‘‘ಗುಜರಾತ್ ಚುನಾವಣೆಯ ದಿನಾಂಕ ಘೋಷಿಸಲು ಆಯೋಗವು ಪ್ರಧಾನಿಗೆ ಅಧಿಕಾರ ನೀಡಿದೆ’’
ಮೋದಿಯನ್ನು ಕುಟುಕಿದ ಚಿದಂಬರಂ
ಹೊಸದಿಲ್ಲಿ, ಅ 20 : ಗುಜರಾತ್ ವಿಧಾನಸಭಾ ಚುನಾವಣೆಯ ದಿನಾಂಕವನ್ನು ಇನ್ನೂ ಘೋಷಿಸದೇ ಇರುವ ಚುನಾವಣಾ ಆಯೋಗದ ನಿರ್ಧಾರವನ್ನು ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ವಿತ್ತ ಸಚಿವ ಪಿ ಚಿದಂಬರಂ ಪ್ರಶ್ನಿಸಿದ್ದಾರೆ.
‘‘ಗುಜರಾತ್ ಸರಕಾರ ಎಲ್ಲಾ ರಿಯಾಯಿತಿಗಳು ಹಾಗೂ ಕೊಡುಗೆಗಳನ್ನು ಘೋಷಿಸಿದ ಬಳಿಕ ಚುನಾವಣಾ ಆಯೋಗವನ್ನು ಅದರ ವಿಸ್ತರಿತ ರಜೆಯಿಂದ ಹಿಂದಕ್ಕೆ ಕರೆಸಲಾಗುತ್ತದೆ,’’ ಎಂದು ಚಿದಂಬರಂ ಟ್ವೀಟ್ ಮಾಡಿ ಸರಕಾರವನ್ನು ಕುಟುಕಿದ್ದಾರೆ. ‘‘ಪ್ರಧಾನಿಯ ಕೊನೆಯ ರ್ಯಾಲಿಯಲ್ಲಿ ಗುಜರಾತ್ ಚುನಾವಣಾ ದಿನಾಂಕವನ್ನು ಘೋಷಿಸಲು ಚುನಾವಣಾ ಆಯೊಗ ಅವರಿಗೆ ಅಧಿಕಾರ ನೀಡಿದೆ (ಇದರ ಬಗ್ಗೆ ಇಸಿಗೆ ತಿಳಿಸಿ)’’ ಎಂದು ಚಿದಂಬರಂ ಅವರ ಇನ್ನೊಂದು ಟ್ವೀಟ್ ಹೇಳುತ್ತದೆ.
ಗುಜರಾತ್ ವಿಧಾನಸಭಾ ಚುನಾವಣೆಗಳಿಗೆ ದಿನಾಂಕವನ್ನು ಘೋಷಿಸುವುದನ್ನು ತಡೆಹಿಡಿಯುವ ಚುನಾವಣಾ ಆಯೋಗದ ನಿರ್ಧಾರವನ್ನು ಸಿಪಿಐ(ಎಂ) ಕೂಡ ಪ್ರಶ್ನಿಸಿತ್ತು. ಗುಜರಾತ್ ಸೇರಿದಂತೆ ಹಿಮಾಚಲ ಪ್ರದೇಶದ ಚುನಾವಣಾ ದಿನಾಂಕಗಳನ್ನು ಆಯೋಗ ಅಕ್ಟೋಬರ್ 12ರಂದು ಘೋಷಿಸಬೇಕಿದ್ದರೆ ಹಿಮಾಚಲ ಪ್ರದೇಶದ ಚುನಾವಣಾ ದಿನಾಂಕವನ್ನಷ್ಟೇ ಘೋಷಿಸಲಾಗಿತ್ತು.
ಗುಜರಾತ್ ಚುನಾವಣೆ ಡಿಸೆಂಬರ್ 18ರೊಳಗಾಗಿ ನಡೆಯುವುದೆಂದು ಮಾತ್ರ ಮುಖ್ಯ ಚುನಾವಣಾ ಆಯುಕ್ತೆ ಎ ಕೆ ಜ್ಯೋತಿ ಹೇಳಿದ್ದಾರೆ. ಹಿಮಾಚಲ ಪ್ರದೇಶ ಚುನಾವಣೆಯ ಫಲಿತಾಂಶ ಇದೇ ದಿನದಂದು ಹೊರಬೀಳಲಿದೆ.