ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆ: ಸೇನೆ ಹೊರೆಯಾಳು ಸಾವು
ಶ್ರೀನಗರ, ಅ. 21: ಜಮ್ಮು ಹಾಗೂ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಕಮಲ್ಕೋಟೆ ವಲಯದ ಗಡಿ ನಿಯಂತ್ರಣ ರೇಖೆಗುಂಟ ಪಾಕಿಸ್ತಾನ ಸೇನಾ ಪಡೆಯ ಗುಂಡಿನ ದಾಳಿಯಲ್ಲಿ ಸೇನೆ ಹೊರೆ ಆಳು ಸಾವನ್ನಪ್ಪಿದ್ದು, ಓರ್ವ ಬಾಲಕಿ ಗಾಯಗೊಂಡಿದ್ದಾಳೆ. ಕಮಲ್ಕೋಟೆ ಪ್ರದೇಶದ ಗಡಿ ನಿಯಂತ್ರಣಾ ರೇಖೆಗುಂಟ ಪಾಕಿಸ್ತಾನ ಸೇನಾ ಪಡೆಯ ಅಪ್ರಚೋದಿತವಾಗಿ ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸಿತು ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ. ಪಾಕಿಸ್ತಾನ ಸೇನಾ ಪಡೆ ನಡೆಸಿದ ಗುಂಡಿನ ದಾಳಿಗೆ ಸೇನೆಯ ಹೊರೆ ಆಳಾಗಿ ಕಾರ್ಯ ನಿರ್ವಹಿಸುತ್ತಿದ್ದ ನಾಗರಿಕನೋರ್ವ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕದನ ವಿರಾಮ ಉಲ್ಲಂಘಿಸಿರುವುದಕ್ಕೆ ಭಾರತದ ಸೇನಾ ಪಡೆ ಪ್ರತಿ ದಾಳಿ ನಡೆಸಿತು. ಈ ನಡುವೆ ಪಾಕಿಸ್ತಾನ ಸೇನಾ ಪಡೆ ಗುಂಡಿನ ದಾಳಿಗೆ ಬಾಲಕಿಯೋರ್ವಳು ಗಾಯಗೊಂಡಿದ್ದಾಳೆ. ಆಕೆಯನ್ನು ಉರಿ ಪಟ್ಟಣದಲ್ಲಿರುವ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
Next Story