ತುಮಕೂರು: ವೈದ್ಯರ ಮುಷ್ಕರ; ಚಿಕಿತ್ಸೆಗಾಗಿ ಪರದಾಡಿದ ರೋಗಿಗಳು
ತುಮಕೂರು, ನ.13: ಕರ್ನಾಟಕ ಸರಕಾರ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲು ಹೊರಟಿರುವ ಖಾಸಗಿ ಆಸ್ಪತ್ರೆಗಳ ತಿದ್ದುಪಡಿ ಮಸೂದೆ-2017ನ್ನು ವಿರೋಧಿಸಿ ಖಾಸಗಿ ಆಸ್ಪತ್ರೆಗಳ ವೈದ್ಯರು, ಪ್ರಯೋಗಾಲಯಗಳು, ಕ್ಲಿನಿಕ್ಗಳ ಸಿಬ್ಬಂದಿ ಕೆಲಸ ಸ್ಥಗಿತಗೊಳಿಸಿ ಮುಷ್ಕರ ನಿರತವಾಗಿರುವ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯರು ಸೇವೆ ದೊರೆಯದೆ ರೋಗಿಗಳು ಪರದಾಡುವ ಸ್ಥಿತಿ ಸೋಮವಾರ ನಿರ್ಮಾಣವಾಗಿತ್ತು.
ಎಲ್ಲಾ ಬಡವರಿಗೆ ಸುಲಭದಲ್ಲಿ ಆರೋಗ್ಯ ಸೇವೆ ದೊರೆಯುಬೇಕು ಎಂಬ ಉದ್ದೇಶದಿಂದ ರಾಜ್ಯ ಸರಕಾರ ಖಾಸಗಿ ಆಸ್ಪತ್ರೆಗಳ ಮೇಲೆ ನಿಯಂತ್ರಣ ಹೇರುವ ಮೂಲಕ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಮಸೂದೆಯನ್ನು ಜಾರಿಗೆ ತರಲು ಹೊರಟಿದೆ. ಇದನ್ನು ವಿರೋಧಿಸಿ ನವೆಂಬರ್ 2 ರಂದು ಒಂದು ದಿನದ ಮುಷ್ಕರವನ್ನು ಖಾಸಗಿ ಆಸ್ಪತ್ರೆಗಳು ಕೈಗೊಂಡಿದ್ದವು. ಅದರ ಮುಂದುವರೆದ ಭಾಗವಾಗಿ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಸರಕಾರದ ಗಮನ ಸೆಳೆಯುವ ಉದ್ದೇಶದಿಂದ ಭಾರತೀಯ ವೈದ್ಯಕೀಯ ಸಂಘದ ಪದಾಧಿಕಾರಿಗಳು ಬೆಳಗಾವಿಯಲ್ಲಿ ಮುಷ್ಕರ ನಿರತವಾಗಿದ್ದು, ಇದರ ಹಿನ್ನೆಲೆಯಲ್ಲಿ ಸೋಮವಾರ ಖಾಸಗಿ ಆಸ್ಪತ್ರೆಗಳು, ಕ್ಲಿನಿಕ್ಗಳು, ಪ್ರಯೋಗಾಲಯಗಳು ಕೆಲಸ ಸ್ಥಗಿತಗೊಳಿಸಿ ಮುಷ್ಕರಕ್ಕೆ ಬೆಂಬಲ ಸೂಚಿಸಿವೆ.
ಯಾವುದೇ ಮುನ್ಸೂಚನೆಯಿಲ್ಲದೆ ಖಾಸಗಿ ಆಸ್ಪತ್ರೆಗಳ ವೈದ್ಯರು ಮುಷ್ಕರ ಆರಂಭಿಸಿದ ಹಿನ್ನೆಲೆಯಲ್ಲಿ ಇದರ ಅರಿವಿಲ್ಲದೆ ಚಿಕಿತ್ಸೆಗೆಂದು ಆಗಮಿಸಿದ್ದ ಸಾರ್ವಜನಿಕರು ಖಾಸಗಿ ಆಸ್ಪತ್ರೆಗಳ ಬಂದ್ ಹಿನ್ನೆಲೆಯಲ್ಲಿ ಸೂಕ್ತ ಚಿಕಿತ್ಸೆ ದೊರೆಯದೆ ಪರದಾಡುವಂತಹ ಸ್ಥಿತಿ ನಿರ್ಮಾಣ ವಾಗಿತ್ತು.
