ಉಪ್ಪಿನಂಗಡಿ ; ಗೋಮಾಂಸ ಸಾಗಾಟ: ಓರ್ವನ ಬಂಧನ
ಉಪ್ಪಿನಂಗಡಿ, ಅ.21: ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಪ್ರಕರಣವೊಂದನ್ನು ಪತ್ತೆ ಹಚ್ಚಿದ ಉಪ್ಪಿನಂಗಡಿ ಪೊಲೀಸರು ಗೋ ಮಾಂಸ ಸಹಿತ ಆರೋಪಿಯನ್ನು ಶನಿವಾರ ವಶಕ್ಕೆ ಪಡೆದಿದ್ದಾರೆ.
ವಾಹನ ಚಾಲಕ ಹೊಳೆನರಸೀಪುರ ನಿವಾಸಿ ಆನಂದ ಬಂಧಿತ ಆರೋಪಿ. ಇನ್ನೋರ್ವ ಆರೋಪಿ ಹಾಸನದ ನಿವಾಸಿಯೆನ್ನಲಾದ ನಾಗರಾಜ ಈ ಸಂದರ್ಭ ಪರಾರಿಯಾಗಿದ್ದಾನೆ.
ಖಚಿತ ಮಾಹಿತಿಯ ಮೇರೆಗೆ ಗಸ್ತು ನಿರತ ಪೊಲೀಸ್ ತಂಡ ಕುಪ್ಪೆಟ್ಟಿಯಲ್ಲಿ ವಾಹನವೊಂದನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ ಅದರಲ್ಲಿ ಟರ್ಪಾಲಿನ್ ಹೊದಿಸಿ ಗೋ ಮಾಂಸ ಸಾಗಾಟ ನಡೆಸುತ್ತಿದ್ದದ್ದು ಪತ್ತೆಯಾಯಿತೆನ್ನಲಾಗಿದೆ.
ವಾಹನದೊಂದಿಗೆ ಗೋ ಮಾಂಸವನ್ನು ವಶಪಡಿಸಿಕೊಂಡ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಶಪಡಿಸಿಕೊಂಡ ಗೋ ಮಾಂಸವನ್ನು ಹೂಳಲಾಗಿದೆ.
Next Story