲಬ್ನಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂಲವ್ಯಾಧಿಯ ಕುರಿತು ಜನರು ಸಂಕುಚಿತ ಮನೋಭಾವನೆಯನ್ನು ಹೊಂದಿದ್ದು, ವೈದ್ಯರಲ್ಲಿ ಸಮಾಲೋಚಿಸಿ ಚಿಕಿತ್ಸೆ ಪಡೆಯುವವರು ವಿರಳ. ಹೀಗಾಗಿ ಕೆಎಂಸಿ ಆಸ್ಪತ್ರೆಯು ಮೂಲವ್ಯಾಧಿ ಸಮಸ್ಯೆಯಿಂದ ಬಳಲುವವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಶಿಬಿರವನ್ನು ಆಯೋಜಿಸಿದೆ.
ಅ.22ರಂದು ಬೆಳಗ್ಗೆ 10:30ಕ್ಕೆ ಮೂಲವ್ಯಾಧಿ ಹಾಗೂ ಅದರ ನೋವುರಹಿತ ಚಿಕಿತ್ಸೆಗಳ ಕುರಿತು ಉಚಿತ ಮಾಹಿತಿ, 11:30ಕ್ಕೆ ಮೂಲವ್ಯಾಧಿ ಉಚಿತ ತಪಾಸಣೆ ನಡೆಯಲಿದೆ. ರೋಗಿಗಳು ಶಿಬಿರದಲ್ಲಿ ಭಾಗವಹಿಸಿ ಮುಕ್ತವಾಗಿ ಚರ್ಚಿಸಬಹುದು. ಮಹಿಳೆಯರು ಇದರಿಂದ ಬಳಲುತ್ತಿದ್ದರೆ ಮಹಿಳಾ ತಜ್ಞರು ಕೂಡ ಲಭ್ಯವಿರುತ್ತಾರೆ.
ಅ.23 ಹಾಗೂ 25ರಂದು ಬೆಳಗ್ಗೆ 10ರಿಂದ ಸಂಜೆ 4ರ ವರೆಗೆ ಮೂಲವ್ಯಾಧಿ ಉಚಿತ ತಪಾಸಣಾ ಶಿಬಿರವು ಆಸ್ಪತ್ರೆಯ 1ನೇ ಮಹಡಿಯಲ್ಲಿರುವ ಸರ್ಜರಿ ಒಪಿಡಿಯಲ್ಲಿ ಆಯೋಜಿಸಲಾಗಿದೆ. ಗಂಭೀರ ಸ್ವರೂಪದ ಮೂಲವ್ಯಾಧಿಗೆ ಶಸಚಿಕಿತ್ಸೆ ಒಂದೇ ಪರಿಹಾರವಾಗಿದ್ದು, ನೋವುರಹಿತ ಪೈಲ್ಸ್ ಚಿಕಿತ್ಸೆಯು ಆಧುನಿಕ ಶಸಚಿಕಿತ್ಸಾ ವಿಧಾನವಾಗಿದೆ.
ಸುದ್ದಿಗೋಷ್ಠಿಯಲ್ಲಿ ಶಸಚಿಕಿತ್ಸಾ ವಿಭಾಗದ ಸಹಪ್ರಾಧ್ಯಾಪಕ ಡಾ. ಶಿಬುಮೋನ್, ಮಾರುಕಟ್ಟೆ ವಿಭಾಗದ ಮುಖ್ಯಸ್ಥ ರಾಕೇಶ್ ಉಪಸ್ಥಿತರಿದ್ದರು.