ಸರಕಾರಿ ಆಸ್ಪತ್ರೆಗೆ ಹೆಚ್ಚಿದ ರೋಗಿಯ ಸಂಖ್ಯೆ: ಖಾಸಗಿ ಆಸ್ಪತ್ರೆಗಳ ಮುಷ್ಕರದ ಹಿನ್ನೆಲೆಯಲ್ಲಿ ಸರಕಾರಿ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಹೆಚ್ಚಿದ್ದು, ಆಸ್ಪತ್ರೆಗೆ ಬರುವ ರೋಗಿಗಳಿಗೆ ಸೂಕ್ತ ಚಿಕಿತ್ಸೆ ದೊರೆಯಬೇಕು ಎಂಬ ಉದ್ದೇಶದಿಂದ ಜಿಲ್ಲಾ ಸರ್ಜನ್ ಡಾ.ವೀರಭದ್ರಯ್ಯ ಅವರು ಖುದ್ದು ಹಾಜರಿದ್ದು, ಎಲ್ಲಾ ವೈದ್ಯರು ಸೇವೆಗೆ ಹಾಜರಾಗುವಂತೆ ಮಾಡಿ, ಬಂದ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಸಕಾಲಕ್ಕೆ ದೊರೆಯುವಂತೆ ಮಾಡಿದ್ದಾರೆ.
ದಿನಕ್ಕೆ 800-1200ರವರೆಗೆ ಬರುತ್ತಿದ್ದ ರೋಗಿಗಳ ಸಂಖ್ಯೆ ಇಂದು 2000 ತಲುಪಿದ್ದು, ರೋಗಿಗಳನ್ನು ಪರೀಕ್ಷಿಸಿ, ವೈದ್ಯಕೀಯ ಸಲಹೆ ನೀಡುತಿದ್ದಾರೆ. ಒಳರೋಗಿಗಳ ಜೊತೆಗೆ, ಹೊರ ರೋಗಿಗಳ ನೋಡಿ ಚಿಕಿತ್ಸೆ ನೀಡುವ ಮೂಲಕ ಸರಕಾರಿ ಅಸ್ಪತ್ರೆಯ ಮೇಲಿರುವ ಒತ್ತಡವನ್ನು ನಿಭಾಯಿಸುವಲ್ಲಿ ಸರಕಾರಿ ವೈದ್ಯರು ಸಫಲರಾಗಿದ್ದಾರೆ.
ಪ್ರಯೋಗಾಲಯಗಳ ಮುಂದೆ ಕಾದು ಕುಳಿತ ಜನತೆ: ಖಾಸಗಿ ಆಸ್ಪತ್ರೆಗಳ ಮುಷ್ಕರಕ್ಕೆ ಬೆಂಬಲ ಸೂಚಿಸಿದ ಪ್ರಯೋಗಾಲಯಗಳು ಬಾಗಿಲು ಮುಚ್ಚಿದ್ದ ಪರಿಣಾಮ, ಪ್ರಯೋಗಾಲಯದ ಮುಂದೆ ರೋಗಿಗಳ ಕಾದು ಕುಳಿತಿದ್ದು ಕಂಡು ಬಂತ್ತು. ಅದರಲ್ಲಿಯೂ ಎಲ್ಲಾ ರೀತಿಯ ಪ್ರಯೋಗ ಉಪಕರಣಗಳನ್ನು ಹೊಂದಿರುವ ಟಿ.ಸಿ.ಎಚ್ ಮತ್ತು ಸಿದ್ದಗಂಗಾ ಪ್ರಯೋಗಾಲಯದ ಮುಂದೆ ಹೆಚ್ಚಿನ ರೋಗಿಗಳು ಕಂಡು ಬಂದರು.